ಬೆಡ್​ ಸಿಗದೇ ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಹಾಸ್ಪಿಟಲ್​ಗೆ ಶಿಫ್ಟ್; ಆದರೂ ಬದುಕುಳಿಯಲಿಲ್ಲ, ಮೃತದೇಹ ಪಡೆದುಕೊಳ್ಳಲು ಹಣ ಕಟ್ಟಿದ ಪೊಲೀಸ್

|

Updated on: May 02, 2023 | 2:33 PM

ಬೈಕ್ ಅಪಘಾತದಿಂದಾಗಿ ಗಾಯಗೊಂಡಿದ್ದ ವೃದ್ಧನಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಹಿನ್ನೆಲೆ ಮೃತಪಟ್ಟಿದ್ದು ಕುಟುಂಬಸ್ಥರು ನಿಮ್ಹಾನ್ಸ್​ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.

ಬೆಡ್​ ಸಿಗದೇ ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಹಾಸ್ಪಿಟಲ್​ಗೆ ಶಿಫ್ಟ್; ಆದರೂ ಬದುಕುಳಿಯಲಿಲ್ಲ, ಮೃತದೇಹ ಪಡೆದುಕೊಳ್ಳಲು ಹಣ ಕಟ್ಟಿದ ಪೊಲೀಸ್
ಮೃತದೇಹ ಪಡೆದುಕೊಳ್ಳಲು ಹಣ ಕಟ್ಟಿದ ಪೊಲೀಸ್ ಹಾಗೂ ಮೃತ ಗಣೇಶ್
Follow us on

ಬೆಂಗಳೂರು: ಬೈಕ್ ಡಿಕ್ಕಿ ಹೊಡೆದು ಆಸ್ಪತ್ರೆ ಸೇರಿದ್ದ ವೃದ್ಧ ಮೃತಪಟ್ಟಿದ್ದು ನಿಮ್ಹಾನ್ಸ್​ ವೈದ್ಯರ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಬಳ್ಳಾರಿ ಮೂಲದ ಗಣೇಶ್​(60) ಎಂಬುವವರು ನಿನ್ನೆ(ಮೇ 1) ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆದುಕೊಂಡು ಹೋಗುವಾಗ ಬೈಕ್​ ಡಿಕ್ಕಿಯಾಗಿ ಬೆಂಗಳೂರಿನ ಅಶೋಕ ಪಿಲ್ಲರ್​ ಬಳಿ ಅಸ್ವಸ್ಥರಾಗಿದ್ದರು. ಆದ್ರೆ ಬೆಡ್ ಇಲ್ಲ ಎಂಬ ಕಾರಣ ನೀಡಿದ ನಿಮ್ಹಾನ್ಸ್ ವೈದ್ಯರು ಚಿಕಿತ್ಸೆ ನಿರಾಕರಿಸಿದ್ದರು. ಆಗ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಿಸದೆ ಗಣೇಶ್ ಮೃತಪಟ್ಟಿದ್ದಾರೆ. ಹೀಗಾಗಿ ಕುಟುಂಬಸ್ಥರು ಕಣ್ಣೀರು ಹಾಕಿದ್ದು ನಿಮ್ಹಾನ್ಸ್ ಚಿಕಿತ್ಸೆ ನೀಡಿದ್ದರೆ ಗಣೇಶ್ ಬದುಕುಳಿಯುತ್ತಿದ್ದರು ಎಂದು ಆಕ್ರೋಶ ಹೊರ ಹಾಕಿದ್ದಾರೆ. ಘಟನೆಯಲ್ಲಿ ಬೈಕ್​ನಲ್ಲಿದ್ದ ಇಬ್ಬರು ಸವಾರರಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಅಪಘಾತ ಸಂಭವಿಸಿದ ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಣೇಶ್​ರನ್ನು ಆಸ್ಪತ್ರೆಗೆ ಸೇರಿಸಲು ‘108’ಗೆ ಕರೆ ಮಾಡಲಾಗಿದೆ. ಆದ್ರೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಎಷ್ಟೇ ಕರೆ ಮಾಡಿದರೂ ಏನೂ ಪ್ರಯೋಜನವಾಗಿಲ್ಲ. 2-3 ಗಂಟೆ ಕಾದರೂ ಅಪಘಾತ ಸ್ಥಳಕ್ಕೆ 108 ಌಂಬುಲೆನ್ಸ್​ ಬಂದಿಲ್ಲ. ಹೀಗಾಗಿ ಖಾಸಗಿ ಌಂಬುಲೆನ್ಸ್​ನಲ್ಲಿ ನಿಮ್ಹಾನ್ಸ್​ಗೆ ಕರೆದೊಯ್ಯಲಾಗಿತ್ತು. ಪರಿಸ್ಥಿತಿ ನೋಡಿ ಚಿಕಿತ್ಸೆ ನೀಡಬೇಕಿದ್ದವರು ನಿಮ್ಹಾನ್ಸ್​ ಆಸ್ಪತ್ರೆಯಲ್ಲಿ ಬೆಡ್​ ಖಾಲಿಯಿಲ್ಲವೆಂದು ಹೇಳಿ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ನಂತರ ಗಾಯಾಳು ಗಣೇಶ್​ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಗಣೇಶ್​ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಪ್ರಜ್ಞೆ ತಪ್ಪಿದ ಚಾಲಕ; 66 ಜನರನ್ನು ಉಳಿಸಿದ 7ನೇ ತರಗತಿಯ ಬಾಲಕನ ವಿಡಿಯೋ ವೈರಲ್

ಇನ್ನು ಆಸ್ಪತ್ರೆ ಬಿಲ್​ 12 ಸಾವಿರ ರೂಪಾಯಿ ಕಟ್ಟುವಂತೆ ಸಿಬ್ಬಂದಿ ತಿಳಿಸಿದ್ದು ಮೃತಪಟ್ಟ ವೃದ್ಧ ಗಣೇಶ್​ ಕುಟುಂಬದ ಬಳಿ ಹಣವಿಲ್ಲದೆ ಪರದಾಡಿದ್ದಾರೆ. ಹೀಗಾಗಿ ವಿಲ್ಸನ್​ಗಾರ್ಡನ್​ ಸಂಚಾರಿ ಠಾಣೆಯ ಸಿಬ್ಬಂದಿ ಪ್ರಸನ್ನಕುಮಾರ್ ಅವರು ಆಸ್ಪತ್ರೆ ಶುಲ್ಕ 12,000 ರೂ. ಪಾವತಿಸಿದ್ದಾರೆ. ವಿಲ್ಸನ್​ ಗಾರ್ಡನ್​ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ