ಕರ್ನಾಟಕದಲ್ಲಿ ಮಳೆ ಅಭಾವ: 31 ಜಿಲ್ಲೆಗಳ ಪೈಕಿ 25 ಕಡೆ ಶೇ.20ಕ್ಕಿಂತ ಹೆಚ್ಚು ಕೊರತೆ

Monsoon Crisis: ರಾಜ್ಯದಲ್ಲಿ ಮುಂಗಾರು ಮಳೆ ಕೊರತೆ ತೀವ್ರಗೊಂಡಿದ್ದು, ಒಟ್ಟು 31 ಜಿಲ್ಲೆಗಳ ಪೈಕಿ 25 ಜಿಲ್ಲೆಗಳಲ್ಲಿ ಶೇ.20ಕ್ಕಿಂತ ಹೆಚ್ಚು ಮಳೆ ಅಭಾವ ಸೃಷ್ಟಿಯಾಗಿದೆ. ವಿಜಯನಗರ ಜಿಲ್ಲೆಯಲ್ಲಿ ಅತ್ಯಧಿಕ ಶೇ.60ರಷ್ಟು ಕೊರತೆ ದಾಖಲಾಗಿದೆ. ರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (KSNDMC) ಮಾಹಿತಿ ಪ್ರಕಾರ, ಸಾಮಾನ್ಯವಾಗಿ ಜೂನ್‌ಗೆ ಹೋಲಿಸಿದರೆ ಜುಲೈನಲ್ಲಿ ಮಳೆ ಪ್ರಮಾಣ ಕಡಿಮೆಯಿರುತ್ತದೆ. ಆದರೆ ಈ ವರ್ಷ ಜುಲೈನಲ್ಲಿ ಜೂನ್‌ಗಿಂತ ಹೆಚ್ಚು ಮಳೆಯ ದಿನಗಳು ದಾಖಲಾಗಿವೆ.

ಕರ್ನಾಟಕದಲ್ಲಿ ಮಳೆ ಅಭಾವ: 31 ಜಿಲ್ಲೆಗಳ ಪೈಕಿ 25 ಕಡೆ ಶೇ.20ಕ್ಕಿಂತ ಹೆಚ್ಚು ಕೊರತೆ
ಸಾಂದರ್ಭಿಕ ಚಿತ್ರ
Image Credit source: PTI

Updated on: Jul 24, 2026 | 6:19 PM

ಮುಖ್ಯಾಂಶಗಳು

  • ರಾಜ್ಯದಲ್ಲಿ ಮುಂದುವರಿದ ಮುಂಗಾರು ಮಳೆ ಅಭಾವ
  • ಕೇವಲ 6 ಜಿಲ್ಲೆಗಳಲ್ಲಿ ಮಾತ್ರ ಸಾಮಾನ್ಯ ಪ್ರಮಾಣದ ಮಳೆ
  • ಉಳಿದ 25 ಜಿಲ್ಲೆಗಳಲ್ಲಿ ಶೇ.20ಕ್ಕಿಂತ ಹೆಚ್ಚು ಮಳೆ ಕೊರತೆ

ಬೆಂಗಳೂರು, ಜುಲೈ 24: ರಾಜ್ಯದಲ್ಲಿ ಮುಂಗಾರು ಮಳೆ ಕೊರತೆ ಮುಂದುವರಿದಿದ್ದು, 31 ಜಿಲ್ಲೆಗಳ ಪೈಕಿ ಕೇವಲ 6 ಜಿಲ್ಲೆಗಳಲ್ಲಿ ಮಾತ್ರ ಸಾಮಾನ್ಯ ಪ್ರಮಾಣದ ಮಳೆ ದಾಖಲಾಗಿದೆ. ಉಳಿದ 25 ಜಿಲ್ಲೆಗಳಲ್ಲಿ ಶೇ.20ಕ್ಕಿಂತ ಹೆಚ್ಚು ಮಳೆ ಕೊರತೆ ಕಂಡುಬಂದಿದೆ. ವಿಜಯನಗರ ಜಿಲ್ಲೆಯಲ್ಲಿ ಶೇ.60ಕ್ಕೂ ಅಧಿಕ ಮಳೆ ಕೊರತೆ ದಾಖಲಾಗಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಅಭಾವ ಎದುರಾಗಿದೆ. ಮೈಸೂರು ಮತ್ತು ಹಾವೇರಿ ಜಿಲ್ಲೆಗಳು ಸಹ ಸಾಮಾನ್ಯ ಪ್ರಮಾಣದ ಅರ್ಧಕ್ಕಿಂತಲೂ ಕಡಿಮೆ ಮಳೆ ಪಡೆದಿವೆ. ಎರಡೂ ಜಿಲ್ಲೆಗಳಲ್ಲಿ ತಲಾ ಶೇ.-57 ಮತ್ತು ಶೇ. -50ರಷ್ಟು ಕಡಿಮೆ ಮಳೆಯಾಗಿದೆ.

ರಾಜ್ಯದಲ್ಲಿ ಶೇ.35ರಷ್ಟು ಮಳೆ ಕೊರತೆ

ಜುಲೈ 22ರವರೆಗೆ ರಾಜ್ಯದಲ್ಲಿ 253 ಮಿ.ಮೀ. ಮಳೆ ದಾಖಲಾಗಿದ್ದು, ಸಾಮಾನ್ಯವಾಗಿ ಈ ಅವಧಿಯಲ್ಲಿ 392 ಮಿ.ಮೀ. ಮಳೆ ಸುರಿಯಬೇಕಿತ್ತು. ಇದರಿಂದ ರಾಜ್ಯದಲ್ಲಿ ಒಟ್ಟಾರೆ ಶೇ.35ರಷ್ಟು ಮಳೆ ಕೊರತೆ ಉಂಟಾಗಿದೆ. ಜೂನ್ ಅಂತ್ಯಕ್ಕೆ ಈ ಕೊರತೆ ಶೇ.42 ಇದ್ದು, ಇದೀಗ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಸಾಮಾನ್ಯ ಮಳೆಯಿಂದ ಶೇ.20ರವರೆಗೆ ಹೆಚ್ಚು ಅಥವಾ ಕಡಿಮೆ ದಾಖಲಾಗಿದ್ದರೆ ಅದನ್ನು ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ. ಶೇ.20ಕ್ಕಿಂತ ಹೆಚ್ಚು ಕೊರತೆ ಇದ್ದರೆ ‘ಕಡಿಮೆ’ ಹಾಗೂ ಶೇ.60ಕ್ಕಿಂತ ಹೆಚ್ಚು ಕೊರತೆ ಇದ್ದರೆ ‘ಅತ್ಯಂತ ಕಡಿಮೆ’ ಎಂದು ವರ್ಗೀಕರಿಸಲಾಗುತ್ತದೆ.

ಇದನ್ನೂ ಓದಿ: ಮಳೆರಾಯನ ಮುನಿಸು: KRS ನೀರಿನ ಮಟ್ಟ ಕುಸಿತ; ಮಂಡ್ಯದಲ್ಲಿ ಕೃಷಿ ಚಟುವಟಿಕೆ ಸಂಪೂರ್ಣ ಸ್ತಬ್ಧ

ಮಳೆ ಕೊರತೆಗೆ ಕಾರಣವೇನು?

ಹವಾಮಾನ ತಜ್ಞರ ಪ್ರಕಾರ, ಅರಬ್ಬಿ ಸಮುದ್ರದ ಮೇಲೆ ದುರ್ಬಲ ಗಾಳಿ,ಬಂಗಾಳ ಕೊಲ್ಲಿಯಲ್ಲಿ ಮುಂಗಾರು ವಾಯುಭಾರ ಕುಸಿತ (Monsoon Depressions) ರೂಪುಗೊಳ್ಳದಿರುವುದು ರಾಜ್ಯದಲ್ಲಿ ಮಳೆ ಕೊರತೆಗೆ ಪ್ರಮುಖ ಕಾರಣಗಳಾಗಿವೆ.

ಜುಲೈನಲ್ಲಿ ಮಳೆ ಹೆಚ್ಚಾದರೂ ಕೊರತೆ ಮುಂದುವರಿಕೆ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (KSNDMC) ಮಾಹಿತಿ ಪ್ರಕಾರ, ಸಾಮಾನ್ಯವಾಗಿ ಜೂನ್‌ಗೆ ಹೋಲಿಸಿದರೆ ಜುಲೈನಲ್ಲಿ ಮಳೆ ಪ್ರಮಾಣ ಕಡಿಮೆಯಿರುತ್ತದೆ. ಆದರೆ ಈ ವರ್ಷ ಜುಲೈನಲ್ಲಿ ಜೂನ್‌ಗಿಂತ ಹೆಚ್ಚು ಮಳೆಯ ದಿನಗಳು ದಾಖಲಾಗಿವೆ. ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜೂನ್‌ಗೆ ಹೋಲಿಸಿದರೆ ಜುಲೈನಲ್ಲಿ ಸುಮಾರು ಎರಡು ಪಟ್ಟು ಹೆಚ್ಚು ಮಳೆಯಾಗಿದೆ. ಆದರೂ ಈ ಜಿಲ್ಲೆಗಳು ತಮ್ಮ ಸಾಮಾನ್ಯ ಮಳೆಯ ಪ್ರಮಾಣವನ್ನು ತಲುಪಿಲ್ಲ.

ಬಾಗಲಕೋಟೆಯಲ್ಲಿ ಮಾತ್ರ ಸಾಮಾನ್ಯಕ್ಕಿಂತ ಹೆಚ್ಚು ಮಳೆ

ಜುಲೈ 22ರವರೆಗೆ ಬಾಗಲಕೋಟೆ ಜಿಲ್ಲೆಯಲ್ಲಿ ಮಾತ್ರ ಸಾಮಾನ್ಯಕ್ಕಿಂತ ಹೆಚ್ಚು ಮಳೆ ದಾಖಲಾಗಿದೆ. ಜಿಲ್ಲೆಯಲ್ಲಿ ಸಾಮಾನ್ಯ 128 ಮಿ.ಮೀ. ಬದಲು 134 ಮಿ.ಮೀ. ಮಳೆ ಸುರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:14 pm, Fri, 24 July 26

Follow Us