ಬೆಂಗಳೂರು: ಕೊರೊನಾ ಆತಂಕದ ನಡುವೆಯೇ ಗೌರಿ, ಗಣೇಶ ಹಬ್ಬದ ಸಂಭ್ರಮ ಚಿಗುರೊಡೆದಿದೆ. ಹಬ್ಬ ಆಚರಿಸುವುದಕ್ಕೆ ಅನುಮತಿ ಇದೆಯೋ? ಇಲ್ಲವೋ? ಎಂಬ ಗೊಂದಲದಲ್ಲಿದ್ದ ಜನತೆಗೆ ಕರ್ನಾಟಕ ರಾಜ್ಯ ಸರ್ಕಾರ ಸರಳ ಹಾಗೂ ಸುರಕ್ಷಿತವಾಗಿ ಹಬ್ಬ ಆಚರಿಸುವಂತೆ ತಿಳಿಸಿದೆ. ಹೀಗಾಗಿ ಹಬ್ಬದ ಸಡಗರ ಹೆಚ್ಚಾಗಿದ್ದು ಮಾರುಕಟ್ಟೆಗಳಲ್ಲಿ ಖರೀದಿಯ ಭರಾಟೆ ಜೋರಾಗಿ ಸಾಗಿದೆ. ಏತನ್ಮಧ್ಯೆ, ಹೂವು, ಹಣ್ಣು ಸೇರಿದಂತೆ ಹಬ್ಬಕ್ಕೆ ಬೇಕಾದ ಬಹುತೇಕ ಎಲ್ಲಾ ಅಗತ್ಯ ಸಾಮಾಗ್ರಿಗಳ ಬೆಲೆಯೂ ಗಗನಮುಖಿಯಾಗಿ ಸಾಗಿದ್ದು, ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ಮತ್ತಷ್ಟು ಬಲವಾಗಿ ತಟ್ಟಿದೆ.
ಮೊದಲೇ ಬೆಲೆಯೇರಿಕೆಯಿಂದ ಕಂಗೆಟ್ಟು ತಲೆಬಿಸಿ ಮಾಡಿಕೊಂಡಿರುವ ಜನ ಹಬ್ಬದ ನೆಪದಲ್ಲಾದರೂ ಕೊಂಚ ಸಂಭ್ರಮಿಸುವ ಯೋಚನೆಯಲ್ಲಿದ್ದರು. ಆದರೆ, ಈಗ ಮಾರುಕಟ್ಟೆಗಳಲ್ಲಿ ಹೂವು, ಹಣ್ಣುಗಳ ಬೆಲೆ ಕೇಳಿದರೆ ಹಬ್ಬದ ಖುಷಿಗೆ ವಿಘ್ನ ಎದುರಾದಂತೆ ಕಾಣುತ್ತಿದೆ. ಕೊರೊನಾ ನಡುವೆಯೂ ಮೈಮರೆತು ಗುಂಪುಗುಂಪಾಗಿ ಮಾರುಕಟ್ಟೆಗಳತ್ತ ಧಾವಿಸಿದ ಜನ ಕೊರೊನಾಕ್ಕಿಂತಲೂ ಬೆಲೆ ಏರಿಕೆಗೇ ಹೆಚ್ಚು ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದರೆ ಅತಿಶಯೋಕ್ತಿ ಅಲ್ಲ. ವರಮಹಾಲಕ್ಷ್ಮಿ ಹಬ್ಬದ ಸಂದರ್ಭಕ್ಕಿಂತಲೂ ದುಬಾರಿಯಾಗಿರುವ, ಕಳೆದ ವಾರಕ್ಕಿಂತಲೂ ದುಪ್ಪಟ್ಟಾಗಿರುವ ಹೂವು, ಹಣ್ಣುಗಳ ಬೆಲೆ ಸದ್ಯ ಮಾರುಕಟ್ಟೆಯಲ್ಲಿ ಹೇಗಿದೆ ಎಂಬ ಸಂಕ್ಷಿಪ್ತ ವಿವರ ಇಲ್ಲಿದೆ.
ಒಂದು ಕೆಜಿ ಹೂವಿನ ಬೆಲೆ ಎಷ್ಟು? ಕನಕಾಂಬರ 2 ಸಾವಿರ ರೂ. ಮಲ್ಲಿಗೆ 1 ಸಾವಿರದಿಂದ 1,200 ರೂ. ಮಳ್ಳೆ ಹೂ 600 ರಿಂದ 800 ರೂ. ಕಾಕಡ 400 ರಿಂದ 600 ರೂ. ಸುಗಂಧರಾಜ – 350 ರಿಂದ 400 ರೂ. ಗುಲಾಬಿ 300 ರೂ. ಸೇವಂತಿಗೆ 150 ರೂ. ಸೇವಂತಿಗೆ ಒಂದು ಮಾರಿಗೆ 130 ರೂ. ಎಕ್ಕದ ಹೂವಿನ ಹಾರ 80 ರಿಂದ 100ರೂ. ಚೆಂಡು ಹೂವು ಒಂದು ಮಾರಿಗೆ 50 ರೂ. ತುಳಸಿ ಒಂದು ಮಾರಿಗೆ 50 ರಿಂದ 80 ರೂ. ಬಿಲ್ವಪತ್ರೆ ಒಂದು ಕಟ್ಟಿಗೆ 40 ರೂ.
ಒಂದು ಕೆಜಿ ಹಣ್ಣಿನ ಬೆಲೆ ಎಷ್ಟಿದೆ? ಸೇಬು 120 ರಿಂದ 140 ರೂ. ದಾಳಿಂಬೆ 130 ರಿಂದ 150 ರೂ. ಮೂಸಂಬಿ 40 ರೂ. ಬಾಳೆಹಣ್ಣು 70 ರಿಂದ 80 ರೂ. ಒಂದು ಜೋಡಿ ಪೈನಾಪಲ್ 100 ಕಿತ್ತಳೆ 80 ರೂ. ಸೀತಾಫಲ 60 ರೂ. ಸಪೋಟ 50 ರೂ. ಬೇರಿಕಾಯಿ 130 ರೂ. ದ್ರಾಕ್ಷಿ 150 ರಿಂದ 180 ರೂ. ಸೀಬೇಹಣ್ಣು 80 ರೂ.
ಒಂದು ತೆಂಗಿನಕಾಯಿ ಬೆಲೆ 25 ರಿಂದ 35 ರೂ. ವೀಳ್ಯದೆಲೆ ಒಂದು ಕಟ್ಟು- 80 ರಿಂದ 100 ರೂ. ಮಾವಿನ ಸೊಪ್ಪು ಒಂದು ಕಟ್ಟು 30 ರೂ. ಒಂದು ಜತೆ ಬಾಳೆ ಕಂದು 40 ರಿಂದ 60 ರೂ. ಒಂದು ಕಟ್ಟು ಗರಿಕೆಗೆ 30 ರೂ.
ಇದನ್ನೂ ಓದಿ: Ganesha Chaturthi 2021: ಗಣೇಶ ಹಬ್ಬದ ದಿನ ವಿನಾಯಕನಿಗೆ ಈ ಐದು ವಸ್ತು ಸಮರ್ಪಿಸಿ, ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಿ
ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ; ಸೌದೆ ಒಲೆಯಲ್ಲಿ ಬಜ್ಜಿ ಕರಿದು ಆಕ್ರೋಶ
(Ganesha Chaturthi 2021 Fruits Flowers reach high rate for festival)