ಅಜ್ಜಿ-ಮೊಮ್ಮಗಳಿಗೆ ಫ್ರೀ ಟಿಕೆಟ್, ನಾಲ್ಕು ಲವ್ ಬರ್ಡ್ಸ್​​ಗೆ ಬರೋಬ್ಬರಿ 444ರೂ. ಟಿಕೆಟ್!

ಬೆಂಗಳೂರಿನಿಂದ ಮೈಸೂರಿಗೆ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಅಜ್ಜಿ-ಮೊಮ್ಮಗಳಿಗೆ ಫ್ರೀ ಟಿಕೆಟ್ ನೀಡಿ ಅವರೊಟ್ಟಿಗಿದ್ದ ನಾಲ್ಕು ಲವ್ ಬರ್ಡ್ ಪಕ್ಷಿಗಳಿಗೆ ಬರೋಬ್ಬರಿ 444ರೂ ಟಿಕೆಟ್ ನೀಡಿರುವ ಘಟನೆ ನಡೆದಿದೆ. ಅಜ್ಜಿಗೆ ಫ್ರೀ ಟಿಕೆಟ್, ಮೊಮ್ಮಗಳಿಗೆ ಫ್ರೀ ಟಿಕೆಟ್. ಆದರೆ, ನಾಲ್ಕು ಹಕ್ಕಿಗಳಿಗೆ 444 ರೂಪಾಯಿ ಟಿಕೆಟ್ ನೀಡಿ ಪ್ರಯಾಣಿಸುವಂತಾಗಿದೆ.

ಬೆಂಗಳೂರು, ಮಾರ್ಚ್​.27: ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಆರಂಭಿಸಿದ ಉಚಿತ ಪ್ರಯಾಣ ಸೌಲಭ್ಯ ನೀಡುವ ಶಕ್ತಿ ಯೋಜನೆಯಿಂದಾಗಿ (Shakti Scheme) ಲಕ್ಷಾಂತರ ಮಹಿಳೆಯರು ಟಿಕೆಟ್​ಗೆ ಹಣ ಖರ್ಚು ಮಾಡದೆ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಅದರಂತೆ ಇಂದು ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ಕೆಎಸ್​ಆರ್​ಟಿಸಿ (KSRTC) ಬಸ್​ನಲ್ಲಿ ಅಪರೂಪದ ಹಾಸ್ಯಮಯ ಘಟನೆಯೊಂದು ನಡೆದಿದೆ. ಹಾಗೂ ಈ ಘಟನೆಯಿಂದ ಕೆಲವರು ಶಾಕ್​ಗೂ ಒಳಗಾಗಿದ್ದಾರೆ. ಪ್ರಯಾಣಿಕರ ಜೊತೆ ಪ್ರಯಾಣಿಸುತ್ತಿದ್ದ ನಾಲ್ಕು ಲವ್ ಬರ್ಡ್ಸ್​ಗಳಿಗೆ ಕಂಡಕ್ಟರ್ ಬರೋಬ್ಬರಿ 444 ರೂ. ಟಿಕೆಟ್ ನೀಡಿದ್ದಾರೆ.

ಇಂದು ಬೆಳಗ್ಗೆ 08.18ಕ್ಕೆ ಬೆಂಗಳೂರಿನಿಂದ ಮೈಸೂರು ಹೊರಟ್ಟಿದ್ದ ಅಜ್ಜಿ ಮೊಮ್ಮಗಳು ಕೆಎಸ್​ಆರ್​ಟಿಸಿ ಬಸ್​ ಹತ್ತಿ ಕುಳಿತಿದ್ದರು. ಕಂಡಕ್ಟರ್ ಬಂದೊಡನೆ ಆಧರ್ ಕಾರ್ಡ್ ತೋರಿಸಿ ಉಚಿತ ಟಿಕೆಟ್ ಪಡೆದಿದ್ದರು. ಆದರೆ ಅಜ್ಜಿ-ಮೊಮ್ಮಗಳ ಕೈಯಲ್ಲಿದ್ದ ಪಂಚರದೊಳಗಿದ್ದ ನಾಲ್ಕು ಲವ್ ಬರ್ಡ್​ ಗಮನಿಸಿದ ಕಂಡಕ್ಟರ್​ ಬರೋಬ್ಬರಿ 444 ರೂಪಾಯಿ ಟಿಕೆಟ್ ಹರಿದಿದ್ದಾನೆ. ಸರ್ಕಾರದ ಫ್ರೀ ಯೋಜನೆಯಿಂದಾಗಿ ಅಜ್ಜಿ ಮೊಮ್ಮಗಳಿಗೆ ಫ್ರೀ ಟಿಕೆಟ್‌ ಸಿಕ್ಕರೆ, ನಾಲ್ಕು ಲವ್ ಬರ್ಡ್ಸ್ ಪಕ್ಷಿಗಳಿಗೆ ಟಿಕೆಟ್ ಹಣ ಕೊಡುವಂತಾಗಿದೆ.

ಒಂದು ಪಕ್ಷಿಗೆ 111ರೂ. ನಂತೆ ನಾಲ್ಕು ಪಕ್ಷಿಗಳಿಗೆ 444ರೂ. ನೀಡಿ ಅಜ್ಜಿ-ಮೊಮ್ಮಗಳು ಮೈಸೂರಿಗೆ ಪ್ರಯಾಣಿಸಿದ್ದಾರೆ. ನಾಲ್ಕು ಮಕ್ಕಳು ಎಂದು ಟಿಕೆಟ್​ನಲ್ಲಿ ನಮೂದಿಸಲಾಗಿದೆ. ಈ ಘಟನೆಗೆ ಕೆಲವರು ನಕ್ಕು ಸುಮ್ಮನಾದ್ರೆ, ಮತ್ತೆ ಕೆಲವರು ಅಚ್ಚರಿಯಿಂದ ಬಾಯಿ ಮೇಲೆ ಬೆರಳಿಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರು; ವಿಶೇಷ ಚೇತನಳನ್ನ ಮದುವೆ ಆಗುವುದಾಗಿ ನಂಬಿಸಿ ಹಣ ಪಡೆದು ವಂಚನೆ, ದೂರು ದಾಖಲು

ಎರಡು ವರ್ಷದ ಹಿಂದೆ ಅಂದ್ರೆ 2022ರಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಕೆಲಸ ಮಾಡುತ್ತಿದ್ದ ಕಂಡಕ್ಟರ್ ಪಕ್ಷಿಗಳಿಗೆ ಟಿಕೆಟ್ ತಗೊಂಡಿಲ್ಲ ಎಂಬ ಕಾರಣಕ್ಕೆ ದಂಡ ತೆತ್ತಂಥ ಘಟನೆ ನಡೆದಿತ್ತು. ಹೈದರಾಬಾದ್ ನಿಂದ ಬೀದರ್ ಜಿಲ್ಲೆಯ ಔರಾದ್ ಪಟ್ಟಣಕ್ಕೆ ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಕನೊಬ್ಬ ಪಂಜರದಲ್ಲಿ ಲವ್ ಬರ್ಡ್ಸ್ ಪಕ್ಷಿಗಳನ್ನು ತೆಗೆದುಕೊಂಡು ಹೋಗುತ್ತಿದ್ದ. ಆ ಜೋಡಿ ಹಕ್ಕಿಗಳಿಗೆ ತಲಾ ಅರ್ಧ ಟಿಕೆಟ್ ಖರೀದಿಸುವಂತೆ ಕಂಡಕ್ಟರ್ ಮನವಿ ಮಾಡಿದ್ರು, ಆದರೆ ಆ ಪ್ರಯಾಣಿಕ ಮಾತ್ರ ಅದಕ್ಕೆ ಒಪ್ಪಲಿಲ್ಲ. ಬಳಿಕ ಸಹ ಪ್ರಯಾಣಿಕರು ಕೂಡ ಪಕ್ಷಿಗಳಿಗೆ ಟಿಕೆಟ್ ಇಲ್ಲ ಎಂದು ವಾದ ಮಾಡಿದ್ದರು. ಬಳಿಕ ಕಂಡಕ್ಟರ್ ಸುಮ್ಮನಾಗಿದ್ದ. ಆದರೆ ದಾರಿ ಮಧ್ಯೆದಲ್ಲಿ ಟಿಕೆಟ್ ಚೆಕ್ ಮಾಡುವ ಸಿಬ್ಬಂದಿ ಬಸ್ ಹತ್ತಿ ಬಂದು ಚೆಕ್ ಮಾಡಿದಾಗ ಪಕ್ಷಿಗಳಿಗೆ ಯಾವುದೇ ರೀತಿಯ ಟಿಕೆಟ್ ತೆಗೆದುಕೊಂಡಿಲ್ಲವೆಂಬುದು ಕಂಡಕ್ಟರ್​ಗೆ ದಂಡ ವಿಧಿಸಿದ್ದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:43 am, Wed, 27 March 24

Kiran Surya

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Follow Us