ತಪ್ಪು ಮಾಡಿದ್ರೆ ವಿಧಾನಸೌಧದ ಎದುರು ನನ್ನ ತಲೆ ತೆಗೆಯಿರಿ: ಆಧಾರ ರಹಿತ ಆರೋಪಗಳ ಬಗ್ಗೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಆಕ್ರೋಶ

ನ್ಯಾಯಮೂರ್ತಿಗಳ ಬಗ್ಗೆ ಕೆಲ ವಕೀಲರು ಆಡುತ್ತಿರುವ ಮಾತುಗಳಿಂದ ಬೇಸರವಾಗಿದೆ ಎಂದು ಹೇಳಿದರು.

ತಪ್ಪು ಮಾಡಿದ್ರೆ ವಿಧಾನಸೌಧದ ಎದುರು ನನ್ನ ತಲೆ ತೆಗೆಯಿರಿ: ಆಧಾರ ರಹಿತ ಆರೋಪಗಳ ಬಗ್ಗೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಆಕ್ರೋಶ
ಕರ್ನಾಟಕ ಹೈಕೋರ್ಟ್ ಮತ್ತು ನ್ಯಾಯಮೂರ್ತಿ ಬಿ.ವೀರಪ್ಪ
Edited By: ರಶ್ಮಿ ಕಲ್ಲಕಟ್ಟ

Updated on: Jul 03, 2022 | 3:33 PM

ಬೆಂಗಳೂರು: ನ್ಯಾಯಾಧೀಶರ ಬಗ್ಗೆ ವಕೀಲರು ಆಧಾರ ರಹಿತ ಆರೋಪಗಳನ್ನು ಮಾಡುವುದು ನಿಲ್ಲಿಸಬೇಕು. ಇಂಥ ಆರೋಪಗಳನ್ನು ಮಾಡುವವರಿಂದಲೂ ವಕೀಲರ ಅಂತರ ಕಾಯ್ದುಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್​ನ ಹಿರಿಯ​ ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದರು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ನಾನು ಏನಾದರೂ ತಪ್ಪು ಮಾಡಿದ್ದರೆ ಯಾವುದೇ ತ್ಯಾಗಕ್ಕೆ ಸಿದ್ಧನಿದ್ದೇನೆ’ ಎಂದು ಹೇಳಿದರು.

‘ನಾನು ತಪ್ಪು ಮಾಡಿದ್ದೇನೆ ಎಂದಾದರೆ ವಿಧಾನಸೌಧ ಮತ್ತು ಹೈಕೋರ್ಟ್ ನಡುವೆ ನಿಂತು ನಾನೇ ತಲೆತೆಗೆದುಕೊಳ್ಳುತ್ತೇನೆ. ನ್ಯಾಯಾಧೀಶನಾಗಿ ನಾನು ಹಾಗೆ ಕೆಲಸ ಮಾಡಿದ್ದೇನೆ. ನನ್ನ ಬಗ್ಗೆ ನನಗಿರುವ ವಿಶ್ವಾಸ ಅಂಥದ್ದು’ ಎಂಬ ಅವರ ಹೇಳಿಕೆಯನ್ನು ‘ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಮಾಡಿದೆ.

ನ್ಯಾಯಮೂರ್ತಿಗಳ ಬಗ್ಗೆ ಕೆಲ ವಕೀಲರು ಆಡುತ್ತಿರುವ ಮಾತುಗಳಿಂದ ಬೇಸರವಾಗಿದೆ. ವಕೀಲರ ಇಂಥ ವರ್ತನೆಯ ಬಗ್ಗೆ ವಕೀಲರ ಸಂಘವು ಗಮನಹರಿಸಬೇಕು ಎಂದು ಹೇಳಿದರು. ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ರೆಡ್ಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

‘ಗಾಜಿನಮನೆಯಲ್ಲಿರುವ ನ್ಯಾಯಮೂರ್ತಿಗಳ ಗೌರವ ಕಾಪಾಡುವುದು ವಕೀಲರ ಸಂಘದ ಜವಾಬ್ದಾರಿಯಾಗಿದೆ. ಕೆಲ ವಕೀಲರು ಆಧಾರ ರಹಿತ ಆರೋಪ ಮಾಡುವ ತಮ್ಮ ಪ್ರವೃತ್ತಿಗೆ ಕಡಿವಾಣ ಹಾಕಿಕೊಳ್ಳದಿದ್ದರೆ ನ್ಯಾಯಾಂಗವು ಮಧ್ಯಪ್ರವೇಶಿಸಿ, ಶಿಸ್ತುಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ. ತಾಳ್ಮೆಯ ಮಿತಿಯನ್ನು ಮೀರುವಂತೆ ವರ್ತಿಸುವ ವಕೀಲರ ವಿರುದ್ಧ ಸುದರ್ಶನ ಚಕ್ರ ಪ್ರಯೋಗಿಸುವುದು ಅನಿವಾರ್ಯವಾದೀತು ಎಂದು ಎಚ್ಚರಿಸಿದರು.

ತಮ್ಮ ಭಾಷಣದ ವೇಳೆ ಈ ವಿಚಾರ ಪ್ರಸ್ತಾಪಿಸಿದ ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ಈ ನಿಟ್ಟಿನಲ್ಲಿ ವಕೀಲರ ಸಂಘವು ಗಮನ ಹರಿಸಲಿದೆ ಎಂದು ಹೇಳಿದರು.

Published On - 12:00 pm, Sun, 3 July 22

Loading...
Unable to load recommendations.
Follow Us