ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯ ಅಬ್ಬರ; ಇಲ್ಲಿದೆ ಮಾಹಿತಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 05, 2023 | 9:37 PM

ಬೆಂಗಳೂರು ನಗರದ ಹಲವೆಡೆ ಬಿಡದಂತೆ ಬರುತ್ತಿರುವ ಮಳೆಯಿಂದ ವಾಹನ ಸವಾರರು ಕಂಗಾಲಾಗಿದ್ದಾರೆ. ಹೌದು, ಸಂಜೆಯಿಂದ ನಿರಂತರ ಮಳೆ ಬರುತ್ತಿದ್ದು, ಬೈಕ್ ಸವಾರರ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬಿಡದ ಮಳೆಗೆ ಮುಖ್ಯವಾಗಿ ಬೈಕ್​ ಸವಾರರು ಪರದಾಟ ನಡೆಸಿದ್ದು, ಅಲ್ಲಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿದೆ. ಚಾಲುಕ್ಯ ಸರ್ಕಲ್, ಟೌನ್ ಹಾಲ್, ಕಾರ್ಪೊರೇಷನ್, ಕೆಆರ್ ಸರ್ಕಲ್, ಮೆಜೆಸ್ಟಿಕ್ ಸೇರಿ ಹಲವೆಡೆ ಟ್ರಾಫಿಕ್​ ಜಾಮ್​ ಉಂಟಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯ ಅಬ್ಬರ; ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು,ಸೆ.05: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ. ಕಲಬುರಗಿ, ಯಾದಗಿರಿ, ಬೀದರ್​ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗುತ್ತಿದೆ. ಅದರಂತೆ ಬೆಂಗಳೂರು (Bengaluru) ನಗರದ ಹಲವೆಡೆ ಬಿಡದಂತೆ ಬರುತ್ತಿರುವ ಮಳೆಯಿಂದ ವಾಹನ ಸವಾರರು ಕಂಗಾಲಾಗಿದ್ದಾರೆ. ಹೌದು, ಸಂಜೆಯಿಂದ ನಿರಂತರ ಮಳೆ ಬರುತ್ತಿದ್ದು, ಬೈಕ್ ಸವಾರರ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಪಾದಚಾರಿಗಳು ಹಿಡಿಶಾಪ ಹಾಕುತ್ತಿದ್ದಾರೆ.

ಎಲ್ಲೆಲ್ಲಿ ಮಳೆ?

ಬಿಡದ ಮಳೆಗೆ ಮುಖ್ಯವಾಗಿ ಬೈಕ್​ ಸವಾರರು ಪರದಾಟ ನಡೆಸಿದ್ದು, ಅಲ್ಲಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿದೆ. ಚಾಲುಕ್ಯ ಸರ್ಕಲ್, ಟೌನ್ ಹಾಲ್, ಕಾರ್ಪೊರೇಷನ್, ಕೆಆರ್ ಸರ್ಕಲ್, ಮೆಜೆಸ್ಟಿಕ್, ಕೆ.ಆರ್​.ಮಾರುಕಟ್ಟೆ, ಕೆ.ಆರ್.ಸರ್ಕಲ್, ಶಾಂತಿನಗರ, ಮಲ್ಲೇಶ್ವರಂ, ಶೇಷಾದ್ರಿಪುರಂ ಸೇರಿ ಹಲವೆಡೆ ಮಳೆಯಾಗುತ್ತಿದ್ದು, ಎಡೆಬಿಡದೆ ಸುರಿಯುತ್ತಿರುವ ಮಳೆಗೆ ವಾಹನ ಸವಾರರು ಹೈರಾಣರಾಗಿದ್ದಾರೆ.

ಇದನ್ನೂ ಓದಿ:Karnataka Rain: ಕರ್ನಾಟಕದಾದ್ಯಂತ ಮುಂಗಾರು ಚುರುಕು, ಕರಾವಳಿ, ಉತ್ತರ, ದಕ್ಷಿಣ ಒಳನಾಡಿನ ಕೆಲವೆಡೆ ಭಾರಿ ಮಳೆ ಸಾಧ್ಯತೆ

ಕಲಬುರಗಿ ಜಿಲ್ಲೆಯಲ್ಲಿ ಮಳೆ ಅಬ್ಬರ

ಕಲಬುರಗಿ: ಜಿಲ್ಲೆಯಲ್ಲಿ ಮಳೆ ಅಬ್ಬರಕ್ಕೆ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈಗಾಗಲೇ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಒಮ್ಮೆ ಬೆಳೆ ಕಳೆದುಕೊಂಡಿದ್ದ ರೈತರು. ಇದೀಗ ಹೆಚ್ಚಿನ ಮಳೆಯಿಂದ ಬೆಳೆ ಹಾಳಾಗುತ್ತಿರೋದರಿಂದ ರೈತರು ಮತ್ತೆ ಕಂಗಾಲಾಗಿದ್ದಾರೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಹಲವಡೆ ಬಾರಿ ಮಳೆಯಾಗಿದ್ದು, ಮಳೆಯಿಂದ ಕೃಷಿ ಜಮೀನುಗಳು ಕೆರೆಯಂತಾಗಿದೆ. ಕಷ್ಟಪಟ್ಟು ಬೆಳೆದ ತೊಗರಿ, ಹೆಸರು, ಉದ್ದಿನ ಬೆಳೆ ಮಳೆಗೆ ಸಿಲುಕಿ ಹಾಳಾಗುತ್ತಿದೆ.

ಬೆಳಗ್ಗಿನಿಂದ ಬೀಳುತ್ತಿರೋ ಜಿಟಿಪಿಟಿ ಮಳೆ

ಕೊಡಗು: ಜಿಲ್ಲೆಯ ಹಲವೆಡೆ ತುಂತುರು ಮಳೆಯಾಗುತ್ತಿದ್ದು, ಬೆಳಗ್ಗಿನಿಂದ ಜಿಟಿಪಿಟಿ ಮಳೆ ಬೀಳುತ್ತಿದೆ. ಬರ ಘೋಷಣೆ ಮಧ್ಯೆ ವರುಣನ ಆಗಮನವಾಗಿದ್ದು, ನೀರಿಲ್ಲದೆ ಬಣಗುಡುತ್ತಿದ್ದ ಭತ್ತದ ಗದ್ದೆಗಳು, ಇದೀಗ ಜಿಲ್ಲೆಯ ಭತ್ತ ಬೆಳೆದ ಕೃಷಿಕರಲ್ಲಿ ಸಂತಸ ಮೂಡಿದೆ.

ನಿರಂತರ‌ ಮಳೆ; ಭೀಮಾ‌ನದಿಗೆ ಹರಿದು ಬರುತ್ತಿರುವ ಅಪಾರ ಪ್ರಮಾಣದ ನೀರು

ಯಾದಗಿರಿ: ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಮಳೆ ಹಿನ್ನಲೆ ಭೀಮಾ‌ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಹರಿಯುವ ಕಾಗಿಣಾ ನದಿಯಿಂದಲೂ ಭೀಮಾ ನದಿಗೆ ನೀರು ಬರುತ್ತಿದ್ದು, ಇದರಿಂದ ನದಿ ಪಾತ್ರದ ದೇವಸ್ಥಾನಗಳು ಸಂಪೂರ್ಣ ಮುಳುಗಡೆಯಾಗಿದೆ. ಭೀಮಾ ನದಿ ಪಾತ್ರದ ಕಂಗಾಳೇಶ್ವೇರ ಹಾಗೂ ವೀರಾಂಜನೇಯ ದೇವಸ್ಥಾನಗಳ ಸೇರಿದಂತೆ ಅನೇಕ ದೇವಸ್ಥಾನಗಳು ನೀರಿನಿಂದ ಮುಳುಗಿ ಹೋಗಿದೆ. ಇನ್ನು ದೇವಸ್ಥಾನಗಳು ಮುಳುಗಡೆ ಹಿನ್ನಲೆ ನದಿ ದಡದಲ್ಲೇ ನಿಂತು ಭಕ್ತರು ದರ್ಶನ ಪಡೆಯುತ್ತಿದ್ದಾರೆ.

ಇದನ್ನೂ ಓದಿ:ಕಲಬುರಗಿ ಜಿಲ್ಲೆಯಲ್ಲಿ ನಿಲ್ಲದ ಮಳೆ: ಪೊಲೀಸ್ ಠಾಣೆಗೆ ನುಗ್ಗಿದ ಮಳೆ ನೀರು, ಸರ್ಕಾರಿ ಶಾಲಾ ಮೈದಾನ ಜಲಾವೃತ

ಭಾರಿ ಮಳೆಯಿಂದ ಸಂತಸಗೊಂಡಿರುವ ಕಾಫಿನಾಡಿನ ಜನತೆ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಚಿಕ್ಕಮಗಳೂರು ನಗರ ಸೇರಿದಂತೆ ಎನ್‌.ಆರ್‌.ಪುರ, ಕೊಪ್ಪ, ಬಾಳೆಹೊನ್ನೂರು, ಆಲ್ದೂರು ಸುತ್ತಮುತ್ತ ಧಾರಾಕಾರ ಮಳೆಯಾಗಿದೆ. ಕಳೆದ ಆಗಸ್ಟ್‌ನಲ್ಲಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆರಾಯ ಕೈಕೊಟ್ಟಿದ್ದ. ಇಂದು ಮಧ್ಯಾಹ್ನದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆ. ಭಾರಿ ಮಳೆಯಿಂದ ಕಾಫಿನಾಡಿನ ಜನತೆ ಸಂತಸಗೊಂಡಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ