‘ಬಡ ಅಭ್ಯರ್ಥಿಯ ಅವಕಾಶ ಕಸಿದುಕೊಂಡಿಲ್ಲವೇ?’: KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕರ್ ಪುತ್ರಿಗೆ ಹೈಕೋರ್ಟ್ ಪ್ರಶ್ನೆ
ಕರ್ನಾಟಕ ಲೋಕಸೇವಾ ಆಯೋಗದ (KPSC) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕರ್ ಅವರ ಪುತ್ರಿ ಸುಮಾ ಸಾಹುಕರ್ ಅವರು 3ಬಿ ಮೀಸಲಾತಿ ಪಡೆಯಲು ತಪ್ಪು ಆದಾಯ ಪ್ರಮಾಣಪತ್ರ ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಕೆಪಿಎಸ್ಸಿ ಅಧ್ಯಕ್ಷರ ಪುತ್ರಿ ಕುಟುಂಬದ ಆದಾಯ 40 ಸಾವಿರ ಎಂದು ಘೋಷಿಸಿ 3ಬಿ ವರ್ಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದಾಳೆ. ಆದರೆ ಕುಟುಂಬದ ಆದಾಯ 25 ಲಕ್ಷವಾಗಿದ್ದರೆ ಇದು ಸ್ಪಷ್ಟ ವಂಚನೆ ಅಲ್ಲವೇ? ಎಂದು ಪೀಠ ಕೇಳಿದೆ.

ಬೆಂಗಳೂರು, ಜುಲೈ 28: ಕರ್ನಾಟಕ ಲೋಕಸೇವಾ ಆಯೋಗದ (KPSC) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕರ್ ಅವರ ಪುತ್ರಿ ಸುಮಾ ಸಾಹುಕರ್ ಸಲ್ಲಿಸಿದ್ದ ಆದಾಯ ಘೋಷಣೆ ಕುರಿತ ಪ್ರಕರಣದ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಕುಟುಂಬದ ವಾರ್ಷಿಕ ಆದಾಯ 40 ಸಾವಿರ ಎಂದು ಘೋಷಣೆ ಸಲ್ಲಿಸಿರುವುದು ದಾಖಲೆಗಳಿಂದ ಸ್ಪಷ್ಟವಾಗಿರುವಾಗ, ಆ ಸಮಯದಲ್ಲಿ ಅವರ ತಂದೆ ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಹಿನ್ನೆಲೆಯಲ್ಲಿ ಈ ಘೋಷಣೆ ಹೇಗೆ ಸಾಧ್ಯ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಕೇಳಿದ್ದಾರೆ.
ಯಾವ ವಿಚಾರಣೆ ಬೇಕು? ಗೊಂದಲ ಇದ್ದರೆ ಮಾತ್ರ ವಿಚಾರಣೆ ನಡೆಸಬೇಕು. ಕೆಪಿಎಸ್ಸಿ ಅಧ್ಯಕ್ಷರ ಪುತ್ರಿ ಕುಟುಂಬದ ಆದಾಯ 40 ಸಾವಿರ ಎಂದು ಘೋಷಿಸಿ 3ಬಿ ವರ್ಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದಾಳೆ. ಆದರೆ ಕುಟುಂಬದ ಆದಾಯ 25 ಲಕ್ಷವಾಗಿದ್ದರೆ ಇದು ಸ್ಪಷ್ಟ ವಂಚನೆ ಅಲ್ಲವೇ? ಎಂದು ಪೀಠ ಕೇಳಿದೆ. ಮೀಸಲಾತಿ ಸೌಲಭ್ಯ ಪಡೆಯಲು ಸುಳ್ಳು ಆದಾಯ ಘೋಷಣೆ ಸಲ್ಲಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಪಶುವೈದ್ಯರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ, ತನಿಖೆ CIDಗೆ ವರ್ಗಾವಣೆ ಮಾಡಿ ಆದೇಶ
‘ಅರ್ಹ ಅಭ್ಯರ್ಥಿಯ ಅವಕಾಶ ಕಸಿದುಕೊಳ್ಳಲಾಗಿದೆ’
ಅರ್ಜಿದಾರರ ಪರ ವಕೀಲ ಅರುಣ್ ಶ್ಯಾಮ್, ಘೋಷಣೆಯಲ್ಲಿ ನಮೂದಿಸಿರುವುದು ಸುಮಾ ಅವರ ವೈಯಕ್ತಿಕ ಆದಾಯ, ಕುಟುಂಬದ ಆದಾಯವಲ್ಲ ಎಂದು ವಾದ ಮಂಡಿಸಿದ್ದರು. ಆದರೆ ಈ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ, 3ಬಿ ಮೀಸಲಾತಿಗೆ ಕುಟುಂಬದ ಆದಾಯವೇ ಮಾನದಂಡ. ವೈಯಕ್ತಿಕ ಆದಾಯಕ್ಕೆ ಇಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ ನಿಜವಾಗಿಯೂ 40 ಸಾವಿರ ವಾರ್ಷಿಕ ಆದಾಯ ಹೊಂದಿದ್ದ ಅರ್ಹ ಅಭ್ಯರ್ಥಿಯೊಬ್ಬರ ಅವಕಾಶವನ್ನು ಇಲ್ಲಿ ಕಸಿದುಕೊಳ್ಳಲಾಗಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ಅರ್ಜಿದಾರರ ಪರ ವಕೀಲರು, ಅಂತಿಮ ಆಯ್ಕೆಪಟ್ಟಿ ಪ್ರಕಟವಾಗುವ ಮುನ್ನವೇ ಸುಮಾ ಸಾಹುಕರ್ ತಮ್ಮ ಅಭ್ಯರ್ಥಿತ್ವವನ್ನು ಹಿಂಪಡೆದಿದ್ದರು ಎಂದು ತಿಳಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ ಅಭ್ಯರ್ಥಿತ್ವ ಹಿಂಪಡೆದಿರಬಹುದು. ಆದರೆ ಮೊದಲೇ ಯಾಕೆ ಭಾಗವಹಿಸಿದ್ದಿರಿ? ಬಡ ಅಭ್ಯರ್ಥಿಯ ಅವಕಾಶ ಕಸಿದುಕೊಂಡಿಲ್ಲವೇ? ಎಂದು ಮರುಪ್ರಶ್ನಿಸಿದ ಪ್ರಸಂಗ ನಡೆದಿದೆ,
ಪ್ರಕರಣದ ಹಿನ್ನೆಲೆ
ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕರ್ ತಮ್ಮ ಇಬ್ಬರು ಪುತ್ರಿಯರಿಗೆ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆ ನೇಮಕಾತಿಯಲ್ಲಿ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆರೋಪಗಳ ಪ್ರಕಾರ, ಪುತ್ರಿಯರಲ್ಲಿ ಒಬ್ಬರು ಕುಟುಂಬದ ವಾರ್ಷಿಕ ಆದಾಯವನ್ನು 40 ಸಾವಿರ ಎಂದು ಘೋಷಿಸಿ ಆದಾಯ ಹಾಗೂ ಜಾತಿ ಪ್ರಮಾಣಪತ್ರ ಪಡೆದು, ಹಿಂದುಳಿದ ವರ್ಗದ ಮೀಸಲಾತಿ ಹಾಗೂ ಕ್ರೀಮಿ ಲೇಯರ್ ವಿನಾಯಿತಿ ಸೌಲಭ್ಯ ಪಡೆದಿದ್ದಾರೆ. ಈ ವೇಳೆ ಅವರ ತಂದೆ ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ವಿಚಾರವನ್ನು ಮುಚ್ಚಿಟ್ಟಿದ್ದರು ಎಂಬ ಆರೋಪಗಳೂ ಕೇಳಿಬಂದಿದ್ದವು ಎಂದು ಎನ್ಡಿಟಿವಿ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:34 pm, Tue, 28 July 26




