AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದಲ್ಲಿ ನಿಫಾ ವೈರಸ್ ಹೆಚ್ಚಳ: ಕರ್ನಾಟಕದಲ್ಲೂ ಅಲರ್ಟ್, ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

ರಾಜ್ಯದಲ್ಲಿ ನಿಫಾ ವೈರಸ್ ಆತಂಕ ಹಿನ್ನೆಲೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಸಭೆ ಬಳಿಕ ಈಗ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ದಕ್ಷಿಣ ಕನ್ನಡದ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಶಂಕಿತ ಪ್ರಕರಣಗಳನ್ನು ದಾಖಲಿಸಿಕೊಂಡು, ಚಿಕಿತ್ಸೆ ನೀಡಬೇಕು ಎಂದು ಸುತ್ತೋಲೆಯಲ್ಲಿ ದಕ್ಷಣ ಕನ್ನಡ ಜಿಲ್ಲೆಗೆ ಹೆಚ್ಚಿನ ಅಲರ್ಟ್​ಗೆ ಸೂಚಿಸಿದೆ.

ಕೇರಳದಲ್ಲಿ ನಿಫಾ ವೈರಸ್ ಹೆಚ್ಚಳ: ಕರ್ನಾಟಕದಲ್ಲೂ ಅಲರ್ಟ್, ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ
ನಿಫಾ ವೈರಸ್
TV9 Web
| Edited By: |

Updated on: Sep 13, 2023 | 2:41 PM

Share

ಬೆಂಗಳೂರು, ಸೆ.13: ಕೇರಳದಲ್ಲಿ ನಿಫಾ ವೈರಸ್(Nipah Virus) ಆರ್ಭಟ ಹೆಚ್ಚಾಗಿದೆ.‌ ತೀವ್ರ ಜ್ವರದಿಂದ ಬಳಲುತ್ತಿದ್ದ ಇಬ್ಬರು ಸಾವನ್ನಪ್ಪಿದ್ದು ಅವರಿಗೆ ನಿಫಾ ವೈರಸ್ ತಗುಲಿದ್ದು ದೃಢವಾಗಿದೆ. ನೆರೆ ರಾಜ್ಯ ಕೇರಳದಲ್ಲಿ ನಿಫಾ ವೈರಸ್ ಹೆಚ್ಚಾದ ಹಿನ್ನೆಲೆ ಕರ್ನಾಟಕ ರಾಜ್ಯದಲ್ಲಿ ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿದೆ. ಇಂದು ಬೆಳಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್(Dinesh Gundu Rao) ಅವರ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಪ್ರತಿ ಜಿಲ್ಲೆಯ ಡಿಹೆಚ್​ಒಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಹತ್ವದ ಸಭೆ ನಡೆದಿದ್ದು ಆರೋಗ್ಯ ಇಲಾಖೆ(Karnataka Health Department) ಈಗ ಪ್ರತ್ಯೇಕ ಸುತ್ತೋಲೆ ಬಿಡುಗಡೆ ಮಾಡಿದೆ. ದಕ್ಷಿಣ ಕನ್ನಡಕ್ಕೆ ಜಿಲ್ಲೆಯ ಮೇಲೆ ವಿಶೇಷ ನಿಗಾ ಇಡಲು ಸೂಚಿಸಲಾಗಿದೆ.

ರಾಜ್ಯದಲ್ಲಿ ನಿಫಾ ವೈರಸ್ ಆತಂಕ ಹಿನ್ನೆಲೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಆಯುಕ್ತ ರಂದೀಪ್, ಆರೋಗ್ಯ ಸೇವೆ ನಿರ್ದೇಶಕ ನವೀನ್ ಭಟ್ ಸೇರಿ ಪ್ರಮುಖ ಅಧಿಕಾರಿಗಳು ಭಾಗಿಯಾಗಿದ್ದರು. ಸಭೆ ಬಳಿಕ ಈಗ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ದಕ್ಷಿಣ ಕನ್ನಡದ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಶಂಕಿತ ಪ್ರಕರಣಗಳನ್ನು ದಾಖಲಿಸಿಕೊಂಡು, ಚಿಕಿತ್ಸೆ ನೀಡಬೇಕು ಎಂದು ಸುತ್ತೋಲೆಯಲ್ಲಿ ದಕ್ಷಣ ಕನ್ನಡ ಜಿಲ್ಲೆಗೆ ಹೆಚ್ಚಿನ ಅಲರ್ಟ್​ಗೆ ಸೂಚಿಸಿದೆ.

ಇನ್ನು ಶಂಕಿತ ಪ್ರಕರಣದ ಕುರಿತು ಜಿಲ್ಲಾ ಕಣ್ಗಾವಲು ಕಚೇರಿಗೆ ಮಾಹಿತಿ‌ ನೀಡಬೇಕು. ನಿಫಾ ವೈರಸ್ ನಿರ್ವಹಣೆಗಾಗಿ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಪ್ರತ್ಯೇಕ 10 ಹಾಸಿಗೆಯ ವಾರ್ಡ್ ಕಾಯ್ದಿರಿಸಲು‌ ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಮತ್ತು ಔಷಧಿಗಳನ್ನು ಒಳಗೊಂಡಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ತಿಳಿಸಲಾಗಿದೆ. ಅಗತ್ಯವಿರುವ ಔಷಧಿಗಳನ್ನು ಶೇಖರಿಸಲು ಹಾಗೂ ನಿಫಾ ರೋಗ ಲಕ್ಷಣಗಳ ಕುರಿತು ಕ್ಷೇತ್ರ ಸಿಬ್ಬಂದಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಬೇಕು. ಯಾವುದೇ ಶಂಕಿತ ಪ್ರಕರಣಗಳ ಮಾದರಿಯನ್ನು ಪುಣೆಯ ಎನ್​ಐವಿ ಲ್ಯಾಬ್ ಗೆ ಕಳುಹಿಸಲು ವ್ಯವಸ್ಥೆ ಮಾಡಬೇಕು. ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಬೇಕು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ: ಕೇರಳದಲ್ಲಿ ಹರಡಿರುವ ನಿಫಾ ವೈರಸ್ ಬಾಂಗ್ಲಾದೇಶ ತಳಿ; ಇದು ಕಡಿಮೆ ಸಾಂಕ್ರಾಮಿಕ ಆದರೆ ಮರಣ ಪ್ರಮಾಣ ಹೆಚ್ಚು

ಕೇರಳದಲ್ಲಿ ಪ್ರಕರಣಗಳು ಸ್ಫೋಟಗೊಂಡರೆ ಮತ್ತಷ್ಟು ಕಠಿಣ ಕ್ರಮ

ಮತ್ತೊಂದೆಡೆ ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೇರಳ ರಾಜ್ಯದಲ್ಲಿ ನಾಲ್ವರಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿದೆ. ಕೇರಳದಲ್ಲಿ ನಿಫಾ ವೈರಸ್​ನಿಂದ ಇಬ್ಬರು ಮೃತಪಟ್ಟಿದ್ದಾರೆ. ರಾಜ್ಯದ ಗಡಿ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದೇನೆ. ರೋಗ ಲಕ್ಷಣಗಳು ಪತ್ತೆಯಾದರೆ ನಿಗಾ ವಹಿಸಲು ಸೂಚಿಸಿದ್ದೇನೆ. ಅಧಿಕಾರಿಗಳಿಂದ ಸಂಪರ್ಕದಲ್ಲಿದ್ದು ಮಾಹಿತಿ‌ ಪಡೆಯುತ್ತಿದ್ದೇನೆ. ಇನ್ನೂ 2-3 ದಿನಗಳ ಕಾಲ ಪ್ರಕರಣಗಳ ಬಗ್ಗೆ ನಿಗಾ ವಹಿಸುತ್ತೇವೆ. ಕೇರಳದಲ್ಲಿ ಪ್ರಕರಣಗಳು ಸ್ಫೋಟಗೊಂಡರೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪಾಸಿಟಿವ್ ಕೇಸ್ ಪತ್ತೆಯಾದರೆ ಪ್ರತ್ಯೇಕವಾಗಿ ಐಸೋಲೇಷನ್

ಚಾಮರಾಜನಗರ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಹೈಅಲರ್ಟ್ ಆಗಿದೆ. ಗಡಿಯಲ್ಲಿರುವ 164 ಹಳ್ಳಿಗಳಲ್ಲಿ ಆರೋಗ್ಯ ಇಲಾಖೆ ಅಲರ್ಟ್​​ ಆಗಿದ್ದು ಪಾಸಿಟಿವ್ ಕೇಸ್ ಪತ್ತೆಯಾದರೆ ಪ್ರತ್ಯೇಕವಾಗಿ ಐಸೋಲೇಷನ್ ಮಾಡಲು ಸೂಚಿಸಲಾಗಿದೆ. ಹಾಗೂ ನಿಫಾ ವೈರಸ್ ತಗುಲಿದ ರೋಗಿಗಳಿಗೆ ಪ್ರತ್ಯೇಕ 5 ಬೆಡ್ ವ್ಯವಸ್ಥೆ ಮಾಡಲಾಗಿದೆ. ನಿಫಾ ಕಂಡು ಬಂದ್ರೆ ತಪಾಸಣೆ ಮಾಡಿಸಿಕೊಳ್ಳಲು ಸೂಚಿಸಲಾಗಿದೆ. ಈಗಾಗಲೇ ಆರೋಗ್ಯ ಸಿಬ್ಬಂದಿ ಜೊತೆ ಡಿಹೆಚ್​ಒ ಸಭೆ ನಡೆಸಿದ್ದು ನಾಳೆ ಮುಂಜಾನೆಯಿಂದ ಗಡಿ ಚೆಕ್ ಪೋಸ್ಟ್​​ನಲ್ಲಿ ತಪಾಸಣೆ ಶುರು ಮಾಡಲಾಗುತ್ತೆ ಎಂದು ಟಿವಿ9ಗೆ ಚಾಮರಾಜನಗರ ಡಿಹೆಚ್​ಒ ಡಾ.ವಿಶ್ವೇಶ್ವರಯ್ಯ ತಿಳಿಸಿದರು.

ಎಲ್ಲಾ ಮಾದರಿಯ ಜ್ವರದ ರೋಗಿಗಳಿಗೆ ಟೆಸ್ಟ್

ಟಿವಿ9ಗೆ ಮಂಗಳೂರು ಜಿಲ್ಲಾ ಆರೋಗ್ಯ ಇಲಾಖೆ ಸರ್ವೇಕ್ಷಣಾಧಿಕಾರಿ ಡಾ.ನವೀನ್ ಚಂದ್ರ ಪ್ರತಿಕ್ರಿಯೆ ನೀಡಿದ್ದು ಕೇರಳದಿಂದ ನಿಫಾ ಔಟ್ ಬ್ರೇಕ್ ಆಗಿದೆ. ಸದ್ಯ ಈವರೆಗೂ ಜಿಲ್ಲೆಯಲ್ಲಿ ಯಾವುದೇ ಶಂಕಿತ ಪ್ರಕರಣಗಳು ಕಂಡುಬಂದಿಲ್ಲ. ಅಂತರ್ ರಾಜ್ಯ ಗಡಿಗಳಲ್ಲಿ ಯಾವುದೇ ಚಕ್ ಪೋಸ್ಟ್ ಗಳನ್ನು ತೆರೆಯಲ್ಲ. ಎಲ್ಲಾ ಮಾದರಿಯ ಜ್ವರದ ರೋಗಿಗಳಿಗೆ ಟೆಸ್ಟ್ ಮಾಡಬೇಕು. ಕೇರಳದಿಂದ ಬಂದ ರೋಗಿಗಳ ಮೇಲೆ ನಿಗಾ ಇಟ್ಟು ಮಾಹಿತಿ ನೀಡಬೇಕು‌. ಗಡಿಭಾಗದ ಹಾಗೂ ಎಲ್ಲಾ ಆಸ್ಪತ್ರೆಗಳಿಗೆ ಸೂಚನೆ‌ ಹೊರಡಿಸಲಾಗಿದೆ ಎಂದರು.

ಕೇರಳ ಹಾಗೂ ಜ್ವರದಿಂದ ಬರುವ ರೋಗಿಗಳ ಬಗ್ಗೆ ನಿಗಾ ಮತ್ತು ಮಾಹಿತಿ ನೀಡಲು ಮಂಗಳೂರಿನಲ್ಲಿರುವ ಎಲ್ಲಾ 8 ಮೆಡಿಕಲ್ ಕಾಲೇಜುಗಳಿಗೆ ಸೂಚನೆ ನೀಡಿದ್ದೇವೆ. ಐಸೋಲೇಸನ್ ವಾರ್ಡ್​ಗಳನ್ನು ಮೀಸಲಿಡಲು ಸೂಚಿಸಿದ್ದೇವೆ. ವೆನ್ಲಾಕ್ ಆಸ್ಪತ್ರೆಯಲ್ಲೂ ಕೂಡ ಐಸೋಲೇಶನ್ ವಾರ್ಡ್ ತೆರೆಯಲಾಗಿದೆ. ಬಾವಲಿ ಕಚ್ಚಿದ ಹಣ್ಣು, ಹಂದಿಗಳಿಂದ ಸೋಂಕು ತಗುಲುತ್ತದೆ. ಈ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕಾಗುತ್ತೆ‌ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ