
ಬೆಂಗಳೂರು, ಮೇ 31: ನೂತನ ಮುಖ್ಯಮಂತ್ರಿಯ ಆಯ್ಕೆ ಬೆನ್ನಲ್ಲಿಯೇ ಡಿಸಿಎಂ ಮತ್ತು ಸಚಿವ ಸ್ಥಾನಕ್ಕಾಗಿ ರಾಜ್ಯ ಕಾಂಗ್ರೆಸ್ (Congress) ಪಾಳಯದಲ್ಲಿ ಲಾಬಿ ಜೋರಾಗಿ ನಡೆಯುತ್ತಿದೆ. ಉಪ ಮುಖ್ಯಮಂತ್ರಿ ಸ್ಥಾನಗಳ ವಿಚಾರದಲ್ಲಿ ಇನ್ನೂ ಪ್ರಸ್ತಾಪ ಬಂದಿಲ್ಲ. ಪ್ರಸ್ತಾಪ ಬಂದ ಬಳಿಕ ಎಷ್ಟು ಡಿಸಿಎಂ, ಎಷ್ಟು ಸಚಿವರು ಅಂತಾ ತೀರ್ಮಾನ ಆಗುತ್ತೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ನಡುವೆಯೂ ಪಟ್ಟಕ್ಕಾಗಿ ಪೈಪೋಟಿ ನಡೆದಿದೆ. ಅದರಲ್ಲಿ ದಲಿತ ಕೋಟಾದಡಿ ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ರೇಸ್ ಶುರುವಾಗಿರುವ ಮಾಹಿತಿ ಲಭಿಸಿದೆ.
ದಲಿತ ಕೋಟಾದಡಿ ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪ್ರಿಯಾಂಕ್ ಖರ್ಗೆ ಹಾಗೂ ಡಾ.ಜಿ.ಪರಮೇಶ್ವರ್ ನಡುವೆ ಪೈಪೋಟಿ ಏರ್ಪಟ್ಟಿದೆ. ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಸಂಬಂಧ ಮೊನ್ನೆ ದೆಹಲಿಗೆ ತೆರಳಿದ್ದಾಗ ಪರಮೇಶ್ವರ್ ಹೈಕಮಾಡ್ ನಾಯಕರಿಗೆ ಒತ್ತಾಯ ಮಾಡಿ ಬಂದಿದ್ದಾರೆ. ಡಿಸಿಎಂ ಹುದ್ದೆ ಜೊತೆ ಪ್ರಮುಖ ಖಾತೆ ಕೊಡಿ ಎಂದು ಪರಮೇಶ್ವರ್ ಪಟ್ಟು ಹಿಡಿದಿದ್ದು, ಇಲ್ಲದಿದ್ದರೆ ಮಂತ್ರಿಸ್ಥಾನವೇ ಬೇಡ ಶಾಸಕನಾಗಿಯೇ ಇರುತ್ತೇನೆ ಎಂದು ತಮ್ಮ ನಿಲುವು ಪ್ರಕಟಿಸಿದ್ದಾರೆ. ಕಳೆದ ಬಾರಿ ನೀಡಿದ್ದ ಗೃಹ ಇಲಾಖೆಯೂ ಬೇಡ ಎಂದು ಅವರು ಹೇಳಿದ್ದು, ಎಐಸಿಸಿ ಅಧ್ಯಕ್ಷ ಖರ್ಗೆ ಬಳಿಯೇ ನೇರವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇತ್ತ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ ಅವರ ಹೆಸರೂ ಡಿಸಿಎಂ ರೇಸ್ನಲ್ಲಿ ಕೇಳಿಬಂದಿರೋದು ಭಾರಿ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಯಾರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ?; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೊಟ್ರು ಬಿಗ್ ಅಪ್ಡೇಟ್
ಡಿಸಿಎಂ ಹುದ್ದೆ ಮಾತ್ರವಲ್ಲದೆ ಸಚಿವ ಸ್ಥಾನಕ್ಕಾಗಿಯೂ ಆಕಾಂಕ್ಷಿಗಳ ಪೈಪೋಟಿ ಜೋರಾಗಿಯೇ ನಡೆಯುತ್ತಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದವರು ಮತ್ತೆ ಸ್ಥಾನ ಗಿಟ್ಟಿಸುವ ಪ್ರಯತ್ನದಲ್ಲಿದ್ದರೆ, ಹಿರಿಯರಾಗಿಯೂ ಸ್ಥಾನ ಸಿಗದವರು ಕೂಡ ಲಾಬಿಗೆ ಇಳಿದಿದ್ದಾರೆ. ಕೆಲ ಹೊಸ ಶಾಸಕರೂ ಮಂತ್ರಿಗಿರಿ ಮೇಲೆ ಕಣ್ಣಿಟ್ಟಿರುವ ಕಾರಣ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಈ ನಡುವೆ ಸಚಿವ ಸ್ಥಾನಕ್ಕೆ ಹೈಕಮಾಂಡ್ಗೆ ಕೆಲ ಹೆಸರುಗಳನ್ನು ಸಿದ್ದರಾಮಯ್ಯ ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗಿದೆ. ಅವರು ಯಾರ್ಯಾರು ಎಂಬುದರ ಮಾಹಿತಿ ಟಿವಿ9ಗೆ ಲಭ್ಯವಾಗಿದೆ.
ಎ.ಎಸ್. ಪೊನ್ನಣ್ಣ, ಶಿವರಾಜ್ ತಂಗಡಗಿ, ಪುಟ್ಟರಂಗ ಶೆಟ್ಟಿ, ಕೆ. ವೆಂಕಟೇಶ್, ಬಸವರಾಜ್ ರಾಯರೆಡ್ಡಿ, ಬಿ. ಕೆ. ಹರಿಪ್ರಸಾದ್, ಸಂತೋಷ್ ಲಾಡ್, ಹೆಚ್. ಸಿ. ಮಹದೇವಪ್ಪ, ಜಮೀರ್ ಅಹಮದ್ ಖಾನ್ ಹೆಸರುಗಳು ಸಿದ್ದರಾಮಯ್ಯ ಶಿಫಾರಸ್ಸು ಮಾಡಿರುವ ಪಟ್ಟಿಯಲ್ಲಿ ಇವೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:48 pm, Sun, 31 May 26