ಗ್ಯಾಸ್ ಸಿಲಿಂಡರ್​​ಗಾಗಿ ಹೈಕೋರ್ಟ್​​ ಮೆಟ್ಟಿಲೇರಿದ ಬೆಂಗಳೂರು ಹೋಟೆಲ್ ಅಸೋಸಿಯೇಷನ್: ರಿಟ್​​ ಅರ್ಜಿ ಸಲ್ಲಿಕೆ

ರಾಜ್ಯದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ತೀವ್ರ ಅಭಾವದಿಂದ ಬೆಂಗಳೂರು ಹೋಟೆಲ್ ಉದ್ಯಮ ನಷ್ಟ ಅನುಭವಿಸುತ್ತಿದೆ. ಹಲವು ಹೋಟೆಲ್‌ಗಳು ಬಂದ್ ಆಗಿದ್ದರೆ, ಕೆಲವು ಮೆನು ಕಡಿತಗೊಳಿಸಿವೆ. ಈ ಬಿಕ್ಕಟ್ಟಿಗೆ ಪರಿಹಾರ ಕೋರಿ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದೆ. 40 ಸಾವಿರ ಹೋಟೆಲ್‌ಗಳು ಮತ್ತು 6 ಲಕ್ಷ ಕಾರ್ಮಿಕರ ಭವಿಷ್ಯ ಅತಂತ್ರವಾಗಿದ್ದು, ಸಿಲಿಂಡರ್ ಪೂರೈಕೆಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದೆ.

ಗ್ಯಾಸ್ ಸಿಲಿಂಡರ್​​ಗಾಗಿ ಹೈಕೋರ್ಟ್​​ ಮೆಟ್ಟಿಲೇರಿದ ಬೆಂಗಳೂರು ಹೋಟೆಲ್ ಅಸೋಸಿಯೇಷನ್: ರಿಟ್​​ ಅರ್ಜಿ ಸಲ್ಲಿಕೆ
ಹೈಕೋರ್ಟ್​​ಗೆ ರಿಟ್​​ ಅರ್ಜಿ ಸಲ್ಲಿಕೆ
Image Credit source: Google
Edited By:

Updated on: Mar 17, 2026 | 5:32 PM

ಬೆಂಗಳೂರು, ಮಾರ್ಚ್​​ 17: ರಾಜ್ಯದಲ್ಲಿ ಕಮರ್ಷಿಯಲ್​​ ಸಿಲಿಂಡರ್​​ಗಳ ಅಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರೋದು ಹೋಟೆಲ್​​ ಉದ್ಯಮವನ್ನು ನಷ್ಟದ ಕೂಪಕ್ಕೆ ತಳ್ಳುತ್ತಿದೆ. ಈಗಾಗಲೇ ಹಲವು ಹೋಟೆಲ್​​ಗಳು ಬಂದ್​​ ಆಗಿದ್ದರೆ, ಇನ್ನೊಂದಿಷ್ಟು ಮೆನುವಿನಲ್ಲಿ ಭಾರೀ ಕಡಿತದ ಜೊತೆ ಗ್ರಾಹಕರಿಗೆ ಸೇವೆ ನೀಡುತ್ತಿವೆ. ಸ್ಥಿತಿ ಹೀಗೆಯೇ ಮುಂದುವರಿದರೆ ಅವುಗಳೂ ಕ್ಲೋಸ್​​ ಆಗುವ ಆತಂಕ ಎದುರಾಗಿದೆ. ಈ ಬೆನ್ನಲ್ಲೇ ಬೆಂಗಳೂರು ಹೋಟೆಲ್ ಅಸೋಸಿಯೇಷನ್, ವಾಣಿಜ್ಯ ಬಳಕೆಯ ಸಿಲಿಂಡರ್​​ಗಳಿಗಾಗಿ ಹೈಕೋರ್ಟ್​​ ಕದ ತಟ್ಟಿದೆ.

ಹೈಕೋರ್ಟ್​ಗೆ ರಿಟ್ ಅರ್ಜಿ

ಹೋಟೆಲ್​ಗಳಿಗೆ ಗ್ಯಾಸ್ ಸಿಲಿಂಡರ್ ಕೋರಿ ಬೆಂಗಳೂರು ಹೋಟೆಲ್ ಅಸೋಸಿಯೇಷನ್​ನಿಂದ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳನ್ನು ಪ್ರತಿವಾದಿಯನ್ನಾಗಿಸಿ ಅರ್ಜಿ ಸಲ್ಲಿಸಲಾಗಿದ್ದು, ಹೋಟೆಲ್ ಮುಚ್ಚಿರುವುದರಿಂದ ಹಾಲು ಮತ್ತು ತರಕಾರಿ ಮಾರಾಟಗಾರರಿಗೂ ತೊಂದರೆ ಆಗಿದೆ. 40 ಸಾವಿರ ಹೋಟೆಲ್, 6 ಲಕ್ಷ ಕಾರ್ಮಿಕರಿಗೆ ಸಮಸ್ಯೆಯಾಗಿದೆ. ಹೀಗಾಗಿ ಗ್ಯಾಸ್ ಸಿಲಿಂಡರ್ ಪೂರೈಕೆಗೆ ನಿರ್ದೇಶನ ನೀಡುವಂತೆ ಆಗ್ರಹಿಸಿ ಅಸೋಸಿಯೇಷನ್ ಪರ ವಕೀಲ ಕೆ.ಸತೀಶ್ ಭಟ್ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: LPG ಸಿಲಿಂಡರ್​​ ಸಮಸ್ಯೆಗೆ ತಲ್ಲಣಿಸಿದ ಹೋಟೆಲ್​ ಉದ್ಯಮ; ಐದೇ ದಿನಗಳಲ್ಲಿ 100 ಕೋಟಿಗೂ ಅಧಿಕ ನಷ್ಟ!

ಹೋಟೆಲ್ ಉದ್ಯಮಕ್ಕೆ 1 ಸಾವಿರ ಸಿಲಿಂಡರ್​ಗಳನ್ನು ಪೂರೈಸುವುದಾಗಿ ಸಚಿವ ಮುನಿಯಪ್ಪ ಹೇಳಿದ್ದರೂ, ಸಚಿವರ ಭರವಸೆ ಬಗ್ಗೆ ಬೆಂಗಳೂರಿನ ಹೋಟೆಲ್ ಮಾಲೀಕರು ಅಸಮಾಧಾನ ಹೊರಹಾಕಿದ್ದಾರೆ. 40 ಸಾವಿರ ಹೋಟೆಲ್​​ಗಳಿಗೆ ಒಂದು ಸಾವಿರ ಸಿಲಿಂಡರ್ ಕೊಡುವ ಬದಲು, ಕೊಡದೆ ಇರುವುದೇ ಒಳ್ಳೆಯದು. ಹೋಟೆಲ್​​ಗಳ ಮಾಲಕರು ಮಾತ್ರವಲ್ಲದೆ ಅಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರು ಮತ್ತು ಅವರ ಕುಟುಂಬದ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕು ಎಂಬ ಆಗ್ರಹ ಕೇಳಿಬಂದಿದೆ. ಬೆಂಗಳೂರಿನಲ್ಲಿ ಸರಿ ಸುಮಾರು 40 ಸಾವಿರಕ್ಕೂ ಹೆಚ್ಚು ಹೋಟೆಲ್​ಗಳಿದ್ದು, ಈ ಪೈಕಿ 4,500 ಹೋಟೆಲ್​​ಗಳು ರಿಜಿಸ್ಟರ್​​ ಆಗಿವೆ. ಇವೆಲ್ಲವೂ ಕೂಡ ಈಗ ವಾಣಿಜ್ಯ ಗ್ಯಾಸ್ ಸಿಲಿಂಡರ್ ಅಭಾವದ ಸಮಸ್ಯೆಗೆ ಸಿಲುಕಿದ್ದು, ನಷ್ಟ ಅನುಭವಿಸುತ್ತಿವೆ. ಹಲವೆಡೆ ರೆಸ್ಟೋರೆಂಟ್​​ಗಳು ಬಂದ್​​ ಆಗಿದ್ದರೆ, ಇನ್ನು ಕೆಲ ಹೋಟೆಲ್​​ಗಳು ನಷ್ಟದಲ್ಲಿಯೇ ಗ್ರಾಹಕರಿಗೆ ಸೇವೆ ಒದಗಿಸುತ್ತಿರುವ ಪರಿಣಾಮ ರಾಜ್ಯ ರಾಜಧಾನಿ ಬೆಂಗಳೂರೊಂದರಲ್ಲೇ ನೂರಾರು ಕೋಟಿ ರೂಪಾಯಿ ಹೋಟೆಲ್​​ ಉದ್ಯಮಕ್ಕೆ ನಷ್ಟ ಉಂಟಾಗಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us