ಎದೆ ನೋವೆಂದ ಯುವತಿಗೆ ಪರೀಕ್ಷೆಯ ನೆಪದಲ್ಲಿ ಉಡುಪು ಬಿಚ್ಚಿಸಿ ಮುತ್ತಿಟ್ಟ ಬೆಂಗಳೂರಿನ ವೈದ್ಯ! ಹೈಕೋರ್ಟ್​ನಲ್ಲೂ ಸಿಗಲಿಲ್ಲ ರಿಲೀಫ್

ಆರೋಗ್ಯ ತಪಾಸಣೆ ಮಾಡುವ ನೆಪದಲ್ಲಿ ವೈದ್ಯರೊಬ್ಬರು ಯುವತಿಯೊಬ್ಬರ ಶರ್ಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನ ಜರಗನಹಳ್ಳಿಯಲ್ಲಿ ನಡೆದಿದೆ. ನಂತರ ವೈದ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದು, ಇದನ್ನು ರದ್ದು ಮಾಡುವಂತೆ ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ, ಈ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ನಿಜಕ್ಕೂ ಕ್ಲಿನಿಕ್​ನಲ್ಲಿ ನಡೆದಿದ್ದೇನು? ಪ್ರಕರಣದ ರದ್ದತಿಗೆ ಹೈಕೋರ್ಟ್ ನಿರಾಕರಿಸಿದ್ದೇಕೆ? ಇಲ್ಲಿದೆ ವಿವರ

ಎದೆ ನೋವೆಂದ ಯುವತಿಗೆ ಪರೀಕ್ಷೆಯ ನೆಪದಲ್ಲಿ ಉಡುಪು ಬಿಚ್ಚಿಸಿ ಮುತ್ತಿಟ್ಟ ಬೆಂಗಳೂರಿನ ವೈದ್ಯ! ಹೈಕೋರ್ಟ್​ನಲ್ಲೂ ಸಿಗಲಿಲ್ಲ ರಿಲೀಫ್
ಕರ್ನಾಟಕ ಹೈಕೋರ್ಟ್

Updated on: Jun 14, 2024 | 8:52 AM

ಬೆಂಗಳೂರು, ಜೂನ್ 14: ಪರೀಕ್ಷೆಯ ನೆಪದಲ್ಲಿ ಯುವತಿಯೊಬ್ಬರ ಶರ್ಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಬೆಂಗಳೂರಿನ ವೈದ್ಯರೊಬ್ಬರ ಮೇಲೆ ದಾಖಲಿಸಲಾಗಿರವ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ (Karnataka High Court) ನಿರಾಕರಿಸಿದ್ದು, ವೈದ್ಯರು ಹಾಗೂ ರೋಗಿಯ ನಡುವಣ ನಂಬಿಕೆಯ ದುರ್ಬಳಕೆಯನ್ನು ಸರ್ವಥಾ ಸಹಿಸಲಾಗದು ಎಂದು ಹೇಳಿದೆ. ವೈದ್ಯರು ನಂಬಿಕೆಯನ್ನು ದುರುಪಯೋಗಪಡಿಸಿಕೊಂಡರೆ ವೈದ್ಯ ಮತ್ತು ರೋಗಿಯ ನಡುವಿನ ನಂಬಿಕೆಯ ಸಂಬಂಧ ಹದಗೆಡುತ್ತದೆ. ಅನಪೇಕ್ಷಿತ ಮತ್ತು ಸ್ಪಷ್ಟವಾದ ಲೈಂಗಿಕ ಪ್ರಚೋದನೆ ಕಂಡುಬಂದಿರುವುದರಿಂದ ವೈದ್ಯರ ವಿರುದ್ಧ ದಾಖಲಿಸಿದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಲಾಗದು ಎಂದು ಕೋರ್ಟ್ ಹೇಳಿದೆ.

ವೈದ್ಯರು ದೂರುದಾರರ ಬಳಿ ಆಕೆಯ ಶರ್ಟ್ ಮತ್ತು ಒಳ ಉಡುಪು ಬಿಚ್ಚುವಂತೆ ಹೇಳಿದ್ದಲ್ಲದೆ ಸ್ತನದ ಮೇಲೆ ಮುತ್ತು ನೀಡಿದ ಆರೋಪ ಎದುರಿಸುತ್ತಿದ್ದಾರೆ. ವೈದ್ಯರ ಈ ನಡತೆಯು ಐಪಿಸಿಯ ಸೆಕ್ಷನ್ 354ಎ(1)(i) ಅಡಿ ಅಪರಾಧವೆಂದು ಪರಿಗಣಿಸಲ್ಪಡುವ ಅಂಶಗಳಾಗಿರುತ್ತದೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಉಲ್ಲೇಖಿಸಿದ್ದಾರೆ.

ಕ್ಲಿನಿಕ್​ನಲ್ಲಿ ನಡೆದಿದ್ದೇನು?

ಸಂತ್ರಸ್ತೆಯು ಎದೆನೋವಿನಿಂದ ಬಳಲುತ್ತಿದ್ದು, ಜೆಪಿ ನಗರದ ಆಸ್ಪತ್ರೆಗೆ ಭೇಟಿ ನೀಡಿದ್ದರು. ಆಕೆಗೆ ಚಿಕಿತ್ಸೆ ನೀಡಿದ ನಂತರ ಇಸಿಜಿ ಮತ್ತು ಎದೆಯ ಎಕ್ಸ್-ರೇ ಪರೀಕ್ಷೆಗೆ ಒಳಗಾಗುವಂತೆ ವೈದ್ಯರು ಸೂಚಿಸಿದ್ದರು. ಅಲ್ಲದೆ, ವರದಿಗಳನ್ನು ವಾಟ್ಸಾಪ್‌ನಲ್ಲಿ ಹಂಚಿಕೊಳ್ಳುವಂತೆ ತಿಳಿಸಿದ್ದರು. ಆಕೆ ಕಳುಹಿಸಿದ ವರದಿಗಳನ್ನು ನೋಡಿದ ವೈದ್ಯರು ಮಾರ್ಚ್ 21 ರಂದು ಮಧ್ಯಾಹ್ನ 2 ಗಂಟೆಗೆ ಜರಗನಹಳ್ಳಿಯಲ್ಲಿರುವ ತನ್ನ ಕ್ಲಿನಿಕ್‌ಗೆ ಭೇಟಿ ನೀಡುವಂತೆ ಹೇಳಿದ್ದರು.

ಯುವತಿ ಕ್ಲಿನಿಕ್‌ಗೆ ಭೇಟಿ ನೀಡಿದಾಗ ವೈದ್ಯ ಮಾತ್ರ ಅಲ್ಲಿದ್ದರು. ಸಂತ್ರಸ್ತೆಯನ್ನು ಕೋಣೆಗೆ ಕರೆದೊಯ್ದು ಮಲಗಲು ಹೇಳಿದ ವೈದ್ಯ, ಆಕೆಯ ಎದೆಯ ಮೇಲೆ ಸ್ಟೆತಸ್ಕೋಪ್ ಇಟ್ಟು ಹೃದಯ ಬಡಿತ ಪರೀಕ್ಷಿಸಲು ಪ್ರಾರಂಭಿಸಿದ್ದಾರೆ. ನಂತರ ಆಕೆಯ ಬಳಿ ಶರ್ಟ್ ಮತ್ತು ಒಳ ಉಡುಪು ತೆಗೆಯಲು ಹೇಳಿದ್ದಾರೆ. ಐದು ನಿಮಿಷಗಳ ಪರೀಕ್ಷೆಯ ನಂತರ, ಕೈಗಳಿಂದ ಸ್ತನವನ್ನು ಸ್ಪರ್ಶಿಸಲು ಪ್ರಾರಂಭಿಸಿದ್ದಾರೆ. ಬಳಿಕ ಸ್ತನಕ್ಕೆ ಮುತ್ತಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ವೈದ್ಯರ ಈ ನಡೆಯಿಂದ ಗಾಬರಿಗೊಂಡ ಆಕೆ ಕ್ಲಿನಿಕ್‌ನಿಂದ ಓಡಿಬಂದು ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದರು. ಮರುದಿನ ಅವರು ಪುಟ್ಟೇನಹಳ್ಳಿ ಠಾಣೆಯಲ್ಲಿ ವೈದ್ಯರ ವಿರುದ್ಧ ದೂರು ದಾಖಲಿಸಿದ್ದರು.

ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದ ವೈದ್ಯರು, ಕರ್ತವ್ಯವನ್ನಷ್ಟೇ ನಿರ್ವಹಿಸಿದ್ದೆ. ಎದೆಯ ಮೇಲೆ ಸ್ಟೆತಸ್ಕೋಪ್ ಮಾತ್ರ ಇರಿಸಿದ್ದೆ. ತಮ್ಮ ವಿರುದ್ಧದ ಆರೋಪಗಳು ಸುಳ್ಳು ಎಂದು ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ರೋಗಿಯ ದೇಹದ ತಪಾಸಣೆ ಮಾಡುವ ಹಕ್ಕು ವೈದ್ಯರಿಗಿದೆ. ಆದರೆ ಅದನ್ನು ಬೇರೆ ಯಾವುದೇ ಭಾವನೆಗಳಿಗೆ ಬಳಸಿಕೊಳ್ಳುವಂತಿಲ್ಲ. ರೋಗಿಗಳು ದುರ್ಬಲ ಸ್ಥಿತಿಯಲ್ಲಿದ್ದಾಗ ತಮ್ಮ ಸಹಾಯವನ್ನು ಪಡೆಯುತ್ತಾರೆ ಎಂಬುದನ್ನು ವೈದ್ಯರು ನೆನಪಿಟ್ಟುಕೊಳ್ಳಬೇಕು ಮತ್ತು ಅಂತಹ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ: ಅಪ್ರಾಪ್ತರು ವಾಹನ ಚಲಾಯಿಸಿ ಅಪಘಾತವಾದರೆ ಮಾಲೀಕರೇ ಪರಿಹಾರ ನೀಡಬೇಕು: ಕರ್ನಾಟಕ ಹೈಕೋರ್ಟ್ ತೀರ್ಪು

ಭಾರತೀಯ ವೈದ್ಯಕೀಯ ಮಂಡಳಿಯು ನಿಗದಿಪಡಿಸಿರುವ ಲೈಂಗಿಕ ಮಿತಿಗಳ ಕುರಿತ ಮಾರ್ಗಸೂಚಿಗಳನ್ನು ನ್ಯಾಯಾಲಯ ಉಲ್ಲೇಖಿಸಿದೆ. ಇದರ ಪ್ರಕಾರ, ಮಹಿಳಾ ರೋಗಿಯನ್ನು ಪುರುಷ ವೈದ್ಯರು ಪರೀಕ್ಷಿಸುವಾಗ, ಅದರಲ್ಲಿಯೂ ದೈಹಿಕ ಪರೀಕ್ಷೆಯ ಸಮಯದಲ್ಲಿ ಇನ್ನೊಬ್ಬ ಮಹಿಳೆಯ ಉಪಸ್ಥಿತಿಯು ಅವಶ್ಯಕವಾಗಿದೆ. ಆದರೆ ವೈದ್ಯರು ಆ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಆದ್ದರಿಂದ ಅವರ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:16 am, Fri, 14 June 24

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us