ಪತ್ನಿಯಿಂದ ಬೇರೆಯಾದ ನಂತರವೂ ಒತ್ತಾಯದ ದೈಹಿಕ ಸಂಪರ್ಕ: ಪತಿಗೆ ಶಾಕ್​​ ಕೊಟ್ಟ ಹೈಕೋರ್ಟ್​​

ಪತ್ನಿಯಿಂದ ಬೇರ್ಪಟ್ಟ ನಂತರವೂ ಒತ್ತಾಯದ ದೈಹಿಕ ಸಂಪರ್ಕ ನಡೆಸಿದ ಪ್ರಕರಣ ಸಂಬಂಧ ಕೇಸ್​​ ರದ್ದುಗೊಳಿಸುವಂತೆ ಪತಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ. ಆ ಮೂಲಕ ಪ್ರತ್ಯೇಕವಾಗಿರುವ ದಂಪತಿಗಳಲ್ಲಿ ಪತ್ನಿಯ ಸಮ್ಮತಿ ಇಲ್ಲದೆ ದೈಹಿಕ ಸಂಪರ್ಕ ಅಪರಾಧ. ಇಂತಹ ಸಂದರ್ಭ ಐಪಿಸಿ 376(ಬಿ) ಅಡಿಯಲ್ಲಿ ದಾಖಲಾದ ಪ್ರಕರಣದ ವಿಚಾರಣೆ ಅಗತ್ಯವೆಂಬ ಸಂದೇಶವನ್ನು ಕೋರ್ಟ್​​ ನೀಡಿದೆ. 

ಪತ್ನಿಯಿಂದ ಬೇರೆಯಾದ ನಂತರವೂ ಒತ್ತಾಯದ ದೈಹಿಕ ಸಂಪರ್ಕ: ಪತಿಗೆ ಶಾಕ್​​ ಕೊಟ್ಟ ಹೈಕೋರ್ಟ್​​
ಕರ್ನಾಟಕ ಹೈಕೋರ್ಟ್
Image Credit source: en.wikipedia.org
Edited By:

Updated on: Apr 08, 2026 | 3:40 PM

ಬೆಂಗಳೂರು, ಏಪ್ರಿಲ್​​ 08: ಪತ್ನಿಯಿಂದ ಬೇರೆಯಾದ ನಂತರವೂ ಒತ್ತಾಯದಿಂದ ಆಕೆಯ ಜೊತೆಗೆ ದೈಹಿಕ ಸಂಪರ್ಕ ಬೆಳಸಿರುವ ಪ್ರಕರಣ ಸಂಬಂಧ ಪತಿಯ ವಿರುದ್ಧದ ಕೇಸ್ ರದ್ದುಪಡಿಸಲು ಸಾಧ್ಯವಿಲ್ಲ ಎಂದಯ ಕರ್ನಾಟಕ ಹೈಕೋರ್ಟ್ ತಿಳಿಸಿದೆ. ಅದಾಗಲೇ ದಂಪತಿ ಬೇರೆಯಾಗಿದ್ದರೂ ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ ಕಾರಣ ಪತಿಯ ವಿರುದ್ಧ ಐಪಿಸಿ ಸೆ. 376(ಬಿ) ಅಡಿ ಕೇಸ್ ದಾಖಲಾಗಿತ್ತು. ಪತ್ನಿ ದಾಖಲಿಸಿದ್ದ ಕೇಸ್ ರದ್ದು ಕೋರಿ ಹೈಕೋರ್ಟ್​ಗೆ ಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.

ಪತಿ ಪರ ವಕೀಲರ ವಾದವೇನು?

ಸಾಂಸಾರಿಕ ವೈಮನಸ್ಸಿನಿಂದ 2019ರಿಂದಲೇ ಪತ್ನಿಯಿಂದ ಪತಿ ಪ್ರತ್ಯೇಕವಾಗಿದ್ದರು. ಹೀಗಿದ್ದರೂ 2021ರಲ್ಲಿ ಪತ್ನಿ ಮನೆಗೆ ಬಂದು ಒತ್ತಾಯದ ದೈಹಿಕ ಸಂಪರ್ಕ ನಡೆಸಿದ್ದು, ರಾಜಿ ಸಂಧಾನಕ್ಕೆಂದು ಮನೆಗೆ ಆಹ್ವಾನಿಸಿ ದೈಹಿಕ ಸಂಪರ್ಕ ನಡೆಸಿರೋದಾಗಿ ದೂರಲಾಗಿತ್ತು. ಆದರೆ ಆರೋಪ ನಿರಾಕರಿಸಿದ್ದ ಪತಿ ಪರ ವಕೀಲರು, ಆರೋಪಿಸಿರುವಂತೆ ಯಾವುದೇ ದೈಹಿಕ ಸಂಪರ್ಕ ನಡೆದಿರಲಿಲ್ಲ ಎಂದು ವಾದಿಸಿದ್ದರು.

ಇದನ್ನೂ ಓದಿ: ಹಿಂದೂ ಯುವತಿ ಜೊತೆ ವಿವಾಹಿತ ಮುಸ್ಲಿಂ ವ್ಯಕ್ತಿ ಪರಾರಿ; ಲವ್​​ ಜಿಹಾದ್​​ಗೆ ಒಳಗಾದ ಮಗಳನ್ನು ಹುಡುಕಿಕೊಡಿ ಎಂದು ತಾಯಿಯ ಅಳಲು

ಸ್ವತಃ ವಾದ ಮಂಡಿಸಿದ್ದ ಪತ್ನಿ

ಇನ್ನು ಪತಿ ವಿರುದ್ಧ ದೂರು ದಾಖಲಿಸಿದ್ದ ಪತ್ನಿಯೇ ಸ್ವತಃ ಹೈಕೋರ್ಟ್​​ನಲ್ಲಿ ತನ್ನ ಪರವಾಗಿ ವಾದಿಸಿಕೊಂಡಿದ್ದು, ತನ್ನ ಮೇಲೆ ನಡೆದಿರುವ ದೌರ್ಜನ್ಯವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಅಲ್ಲದೆ ಪತಿಯ ಅರ್ಜಿ ತಿರಸ್ಕರಿಸುವಂತೆ ಕೋರ್ಟ್​ನ ಮನವಿ ಮಾಡಿದ್ದರು. ಎರಡೂ ಕಡೆಯವರ ಪರ ಮತ್ತು ವಿರೋಧ ವಾದ ಆಲಿಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠ ಅಂತಿಮವಾಗಿ ಪತಿಯ ಅರ್ಜಿಯನ್ನು ತಿರಸ್ಕೃತಗೊಳಿಸಿದೆ. ಆ ಮೂಲಕ ಪತ್ನಿಯಿಂದ ಬೇರೆಯಾದ ನಂತರವೂ ಒತ್ತಾಯದಿಂದ ಆಕೆಯ ಜೊತೆಗೆ ದೈಹಿಕ ಸಂಪರ್ಕ ಬೆಳಸಿರುವ ಈ ಪ್ರಕರಣದ ವಿಚಾರಣೆ ಅಗತ್ಯವಿದೆ ಎಂಬ ಸಂದೇಶ ನೀಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us