ರಾಜ್ಯ ಸರ್ಕಾರದಿಂದ ಗುಡ್​​ ನ್ಯೂಸ್​​: ಹಲ್ಲಿನ ರೂಟ್ ಕೆನಾಲ್ ಚಿಕಿತ್ಸೆಗೂ ಇನ್ಮುಂದೆ ವಿಮಾ ಯೋಜನೆ ಅಪ್ಲಿಕೇಬಲ್

ಕರ್ನಾಟಕದಲ್ಲಿ ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಜನ್​​ ಆರೋಗ್ಯ-ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿ ಹಲ್ಲಿನ ರೂಟ್ ಕೆನಾಲ್ ಚಿಕಿತ್ಸೆಯನ್ನು ಸೇರ್ಪಡೆಗೊಳಿಸಲಾಗಿದೆ. ಇನ್ನು ಮುಂದೆ, ಹಲ್ಲುಗಳ ರೂಟ್ ಕೆನಾಲ್ ಚಿಕಿತ್ಸೆಗೆ ವಿಮಾ ಸೌಲಭ್ಯ ಸಿಗಲಿದೆ. ರೋಗಿಗಳು ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಭರಿಸಬೇಕಿಲ್ಲ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. ಇದು ರಾಜ್ಯದ ಜನರಿಗೆ ಕೈಗೆಟುಕುವ ಗುಣಮಟ್ಟದ ದಂತ ಸೇವೆ ಒದಗಿಸಲು ಸಹಕಾರಿಯಾಗಲಿದೆ.

ರಾಜ್ಯ ಸರ್ಕಾರದಿಂದ ಗುಡ್​​ ನ್ಯೂಸ್​​: ಹಲ್ಲಿನ ರೂಟ್ ಕೆನಾಲ್ ಚಿಕಿತ್ಸೆಗೂ ಇನ್ಮುಂದೆ ವಿಮಾ ಯೋಜನೆ ಅಪ್ಲಿಕೇಬಲ್
ಸಾಂದರ್ಭಿಕ ಚಿತ್ರ

Updated on: Apr 09, 2026 | 4:04 PM

ಬೆಂಗಳೂರು, ಏಪ್ರಿಲ್​​ 09: ರಾಜ್ಯದ ಜನರಿಗೆ ಕರ್ನಾಟಕ ಸರ್ಕಾರ ಗುಡ್​​ ನ್ಯೂಸ್​​ ಒಂದನ್ನು ನೀಡಿದ್ದು, ಹಲ್ಲಿನ ಚಿಕಿತ್ಸೆಗೂ ವಿಮಾ ಯೋಜನೆ ಸಹಾಯ ಸಿಗುವ ನಿಟ್ಟಿನಲ್ಲಿ ಮಹತ್ವದ ನಿರ್ಣಯ ಕೈಗೊಂಡಿದೆ. ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಜನ್​​ ಆರೋಗ್ಯ-ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿ ಹಲ್ಲಿನ ರೂಟ್ ಕೆನಾಲ್  ಚಿಕಿತ್ಸೆ ಸೇರ್ಪಡೆಗೆ ಅನುಮೋದನೆ ನೀಡಲಾಗಿದೆ. ಹೀಗಾಗಿ ದಂತ ಚಿಕಿತ್ಸೆಯನ್ನೂ ಈ ಯೋಜನೆಯಡಿ ಫಲಾನುಭವಿಗಳು ಮಾಡಿಸಿಕೊಳ್ಳಬಹುದಾಗಿದ್ದು, ಈ ಬಗ್ಗೆ ಎಕ್ಸ್​​ ಪೋಸ್ಟ್​​ ಮಾಡುವ ಮೂಲಕ ಸ್ವತಃ ಆರೋಗ್ಯ ಸಚಿವ ದಿನೇಶ್​​ ಗುಂಡೂರಾವ್​​ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.

ಸಚಿವರು ಹೇಳಿದ್ದೇನು?

ಸಾರ್ವಜನಿಕ ಆರೋಗ್ಯ ಸೇವೆಯನ್ನು ಹಂತ ಹಂತವಾಗಿ ಬಲಪಡಿಸುವ ದಿಸೆಯಲ್ಲಿ ಇದು ಮತ್ತೊಂದು ಮಹತ್ವದ ಹೆಜ್ಜೆ ಎಂದಿರುವ ಸಚಿವರು, ಈ ಯೋಜನೆ ಮುಂಭಾಗ (Anterior) ಮತ್ತು ಹಿಂಭಾಗ (Posterior) ಹಲ್ಲುಗಳ ರೂಟ್ ಕೆನಾಲ್  ಚಿಕಿತ್ಸೆಯನ್ನೂ ಒಳಗೊಂಡಿದ್ದು, ರಾಜ್ಯದಾದ್ಯಂತ ಸಮಯೋಚಿತ, ಕೈಗೆಟುಕುವ ಹಾಗೂ ಗುಣಮಟ್ಟದ ದಂತ ಆರೋಗ್ಯ ಸೇವೆಗಳನ್ನು ಒದಗಿಸಲು ಇದು ನೆರವಾಗಲಿದೆ. CGHS ಟಿಯರ್-3 ಮಾನದಂಡದ ಪ್ಯಾಕೇಜ್ ದರಗಳು ಮತ್ತು ಸ್ಪಷ್ಟ ಕ್ಲಿನಿಕಲ್ ವರ್ಗೀಕರಣದೊಂದಿಗೆ, ಚಿಕಿತ್ಸೆಗಳಲ್ಲಿ ಏಕತೆಯನ್ನು ತರಲು ಇದು ಸಹಾಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ನಾಲಿಗೆಯಲ್ಲಿ ಹುಣ್ಣುಗಳಾಗುವುದಕ್ಕೆ ಕಾರಣ ಏನ್ ಗೊತ್ತಾ? ಇದು ಗಂಭೀರ ರೋಗದ ಮುನ್ಸೂಚನೆಯೇ? ಇಲ್ಲಿದೆ ಉತ್ತರ

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮೂಲಕ ಜಾರಿಗೆ ತರಲಾಗುತ್ತಿರುವ ಈ ಪ್ಯಾಕೇಜ್‌  ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ರೀತಿಯ ವೆಚ್ಚಗಳನ್ನು ಒಳಗೊಂಡಿದ್ದು, ರೋಗಿಗಳು ಹೆಚ್ಚುವರಿ ಶುಲ್ಕಗಳನ್ನು ಭರಿಸಬೇಕಾಗುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:25 pm, Thu, 9 April 26

Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us