ಇರಾನ್-ಅಮೆರಿಕ ಯುದ್ಧ: ಬೆಂಗಳೂರಲ್ಲಿ ಚಿನ್ನದ ವ್ಯಾಪಾರ ಕುಸಿತ; ಎಕ್ಸ್‌ಚೇಂಜ್‌ಗೆ ಮುಂದಾದ ಜನರು

ಅಮೆರಿಕ-ಇರಾನ್ ಯುದ್ಧದ ಪರಿಣಾಮ ಬಂಗಾರ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ. ಇದರ ಪರಿಣಾಮವಾಗಿ ಇತ್ತ ಬೆಂಗಳೂರಿನಲ್ಲಿ ಚಿನ್ನದ ವ್ಯಾಪಾರ 40-50% ರಷ್ಟು ಕುಸಿದಿದೆ. ಜನರು ಚಿನ್ನ ಖರೀದಿಸುವ ಬದಲು ಹಳೆಯ ಚಿನ್ನವನ್ನು ವಿನಿಮಯ ಮಾಡಿಕೊಳ್ಳಲು ಮುಂದಾಗಿದ್ದಾರೆ. ಬಂಗಾರದಲ್ಲಿ ಹೂಡಿಕೆ ಮಾಡುವವರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ.

ಇರಾನ್-ಅಮೆರಿಕ ಯುದ್ಧ: ಬೆಂಗಳೂರಲ್ಲಿ ಚಿನ್ನದ ವ್ಯಾಪಾರ ಕುಸಿತ; ಎಕ್ಸ್‌ಚೇಂಜ್‌ಗೆ ಮುಂದಾದ ಜನರು
ಬಂಗಾರ
Image Credit source: tv9 kannada
Edited By:

Updated on: Jul 17, 2026 | 10:19 PM

ಬೆಂಗಳೂರು, ಜುಲೈ 17: ದೂರದ ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದ ತೀವ್ರ ಪ್ರಭಾವ ಭಾರತದ ಮೇಲೂ ಬೀರಿದೆ. ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮವಾಗಿ ದೇಶದಲ್ಲಿ ತೈಲ ಬಿಕ್ಕಟ್ಟು ಹಾಗೂ ಆರ್ಥಿಕ ಹಿನ್ನಡೆ ಉಂಟಾಗುವ ಭೀತಿ ಎದುರಾಗಿದೆ. ಅಷ್ಟೇ ಅಲ್ಲದೆ ಬಂಗಾರ (Gold) ವ್ಯಾಪಾರದ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಬೆಂಗಳೂರಿನಲ್ಲಿ ಬಂಗಾರದ ವ್ಯಾಪಾರವು ಅರ್ಧದಷ್ಟು ಕುಸಿದಿದೆ ಎಂದು ಜ್ಯುವೆಲರ್ಸ್ ಅಸೋಸಿಯೇಷನ್ ಕಳವಳ ವ್ಯಕ್ತಪಡಿಸಿದೆ.

ಬೆಲೆ ಇಳಿಕೆಯಾದರೂ ಖರೀದಿಗೆ ಹಿಂದೇಟು: ಎಕ್ಸ್‌ಚೇಂಜ್‌ಗೆ ಒಲವು

ಯುದ್ಧದ ಮಾರುಕಟ್ಟೆ ಏರುಪೇರುಗಳಿಂದಾಗಿ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ಕಂಡುಬರುತ್ತಿದ್ದರೂ ಸಹ, ಸಿಟಿ ಜನತೆ ಮಾತ್ರ ಹೊಸ ಚಿನ್ನ ಖರೀದಿಗೆ ಮುಂದಾಗುತ್ತಿಲ್ಲ. ಬಂಗಾರದ ಅಂಗಡಿಗಳಿಗೆ ಬರುವ ಗ್ರಾಹಕರ ಸಂಖ್ಯೆ ಶೇಕಡಾ 40 ರಿಂದ 50 ರಷ್ಟು ಕಮ್ಮಿಯಾಗಿದ್ದು, ವ್ಯಾಪಾರಸ್ಥರು ತೀವ್ರ ನಷ್ಟ ಅನುಭವಿಸುವಂತಾಗಿದೆ.

ಇದನ್ನೂ ಓದಿ: ಅಲ್ಲೆಲ್ಲೋ ಯುದ್ಧ ನಡೀತಿದ್ರೆ ಇಲ್ಯಾಕೆ ಚಿನ್ನ ಖರೀದಿ ಮಾಡಬಾರದು? ಬಂಗಾರ ಖರೀದಿ ನಿಲ್ಲಿಸಿದ್ರೆ ದೇಶಕ್ಕಾಗುವ ಲಾಭವೇನು?

ಪ್ರಸ್ತುತ ಸಾರ್ವಜನಿಕರು ಹೊಸ ಚಿನ್ನವನ್ನು ಕೊಳ್ಳುವ ಬದಲು, ತಮ್ಮ ಬಳಿ ಇರುವ ಹಳೆಯ ಆಭರಣಗಳನ್ನು ನೀಡಿ ಹೊಸ ಗೋಲ್ಡ್ ಎಕ್ಸ್‌ಚೇಂಜ್ ಮಾಡಿಕೊಳ್ಳುವತ್ತ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ ಎಂದು ರಾಜ್ಯ ಜ್ಯುವೆಲರ್ಸ್ ಅಸೋಸಿಯೇಷನ್ ಖಜಾಂಚಿ ರವಿಕುಮಾರ್​ ಮಾಹಿತಿ ನೀಡಿದ್ದಾರೆ.

ಬಂಗಾರದ ಮೇಲೆ ಹೂಡಿಕೆಯೂ ಕುಸಿತ

ಸಾಮಾನ್ಯವಾಗಿ ಚಿನ್ನದ ಬೆಲೆ ಇಳಿಕೆಯಾದಾಗ ಜನಸಾಮಾನ್ಯರು ಆಭರಣಗಳನ್ನು ಹಾಗೂ ಹೂಡಿಕೆದಾರರು ಇನ್ವೆಸ್ಟ್‌ಮೆಂಟ್ ಹೆಸರಿನಲ್ಲಿ ಚಿನ್ನದ ನಾಣ್ಯ ಹಾಗೂ ಬಿಸ್ಕೆಟ್‌ಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದರು. ಆದರೆ ಪ್ರಸಕ್ತ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬಂಗಾರದ ಮೇಲೆ ಹೂಡಿಕೆ ಮಾಡುವವರ ಪ್ರಮಾಣದಲ್ಲಿ ಶೇಕಡಾ 80 ರಷ್ಟು ಕುಸಿತ ಕಂಡುಬಂದಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಚಿನ್ನ, ಇಂಧನ ಮಾರಾಟ ಶೇ.50ರಷ್ಟು ಕುಸಿತ

ಆರ್ಥಿಕತೆಯನ್ನು ರಕ್ಷಿಸುವ ಕರೆಗೆ ಸಾರ್ವಜನಿಕರು ಕಿವಿಕೊಟ್ಟಿರುವುದು ದೇಶದ ದೃಷ್ಟಿಯಿಂದ ಧನಾತ್ಮಕವಾಗಿದ್ದರೂ, ಇತ್ತ ಚಿನ್ನದ ಆಭರಣ ವ್ಯಾಪಾರಿಗಳಿಗೆ ಮಾತ್ರ ಇದು ದೊಡ್ಡ ಮಟ್ಟದ ಆರ್ಥಿಕ ಹೊಡೆತ ನೀಡುತ್ತಿರುವುದಂತೂ ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:13 pm, Fri, 17 July 26

Follow Us