ಡಿಕೆ ಶಿವಕುಮಾರ್ ಪ್ರಮಾಣ ವಚನ ಹಿನ್ನೆಲೆ 90 ಸಾವಿರ ಮನೆಗಳಿಗೆ ‘ಲಾಡು’ ಭಾಗ್ಯ; ಶಾಸಕ ಶ್ರೀನಿವಾಸ್ ಭರ್ಜರಿ ತಯಾರಿ!
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಲಿರುವ ಸಂಭ್ರಮದಲ್ಲಿ, ನೆಲಮಂಗಲ ವಿಧಾನಸಭಾ ಕ್ಷೇತ್ರವೇ ಹಬ್ಬದಂತೆ ಸಜ್ಜಾಗಿದೆ. ಕ್ಷೇತ್ರದ ಶಾಸಕ ಶ್ರೀನಿವಾಸ್ ಅವರ ನೇತೃತ್ವದಲ್ಲಿ 85 ಸಾವಿರಕ್ಕೂ ಹೆಚ್ಚು ಮನೆಗಳಿಗೆ ತಲಾ 750 ಗ್ರಾಂ ಉಚಿತ ಲಾಡು ವಿತರಿಸಲಾಗುತ್ತಿದೆ. ಈ ಐತಿಹಾಸಿಕ ಕ್ಷಣವನ್ನು ಸ್ಮರಣೀಯವಾಗಿಸಲು 300 ಬಾಣಸಿಗರು ಹಗಲಿರುಳು ಶ್ರಮಿಸಿ 10 ಲಕ್ಷ ಲಾಡು ತಯಾರಿಸುತ್ತಿದ್ದಾರೆ, ಇದು ಡಿ.ಕೆ. ಶಿವಕುಮಾರ್ ಅವರ ಸಿಎಂ ಪಟ್ಟಕ್ಕೆ ನೆಲಮಂಗಲದ ಜನರ ಸಂತಸದ ಪ್ರತೀಕವಾಗಿದೆ.

ನೆಲಮಂಗಲ, ಜೂ.2: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಪ್ರಮಾಣ ವಚನ ಸ್ವೀಕರಿಸಲಿರುವ ಐತಿಹಾಸಿಕ ಕ್ಷಣಕ್ಕೆ ಇಡೀ ನೆಲಮಂಗಲ ವಿಧಾನಸಭಾ ಕ್ಷೇತ್ರವೇ ವಧುವಿನಂತೆ ಸಿಂಗಾರಗೊಳ್ಳುತ್ತಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಕ್ಷೇತ್ರದ ಪ್ರತಿ ಹಳ್ಳಿಯ ಪ್ರತಿ ಮನೆಯಲ್ಲೂ ಸಂಭ್ರಮ ಮನೆ ಮಾಡಿದ್ದು, ಈ ಐತಿಹಾಸಿಕ ಸಂತಸವನ್ನು ಹಂಚಿಕೊಳ್ಳಲು ಸ್ಥಳೀಯ ಶಾಸಕರಾದ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಅಭೂತಪೂರ್ವ ಸಿದ್ಧತೆ ಕೈಗೊಳ್ಳಲಾಗಿದೆ.
ಡಿಕೆಶಿ ಅವರು ಮುಖ್ಯಮಂತ್ರಿಯಾಗುತ್ತಿರುವ ಈ ಅದ್ಭುತ ಕ್ಷಣ ನೆನಪಿನಲ್ಲಿರಬೇಕು ಎಂದು ನೆಲಮಂಗಲ ತಾಲೂಕಿನಾದ್ಯಂತ ಇರುವ ಸುಮಾರು 85 ಸಾವಿರದಿಂದ 90 ಸಾವಿರ ಮನೆಗಳಿಗೆ ತಲಾ ಮುಕ್ಕಾಲು ಕೆಜಿಯಷ್ಟು (750 ಗ್ರಾಂ) ಉನ್ನತ ಗುಣಮಟ್ಟದ ಲಾಡುಗಳ ಸಿಹಿ ಬಾಕ್ಸ್ ಅನ್ನು ಉಚಿತವಾಗಿ ವಿತರಿಸಲು ಶಾಸಕರು ನಿರ್ಧರಿಸಿದ್ದಾರೆ. ನಾಳೆ ಬೆಳಗ್ಗೆಯಿಂದಲೇ ಈ ಬೃಹತ್ ಸಿಹಿ ಹಂಚಿಕೆ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ಸಿಗಲಿದೆ.
300 ಬಾಣಸಿಗರಿಂದ ಹಗಲಿರುಳು ಸಿದ್ಧತೆ; 10 ಲಕ್ಷ ಲಾಡು ತಯಾರಿ!:
ಈ ಸಿಹಿ ವಿತರಣಾ ಕಾರ್ಯಕ್ಕಾಗಿ ನೆಲಮಂಗಲದಲ್ಲಿ ಬೃಹತ್ ಅಡುಗೆ ಶಾಲೆ ನಿರ್ಮಾಣವಾಗಿದ್ದು, ಸುಮಾರು 250 ರಿಂದ 300 ನುರಿತ ಬಾಣಸಿಗರು (Chefs) ಹಗಲಿರುಳು ಎನ್ನದೆ ಶ್ರಮಿಸುತ್ತಿದ್ದಾರೆ. ಇಡೀ ಕ್ಷೇತ್ರಕ್ಕೆ ವಿತರಿಸಲು ಒಟ್ಟಾರೆ 9 ರಿಂದ 10 ಲಕ್ಷ ಲಾಡುಗಳ ಅಗತ್ಯವಿದ್ದು, ಸದ್ಯ ಭರದಲ್ಲಿ ಲಾಡು ತಯಾರಿಕೆ ನಡೆಯುತ್ತಿದೆ.
ಇಲ್ಲಿದೆ ನೋಡಿ ವಿಡಿಯೋ:
ಶಾಸಕರ ಮಾರ್ಗದರ್ಶನದಲ್ಲಿ ಕ್ಷೇತ್ರದ ಪ್ರಮುಖ ಮುಖಂಡರು ಹಾಗೂ ನೂರಾರು ಸಂಖ್ಯೆಯ ಉತ್ಸಾಹಿ ಕಾರ್ಯಕರ್ತರು ಪ್ರತಿ ಗ್ರಾಮದ ಮನೆ ಮನೆಗೆ ತೆರಳಿ ಈ ಸಿಹಿ ಪೊಟ್ಟಣಗಳನ್ನು ಹಸ್ತಾಂತರಿಸಲಿದ್ದಾರೆ. ಕ್ಷೇತ್ರದ ಕೊನೆಯ ಮನೆಗೂ ಸಿಹಿ ತಲುಪುವವರೆಗೂ ಈ ವಿತರಣಾ ಕಾರ್ಯಕ್ರಮವು ನಿರಂತರವಾಗಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಒಟ್ಟಿನಲ್ಲಿ ಡಿ.ಕೆ. ಶಿವಕುಮಾರ್ ಅವರ ಸಿಎಂ ಪಟ್ಟಾಭಿಷೇಕದ ಖುಷಿ ನೆಲಮಂಗಲದ ಜನರಲ್ಲಿ ನೆನಪಾಗಿರಲಿ ಎಂದು ಈ ಕೆಲಸವನ್ನು ಮಾಡುತ್ತಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




