ಅಕ್ರಮ ಆಸ್ತಿ ಗಳಿಕೆ: ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ; ಕೋಟ್ಯಂತರ ರೂ ಪತ್ತೆ

ಕರ್ನಾಟಕದ ನಾಲ್ವರು ಸರ್ಕಾರಿ ಅಧಿಕಾರಿಗಳಿಗೆ ಇಂದು ಲೋಕಾಯುಕ್ತ ಶಾಕ್​ ನೀಡಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕೋಟಿಗಟ್ಟಲೆ ನಗದು, ಚಿನ್ನಾಭರಣ, ಸ್ಥಿರಾಸ್ತಿ ಪತ್ತೆಯಾಗಿದೆ. ಬೆಂಗಳೂರು, ದಾವಣಗೆರೆ, ಧಾರವಾಡದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಅಧಿಕಾರಿಗಳ ಮನೆ, ಕಚೇರಿಯಲ್ಲಿ ಭಾರಿ ಸಂಪತ್ತು ಪತ್ತೆಯಾಗಿದ್ದು, ತನಿಖೆ ಮುಂದುವರೆದಿದೆ.

ಅಕ್ರಮ ಆಸ್ತಿ ಗಳಿಕೆ: ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ; ಕೋಟ್ಯಂತರ ರೂ ಪತ್ತೆ
ದಾಳಿ ವೇಳೆ ಪತ್ತೆಯಾದ ನಗದು, ಚಿನ್ನಾಭರಣಗಳು
Image Credit source: tv9 kannada
Edited By:

Updated on: Feb 12, 2026 | 7:04 PM

ಬೆಂಗಳೂರು, ಫೆಬ್ರವರಿ 12: ಇಂದು ಕರ್ನಾಟಕದ ನಾಲ್ವರು ಸರ್ಕಾರಿ ಅಧಿಕಾರಿಗಳಿಗೆ (Govt Officials) ಲೋಕಾಯುಕ್ತ (Lokayukta) ಶಾಕ್ ನೀಡಿದೆ. ಬೆಳಿಗ್ಗೆ ಎದ್ದು ಬಾಗಿಲು ತೆಗೆಯುವ ಹೊತ್ತಿಗೆ ಲೋಕಾಯುಕ್ತ ಅಧಿಕಾರಿಗಳು ಅಕ್ರಮ ಆಸ್ತಿ ಗಳಿಕೆ ಕೇಸ್​​ನಲ್ಲಿ ಮನೆ ಬಾಗಿಲು ಮುಂದೆ ಹಾಜರಾಗಿದ್ದಾರೆ. ದಾಳಿ ವೇಳೆ ಕೋಟಿ ಕೋಟಿ ಹಣ ಪತ್ತೆಯಾಗಿದ್ದು, ಲೋಕಾಯುಕ್ತ ಅಧಿಕಾರಿಗಳೇ ಶಾಕ್​ ಆಗಿದ್ದಾರೆ.

ನಾಲ್ವರು ಸರ್ಕಾರಿ ಅಧಿಕಾರಿಗಳಿಗೆ ಶಾಕ್ ನೀಡಿದ ಲೋಕಾ

ಇಂದು ಬೆಳ್ಳಂಬೆಳಿಗ್ಗೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಕಾರ್ಯಚರಣೆ ಮಾಡಿದ್ದು, ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಕರ್ನಾಟಕ ಸ್ಟೇಟ್ ಹೈವೇ ಡೆವಲಪ್ಮೆಂಟ್ ಪ್ರಾಜೆಕ್ಟ್​ನ ಚೀಫ್ ಇಂಜಿನಿಯರ್ ಪುರುಷೋತ್ತಮ ದಾಸ ಹೆಗ್ಡೆ, ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀಕ್ಷಕ ಅಭಿಯಂತರ ಹೆಚ್.ಎಂ.ಜನಾರ್ದನ, ಬೆಸ್ಕಾಂ ಇಂಜಿನಿಯರ್​ R.H​​.ಅರ್ಜುನ್ ಮತ್ತು ಧಾರವಾಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸೋಮಲಿಂಗಪ್ಪ.

ಇದನ್ನೂ ಓದಿ: ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್​​ಗೆ ಶಾಕ್​​ ಕೊಟ್ಟ ಲೋಕಾಯುಕ್ತ: ಅಧಿಕಾರಿಗಳಿಂದ 11 ಕಡೆ ಶೋಧ

ಈ ನಾಲ್ವರು ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ ಸ್ನೇಹಿತರ ನಿವಾಸದ ಮೇಲೂ ದಾಳಿ ಮಾಡಿಲಾಗಿದೆ. ಪ್ರಮುಖವಾಗಿ ಬೆಂಗಳೂರಿನ ಬನಶಂಕರಿಯಲ್ಲಿ ಇರುವ ಪುರುಷೋತ್ತಮ ದಾಸ ಹೆಗ್ಡೆ ಅವರ ಅದ್ಧೂರಿ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗಿದೆ. ಈ ವೇಳೆ ನಗದು, ಚಿನ್ನಾಭರಣ, ಆಸ್ತಿ ದಾಖಲೆಗಳು, ಎರಡು ಶಾಲೆಗಳಿಗೆ ಟ್ರಸ್ಟಿ ಆಗಿರುವುದು‌, ಮೈಸೂರಿನಲ್ಲಿ ಮನೆಗಳನ್ನು ಹೊಂದಿರುವುದು ಪತ್ತೆಯಾಗಿದೆ. ಸಂಪೂರ್ಣ ದಾಳಿ ಬಳಿಕ ಅಂಕಿ-ಅಂಶಗಳು ಪತ್ತೆಯಾಗಲಿದೆ.

ಮತ್ತೊಂದು ಕಡೆ ಬೆಂಗಳೂರು ಗ್ರಾಮಾಂತರ ವಿಭಾಗದ ಲೋಕಾಯುಕ್ತ ಅಧಿಕಾರಿಗಳು ಹೆಚ್.ಎಂ.ಜನಾರ್ದನ ನಿವಾಸ ಹಾಗೂ ಇತರ ಕಡೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಜನಾರ್ದನ ಸ್ನೇಹಿತ ಸುಜಯ್ ಶೆಟ್ಟಿ ಎಂಬುವವರ ಮನೆಯಲ್ಲಿ ಒಂದು ಕೋಟಿ ಎಪ್ಪತ್ತು ಲಕ್ಷ ನಗದು ಪತ್ತೆಯಾಗಿದೆ. ಈ ಹಣದ ಮೂಲದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದಾರೆ.

ಈತನ ಬಳಿ 12,77,000 ಮೌಲ್ಯದ ಒಂದು ಸೈಟ್, 2,40,70,000 ಮೌಲ್ಯದ ಮೂರು ಮನೆಗಳು, ಮೂವತ್ತನಾಲ್ಕು ಎಕ್ಕರೆ ಕೃಷಿ ಭೂಮಿ, ಏಳು ಲಕ್ಷ ಮೌಲ್ಯದ ಚಿನ್ನ, ಇಪ್ಪತ್ತು ಲಕ್ಷ ಮೌಲ್ಯದ ವಾಹನಗಳು ಮತ್ತು ಅರವತ್ತು ಲಕ್ಷ ಮೌಲ್ಯದ ಗೃಹ ಉಪಯೋಗಿ ವಸ್ತುಗಳು ಪತ್ತೆಯಾಗಿವೆ. ಒಟ್ಟಾರೆ ಮೌಲ್ಯ 4,42,39,262 ಎಂದು ಅಂದಾಜಿಸಲಾಗಿದೆ. ಇನ್ನು ದಾಳಿ ವೇಳೆ ಹಲವು ದಾಖಲೆಗಳು ಹಾಗೂ ಚಿನ್ನ ಸಿಕ್ಕಿದ್ದು ಅದರ ಪರಿಶೀಲನೆ ನಡೆಯುತ್ತಿದೆ.

ಆಸ್ತಿ ಪತ್ರ ಹಾಗೂ ಚಿನ್ನಾಭರಣ, ಬೆಳ್ಳಿ ಪತ್ತೆ

ದಾವಣಗೆರೆ ನಗರದಲ್ಲಿ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಬೆಸ್ಕಾಂನ ಸಿವಿಲ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಇಂಜಿನಿಯರ್​ R.H​​.ಅರ್ಜುನ್ ಮನೆ, ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ನಗರದ ನಿಟ್ಟುವಳ್ಳಿಯಲ್ಲಿರುವ ರೂಂ, ಕಚೇರಿ ಹಾಗೂ ಶಿವಮೊಗ್ಗದ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ಮಾಡಿದ್ದು, ಶಿವಮೊಗ್ಗದ ಮನೆಯಲ್ಲಿ ಆಸ್ತಿ ಪತ್ರ ಹಾಗೂ ಚಿನ್ನಾಭರಣ, ಬೆಳ್ಳಿ ಪತ್ತೆ ಆಗಿದೆ.

ಇದನ್ನೂ ಓದಿ: ವಿಧಾನಸೌಧ ಪಡಸಾಲೆಯಲ್ಲಿ ನಗದು, ಚಿನ್ನ ಇದ್ದ ಬ್ಯಾಗ್ ಬಿಟ್ಟುಹೋದ ವ್ಯಕ್ತಿ!

ಇತ್ತ ಧಾರವಾಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ, ಸರ್ವೆ ಇಲಾಖೆಯ ಸೂಪರ್​ವೈಸರ್​​ ಸೋಮಲಿಂಗಪ್ಪ ಮನೆ, ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಮುರಗೋಡದಲ್ಲಿರುವ ಮನೆ ಮೇಲೂ ದಾಳಿ ಮಾಡಲಾಗಿದೆ. ಒಟ್ಟು ನಾಲ್ಕು ಕಡೆಯಲ್ಲಿ ದಾಳಿ ನಡೆಸಿ ಆಸ್ತಿ ದಾಖಲೆಗಳು ವಶಕ್ಕೆ ಪಡೆಯಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:04 pm, Thu, 12 February 26