ಕರ್ನಾಟಕದಲ್ಲಿ ವಿದ್ಯುತ್ ಖಾಸಗೀಕರಣ ವಿವಾದ: ಪ್ರಸ್ತಾವನೆಯನ್ನೇ ಹಿಂಪಡೆದ ಟಾಟಾ ಕಂಪನಿ

ಕರ್ನಾಟಕದಲ್ಲಿ ವಿದ್ಯುತ್ ಖಾಸಗೀಕರಣಕ್ಕೆ ಎಸ್ಕಾಂ ನೌಕರರು ಹಾಗೂ ರೈತರಿಂದ ವ್ಯಕ್ತವಾದ ತೀವ್ರ ವಿರೋಧದ ಬೆನ್ನಲ್ಲೇ, ಟಾಟಾ ಪವರ್ ಕಂಪನಿಯು ಕೆಇಆರ್‌ಸಿಗೆ ಸಲ್ಲಿಸಿದ್ದ ತನ್ನ ಪ್ರಸ್ತಾವನೆಯನ್ನು ಅಧಿಕೃತವಾಗಿ ಹಿಂಪಡೆದಿದೆ. ಆ ಬೆನ್ನಲ್ಲೇ ಅರ್ಜಿಯನ್ನು ಕಂಪನಿ ನಿರ್ಧಾರವನ್ನುಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಸ್ವಾಗತಿಸಿದೆ. ಸಂಘಟಿತ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ ಎಂದು ತಿಳಿಸಿದೆ.

ಕರ್ನಾಟಕದಲ್ಲಿ ವಿದ್ಯುತ್ ಖಾಸಗೀಕರಣ ವಿವಾದ: ಪ್ರಸ್ತಾವನೆಯನ್ನೇ ಹಿಂಪಡೆದ ಟಾಟಾ ಕಂಪನಿ
ಸಾಂದರ್ಭಿಕ ಚಿತ್ರ
Image Credit source: Getty Images
Edited By:

Updated on: Jul 03, 2026 | 3:38 PM

ಮುಖ್ಯಾಂಶಗಳು

  • ಕರ್ನಾಟಕದಲ್ಲಿ ವಿದ್ಯುತ್ ಖಾಸಗೀಕರಣ ವಿವಾದ
  • ತೀವ್ರ ವಿರೋಧದ ಬೆನ್ನಲ್ಲೇ ಪ್ರಸ್ತಾವನೆ ವಾಪಸ್​​
  • ಟಾಟಾ ಕಂಪನಿ ನಿರ್ಧಾರಕ್ಕೆ ಗುತ್ತಿಗೆದಾರರಿಂದ ಸ್ವಾಗತ

ಬೆಂಗಳೂರು, ಜುಲೈ 03: ಕರ್ನಾಟಕದಲ್ಲಿ ವಿದ್ಯುತ್ ಖಾಸಗೀಕರಣಕ್ಕೆ ತೀವ್ರ ವಿರೋಧದ ಬೆನ್ನಲ್ಲೇ ತಾನು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಟಾಟಾ ಕಂಪನಿ ಹಿಂಪಡೆದಿದೆ. ಕೆಇಆರ್‌ಸಿ ಆಕ್ಷೇಪಣೆ ವೇಳೆ ಸಂಸ್ಥೆ ಪ್ರಸ್ತಾವನೆ ವಾಪಸ್ ಪಡೆದುಕೊಂಡಿದೆ. ವಿದ್ಯುತ್ ಖಾಸಗೀಕರಣಕ್ಕೆ ರೈತರು, ಎಸ್ಕಾಂ ನೌಕರರು ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಈ ನಡುವಿನ ಬೆಳವಣಿಗೆಗಳ ಬಳಿಕ ಇಂದು ತನ್ನ ಪ್ರಸ್ತಾವನೆಯನ್ನು ಕಂಪನಿ ಹಿಂಪಡೆದಿದೆ.

ಟಾಟಾ ಪವರ್ ಕಂಪನಿ ನಡೆಗೆ ಸ್ವಾಗತ

ವಿದ್ಯುತ್ ಸರಬರಾಜು ಪರವಾನಿಗೆಗೆ ಸಲ್ಲಿಸಿದ್ದ ಅರ್ಜಿಯನ್ನು ಕಂಪನಿ ವಾಪಸ್ ಪಡೆದ ನಿರ್ಧಾರವನ್ನು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಸ್ವಾಗತಿಸಿದೆ. ಸಂಘದ ಅಧ್ಯಕ್ಷ ರಮೇಶ್​​, ಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವ ಕೆ. ಜೆ ಜಾರ್ಜ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಟಾಟಾ ಪವರ್ ಕಂಪನಿ ನಡೆ ವಿರುದ್ಧ 20 ಲಕ್ಷ ಆಕ್ಷೇಪಣಾ ಅರ್ಜಿಗಳು ಸಲ್ಲಿಕೆ ಆಗಿದ್ದವು. ರೈತರು, ಇಲಾಖೆ ನೌಕರರು, ಗುತ್ತಿಗೆದಾರರು ಸಂಘಟಿತ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ. ಇಂದು KERCಯಿಂದ ಟಾಟಾ ಪವರ್ ಕಂಪನಿ ಅರ್ಜಿ ವಾಪಸ್ ಪಡೆದಿದೆ . ಹಳ್ಳಿ, ತಾಲೂಕು, ಜಿಲ್ಲಾ ಮಟ್ಟದಲ್ಲೂ ಭಾರೀ ವಿರೋಧ ವ್ಯಕ್ತ ಮಾಡಿ ಹೋರಾಟ ಆಗಿತ್ತು. ಸ್ವಯಂ ಪ್ರೇರಿತವಾಗಿ ಟಾಟಾ ಪವರ್ ಕಂಪನಿ ಪ್ರಸ್ತಾವನೆ ಹಿಂಪಡೆದಿರುವುದು ಸ್ವಾಗತಾರ್ಹ ಎಂದವರು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಡೇ ಕೇರ್ ಕ್ರೌರ್ಯ; ಸಿಸಿಟಿವಿ ದೃಶ್ಯ ಆಧರಿಸಿ ಪ್ರಮುಖ ಆರೋಪಿ ವಿಜಯಲಕ್ಷ್ಮೀ ಸೇರಿ ಇಬ್ಬರು ಅರೆಸ್ಟ್!

ಆತಂಕ ಬೇಡ ಎಂದಿದ್ದ ಸಚಿವ ಕೆ.ಜೆ. ಜಾರ್ಜ್​​

ವಿದ್ಯುತ್ ಖಾಸಗೀಕರಣ ವಿಚಾರ ಸಂಬಂಧ 3 ದಿನಗಳ ಹಿಂದಷ್ಟೇ ಪ್ರತಿಕ್ರಿಯಿಸಿದ್ದ ಇಂಧನ ಸಚಿವ ಕೆ.ಜೆ. ಜಾರ್ಜ್​​, ಈ ವಿಚಾರದಲ್ಲಿ ಆತಂಕ ಬೇಡ ಎಂದಿದ್ದರು. 2003ರಲ್ಲಿ ಬಿಜೆಪಿ ಅಧಿಕಾರ ಇದ್ದಾಗ ಖಾಸಗೀಕರಣಕ್ಕೆ ತಿದ್ದುಪಡಿ ತಂದರು. ಆದ್ರೆ ಇಷ್ಟರೊಳಗೆ ಕರ್ನಾಟಕದಲ್ಲಿ ಅದು ಆಗಿಲ್ಲ. ಈಗ ಮತ್ತೆ ವಿದ್ಯುತ್ ಖಾಸಗೀಕರಣಕ್ಕೆ KERCಗೆ ಪ್ರಸ್ತಾವನೆ ‌ಸಲ್ಲಿಸಿದಾರೆ. ಈ ಸಂಬಂಧ ಆಕ್ಷೇಪಣೆ ಸಲ್ಲಿಕೆಗೆ ನಮ್ಮ ನಿಗಮಗಳಿಗೆ ಹೇಳಿದ್ದೇವೆ. ಫೈನಲ್ ಆರ್ಡರ್ ಬಂದಮೇಲೆ ನಾವು ಏನ್ ಮಾಡ್ಬೇಕು ಯೋಚಿಸುತ್ತೇವೆ ಎಂದು ಹೇಳಿದ್ದರು. ಈ ನಡುವೆಯೇ ಈಗ ಟಾಟಾ ಪವರ್​​ ಕಂಪನಿ ತನ್ನ ಪ್ರಸ್ತಾವನೆಯನ್ನೇ ಹಿಂಪಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us