ಕರ್ನಾಟಕ ಕಾಂಗ್ರೆಸ್ ಸರ್ಕಾರದ ‘ಬುಲ್ಡೋಜರ್ ರಾಜ್’ ನೀತಿಯಿಂದ ಬೀದಿಗೆ ಬಂದ ಮುಸ್ಲಿಂ ಕುಟುಂಬ: ಪಿಣರಾಯಿ ವಿಜಯನ್ ಆಕ್ರೋಶ

ಕೇರಳ ಸಿಎಂ ಪಿಣರಾಯಿ ವಿಜಯನ್ ಬೆಂಗಳೂರಿನಲ್ಲಿ ಮುಸ್ಲಿಂ ವಸತಿಗಳ ನೆಲಸಮವನ್ನು ಖಂಡಿಸಿದ್ದಾರೆ. ಕರ್ನಾಟಕ ಸರ್ಕಾರ ಉತ್ತರ ಪ್ರದೇಶದ 'ಬುಲ್ಡೋಜರ್ ನೀತಿ' ಅನುಸರಿಸುತ್ತಿದೆ ಎಂದು ಟೀಕಿಸಿದ್ದಾರೆ. ಫಕೀರ್ ಕಾಲೋನಿ, ವಸೀಮ್ ಲೇಔಟ್‌ನಲ್ಲಿ ನೋಟಿಸ್ ನೀಡದೆ ಮನೆ ತೆರವುಗೊಳಿಸಿದ್ದರಿಂದ ನೂರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಇದು ಸಂವಿಧಾನ ವಿರೋಧಿ ಕ್ರಮ ಎಂದಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಸರ್ಕಾರದ ‘ಬುಲ್ಡೋಜರ್ ರಾಜ್’ ನೀತಿಯಿಂದ ಬೀದಿಗೆ ಬಂದ ಮುಸ್ಲಿಂ ಕುಟುಂಬ: ಪಿಣರಾಯಿ ವಿಜಯನ್ ಆಕ್ರೋಶ
ಕೇರಳ ಸಿಎಂ ಪಿಣರಾಯಿ ವಿಜಯನ್

Updated on: Dec 27, 2025 | 9:24 AM

ಬೆಂಗಳೂರು, ಡಿ.27: ಕರ್ನಾಟಕದ ರಾಜ್ಯ ಸರ್ಕಾರಕ್ಕೂ ಉತ್ತರ ಪ್ರದೇಶದ ಗಾಳಿ ಬಿಸಿದೆ. ಅಲ್ಲಿನ ಬುಲ್ಡೋಜರ್ ನೀತಿಯನ್ನು ಇಲ್ಲೂ ತರುವ ಕೆಲಸ ನಡೆಯುತ್ತಿದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾಂಗ್ರೆಸ್​​​ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬೆಂಗಳೂರಿನ (Bengaluru) ಯಲಹಂಕದ ಕೋಗಿಲು ಗ್ರಾಮದ ಫಕೀರ್ ಕಾಲೋನಿ ಮತ್ತು ವಸೀಮ್ ಲೇಔಟ್‌ನಲ್ಲಿರುವ ಮುಸ್ಲಿಂ ವಸತಿಗಳನ್ನು ನೆಲಸಮ ಮಾಡಿರುವುದು ತುಂಬಾ ದುಃಖಕರ ವಿಚಾರ, ಅಲ್ಲಿ ಮುಸ್ಲಿಂ ಕುಟುಂಬಗಳು ಹಲವು ವರ್ಷಗಳಿಂದ ವಾಸಿಸುತ್ತಿದ್ದವು. ಇದೀಗ ಏಕಾಏಕಿ ಬಂದು ಮನೆಗಳನ್ನು ನೆಲಸಮ ಮಾಡಿದ್ರೆ ಅವರು ಎಲ್ಲಿಗೆ ಹೋಗಬೇಕು. ಈ ಚಳಿಯಲ್ಲಿ ಮಕ್ಕಳ, ಮಹಿಳೆಯರನ್ನು ಬೀದಿಗೆ ಹಾಕಿದ್ದಾರೆ ಎಂದು ಅವರು ಸೋಶಿಯಲ್​​ ಮೀಡಿಯಾದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಬೆಂಗಳೂರಿನ ಫಕೀರ್ ಕಾಲೋನಿ ಮತ್ತು ವಸೀಮ್ ಲೇಔಟ್‌ನಲ್ಲಿ ವರ್ಷಗಳಿಂದ ವಾಸಿಸುತ್ತಿದ್ದ ಮುಸ್ಲಿಂ ಕುಟುಂಬಗಳನ್ನು ಬೀದಿಗೆ ಹಾಕಿ,”ಬುಲ್ಡೋಜರ್ ರಾಜ್” ಕ್ರಮವನ್ನು ಕರ್ನಾಟಕ ಕಾಂಗ್ರೆಸ್​​ ಸರ್ಕಾರ ಅನುಸರಿಸುತ್ತಿದೆ” ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಕ್ಸ್​​​ನಲ್ಲಿ ಬರೆದುಕೊಂಡಿದ್ದಾರೆ.. ದುಃಖಕರ ವಿಚಾರವೆಂದರೆ ಸಂಘ ಪರಿವಾರದ ಅಲ್ಪಸಂಖ್ಯಾತ ವಿರೋಧಿ ರಾಜಕೀಯವನ್ನು ಈಗ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕೂಡ ಮಾಡುತ್ತಿದೆ. ಭಯ ಮತ್ತು ಕ್ರೂರತೆಯ ಬಲದ ಮೂಲಕ ಆಡಳಿತ ನಡೆಸುವಾಗ, ಸಾಂವಿಧಾನಿಕ ಮೌಲ್ಯಗಳು ಮತ್ತು ಮಾನವ ಘನತೆಯು ಮೊದಲ ಬಲಿಪಶುಗಳಾಗುತ್ತವೆ. ಈ ಮೋಸದ ಪ್ರವೃತ್ತಿಯನ್ನು ವಿರೋಧಿಸಲು ಮತ್ತು ಸೋಲಿಸಲು ಎಲ್ಲಾ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಶಕ್ತಿಗಳು ಒಟ್ಟಾಗಿ ಒಟ್ಟುಗೂಡಬೇಕು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಶೆಡ್‌, ಶೀಟ್‌ ಮನೆಗಳು ನೆಲಸಮ: ಸಿಡಿದೆದ್ದ ಸ್ಥಳೀಯರು

ಎಕ್ಸ್​​​​​ ಖಾತೆ ಪೋಸ್ಟ್​​ ಇಲ್ಲಿದೆ ನೋಡಿ:

150ಕ್ಕೂ ಹೆಚ್ಚು ಅಕ್ರಮ ಶೆಡ್‌, ಶೀಟ್‌ ಮನೆಗಳು ನೆಲಸಮ:

ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕೋಗಿಲು ಬಂಡೆ ಬಳಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಗೆ ಮೀಸಲಿಟ್ಟ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ 150ಕ್ಕೂ ಅಧಿಕ ಶೆಡ್‌ ಹಾಗೂ ಶೀಟ್‌ ಮನೆಗಳನ್ನು ಶನಿವಾರ ತೆರವುಗೊಳಿಸಲಾಗಿದೆ.ಕೋಗಿಲು ಬಳಿ ಇರುವ 14.36 ಎಕರೆ ಜಮೀನಿನಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯಿಂದ ಬಯೋ ಮೆಥನೈಸೇಶನ್ ಪ್ಲಾಂಟ್, ಅನಿಮಲ್ ರೆಂಡರಿಂಗ್, ಅನಿಮಲ್ ಇನ್ಸಿನರೇಷನ್, ತೆಂಗಿನ ಚಿಪ್ಪು ಸಂಸ್ಕರಣೆ ಮತ್ತು  ಸ್ಯಾನಿಟರಿ ತ್ಯಾಜ್ಯ ಸಂಸ್ಕರಣಾ ಸೌಲಭ್ಯಗಳನ್ನು ನಿರ್ಮಾಣ ಮಾಡಬೇಕು ಎಂಬ ಯೋಜನೆಯನ್ನು ಹಾಕಿತ್ತು. ಈ ಪ್ರದೇಶದಲ್ಲಿ ಸುಮಾರು 5 ಎಕರೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ 150 ಕ್ಕೂ ಹೆಚ್ಚು ಶೆಡ್, ಮನೆಗಳನ್ನು 9 ಟ್ರ್ಯಾಕ್ಟರ್, 9 ಜೆಸಿಬಿ ಯಂತ್ರ ಬಳಸಿ ನೆಲಸಮಗೊಳಿಸಲಾಗಿದೆ. ಇದೀಗ ಅಲ್ಲಿ ಸ್ಥಳೀಯರು ಸರ್ಕಾರದ ಈ ಕ್ರಮದ ವಿರುದ್ಧ ರೂಚ್ಚಿಗೆದ್ದು, ಪ್ರತಿಭಟನೆ ಮಾಡಿದ್ದಾರೆ. ಯಾವುದೇ ನೋಟಿಸ್​​ ನೀಡದೆ, ಏಕಾಏಕಿ ಬಂದು ಮನೆ ಕೆಡವಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:52 am, Sat, 27 December 25