AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗೆ ಮೇಕಪ್: ಗುಂಡಿಮುಚ್ಚಿ, ಲೈಟ್ ಹಾಕಿ, ಕ್ಯಾಮೆರಾ ಅಳವಡಿಸಲು ರಾಜ್ಯ ಸರ್ಕಾರ ಸೂಚನೆ

ನಗರ ವ್ಯಾಪ್ತಿಯ ಸುಮಾರು 251 ಕಿಮೀ ಉದ್ದದ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಟೆಂಡರ್​ಶ್ಯೂರ್ ರಸ್ತೆಗಳನ್ನು ಮಾರ್ಚ್ ಒಳಗೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಬೆಂಗಳೂರಿಗೆ ಮೇಕಪ್: ಗುಂಡಿಮುಚ್ಚಿ, ಲೈಟ್ ಹಾಕಿ, ಕ್ಯಾಮೆರಾ ಅಳವಡಿಸಲು ರಾಜ್ಯ ಸರ್ಕಾರ ಸೂಚನೆ
ಬೆಂಗಳೂರಿನಲ್ಲಿ ಮಳೆ
TV9 Web
| Edited By: |

Updated on:Jan 02, 2022 | 4:18 PM

Share

ಬೆಂಗಳೂರು: ಮಹಾನಗರದ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು. ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದ ಸಚಿವರು, ಶಾಸಕರ ಸಭೆ ನಡೆಸಲಾಯಿತು. ಶಾಸಕರು, ಸಂಸದರು ವಿಡಿಯೊ ಕಾನ್ಪರೆನ್ಸ್ ಮೂಲಕ ಭಾಗವಹಿಸಿದ್ದರು. ಸಭೆಯ ನಂತರ ಕಂದಾಯ ಸಚಿವ ಆರ್.ಅಶೋಕ್ ವಿವರಗಳನ್ನು ನೀಡಿದರು. ನಗರ ವ್ಯಾಪ್ತಿಯ ಸುಮಾರು 251 ಕಿಮೀ ಉದ್ದದ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಟೆಂಡರ್​ಶ್ಯೂರ್ ರಸ್ತೆಗಳನ್ನು ಮಾರ್ಚ್ ಒಳಗೆ ಪೂರ್ಣಗೊಳಿಸಬೇಕು. ರಾಜಕಾಲುವೆ ಅಭಿವೃದ್ಧಿಗೆ ಮುಖ್ಯಮಂತ್ರಿ ಘೋಷಿಸಿರುವ ₹ 1500 ಕೋಟಿ ಮೊತ್ತವನ್ನು ಕಾಲಮಿತಿಯಲ್ಲಿ ಬಳಸಿಕೊಂಡು ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಮಳೆಹಾನಿ ಅನುಭವಿಸುವ ಪ್ರದೇಶಗಳಿಗೆ ಇದರಿಂದ ಅನುಕೂಲವಾಗುತ್ತದೆ ಎಂದು ಹೇಳಿದರು.

ಬೀದಿದೀಪಗಳಲ್ಲಿ ಎಲ್​ಇಡಿ ಲೈಟ್ ಅಳವಡಿಕೆ ಮತ್ತು ಬದಲಾವಣೆಗೆ ಕಾರ್ಪೊರೇಷನ್ ಮಟ್ಟದಲ್ಲಿಯೇ ನಿರ್ಧರಿಸುವುದು ಒಳ್ಳೆಯದು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಹೊಸದಾಗಿ ಟೆಂಡರ್ ಕರೆಯದೇ ವಲಯವಾರು ಸಭೆಗಳನ್ನು ನಡೆಸಿ, ಬೀದಿದೀಪಗಳನ್ನು ಅಳವಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ನಿರ್ಭಯಾ ಯೋಜನೆಯಡಿ 7 ಸಾವಿರ ಕ್ಯಾಮೆರಾ ಅಳವಡಿಸಲು ಸಭೆಯು ನಿರ್ಧರಿಸಿತು. ಬೆಂಗಳೂರಿನಲ್ಲಿ ಕಳೆದ 10 ವರ್ಷಗಳಿಂದ ಎಂಜಿನಿಯರ್​ಗಳು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಕೇವಲ 100 ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ಗುತ್ತಿಗೆ ಸಿಬ್ಬಂದಿಯಾಗಿ ಸದ್ಯಕ್ಕೆ 150 ಮಂದಿಯನ್ನು ನೇಮಿಸಿಕೊಳ್ಳುತ್ತೇವೆ. ಬಳಿಕ ಸರ್ಕಾರದ ವತಿಯಿಂದ ಪೂರ್ಣಪ್ರಮಾಣದ ನೇಮಕ ಮಾಡಿಕೊಳ್ಳಲಾಗುತ್ತದೆ. ಎಲ್ಲ 243 ವಾರ್ಡ್​ಗಳಿಗೂ ಎಂಜಿನಿಯರ್​ಗಳನ್ನು ನೇಮಿಸಲಾಗುವುದು. ಟಿಡಿಆರ್ ಯೋಜನೆ ನೆನೆಗುದ್ದಿಗೆ ಬಿದ್ದಿದೆ. ಹೊಸ ನೀತಿಯೊಂದನ್ನು ಒಂದು ವಾರದಲ್ಲಿ ರೂಪಿಸಲಾಗುವುದು ಎಂದು ಹೇಳಿದರು.

ಅಮೃತ ನಗರೋತ್ಥಾನವನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗಲಿದೆ. ಜಲಮಂಡಳಿ ಹಾಗೂ ಬಿಬಿಎಂಪಿ ನಡುವೆ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ನಿರ್ವಹಣೆ ಸಮಿತಿ ಮಾಡಲಾಗುತ್ತದೆ. ಎ ಹಾಗೂ ಬಿ ಖಾತಾ ಬಗ್ಗೆ ರಾಜೀವ್ ಚಂದ್ರಶೇಖರ್ ಅವರು ಮುಖ್ಯಮಂತ್ರಿಗೆ ಹಲವು ಸಲಹೆಗಳನ್ನು ನೀಡಿದ್ದಾರೆ. ಎ ಮತ್ತು ಬಿ ಖಾತಾ ಗೊಂದಲ ಪರಿಹರಿಸಲು ಸರ್ಕಾರ ಚಿಂತನೆ ನಡೆಸಿದೆ. ಅಕ್ರಮ ಸಕ್ರಮದಡಿ ಬಿ ಖಾತೆಗಳನ್ನು ಅದನ್ನ ಎ ಖಾತಾ ಮಾಡಿಕೊಡಲಾಗುತ್ತಿದೆ ಎಂದು ನುಡಿದರು.

ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಆಗ್ರಹಿಸಿ ಕಾಂಗ್ರೆಸ್ ಪಕ್ಷವು ಪಾದಯಾತ್ರೆ ನಡೆಸುತ್ತಿರುವ ಕುರಿತು ಪ್ರಸ್ತಾಪಿಸಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್​ನವರು ಏನು ಮಾಡುತ್ತಾರೆ ಎನ್ನುವುದು ನಮಗೆ ಮುಖ್ಯವಲ್ಲ. ರಾಜ್ಯದ ಆರುವರೆ ಕೋಟಿ ಜನರ ಜೀವ ಕಾಪಾಡುವುದು ನಮ್ಮ ಆದ್ಯತೆ. ಜನವರಿ 4 ಅಥವಾ 5 ರಂದು ಸಭೆ ನಡೆಸಿದ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: Covid 3rd Wave: ಕರ್ನಾಟಕದಲ್ಲಿ ಕೊರೊನಾ 3ನೇ ಅಲೆ ಭೀತಿ: ಕಠಿಣ ಕ್ರಮಕ್ಕೆ ಮುಂದಾದ ಸರ್ಕಾರ, ಲಾಕ್​ಡೌನ್ ಸುಳಿವು ಕೊಟ್ಟ ಸಚಿವ ಅಶೋಕ್ ಇದನ್ನೂ ಓದಿ: 15-18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ; ವ್ಯಾಕ್ಸಿನ್ ಪಡೆದ ಮಕ್ಕಳಿಗೆ ರಜೆ ನೀಡಲು ರಾಜ್ಯ ಸರ್ಕಾರ ತೀರ್ಮಾನ

Published On - 4:17 pm, Sun, 2 January 22