ಜನಸ್ಪಂದನ: ಜನರು ಕೊಟ್ಟ ಅರ್ಜಿಗಳನ್ನು ಅಧಿಕಾರಿಗಳಿಗೆ ನೀಡಿದ್ದೇನೆ: ಡಿಕೆ ಶಿವಕುಮಾರ್

| Updated By: Rakesh Nayak Manchi

Updated on: Jan 05, 2024 | 2:24 PM

ರಾಜ್ಯಾದ್ಯಂತ ಸಚಿವರು ಹಾಗೂ ಶಾಸಕರು ಜನಸ್ಪಂದನಾ ಕಾರ್ಯಕ್ರಮ ನಡೆಸುತ್ತಿದ್ದಾರೆ. ಈ ಕಾರ್ಯಕ್ರಮದ ಮೂಲಕ ಜನರ ಕಷ್ಟಗಳಿಗೆ ಸರ್ಕಾರ ಸ್ಪಂದಿಸುತ್ತಿದ್ದು, ಅನೇಕ ಜನರು ಅರ್ಜಿಗಳನ್ನು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ಅರ್ಜಿಗಳನ್ನು ಅಧಿಕಾರಿಗಳಿಗೆ ನೀಡಲಾಗಿದೆ ಎಂದರು.

ಜನಸ್ಪಂದನ: ಜನರು ಕೊಟ್ಟ ಅರ್ಜಿಗಳನ್ನು ಅಧಿಕಾರಿಗಳಿಗೆ ನೀಡಿದ್ದೇನೆ: ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Image Credit source: PTI
Follow us on

ಬೆಂಗಳೂರು, ಜ.5: ಜನಸ್ಪಂದನ ಕಾರ್ಯಕ್ರಮದ ಮೂಲಕ ಜನರಿಂದ ಸ್ವೀಕರಿಸಲಾದ ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದರು. ಯಲಹಂಕದ ನ್ಯೂ ಟೌನ್ ನ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನರಿಂದ ಅಹವಾಲು ಸ್ವೀಕರಿಸಿದ ಮಾತನಾಡಿದರು.

ನನಗೆ ಇವತ್ತು ಸಚಿವ ಸಂಪುಟ ಸಭೆಗೆ ಹೋಗಲಿದೆ. ಅಲ್ಲಿಗೆ ಹೋಗದಿದ್ದರೂ ಪರವಾಗಿಲ್ಲ ನಿಮ್ಮ ಸಮಸ್ಯೆ ಆಲಿಸುತ್ತೇನೆ. ಶಾಸಕರು ಕೂಡ ಕೆಲವು ಅರ್ಜಿಗಳನ್ನು ಕೊಟ್ಟಿದ್ದಾರೆ. ಜನರು ಕೊಟ್ಟ ಅರ್ಜಿಗಳನ್ನು ಅಧಿಕಾರಿಗಳಿಗೆ ನೀಡಿದ್ದೇನೆ. ಯಾರೇ ಸಮಸ್ಯೆ ಹೇಳಿದರೂ ಬಗೆಹರಿಸುವ ಕೆಲಸ ಮಾಡುತ್ತೇನೆ. ನಾಳೆ ಶಿವಾಜಿನಗರ, ಪುಲಕೇಶಿನಗರ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಮಾಡುತ್ತೇನೆ. ಬಳಿಕ ಹಂತ ಹಂತವಾಗಿ ಎಲ್ಲೆಡೆ ಕಾರ್ಯಕ್ರಮ ಮಾಡುತ್ತೇವೆ ಎಂದರು.

ನಮ್ಮ ಉದ್ದೇಶ ನಿಮ್ಮ ಋಣ ತೋರಿಸಬೇಕು ಎಂಬುದಾಗಿದೆ. ನಮ್ಮನ್ನು ನಂಬಿ ನಮಗೆ ಅವಕಾಶ ಕೊಟ್ಟಿದ್ದೀರಿ. ಅದರ ಋಣವನ್ನ ತೀರಿಸಬೇಕು. ಅಕ್ಕಿ ಒಂದು ಕಡೆ ಇರುತ್ತದೆ, ಅರಿಶಿನ ಒಂದು ಕಡೆ ಇರುತ್ತದೆ. ಎರಡು ಸೇರಿದಾಗ ಮಂತ್ರಾಕ್ಷತೆಯಾಗುತ್ತದೆ. ಜನರ ಬಳಿ ಹೋಗಿ ಸಮಸ್ಯೆ ಬಗೆಹರಿಸಲು ಯತ್ನಿಸಿದ್ದೇನೆ. ಆಗ ನನಗೆ ಪ್ರೆಷರ್ ಕೂಡ ಕಡಿಮೆಯಾಗುತ್ತದೆ ಎಂದರು.

ಇದನ್ನೂ ಓದಿ: ಬಾಗಿಲಿಗೆ ಬಂತು ಸರ್ಕಾರ: ಜನರಿಂದ ಡಿಕೆ ಶಿವಕುಮಾರ್​​ಗೆ ಬಂದಿವೆ ಎರಡು ಸಾವಿರಕ್ಕೂ ಅಧಿಕ ದೂರುಗಳು

ಶಾಸಕರು, ಜನಪ್ರತಿನಿಧಿಗಳು ಅವರ ಕೆಲಸ ಮಾಡುತ್ತಿದ್ದಾರೆ. ಆದರೆ ನನ್ನ ಮನೆ ಬಳಿ ರಾತ್ರಿಯವರೆಗೂ ಜನ ಕಾಯುತ್ತಿದ್ದರು. ಮುಖ್ಯಮಂತ್ರಿಗಳು ಕೂಡ ಜನಸ್ಪಂದನ ಮಾಡಲು ಹೇಳಿದರು. ಅದರಂತೆ ನನ್ನ ಕ್ಷೇತ್ರದಲ್ಲೂ ಭೇಟಿ ಮಾಡಿದ್ದೇನೆ ಎಂದರು.

ಕೆಲವೆಡೆ ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪ ಇದೆ. ಯಾರೇ ದುಡ್ಡು ಕೇಳುತ್ತಿದ್ದರೂ ಇಲ್ಲಿ ನನ್ನ ಮುಂದೆ ಹೇಳಿಕೊಳ್ಳಿ. ಯಾರೇ ಆದರೂ ವಿಚಾರಿಸುತ್ತೇವೆ ಎಂದರು. ಈಗಾಗಲೇ ಸರ್ಕಾರ ಅನ್ನಭಾಗ್ಯ ಅಕ್ಕಿ ಕೊಡುತ್ತಿದೆ. ಫ್ರೀ ಕರೆಂಟ್ ಕೂಡ ಕೊಡುತ್ತಿದೆ. ಕೆಲವರು ಹೆಂಡತಿಯರ ಹೆಸರಿನ ಬದಲು ತಮ್ಮ ಮೊಬೈಲ್ ನಂಬರ್ ಕೊಟ್ಟಿದ್ದಾರೆ. ಆದರೂ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದ್ದೇವೆ ಎಂದರು.

ತೆರಿಗೆ ಕಟ್ಟದಿದ್ದರೆ ಅಭಿವೃದ್ಧಿ ಕೆಲಸ ಹೇಗಾಗುತ್ತದೆ? ಹೀಗಾಗಿ ಟ್ಯಾಕ್ಸ್ ಕಟ್ಟದವರಿಗೂ ಕೂಡ ಎಚ್ಚರಿಕೆ ಕೊಡಲಾಗುತ್ತಿದೆ ಎಂದು ಹೇಳಿದ ಡಿಕೆ ಶಿವಕುಮಾರ್, ಬಿಡಬ್ಲ್ಯುಎಸ್​ಎಸ್​ಬಿಯಿಂದ ಎತ್ತಿನಹೊಳೆ ನೀರು, ಅಂಡರ್ ವಾಟರ್ ಯೋಜನೆ ಪ್ಲ್ಯಾನ್ ಇದೆ. ಬೆಂಗಳೂರನ್ನ ಅಭಿವೃದ್ಧಿ ಮಾಡಬೇಕಿದೆ. ಕಸ-ಕಡ್ಡಿಗಳನ್ನು ಹೊರಗಡೆ ಹಾಕುವ ಹಾಗಿಲ್ಲ. ಸಿಸಿಟಿವಿ ಪರಿಶೀಲಿಸಿ ಪ್ರಕರಣ ದಾಖಲಿಸುತ್ತೇವೆ ಎಂದರು.

ಕಾನೂನು ಚೌಕಟ್ಟಿನಲ್ಲಿ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ. ನನಗೆ ಆಗಲಿಲ್ಲ ಎಂದರೆ ಯಾಕೆ ಆಗಿಲ್ಲ ಅಂತಾ ತಿಳಿಸುವ ಯತ್ನ ಮಾಡುತ್ತೇನೆ. ಐದು ಗ್ಯಾರಂಟಿಗಳನ್ನ ಹೇಳಿದ್ದೆವು. ಅದನ್ನು ಜಾರಿಗೆ ತಂದಿದ್ದೇವೆ. 5 ಬೆರಳುಗಳು ಸೇರಿ ಕೈಗೆ ಶಕ್ತಿ ಬಂದಿದೆ. ನಾವು ಕೊಟ್ಟ ಮಾತನ್ನು ಉಳಿಸಿದ್ದೇವೆ ಎಂದರು.

ವಿಕಲಚೇತನರ ಬಳಿ ತೆರಳಿ ಅರ್ಜಿ ಸ್ವೀಕರಿಸಿದ ಡಿಕೆ ಶಿವಕುಮಾರ್

ಕಾರ್ಯಕ್ರಮದ ವೇದಿಕೆಯಿಂದ ಇಳಿದು ವಿಕಲಚೇತನರ ಬಳಿ ತೆರಳಿದ ಡಿಸಿಎಂ ಡಿಕೆ ಶಿವಕುಮಾರ್ ಅರ್ಜಿ ಸ್ವೀಕರಿಸಿ ಸಮಸ್ಯೆಗಳನ್ನು ಆಲಿಸಿದರು. ನಂತರ ಸರತಿ ಸಾಲಿನಲ್ಲಿ ನಿಂತು ಜನರು ಅರ್ಜಿ ಸಲ್ಲಿಕೆ ಮಾಡಿದರು. ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸುವಾಗ ಅವರ ಹೆಸರು, ವಿಳಾಸ ಬರೆದು ಸಮಸ್ಯೆಗಳನ್ನ ತಾವೇ ಬರೆದುಕೊಂಡರು. ಅರ್ಜಿ ಕೊಡಲು ಬಂದ ಅಜ್ಜಿಗೆ 2 ಸಾವಿರ ಬರುತ್ತಿದ್ದೇಯ ಅಂತಾ ಪ್ರಶ್ನಿಸಿದಾಗ ಇಲ್ಲ ಎಂದರು. ಫೋನ್ ಬರುತ್ತದೆ, ಸರಿಮಾಡೋಣ ಎಂದು ಡಿಸಿಎಂ ಭರವಸೆ ನೀಡಿದರು.

ವರದಿ: ಶಾಂತ್​ಕುಮಾರ್ ಟಿವಿ9 ಬೆಂಗಳೂರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ