ಸಿಎಂ ಡಿಕೆಶಿ ಕ್ಯಾಬಿನೆಟ್​​ನಲ್ಲಿ 11 ಮಂದಿ ಮಾತ್ರ ಹೊಸಬರು: ಸಿದ್ದರಾಮಯ್ಯ ಸಂಪುಟದಲ್ಲಿದ್ದ ಹಲವರಿಗೆ ಕೊಕ್​

Karnataka Cabinet Expansion: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟ ವಿಸ್ತರಣೆಯ ಅಧಿಕೃತ ಪಟ್ಟಿ ಹೊರಬಿದ್ದಿದ್ದು, ಹಳೆಯ ಸಂಪುಟದಲ್ಲಿದ್ದ ಹಲವು ಹಿರಿಯ ಮುಖಂಡರಿಗೆ ಶಾಕ್ ನೀಡಲಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಹೊಸಬರಿಗೆ ಮಣೆ ಹಾಕದ ಹಿನ್ನೆಲೆಯಲ್ಲಿ ಹಾಗೂ ಹಿರಿಯ ನಾಯಕರನ್ನು ಕೈಬಿಟ್ಟಿರುವುದಕ್ಕೆ ರಾಜ್ಯದ ವಿವಿಧೆಡೆ ಆಕ್ರೋಶದ ಕಿಡಿ ಹೊತ್ತಿಕೊಂಡಿದೆ.

ಸಿಎಂ ಡಿಕೆಶಿ ಕ್ಯಾಬಿನೆಟ್​​ನಲ್ಲಿ 11 ಮಂದಿ ಮಾತ್ರ ಹೊಸಬರು: ಸಿದ್ದರಾಮಯ್ಯ ಸಂಪುಟದಲ್ಲಿದ್ದ ಹಲವರಿಗೆ ಕೊಕ್​
ಸಿಎಂ ಡಿಕೆಶಿ ಕ್ಯಾಬಿನೆಟ್​​ನಲ್ಲಿ 11 ಮಂದಿ ಮಾತ್ರ ಹೊಸಬರು
Image Credit source: PTI
Edited By:

Updated on: Aug 03, 2026 | 3:09 PM

ಮುಖ್ಯಾಂಶಗಳು

  • ಸಿಎಂ ಡಿಕೆಶಿ ಕ್ಯಾಬಿನೆಟ್​​ಗೆ ಇಂದು 20 ಜನರ ಸೇರ್ಪಡೆ
  • ಒಟ್ಟಾರೆ ಸಚಿವ ಸಂಪುಟದಲ್ಲಿ 11 ಮಂದಿ ಹೊಸಬರು
  • ಸಿದ್ದರಾಮಯ್ಯ ಸಂಪುಟದಲ್ಲಿದ್ದ ಹಲವರಿಗೆ ನಿರಾಶೆ

ಬೆಂಗಳೂರು, ಆಗಸ್ಟ್​​ 03: ಸಿಎಂ ಡಿಕೆ ಶಿವಕುಮಾರ್​​ ಸಚಿವ ಸಂಪುಟಕ್ಕೆ 20 ಮಂದಿ ನೂತನ ಸಚಿವರ ಸೇರ್ಪಡೆ ಆಗಲಿದ್ದು, ಲೋಕಭವನದ ಆವರಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಂಜೆ 5ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹಿಂದಿನ ಸಿಎಂ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿದ್ದ ಹಲವು ಪ್ರಮುಖ ಶಾಸಕರಿಗೆ ಮಂತ್ರಿ ಸ್ಥಾನ ಕೈತಪ್ಪಿದ್ದರೆ, ಮೊದಲ ಬಾರಿಗೆ ಸಚಿವರಾಗುವ ಆಸೆ ಹೊಂದಿದ್ದ ಅನೇಕ ನಾಯಕರ ಕನಸೂ ಭಗ್ನಗೊಂಡಿದೆ. ಹೀಗಾಗಿ ನಾಯಕರ ಬೆಂಬಲಿಗರ ಆಕ್ರೋಶದ ಕಟ್ಟೆ ಒಡೆದಿದ್ದು, ಪ್ರತಿಭಟನೆಗಳು ಆರಂಭವಾಗಿವೆ.

ಸಿದ್ದರಾಮಯ್ಯ ಸಂಪುಟದಲ್ಲಿದ್ದ ಹಲವರಿಗೆ ಕೊಕ್​

ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿದ್ದ ಡಾ.ಹೆಚ್​.ಸಿ.ಮಹದೇವಪ್ಪ, ಡಾ.ಎಂ.ಸಿ.ಸುಧಾಕರ್, ದಿನೇಶ್ ಗುಂಡೂರಾವ್, ಹೆಚ್​.ಕೆ.ಪಾಟೀಲ್, ಕೆ.ವೆಂಕಟೇಶ್​, ಲಕ್ಷ್ಮೀ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್, ರಹೀಂ ಖಾನ್​, ತಿಮ್ಮಾಪುರ, ಮಂಕಾಳು ವೈದ್ಯ, ಎನ್​.ಎಸ್​.ಬೋಸರಾಜು, ಶರಣಬಸಪ್ಪ ದರ್ಶನಾಪುರಗೆ ಸಚಿವ ಸ್ಥಾನ ಕೈತಪ್ಪಿದೆ.

ಇದನ್ನೂ ಓದಿ: ಕರ್ನಾಟಕ ವಿಧಾನ ಸಭೆಯ ನೂತನ ಸ್ಪೀಕರ್​​, ಪರಿಷತ್​​ ಸಭಾಪತಿ ಹೆಸರನ್ನು ಪ್ರಕಟಿಸಿದ ಎಐಸಿಸಿ

11 ಮಂದಿ ಮಾತ್ರ ಹೊಸಬರು

ಒಟ್ಟೂ ಸಂಪುಟದಲ್ಲಿ ಕೇವಲ 11 ಮಂದಿ ಮಾತ್ರ ಹೊಸಬರಿಗೆ ಕಾಂಗ್ರೆಸ್​​ ಹೈಕಮಾಂಡ್​​ ಮಣೆ ಹಾಕಿದ್ದು, 22 ಮಂದಿಗೆ ಪುನಃ ಸಚಿವ ಸ್ಥಾನ ನೀಡಲಾಗಿದೆ. ಸಚಿವ ಸಂಪುಟದಲ್ಲಿ ಶೇಕಡಾ 60ರಷ್ಟು ಹೊಸಬರು ಮತ್ತು ಶೇಕಡಾ 40ರಷ್ಟು ಹಳಬರಿಗೆ ಅವಕಾಶ ನೀಡಲಾಗುತ್ತೆ ಎಂಬ ಮಾತುಗಳು ಕೇಳಿಬಂದಿದ್ದ ಹೊರತಾಗಿಯೂ ಒಟ್ಟಾರೆ ಸಂಪುಟದಲ್ಲಿ ಹೊಸಬರಿಗೆ ಅವಕಾಶ ಕಡಿಮೆ ಸಿಕ್ಕಿದೆ. ಮೂವರು ಮಹಿಳೆಯರಿಗೆ ಮಂತ್ರಿಗಿರಿ ನೀಡುವ ಬಗ್ಗೆ ಒತ್ತಡವಿತ್ತಾದರೂ ಕೊಟ್ಟಿರೋದು ಕೇವಲ ಒಬ್ಬರಿಗೆ ಎಂಬ ಮಾತುಗಳು ಕೇಳಿಬಂದಿವೆ.

ತನ್ವೀರ್​​ ಸೇಠ್​​ ಬೆಂಬಲಿಗರ ಪ್ರತಿಭಟನೆ

ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದ ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್​ ಸೇಠ್​​ಗೆ ಈ ಬಾರಿಯೂ ನಿರಾಸೆಯಾಗಿದ್ದು, ಹೈಕಮಾಂಡ್​​ ಪಟ್ಟಿಯಲ್ಲಿ ಅವರ ಹೆಸರಿಲ್ಲ. ಹೀಗಾಗಿ ಶಾಸಕರ ಬೆಂಬಲಿಗರು ಸಿಟ್ಟಾಗಿದ್ದು, ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವ ಸ್ಥಾನ ಸಿಗದಿದ್ದಕ್ಕೆ ನಿರಾಸೆ ಆಗಿದೆ ಎಂದು ತನ್ವೀರ್ ಸೇಠ್ ಕೂಡ ತಿಳಿಸಿದ್ದು, ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಅವಕಾಶ ಸಿಕ್ಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:19 pm, Mon, 3 August 26

Loading...
Unable to load recommendations.
Follow Us