ಬೆಂಗಳೂರಿಗೆ ನಿಫಾ ವೈರಸ್ ಭೀತಿ: ಅಂತ್ಯಸಂಸ್ಕಾರಕ್ಕೆ ಕೇರಳಕ್ಕೆ ತೆರಳಿದ್ದ ಸ್ನೇಹಿತರಿಂದ ಸೋಂಕು ಹರಡುವ ಆತಂಕ

ಕರ್ನಾಟಕ ರಾಜಧಾನಿ ಬೆಂಗಳೂರು ವೈರಸ್​ಗಳ ಹಬ್ ಆಗುತ್ತಿದೆ. ರಾಜ್ಯ, ದೇಶ, ವಿದೇಶಗಳಲ್ಲಿ ಕಾಣಿಸುವ ಚಿತ್ರವಿಚಿತ್ರ ವೈರಸ್ ಸೋಂಕುಗಳು ರಾಜಧಾನಿಯಲ್ಲಿ ಪತ್ತೆಯಾಗುತ್ತವೆ. ಕೇರಳದ ನಿಫಾ ವೈರಸ್ ಕೂಡ ಇದರಿಂದ ಹೊರತಾಗಿಲ್ಲ. ರಾಜ್ಯದಲ್ಲಿ ನಿಫಾ ವೈರಸ್ ಈವರೆಗೆ ಪತ್ತೆಯಾಗದಿದ್ದರೂ, ನಿಫಾ ಭೀತಿ ಕಾಲಿಟ್ಟಿದೆ. ಇದಕ್ಕೆಲ್ಲ ಕಾರಣ ಮೃತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಕೇರಳಕ್ಕೆ ತೆರಳಿದ್ದ ಯುವಕರು!

ಬೆಂಗಳೂರಿಗೆ ನಿಫಾ ವೈರಸ್ ಭೀತಿ: ಅಂತ್ಯಸಂಸ್ಕಾರಕ್ಕೆ ಕೇರಳಕ್ಕೆ ತೆರಳಿದ್ದ ಸ್ನೇಹಿತರಿಂದ ಸೋಂಕು ಹರಡುವ ಆತಂಕ
ಸಾಂದರ್ಭಿಕ ಚಿತ್ರImage Credit source: Getty Images
Follow us
| Updated By: ಗಣಪತಿ ಶರ್ಮ

Updated on: Sep 18, 2024 | 6:48 AM

ಬೆಂಗಳೂರು, ಸೆಪ್ಟೆಂಬರ್ 18: ಕೇರಳದಲ್ಲಿ ನಿಫಾ ವೈರಸ್​ಗೆ 23 ವರ್ಷದ ಯುವಕ ಬಲಿಯಾಗಿದ್ದಾನೆ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಸೈಕಾಲಜಿ ಓದುತ್ತಿದ್ದ ಯುವಕ ಕೇರಳದಲ್ಲಿ ನಿಫಾಗೆ ಬಲಿಯಾಗಿದ್ದು, ನಗರಕ್ಕೆ ನಿಫಾ ಟೆನ್ಷನ್ ಕಾಲಿಟ್ಟಿದೆ. ಬೆಂಗಳೂರಿನಿಂದ ಕೇರಳಕ್ಕೆ ತೆರಳಿದ್ದಾಗ ಯುವಕನಿಗೆ ನಿಫಾ ವೈರಸ್ ತಗುಲಿ, ಮೃತಪಟ್ಟಿದ್ದ. ಯುವಕನ ಸಾವಿನ ಬೆನ್ನಲ್ಲೇ ಕೇಂದ್ರ ಸರ್ಕಾರ ಹೈ ಅಲರ್ಟ್ ಆಗಿದೆ. ಕೇರಳ ಹಾಗೂ ವಿಶೇಷವಾಗಿ ಕರ್ನಾಟಕಕ್ಕೆ ಕಟ್ಟೆಚ್ಚರ ವಹಿಸಲು ಎಚ್ಚರಿಕೆ ನೀಡಿದೆ‌. ಈ ಮಧ್ಯೆ ನಿಫಾಗೆ ಬಲಿಯಾದ ಯುವಕನ ಅಂತ್ಯಸಂಸ್ಕಾರಕ್ಕೆ ಕೇರಳಕ್ಕೆ ತೆರಳಿದ್ದ 15 ಸ್ನೇಹಿತರು ಬೆಂಗಳೂರಿಗೆ ಆಪತ್ತು ತಂದಿದ್ದಾರೆ. ಮೃತ ಯುವಕನ ಪ್ರಾಥಮಿಕ ಸಂಪರ್ಕಿತರಾಗಿರುವ ಸ್ನೇಹಿತರ ಟ್ರ್ಯಾಕಿಂಗ್​​ಗೆ ಇಳಿದ ಆರೋಗ್ಯ ಇಲಾಖೆ ನಿಫಾ ಪರೀಕ್ಷೆಗೆ ಒಳಪಡಿಸಿಲಿದೆ.

ಸಪ್ಟೆಂಬರ್ 8 ರಂದು ಕೇರಳದ ಮಲಪ್ಪುರಂನಲ್ಲಿ ನಿಫಾಗೆ ಯುವಕ ಬಲಿಯಾಗಿದ್ದಾನೆ. ಅಂದೇ ಬೆಂಗಳೂರಿನಿಂದ ಆತನ 14 ಸ್ನೇಹಿತರು ಕೇರಳಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.‌ ಕೇಂದ್ರದ ಸೂಚನೆ ಬೆನ್ನಲ್ಲೇ ಅಲರ್ಟ್ ಆದ ಆರೋಗ್ಯ ಇಲಾಖೆ ಯುವಕರನ್ನು ಟ್ರ್ಯಾಕ್ ಮಾಡಿದೆ.

ಆರೋಗ್ಯ ಇಲಾಖೆ ಹೇಳಿದ್ದೇನು?

ಅಷ್ಟೂ ಜನ ಯುವಕರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಯುವಕರ ರಕ್ತ ಹಾಗೂ ಸೆರಂ ಸ್ಯಾಂಪಲ್ ಲ್ಯಾಬ್​ಗೆ ಕಳುಹಿಸಲಾಗಿದೆ.‌ ಅದರ ವರದಿ ಇನ್ನೆರಡು ದಿನಗಳಲ್ಲಿ ಹೊರಬೀಳುವ ಸಾಧ್ಯತೆ ಇದೆ. ನಿಫಾ ಗುಣಲಕ್ಷಣಗಳ ಬಗ್ಗೆ ಆರೋಗ್ಯ ಇಲಾಖೆ ವಿಶೇಷವಾಗಿ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ ಎಂದು ಇಲಾಖೆಯ ಆಯುಕ್ತ ಶಿವಕುಮಾರ್ ತಿಳಿಸಿದ್ದಾರೆ.

ಕೇರಳದಿಂದ ಬೆಂಗಳೂರಿಗೆ ಬರುವವರ ಮೇಲೆ ನಿಗಾ

ಕೇರಳದಿಂದ ಬೆಂಗಳೂರಿಗೆ ಬರುವವರ ಮೇಲೂ ಹದ್ದಿನ ಕಣ್ಣಿಡಲು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲ, ನಗರಕ್ಕೆ ಆತಂಕ ತಂದಿರುವ ಸ್ನೇಹಿತರ ಆರೋಗ್ಯದ ಬಗ್ಗೆ ಇಲಾಖೆ ಕಣ್ಣಿಟ್ಟಿದೆ. ಜ್ವರ, ಕೆಮ್ಮು, ತಲೆನೋವು, ವಾಂತಿ, ತಲೆತಿರುಗುವಿಕೆ, ಗಂಟಲು ನೋವು, ಅರೆ ನಿದ್ರಾವಸ್ಥೆ ಲಕ್ಷಣಗಳು ಕಾಣಿಸಿದರೆ ಐಸೊಲೇಷನ್ ಮಾಡಲು‌ ನಿರ್ಧರಿಸಿದೆ.

ಇದನ್ನೂ ಓದಿ: Nipah Virus: ಕೇರಳದಲ್ಲಿ ಮತ್ತೆ ನಿಫಾ ವೈರಸ್ ಭೀತಿ, ಬಾವಲಿಗಳಲ್ಲಿ ವೈರಸ್ ಪತ್ತೆ

ಸದ್ಯದ ಮಟ್ಟಿಗೆ ನಿಫಾ ವೈರಸ್ ಸೋಂಕಿ​​ಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಈ ಸೋಂಕನ್ನು ನಿಗ್ರಹಿಸಲು ಯಾವುದೇ ರೋಗ ನಿರೋಧಕ ಚುಚ್ಚು ಮದ್ದಿಲ್ಲ. ಝೂನೋಟಿಕ್ ವೈರಸ್ ಆಗಿರುವ ನಿಫಾ ಆರಂಭದಲ್ಲೇ ನಿಯಂತ್ರಣ ಮಾಡದಿದ್ದರೆ ಆಪತ್ತು ಕಟ್ಟಿಟ್ಟಬುತ್ತಿ ಎಂದಿದ್ದಾರೆ ತಜ್ಞರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ