ಜಾರಕಿಹೊಳಿ, ಯತ್ನಾಳ್ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ; ಆರ್. ಅಶೋಕ್

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಕುರಿತು ಅದೇ ಪಕ್ಷದ ನಾಯಕರಲ್ಲಿ ಅಸಮಾಧಾನ ಹೆಚ್ಚಾಗಿದೆ. ಇದುವರೆಗೂ ಮುಸುಕಿನ ಗುದ್ದಾಟದಂತಿದ್ದ ಈ ಒಳಜಗಳ ಇದೀಗ ಸಾರ್ವಜನಿಕವಾಗಿಯೇ ವ್ಯಕ್ತವಾಗುತ್ತಿದೆ. ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ವಿಜಯೇಂದ್ರ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸುವ ಮೂಲಕ ಬಿಜೆಪಿ ನಾಯಕರಿಗೆ ಮುಜುಗರ ತಂದಿದ್ದರು.

ಜಾರಕಿಹೊಳಿ, ಯತ್ನಾಳ್ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ; ಆರ್. ಅಶೋಕ್
ಆರ್.ಅಶೋಕ್
Edited By:

Updated on: Sep 17, 2024 | 3:48 PM

ಬೆಂಗಳೂರು: ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನಾನು ಎಂದಿಗೂ ಒಪ್ಪಲು ಸಾಧ್ಯವಿಲ್ಲ ಎಂಬ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆಗೆ ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಆ ಹೇಳಿಕೆಯನ್ನು ನಾನು ಗಮನಿಸಿಲ್ಲ. ನಾನು ನಿನ್ನೆ ಬೆಂಗಳೂರಿನಲ್ಲಿ ಇರಲಿಲ್ಲ, ಹೈದರಾಬಾದ್​ಗೆ ಹೋಗಿದ್ದೆ. ಅದು ವಿಜಯೇಂದ್ರ ಮತ್ತು ರಮೇಶ್ ಜಾರಕಿಹೊಳಿ ಅವರ ನಡುವಿರುವ ಗಲಾಟೆ. ಅದರಲ್ಲಿ ನಮ್ಮ ಪಾತ್ರವೇನೂ ಇಲ್ಲ ಎಂದಿದ್ದಾರೆ.

ಆರ್​ಎಸ್​ಎಸ್ ಸಭೆ ಬಳಿಕವೂ ಬಿ.ವೈ. ವಿಜಯೇಂದ್ರ ಮತ್ತು ರಮೇಶ್ ಜಾರಕಿಹೊಳಿ ಅವರ ನಡುವೆ ವ್ಯತ್ಯಾಸ ಮುಂದುವರಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಆರ್. ಅಶೋಕ್, ಆರ್​ಎಸ್​ಎಸ್​ ನಿರ್ದೇಶನ ಕೊಟ್ಟಿದೆ ಎಂಬ ರೀತಿಯ ಘಟನೆ ನಡೆದಿಲ್ಲ. ನಾನು ರಾಜಕಾರಣಿಗಿಂತ ಮೊದಲು ಆರ್​ಎಸ್​ಎಸ್​ ಸ್ವಯಂಸೇವಕ. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ‌ ಕೇಂದ್ರ ಸರ್ಕಾರದ ಸಂಪರ್ಕದಲ್ಲಿದ್ದಾರೆ. ಅವರ ಬಗ್ಗೆ ಹೈಕಮಾಂಡ್​ ಜೊತೆ ಚರ್ಚೆ ನಡೆಯುತ್ತಿದೆ, ಇದು ಇಂದಿನ ಸಮಸ್ಯೆ ಅಲ್ಲ. ಹೈಕಮಾಂಡ್​ ಹೇಳಿದಂತೆ ನಡೆಯುತ್ತೇನೆ ಅಂತಾ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಅದು ಅವರಿಬ್ಬರ ನಡುವೆ ಇರುವ ವಿಚಾರ, ನಮ್ಮದೇನೂ ಪಾತ್ರ ಇಲ್ಲ. ಕೇಂದ್ರದ ನಾಯಕರು ಅದರ ಬಗ್ಗೆ ಗಮನ ಕೊಡ್ತಾರೆ ಎಂದು ಆರ್.ಅಶೋಕ್ ಹೇಳಿದ್ದಾರೆ.

ಇದನ್ನೂ ಓದಿ: ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ

ಕಲಬುರ್ಗಿ ನಗರದಲ್ಲಿ ಸಚಿವ ಸಂಪುಟ ಸಭೆ ಆಯೋಜನೆ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಬಿಜೆಪಿ ನಾಯಕ ಆರ್. ಅಶೋಕ್, ಅದು ಹೋದ ಸಿದ್ಧ ಬಂದ ಸಿದ್ಧ ಅಷ್ಟೇ ಎಂದು ಲೇವಡಿ ಮಾಡಿದ್ದಾರೆ. ಕಲಬುರ್ಗಿಯಲ್ಲಿ ಸಚಿವರಿಗೆ ಒಳ್ಳೆಯ ಬಿರಿಯಾನಿ ಸಿಗುತ್ತದೆ ಅಷ್ಟೇ. ಅಷ್ಟು ಬಿಟ್ಟರೆ ಸಂಪುಟದಲ್ಲಿ ಬೇರೆ ಏನೂ ಇರುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಲಬುರಗಿಯನ್ನು ಸ್ಮಾರ್ಟ್​ ಸಿಟಿ ಮಾಡಲು 1685 ಕೋಟಿ ರೂ: ಸಿಎಂ ಸಿದ್ದರಾಮಯ್ಯ ಘೋಷಣೆ

ಬಿ.ಎಸ್​ ಯಡಿಯೂರಪ್ಪ ಸಿದ್ದರಾಮಯ್ಯನವರಿಗಿಂತ ಆ ಭಾಗಕ್ಕೆ 10 ಪಟ್ಟು ಹೆಚ್ಚು ಅನುದಾನ ಕೊಟ್ಟಿದ್ದಾರೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ಕಾಂಗ್ರೆಸ್​ನವರ ಭ್ರಷ್ಟಾಚಾರ ಪ್ರಕರಣಗಳು ಜಾಸ್ತಿಯಾಗಿರುವುದನ್ನು ಮುಚ್ಚಿ ಹಾಕಲು ಇನ್ನೊಂದು ಮಾರ್ಗ ಹುಡುಕಿಕೊಳ್ಳುತ್ತಾರೆ ಅಷ್ಟೇ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us