ಪಶುವೈದ್ಯರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ, ತನಿಖೆ CIDಗೆ ವರ್ಗಾವಣೆ ಮಾಡಿ ಆದೇಶ
ಕೆಪಿಎಸ್ಸಿ ಪಶುವೈದ್ಯರ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಸುಮಾರು 60% ಹುದ್ದೆಗಳನ್ನು ಹಣಕ್ಕೆ ಮಾರಾಟ ಮಾಡಲಾಗಿದೆ ಹಾಗೂ ಪ್ರತಿ ಹುದ್ದೆಗೆ 80 ಲಕ್ಷ ರೂ. ಲಂಚ ನಿಗದಿಯಾಗಿತ್ತು ಎಂಬ ಗಂಭೀರ ಆರೋಪವಿದೆ. ಮೂರು ಎಫ್ಐಆರ್ಗಳ ಪೈಕಿ ಎರಡನ್ನು ಸಿಐಡಿ ವಹಿಸಿಕೊಂಡಿದೆ.
ಬೆಂಗಳೂರು, ಜುಲೈ 28: ಕೆಪಿಎಸ್ಸಿ ಪಶುವೈದ್ಯರ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಈಗ ಸಿಐಡಿ ವಹಿಸಿಕೊಂಡಿದೆ. ಪಶುವೈದ್ಯರ ನೇಮಕಾತಿಯಲ್ಲಿ ಸುಮಾರು 60% ಹುದ್ದೆಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂಬ ಗಂಭೀರ ಶಂಕೆ ವ್ಯಕ್ತವಾಗಿದೆ. ಅಲ್ಲದೆ, ಪ್ರತಿ ಹುದ್ದೆಗೆ 80 ಲಕ್ಷ ರೂಪಾಯಿ ಲಂಚ ನಿಗದಿಯಾಗಿತ್ತು ಎನ್ನುವ ಆರೋಪದ ಆಡಿಯೋ ಸಹ ವೈರಲ್ ಆಗಿತ್ತು. ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಈ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿದ್ದರು.
ಈ ಅಕ್ರಮ ನೇಮಕಾತಿ ಸಂಬಂಧ ಮೂರು ಪ್ರತ್ಯೇಕ ಎಫ್ಐಆರ್ಗಳು ದಾಖಲಾಗಿದ್ದವು. ಇವುಗಳಲ್ಲಿ ಒಂದು ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದರೆ, ಉಳಿದ ಎರಡು ಪ್ರಕರಣಗಳನ್ನು ಹೆಚ್ಚಿನ ಮತ್ತು ಸಮಗ್ರ ತನಿಖೆಗಾಗಿ ಸಿಐಡಿಗೆ ಹಸ್ತಾಂತರಿಸಲಾಗಿದೆ. ಡಿಜಿಐಜಿಪಿ ಆದೇಶದಂತೆ ಈ ವರ್ಗಾವಣೆ ನಡೆದಿದ್ದು, ಸಿಐಡಿ ತಂಡವು ಮುಂದಿನ ತನಿಖೆಯನ್ನು ನಡೆಸಲಿದೆ. ಈ ಪ್ರಕರಣವು ರಾಜ್ಯದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರದ ಆರೋಪಗಳಿಗೆ ಎಡೆಮಾಡಿಕೊಟ್ಟಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

