
ಬೆಂಗಳೂರು, ಜೂನ್ 25: ಅನರ್ಹರೂ ಪ್ರಯೋಜನ ಪಡೆಯುತ್ತಿರುವ ಹಿನ್ನೆಲೆ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಪರಿಷ್ಕರಣೆಗೆ ಮುಂದಾಗಿದ್ದ ರಾಜ್ಯ ಸರ್ಕಾರವೀಗ ಪಿಂಚಣಿ ಫಲಾನುಭವಿಗಳ ಪರಿಶೀಲನೆಗೂ ಮುಂದಾಗಿದೆ. ಸಂಯೋಜನೆ ಆ್ಯಪ್ ಮೂಲಕ ಸಂದೇಹಾಸ್ಪದ ಖಾತೆಗಳ ಪರಿಶೀಲನೆ ನಡೆಸುವ ಮೂಲಕ ಪಾರದರ್ಶಕತೆ, ಅರ್ಹತೆ ಖಚಿತಪಡಿಸಿಕೊಳ್ಳಲು ನಿರ್ಧರಿಸಿದೆ. ಜೊತೆಗೆ ಅನರ್ಹರ ಪಿಂಚಣಿ ಸ್ಥಗಿತಕ್ಕೆ ಕ್ರಮಕ್ಕೆ ಸೂಚಿಸಿದೆ.
ಎಲ್ಲ ಬಗೆಯ ಪಿಂಚಣಿಗಳು ಸೇರಿ ರಾಜ್ಯದಲ್ಲಿ ಒಟ್ಟು 83,11,493 ಫಲಾನುಭವಿಗಳು ಇದ್ದಾರೆ. ಪ್ರಾಥಮಿಕ ತಪಾಸಣೆಯಲ್ಲಿ ಈ ಪೈಕಿ 23,13,664 ಫಲಾನುಭವಿಗಳ ವಿವರದ ಬಗ್ಗೆ ಸಂಶಯ ಮೂಡಿದೆ ಎ್ನಲಾಗಿದೆ. ಹೀಗಾಗಿ ಸಂದೇಹಾಸ್ಪದ ಖಾತೆಗಳನ್ನು ಸಂಯೋಜನೆ ಌಪ್ ಮೂಲಕ ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳಿಗೆ ಮಾತ್ರ ಪಿಂಚಣಿ ಪಾವತಿಗೆ ಸರ್ಕಾರ ಮುಂದಾಗಿದೆ. 23,13,664 ಸಂಶಯಾಸ್ಪದ ಫಲಾನುಭವಿಗಳ ಪೈಕಿ 3,35,610 ಫಲಾನುಭವಿಗಳು ಪಿಂಚಣಿಗೆ ಅರ್ಹರೆಂದು ಪರಿಶೀಲನೆ ಬಳಿಕ ಗ್ರಾಮ ಆಡಳಿತಾಧಿಕಾರಿಗಳು ವರದಿ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಡಿಕೆಶಿ ಕನಸಿನ ಭೂ ಗ್ಯಾರಂಟಿಗೆ ಭರ್ಜರಿ ರೆಸ್ಪಾನ್ಸ್; 6ನೇ ಸುತ್ತಿನ ನನ್ನ ಖಾತೆ ನನ್ನ ಹಕ್ಕು ಅಭಿಯಾನ ಯಶಸ್ವಿ
ಮೇ ತಿಂಗಳಲ್ಲಿ ಒಟ್ಟು 63,04,554 ಫಲಾನುಭವಿಗಳಿಗೆ ಪಿಂಚಣಿ ಪಾವತಿ ಮಾಡಲಾಗಿದ್ದು, ಅನರ್ಹರು ಮತ್ತು ತಪ್ಪು ದಾಖಲೆ ನೀಡಿದವರಿಗೆ ಪಿಂಚಣಿ ರದ್ದಾಗಿದೆ. ಪಿಂಚಣಿ ಮಂಜೂರಾತಿ ಸಮಯದಲ್ಲಿ ವಯಸ್ಸಿನ ದೃಢೀಕರಣದ ಬಗ್ಗೆ ತಪ್ಪು ಮಾಹಿತಿ, ನಕಲಿ ದಾಖಲೆ ಸಲ್ಲಿಸಿದ್ದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಗ್ರಾಮ ಆಡಳಿತ ಅಧಿಕಾರಿ ಪರಿಶೀಲನೆ ವೇಳೆ ಯಾವುದೇ ದಾಖಲೆ ಸಲ್ಲಿಸದ, ವಿಳಾಸದಲ್ಲಿ ವಾಸವಿಲ್ಲದ, ಆದಾಯ ಪ್ರಮಾಣಪತ್ರ ಸಲ್ಲಿಸದ 16,42,303 ಫಲಾನುಭವಿಗಳ ಪಿಂಚಣಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಈ ಸಂಬಂಧ ಸೂಕ್ತ ತಿಳಿವಳಿಕೆ ಪತ್ರವನ್ನು ನೀಡಲು ಕಂದಾಯ ಇಲಾಖೆಗೆ ಆದೇಶಿಸಲಾಗಿದೆ. ಸಂಬಂಧಪಟ್ಟ ತಹಶೀಲ್ದಾರ್ ಮೂಲಕ ಫಲಾನುಭವಿಗಳಿಗೆ ನೋಟಿಸ್ ಸಿಗಲಿದ್ದು, ಅಂತವರು 30 ದಿನದೊಳಗೆ ಅರ್ಹತಾ ದಾಖಲೆ ಸಲ್ಲಿಸಬೇಕು ಎಂದು ಕಂದಾಯ ಇಲಾಖೆ ಜಂಟಿ ನಿರ್ದೇಶಕರು ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:34 pm, Thu, 25 June 26