ಇನ್ನು ಮುಂದೆ ಪೊಲೀಸ್ ಇಲಾಖೆಯಲ್ಲಿ ಮಂಗಳಮುಖಿಯರೂ ಕೆಲಸ ಮಾಡಬಹುದು; ಕೆಎಸ್‌ಪಿಯಿಂದ ಅರ್ಜಿ ಸಲ್ಲಿಸಲು ಆಹ್ವಾನ

ಇನ್ನು ಮುಂದೆ ಪೊಲೀಸ್ ಇಲಾಖೆಯಲ್ಲಿ ಮಂಗಳಮುಖಿಯರೂ ಕೆಲಸ ಮಾಡಬಹುದು. ಪೊಲೀಸ್ ಇಲಾಖೆಯ ಎಲ್ಲಾ ವಿಭಾಗದಲ್ಲಿಯೂ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಇಲಾಖೆಯ ಪ್ರತಿ ವಿಭಾಗದಲ್ಲಿಯೂ ಮಂಗಳಮುಖಿಯರಿಗೆ ಶೇ.1ರಷ್ಟು ಮೀಸಲಾತಿ ನೀಡಲಾಗಿದೆ.

ಇನ್ನು ಮುಂದೆ ಪೊಲೀಸ್ ಇಲಾಖೆಯಲ್ಲಿ ಮಂಗಳಮುಖಿಯರೂ ಕೆಲಸ ಮಾಡಬಹುದು; ಕೆಎಸ್‌ಪಿಯಿಂದ ಅರ್ಜಿ ಸಲ್ಲಿಸಲು ಆಹ್ವಾನ
ಕರ್ನಾಟಕ ಪೊಲೀಸ್ ಇಲಾಖೆ
Follow us
| Updated By: preethi shettigar

Updated on:Dec 21, 2021 | 12:39 PM

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ(KSP) ಬದಲಾವಣೆಯ ಮಾರ್ಗದಲ್ಲಿ ಮೊದಲ ಹೆಜ್ಜೆ ಇಟ್ಟಿದೆ. ಆ ಪ್ರಕಾರ ಕೆಎಸ್‌ಆರ್‌ಪಿ ಮತ್ತು ಭಾರತೀಯ ರಿಸರ್ವ್ ಬೆಟಾಲಿಯನ್ (IRB)ನ ವಿಶೇಷ ಮೀಸಲು ಉಪ-ನಿರೀಕ್ಷಕರ ಹುದ್ದೆಗೆ ಪುರುಷ, ಮಹಿಳೆ ಮತ್ತು ಮಂಗಳಮುಖಿಯರಿಗೆ ಅರ್ಜಿ ಸಲ್ಲಿಸಲು ಆಹ್ವಾನ ನೀಡಿದೆ. ಇದರಿಂದ ಕರ್ನಾಟಕದಲ್ಲಿ ಮಂಗಳಮುಖಿಯರಿಗೆ ಸುವರ್ಣ ಅವಕಾಶ ದೊರೆತಂತಾಗಿದೆ. ಇನ್ನು ಮುಂದೆ ಪೊಲೀಸ್ ಇಲಾಖೆಯಲ್ಲಿ ಮಂಗಳಮುಖಿಯರೂ (Transgender) ಕೆಲಸ ಮಾಡಬಹುದು. ಪೊಲೀಸ್ ಇಲಾಖೆಯ ಎಲ್ಲಾ ವಿಭಾಗದಲ್ಲಿಯೂ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಇಲಾಖೆಯ ಪ್ರತಿ ವಿಭಾಗದಲ್ಲಿಯೂ ಮಂಗಳಮುಖಿಯರಿಗೆ ಶೇ.1ರಷ್ಟು ಮೀಸಲಾತಿ ನೀಡಲಾಗಿದೆ.

ಈಗಗಲೇ ಅರ್ಜಿ ಸಲ್ಲಿಸಲು ಕರ್ನಾಟಕ ಪೊಲೀಸ್​ ಇಲಾಖೆ ಅವಕಾಶ ಕಲ್ಪಿಸಿಕೊಟ್ಟಿದೆ. ಸೋಮವಾರ ಹೊರಡಿಸಿದ ಅಧಿಸೂಚನೆಯಂತೆ ಕರ್ನಾಟಕದಲ್ಲಿ ಮುಂಗಳಮುಖಿ ಸಮುದಾಯದಿಂದ ಅರ್ಜಿಗಳನ್ನು ಕರೆಯಲಾಗಿದ್ದು, ಆ ಮೂಲಕ ಈ ವ್ಯವಸ್ಥೆ ಕಲ್ಪಿಸಿದ ಮೊದಲ ಸರ್ಕಾರಿ ಇಲಾಖೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಟಿವಿ9 ಗೆ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಸ್ಪಷ್ಟನೆ ನೀಡಿದ್ದಾರೆ.

ಸೋಮವಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ ಮಂಗಳಮುಖಿಯರು ಇನ್ನು ಮುಂದೆ ಪೊಲೀಸ್​ ಇಲಾಖೆಗೆ ಅರ್ಜಿ ಸಲ್ಲಿಸಬಹುದು. ಸದ್ಯ 70 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಜನವರಿ 18 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಈ ವರ್ಷದ ಜುಲೈನಲ್ಲಿ ಕರ್ನಾಟಕ ಹೈಕೋರ್ಟ್‌ ಮಹತ್ವದ ನಿರ್ದೇಶನ ನೀಡಿದ್ದು, ಅದರಂತೆ ಮಂಗಳಮುಖಿಯರಿಗೆ ಸಾರ್ವಜನಿಕ ಉದ್ಯೋಗಗಳನ್ನು ಕಾಯ್ದಿರಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ.

ವಿಶೇಷ ಮೀಸಲು ಉಪ ನಿರೀಕ್ಷಕರ 2,467 ಹುದ್ದೆಗಳು ಖಾಲಿಯಾದ ನಂತರ, ನಗರ ಮೂಲದ ಎನ್‌ಜಿಒ ಮತ್ತು ಇನ್ನಿತರ ಮಾನವ ಹಕ್ಕು ಸಂಘಟನೆಗಳು ಹಾಗೂ ಹಿರಿಯ ವಕೀಲರಾದ ಬಿಟಿ ವೆಂಕಟೇಶ್ ಜತೆಗೂಡಿ, ಸಾಮಾಜಿಕ ಕಾರ್ಯಕರ್ತೆ ನಿಶಾ ಗೂಳೂರ್ ಅವರು ಕಳೆದ ವರ್ಷ ಅಂದರೆ 2020 ರಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಿದ್ದರು. ಈ ಮನವಿಗೆ ಒಗೊಟ್ಟ ಹೈಕೋರ್ಟ್​ ಮಂಗಳಮುಖಿಯರ ಸಾರ್ವಜನಿಕ ಉದ್ಯೋಗಕ್ಕೆ ಅವಕಾಶ ಕಲ್ಪಿಸಿದೆ.

ಜುಲೈ 2021 ರಲ್ಲಿ ಹೈಕೋರ್ಟ್ ಎಲ್ಲಾ ವರ್ಗಗಳಲ್ಲಿ ಮಂಗಳಮುಖಿಯರು ಶೇಕಡಾ ಒಂದರಷ್ಟು ಮೀಸಲಾತಿಯನ್ನು ಹೊಂದಲು ಅನುಮತಿಸಿ ಆದೇಶಿಸಿತು. ಇದು ಭಾರತದಲ್ಲಿನ ಮೊದಲ ಹೆಜ್ಜೆಯಾಗಿದ್ದು, ಸರ್ಕಾರವು ತನ್ನ ನೇಮಕಾತಿಯಲ್ಲಿ ಮಂಗಳಮುಖಿಯರಿಗೆ ಸಮಾನ ಸ್ಥಾನಮಾನವನ್ನು ಘೋಷಿಸಿದೆ. ಮೀಸಲಾತಿ ನೀಡುವಂತೆ ನ್ಯಾಯಾಲಯ ನೀಡಿರುವ ನಿರ್ದೇಶನ ಶ್ಲಾಘನೀಯ ಎಂದು ವಕೀಲರಾದ ಬಿಟಿ ವೆಂಕಟೇಶ್ ಹೇಳಿದ್ದಾರೆ.

ಇನ್ನಿತರ ಸಂಘಟನೆಗಳು ನ್ಯಾಯಾಲಯದ ನಿರ್ದೇಶನದಂತೆ ತಿರ್ಮಾನ ತೆಗೆದುಕೊಳ್ಳಬೇಕು ಮತ್ತು ಸಂವಿಧಾನದಲ್ಲಿ ಕಲ್ಪಿಸಿರುವಂತೆ ಎಲ್ಲರಿಗೂ ಜೀವನೋಪಾಯದ ಅವಕಾಶಗಳನ್ನು ಒದಗಿಸಬೇಕು. ಎಲ್ಲಾ ಅರ್ಹ ಮಂಗಳಮುಖಿ ಸಮುದಾಯದ ಸದಸ್ಯರು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಈ ಕುರಿತು ಯಾವುದೇ ಸಹಾಯ ಅಥವಾ ಸ್ಪಷ್ಟೀಕರಣಕ್ಕಾಗಿ ದೂರವಾಣಿ ಸಂಖ್ಯೆ 9972903460 ಗೆ ಕರೆ ಮಾಡಬಹುದು ಎಂದು ಸಂಗಮ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಉಮಾದೇವಿ ತಿಳಿಸಿದ್ದಾರೆ.

ಇದನ್ನೂ ಓದಿ: ಪೊಲೀಸರ ಲಾಠಿ ಚಾರ್ಚ್ ಖಂಡಿಸಿ ಪಿಎಫ್​ಐ ಕಾರ್ಯಕರ್ತರ ಪ್ರತಿಭಟನೆ: ಮಂಗಳೂರಿನಲ್ಲಿ ಬಿಗಿ ಪೊಲೀಸ್​ ಭದ್ರತೆ

ಕರ್ನಾಟಕ ಪೊಲೀಸ್​ ಗರುಡಾ ಪಡೆಯಲ್ಲಿ ಮಹಿಳೆಯರ ಹವಾ: ಟೀಂಗೆ ಎಂಟ್ರಿಕೊಟ್ಟ ಲೇಡಿ ಕಮಾಂಡೋಸ್​!

Published On - 10:49 am, Tue, 21 December 21