
ಬೆಂಗಳೂರು, ಜೂ.10: ರಾಜ್ಯದ ಆರೋಗ್ಯ ಸಚಿವ ಯುಟಿ ಖಾದರ್ ಅವರು ಚುರುಕಿನ ಕಾರ್ಯಕ್ಕೆ ಮುಂದಾಗಿದ್ದಾರೆ. ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ದೊಡ್ಡ ಬದಲಾವಣೆಗಳನ್ನು ತರಲು ಮುಂದಾಗಿದ್ದಾರೆ. ಸಾಮಾನ್ಯ ಜನರು ಕಷ್ಟಕ್ಕೆ ತಕ್ಷಣವೇ ಸ್ಪಂದನೆ ಸಿಗಬೇಕು ಹಾಗೂ ಯಾವುದೇ ವೈದ್ಯಕೀಯ ಕೊರತೆ ಬರಬಾರದು ಎಂದು ಅಧಿಕಾರ ವಹಿಸಿದ ಮರುದಿನವೇ ಕೆಲಸದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ದೀರ್ಘಕಾಲದಿಂದ ಕಾಡುತ್ತಿದ್ದ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಸಮಸ್ಯೆಗೆ ಮುಕ್ತಿ ಹಾಡಲು ಆರೋಗ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸತತ 5 ಗಂಟೆಗಳ ಸುದೀರ್ಘ ಮೊದಲ ಪರಾಮರ್ಶನಾ ಸಭೆಯಲ್ಲಿ ಇಲಾಖೆಯನ್ನು ತಳಮಟ್ಟದಿಂದ ಬಲಪಡಿಸಲು ದೊಡ್ಡ ಮಟ್ಟದ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ರಾಜ್ಯದಲ್ಲಿ ಸದ್ಯ ಒಟ್ಟು 1,280 ಎಂಬಿಬಿಎಸ್ ವೈದ್ಯರು, 924 ತಜ್ಞ ವೈದ್ಯರುಹಾಗೂ 892 ನರ್ಸ್ಗಳ ಕೊರತೆಯಿದೆ. ಈ ಪೈಕಿ 200 ವೈದ್ಯರನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರೀಕ್ಷೆ ಮೂಲಕ ನೇರ ಹಾಗೂ ಖಾಯಂ ಆಗಿ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, ಇದಕ್ಕೆ ಈಗಾಗಲೇ ಆರ್ಥಿಕ ಇಲಾಖೆಯಿಂದ ಅನುಮೋದನೆ ಸಿಕ್ಕಿದೆ. ಪರೀಕ್ಷೆ ಮುಗಿದ ಕೇವಲ ಒಂದು ವಾರದೊಳಗೆ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದರೊಂದಿಗೆ ಕೆಇಎ ಮೂಲಕವೇ 400 ನರ್ಸ್ಗಳು, 400 ಫಾರ್ಮಸಿಸ್ಟ್ಗಳು ಹಾಗೂ 400 ಲ್ಯಾಬ್ ಟೆಕ್ನಿಷಿಯನ್ಗಳನ್ನು ಖಾಯಂ ಆಗಿ ಭರ್ತಿ ಮಾಡಿಕೊಳ್ಳಲಾಗುವುದು ಎಂದುನ ಹೇಳಿದ್ದಾರೆ.
ಉಳಿದ 1,000 ವೈದ್ಯರ ಹುದ್ದೆಗಳನ್ನು ತುಂಬಲು ತಕ್ಷಣವೇ ಜಿಲ್ಲಾ ಆರೋಗ್ಯಾಧಿಕಾರಿಗಳ (DHO) ಮಟ್ಟದಲ್ಲಿ ‘ವಾಕ್-ಇನ್ ಇಂಟರ್ವ್ಯೂ’ ನಡೆಸಲಾಗುವುದು. ಆಸಕ್ತರು ನೇರವಾಗಿ ಡಿಎಚ್ಒಗಳಿಗೆ ಅರ್ಜಿ ಸಲ್ಲಿಸಿ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಬಹುದು. ಇವರಿಗೆ ಪ್ರತಿ ತಿಂಗಳು 1,10,000 ರೂಪಾಯಿ ಗೌರವಧನ ನೀಡಲಾಗುವುದು. ಗುತ್ತಿಗೆ ಆಧಾರದಲ್ಲಿ ಕನಿಷ್ಠ 5 ವರ್ಷಗಳ ಕಾಲ ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಉತ್ತಮ ಸೇವೆ ಸಲ್ಲಿಸುವ ವೈದ್ಯರ ಸಾಧನೆಯನ್ನು ಪರಿಗಣಿಸಿ, ಮುಂದೆ ಅವರನ್ನು ಖಾಯಂ ಮಾಡಿಕೊಳ್ಳುವ ಭರವಸೆಯನ್ನು ಸಚಿವರು ನೀಡಿದ್ದಾರೆ. ಜೊತೆಗೆ ಇವರಿಗೆ ಉನ್ನತ ಶಿಕ್ಷಣದಲ್ಲಿ ವಿಶೇಷ ಅವಕಾಶ ಕಲ್ಪಿಸಿಕೊಡಲಾಗುವುದು.
ಇದನ್ನೂ ಓದಿ: ‘ರಸ್ತೆ ಗುಂಡಿಗೆ ಬಿದ್ದು ಪ್ರಾಣ ಹೋದರೆ ಇಂಜಿನಿಯರ್ಗಳೇ ನೇರ ಹೊಣೆ’: ಸಚಿವ ಯು.ಟಿ.ಖಾದರ್ ಖಡಕ್ ವಾರ್ನಿಂಗ್
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಯು.ಟಿ. ಖಾದರ್, “ನಗರ ಪ್ರದೇಶಗಳಲ್ಲಿ ವೈದ್ಯರಿದ್ದರೂ ಗ್ರಾಮೀಣ ಭಾಗದಲ್ಲಿ ತೀವ್ರ ಕೊರತೆಯಿದೆ. ಇವತ್ತಿನ ನಮ್ಮ ಇಲಾಖೆಯ ಶ್ರಮದಿಂದ ಶೇ. 80 ರಷ್ಟು ಆರೋಗ್ಯ ಸೇವೆಗಳು ಜನರಿಗೆ ಲಭ್ಯವಾಗುತ್ತಿವೆ. ಇನ್ನು ದೇಶದಲ್ಲಿ ಔಷಧಿಗಳ ದರ ಹೆಚ್ಚಳವಾಗುತ್ತಿರುವ ವಿಚಾರವಾಗಿ ನಾನು ವೈಯಕ್ತಿಕವಾಗಿ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ. ಸಾರ್ವಜನಿಕರ ಹಿತದೃಷ್ಟಿಯಿಂದ ದರ ಹೆಚ್ಚಿಸದಂತೆ ಮನವಿ ಮಾಡಲಿದ್ದೇನೆ” ಎಂದರು.
ಸರ್ಕಾರಿ ಉಗ್ರಾಣಗಳಿಗೆ (Warehouse) ಬರುವ ಔಷಧಿಗಳ ಗುಣಮಟ್ಟವನ್ನು ಮತ್ತೊಮ್ಮೆ ಕಡ್ಡಾಯವಾಗಿ ಮರುಪರಿಶೀಲನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈಗಾಗಲೇ 81 ಅತ್ಯಗತ್ಯ ಔಷಧಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ‘ಆರೋಗ್ಯ ಸುರಕ್ಷಾ ಸಮಿತಿ’ಯ ಮೂಲಕ ನೇರವಾಗಿ ಔಷಧಿಗಳನ್ನು ಖರೀದಿಸಲು ಇಲಾಖೆ ಚಿಂತನೆ ನಡೆಸಿದೆ ಎಂದು ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ