ಬೆಂಗಳೂರು-ಮಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರಕ್ಕೆ ಮುಹೂರ್ತ ಫಿಕ್ಸ್, ಆ ಘಾಟಿನಲ್ಲಿ ಹೋಗುವುದೇ ಮಜಾ
ಬೆಂಗಳೂರು - ಮಂಗಳೂರು ನಡುವಿನ ಬಹುನಿರೀಕ್ಷಿತ ವಂದೇ ಭಾರತ್ ರೈಲು ಜೂನ್ 3 ರಂದು ಪ್ರಾಯೋಗಿಕ ಓಡಾಟವನ್ನು ಆರಂಭವಾಗಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ ರದ್ದುಗೊಂಡಿದ್ದು, ಇದೀಗ ಪ್ರಾಯೋಗಿಕ ಸಂಚಾರಕ್ಕೆ ಹೊಸ ದಿನಾಂಕ ಫಿಕ್ಸ್ ಮಾಡಲಾಗಿದೆ. ಘಾಟಿ ಪ್ರದೇಶದ ದಟ್ಟ ಕಾಡು, ಪ್ರಕೃತಿ ಸೊಬಿಗನ ನಡುವೆ ರೈಲು ಹಾದು ಹೋಗಲಿದೆ. ಯಾವಾಗ? ಎಲ್ಲಿಂದ ಎಲ್ಲಿಗೆ ಸಂಚಾರ ಮಾಡಲಿದೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಆಗಸ್ಟ್ 05): ಬಹುನಿರೀಕ್ಷಿತ ಬೆಂಗಳೂರು-ಮಂಗಳೂರು (Bengaluru-Mangaluru Vande Bharat Express) ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಟ್ರಯಲ್ ರನ್ಗೆ (Trial Run) ಹೊಸ ಮುಹೂರ್ತ ಫಿಕ್ಸ್ ಆಗಿದೆ. ಕೆಲ ತಾಂತ್ರಿಕ ಕಾರಣಾಂತರಗಳಿಂದ ಜೂನ್ 3ರಂದು ನಡೆಯಬೇಕಿದ್ದ ಪ್ರಾಯೋಗಿಕ ಸಂಚಾರವನ್ನು ರದ್ದುಗೊಂಡಿದ್ದು, ಇದೀಗ ಇದೇ ಆಗಸ್ಟ್ 11ರಂದು ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ(Bengaluru-Mangaluru Vande Bharat Express) ಪ್ರಾಯೋಗಿಕ ಸಂಚಾರ ಆರಂಭವಾಗಲಿದ್ದ, ಸಕಲೇಶಪುರ-ಸುಬ್ರಹ್ಮಣ್ಯ ಘಾಟಿ ಪ್ರದೇಶದ ದಟ್ಟ ಕಾಡು, ಪ್ರಕೃತಿ ಸೊಬಿಗನ ಮಧ್ಯೆ ರೈಲು ಓಡಾಟಕ್ಕೆ ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಸಕಲ ಸಿದ್ಧತೆ ಮಾಡಿಕೊಂಡಿದೆ.
ಆಗಸ್ಟ್ 11ರಿಂದ ಆಗಸ್ಟ್ 20ರವರೆಗೆ ಪ್ರಾಯೋಗಿಕ ಸಂಚಾರ
ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ(Somanna) ಅವರು ಜೂನ್ ತಿಂಗಳೊಳಗಾಗಿ ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಸೇವೆಯನ್ನು ಆರಂಭಿಸುವುದಾಗಿ ಈ ಹಿಂದೆ ತಿಳಿಸಿದ್ದರು. ಆದರೆ ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದ ಕ್ಲಿಷ್ಟಕರ ಘಾಟ್ ಪ್ರದೇಶದಲ್ಲಿ ಸಂಚರಿಸಲು ಅತ್ಯಗತ್ಯವಾದ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (AEB) ವ್ಯವಸ್ಥೆ ಹೊಂದಿರುವ ರೇಕ್ ಲಭ್ಯವಿಲ್ಲದ ಕಾರಣ ಪ್ರಕ್ರಿಯೆ ತಡವಾಗಿತ್ತು. ಆದ್ರೆ, ಇದೀಗ ಆಗಸ್ಟ್ 11ರಿಂದ ಆರಂಭವಾಗಲಿರುವ ಪ್ರಾಯೋಗಿಕ ಸಂಚಾರವು ಆಗಸ್ಟ್ 20ರವರೆಗೆ ನಡೆಯಲಿದೆ. ಭಾರತೀಯ ರೈಲ್ವೆಯ ಸಂಶೋಧನೆ, ವಿನ್ಯಾಸ ಮತ್ತು ಮಾನಕ ಸಂಸ್ಥೆಯ (RDSO) ತಂಡವು ಶೀಘ್ರದಲ್ಲೇ ಆಗಮಿಸಿ ಈ ಪರೀಕ್ಷಾರ್ಥ ಸಂಚಾರದ ಉಸ್ತುವಾರಿ ವಹಿಸಲಿದೆ ಎಂದು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಇನ್ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ಕೇವಲ 5 ಗಂಟೆಗಳಲ್ಲಿ ತಲುಪಬಹುದು! ಅದು ಹೇಗೆ ಗೊತ್ತಾ?
ಘಾಟಿ ಸುರಕ್ಷತಾ ಕ್ರಮ ಸವಾಲು
ಸಕಲೇಶಪುರ – ಸುಬ್ರಹ್ಮಣ್ಯ ಮಧ್ಯೆ ಸುಮಾರು 55 ಕಿಮೀ ಉದ್ದದ ಘಾಟ್ನಲ್ಲಿ ರೈಲ್ವೆ ಹಳಿ ಹಾದು ಹೋಗಿದೆ. ಇದರಲ್ಲಿ 57 ಸುರಂಗಗಳು, 258 ಸೇತುವೆಗಳು, 108 ತೀಕ್ಷ್ಣ ತಿರುವುಗಳಿರುವುದರಿಂದ ಅತ್ಯಂತ ಸೂಕ್ಷ್ಮವಾದ ಸಂಚಾರವಾಗಿದೆ. ವಂದೇ ಭಾರತ್ ಈ ಘಾಟ್ನಲ್ಲಿಸಂಚರಿಸಬೇಕಾದರೆ ಘಾಟ್ ಇಳಿಯುವಾಗ ಬ್ರೇಕಿಂಗ್ ಸಿಸ್ಟಮ್ನಲ್ಲಿಅಳವಡಿಸಬೇಕಾದ ತಾಂತ್ರಿಕ ಸೌಲಭ್ಯದಲ್ಲಿನ ಕೊರತೆ ಕಾರಣ ಪ್ರಾಯೋಗಿಕ ಪ್ರಯಾಣವನ್ನು ರದ್ದುಗೊಳಿಸಲಾಗಿತ್ತು.
ಘಾಟ್ ಮಾರ್ಗಕ್ಕೆ AEB ತಂತ್ರಜ್ಞಾನ
ವಂದೇ ಭಾರತ್ ರೈಲು ಸಾಮಾನ್ಯವಾಗಿ ಅತ್ಯಾಧುನಿಕ ಎಲೆಕ್ಟ್ರೋ-ನ್ಯೂಮ್ಯಾಟಿಕ್ (EP) ಡಿಸ್ಕ್ ಬ್ರೇಕ್ ಹಾಗೂ Regenerative Braking ವ್ಯವಸ್ಥೆಯನ್ನು ಹೊಂದಿರುತ್ತದೆ. ಆದರೆ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ನಡುವಿನ ಘಾಟ್ ಮಾರ್ಗವು ಅತ್ಯಂತ ಕಡಿದಾದ ಇಳಿಜಾರು ಹೊಂದಿದೆ.
ಈಗ ಈ ಮಾರ್ಗದಲ್ಲಿ ಚಲಿಸುವ ರೈಲುಗಳ ಸುರಕ್ಷತೆಗಾಗಿ ಬ್ಯಾಂಕರ್ ಇಂಜಿನ್ಗಳನ್ನು (ಹೆಚ್ಚುವರಿ ಇಂಜಿನ್) ಜೋಡಿಸಲಾಗುತ್ತದೆ. ಇವುಗಳನ್ನು ಜೋಡಿಸಲು ಮತ್ತು ಕಳಚಲು ಸುಮಾರು 15 ನಿಮಿಷ ಬೇಕಾಗುತ್ತದೆ. ವಂದೇ ಭಾರತ್ ರೈಲಿಗೆ ಈ ರೀತಿ ಹೊರಗಿನಿಂದ ಬ್ಯಾಂಕರ್ ಎಂಜಿನ್ ಜೋಡಿಸಬೇಕಾದರೆ ರೈಲಿನ ಮುಂಭಾಗದ ನೋಸ್ (Nose) ಭಾಗವನ್ನು ಕಳಚಬೇಕಾಗುತ್ತದೆ. ಇದು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಜೊತೆಗೆ ರೈಲಿನ ಅತಿವೇಗವನ್ನು ಕಂಟ್ರೋಲ್ ಮಾಡುತ್ತದೆ.
ಈ ಕಾರಣಕ್ಕೆ ರೈಲಿನಲ್ಲೇ ಸ್ವಯಂಚಾಲಿತವಾಗಿ ಗರಿಷ್ಠ 30 ಕಿ.ಮೀ ವೇಗವನ್ನು ನಿಯಂತ್ರಿಸುವ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ವ್ಯವಸ್ಥೆ ಹೊಂದಿರುವ ವಿಶೇಷ ರೇಕ್ಗಾಗಿ ರೈಲ್ವೇ ಕಾಯುತ್ತಿತ್ತು. ಈಗ ಎಇಬಿ ವ್ಯವಸ್ಥೆ ಹೊಂದಿರುವ ರೇಕ್ ಬಂದಿರುವುದರಿಂದ ಪ್ರಾಯೋಗಿಕ ಸಂಚಾರ ಯಶಸ್ವಿಯಾದ ತಕ್ಷಣವೇ ವಾಣಿಜ್ಯ ಸಂಚಾರಕ್ಕೆ ರೈಲ್ವೆ ಮಂಡಳಿಯಿಂದ ಅಧಿಕೃತ ಅನುಮೋದನೆ ಸಿಗಲಿದೆ.




