Ram Navami: ರಾಮ ನವಮಿ, ನಾಳೆ ಬೆಂಗಳೂರಿನಲ್ಲಿ ಮಾಂಸ ಮಾರಾಟಕ್ಕೆ ಬಿಬಿಎಂಪಿ ನಿಷೇಧ

ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನಾಂಕದಂದು ರಾಮ ನವಮಿ ಆಚರಿಸಲಾಗುತ್ತಿದ್ದು, ಈ ವರ್ಷ ಏಪ್ರಿಲ್ 17ರಂದು ನಡೆಯಲಿದೆ. ಈ ಪ್ರಯುಕ್ತ ಬೆಂಗಳೂರು ನಗರದಾದ್ಯಂತ ಮಾಂಸ ಮಾರಾಟ ಮತ್ತು ಪ್ರಾಣಿ ವಧೆಯನ್ನು ಒಂದು ದಿನದ ಮಟ್ಟಿಗೆ ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.

Ram Navami: ರಾಮ ನವಮಿ, ನಾಳೆ ಬೆಂಗಳೂರಿನಲ್ಲಿ ಮಾಂಸ ಮಾರಾಟಕ್ಕೆ ಬಿಬಿಎಂಪಿ ನಿಷೇಧ
ಸಾಂದರ್ಭಿಕ ಚಿತ್ರ

Updated on: Apr 16, 2024 | 7:31 AM

ಬೆಂಗಳೂರು, ಏಪ್ರಿಲ್ 16: ರಾಮನವಮಿ (Ram Navami) ಆಚರಣೆಯ ಕಾರಣ ಬುಧವಾರ ಬೆಂಗಳೂರಿನಲ್ಲಿ ಮಾಂಸ ಮಾರಾಟ (Meat Sale) ನಿಷೇಧಿಸಿ ಬಿಬಿಎಂಪಿ (BBMP) ಆದೇಶ ಹೊರಡಿಸಿದೆ. ರಾಮ ನವಮಿಯ ಕಾರಣ ನಗರದಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿ ಹತ್ಯೆಯನ್ನು ನಿಷೇಧಿಸಲಾಗಿದೆ ಎಂದು ಬಿಬಿಎಂಪಿಯ ಪಶುಸಂಗೋಪನಾ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಸಾಮಾನ್ಯವಾಗಿ ಹಿಂದೂ ಹಬ್ಬಗಳ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಪ್ರತಿ ಬಾರಯೂ ಬಿಬಿಎಂಪಿ ಈ ಕ್ರಮ ಕೈಗೊಳ್ಳುತ್ತದೆ.

ಹಿಂದೂ ಧರ್ಮದಲ್ಲಿ ರಾಮ ನವಮಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ರಾಮ ನವಮಿ ಹಬ್ಬವನ್ನು ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನಾಂಕದಂದು ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮರ್ಯಾದಾ ಪುರುಷೋತ್ತಮ ಭಗವಾನ್ ರಾಮನು ಜನಿಸಿದ ದಿನ ಇದಾಗಿದೆ.

ರಾಮ ನವಮಿ ಶುಭ ಸಮಯ ಯಾವಾಗ?

ರಾಮ ನವಮಿ ಹಬ್ಬವು ಚೈತ್ರ ನವರಾತ್ರಿಯ ಕೊನೆಯ ದಿನವಾಗಿದೆ. ಚೈತ್ರ ನವರಾತ್ರಿ ರಾಮ ನವಮಿಯೊಂದಿಗೆ ಕೊನೆಗೊಳ್ಳುತ್ತದೆ. ರಾಮನವಮಿಯಂದು ಶ್ರೀರಾಮನ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಈ ದಿನದಂದು, ಭಗವಾನ್ ರಾಮನ ಜೊತೆಗೆ ತಾಯಿ ಸೀತೆ, ಲಕ್ಷ್ಮಣ ಮತ್ತು ಹನುಮಾನ್ ಅನ್ನೂ ಪೂಜಿಸಲಾಗುತ್ತದೆ.

ಹಿಂದೂ ಕ್ಯಾಲೆಂಡರ್‌ನ ಲೆಕ್ಕಾಚಾರದ ಪ್ರಕಾರ, ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯು ಏಪ್ರಿಲ್ 16 ರಂದು ಮಧ್ಯಾಹ್ನ 01:23 ರಿಂದ ಪ್ರಾರಂಭವಾಗುತ್ತದೆ. ನವಮಿ ತಿಥಿ ಏಪ್ರಿಲ್ 17 ರಂದು ಮಧ್ಯಾಹ್ನ 03:15 ಕ್ಕೆ ಕೊನೆಗೊಳ್ಳುತ್ತದೆ. ಬೆಳಗ್ಗಿನ ವೇಳೆ ತಿಥಿ ಆರಂಭವಾಗುವ ಆಧಾರದ ಮೇಲೆ, ಏಪ್ರಿಲ್ 17 ರಂದು ರಾಮ ನವಮಿ ಹಬ್ಬವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ರಾಮ ಮನುಷ್ಯ ರೂಪದಲ್ಲಿ ಭೂಮಿಗೆ ಬಂದ ದಿನ ರಾಮನವಮಿ, ಇದರ ಇತಿಹಾಸ, ಮಹತ್ವ ಇಲ್ಲಿದೆ

ರಾಮನವಮಿ ಹಬ್ಬವನ್ನು ಪ್ರತಿ ವರ್ಷ ದೇಶದಾದ್ಯಂತ ಅತ್ಯಂತ ಭಕ್ತಿಯಿಂದ ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಭಗವಾನ್ ರಾಮನು ವಿಷ್ಣುವಿನ ಏಳನೇ ಅವತಾರವಾಗಿ ಜನಿಸಿದನು. ಭಗವಾನ್ ರಾಮನು ಅಯೋಧ್ಯೆಯ ರಾಜ ದಶರಥನ ಹಿರಿಯ ಮಗನಾಗಿ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಜನಿಸಿದನು. ಈ ಕಾರಣಕ್ಕಾಗಿ, ಪ್ರತಿ ವರ್ಷ ರಾಮನವಮಿ ಹಬ್ಬವನ್ನು ಭಗವಾನ್ ರಾಮನ ಜನ್ಮದಿನವಾಗಿ ಆಚರಿಸಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us