ಮತ್ತೆ ಸದ್ದು ಮಾಡಿದ ಹಾಲಾಲ್​ ಕಟ್​ : ಹಲಾಲ್ ಕಟ್ ಮುಕ್ತ ದೀಪಾವಳಿ ಆಚರಿಸಲು ಪ್ರಮೋದ್ ಮುತಾಲಿಕ್ ಕರೆ

ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ದೀಪಾವಳಿ ಹಬ್ಬದ ಸಮಯದಲ್ಲಿ ಹಲಾಲ್ ಕಟ್​ ಮಾಂಸ​ ಖರೀದಿಸದಂತೆ ಕರೆ ನೀಡಿದ್ದಾರೆ.

ಮತ್ತೆ ಸದ್ದು ಮಾಡಿದ ಹಾಲಾಲ್​ ಕಟ್​ : ಹಲಾಲ್ ಕಟ್ ಮುಕ್ತ ದೀಪಾವಳಿ ಆಚರಿಸಲು ಪ್ರಮೋದ್ ಮುತಾಲಿಕ್ ಕರೆ
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್
Edited By: ವಿವೇಕ ಬಿರಾದಾರ

Updated on: Oct 14, 2022 | 4:39 PM

ಬೆಂಗಳೂರು: ಹಿಂದೂ (Hindu) ಸಂಘಟನೆಗಳು ಹಲಾಲ್ ಕಟ್ (Halal cut)​ ವಿರುದ್ಧ ಕ್ಯಾಂಪೇನ್ ಮತ್ತೆ ಪ್ರರಂಭಿಸಿವೆ. ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ದೀಪಾವಳಿ (Deepavali) ಹಬ್ಬದ ಸಮಯದಲ್ಲಿ ಹಲಾಲ್ ಕಟ್​ ಮಾಂಸ​ ಖರೀದಿಸದಂತೆ ಕರೆ ನೀಡಿದ್ದಾರೆ. ಯುಗಾದಿ ಮತ್ತು ದಸರಾ ಸಮಯದಲ್ಲಿ ಹಿಂದೂ ಸಂಘಟನೆಗಳು ಹಲಾಲ್ ಕಟ್​ ವಿರುದ್ಧ ಕ್ಯಾಂಪೇನ್ ಮಾಡಿದ್ದವು. ಈಗ ದೀಪಾವಳಿಯನ್ನು ಹಲಾಲ್ ಮುಕ್ತ ದೀಪಾವಳಿ ಆಚರಿಸಲು ಕರೆ ನೀಡಿದ್ದಾರೆ.

ಹಿಂದೂ ವ್ಯಾಪಾರಿಗಳಿಂದಲೇ ಹಬ್ಬಕ್ಕೆ ಬೇಕಾದ ಬಟ್ಟೆ, ಪಟಾಕಿ, ಪೂಜಾ ಸಾಮಾಗ್ರಿಗಳನ್ನು ಖರೀದಿಸಿ. ಮುಸ್ಲಿಂ ವ್ಯಾಪಾರಿಗಳ ಬಳಿ ವ್ಯಾಪಾರ ಮಾಡಬೇಡಿ. ಹಲಾಲ್ ಮಾಂಸ, ಉತ್ಪನ್ನಗಳ ಖರೀದಿಯಿಂದ ದೂರವಿರಿ. ಹಲಾಲ್ ಉತ್ಪನ್ನಗಳ ಮಾರಾಟದಿಂದ ಬಂದ ಹಣ ದೇಶದ ಭಯೋತ್ಪಾದನಾ ಚಟುವಟಿಕೆಗೆ ಬಳಕೆಯಾಗುತ್ತಿದೆ. ಹೀಗಾಗಿ ಮುಸ್ಲಿಮರ ಬಳಿ ವ್ಯಾಪಾರ ಮಾಡದಂತೆ ಪ್ರಮೋದ್ ಮುತಾಲಿಕ್ ಮನವಿ ಮಾಡಿದ್ದಾರೆ.

ದೇಶದ ಕಾನೂನು ಗೌರವಿಸದವರ ಬಳಿ ವ್ಯಾಪಾರ ಯಾಕೆ ಮಾಡಬೇಕು ? ಹಿಂದೂಗಳ ಹಬ್ಬ, ಭಾವನೆಗಳನ್ನು ವಿರೋಧಿಸುವವರ ಬಳಿ ನಾವ್ಯಾಕೆ ಖರೀದಿ ಮಾಡಬೇಕು ? ಮುಸ್ಲಿಂ ವ್ಯಾಪಾರಿಗಳಿಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ. ಹಂತ ಹಂತವಾಗಿ ನಮ್ಮ ಅಭಿಯಾನ ಯಶಸ್ವಿಯಾಗಲಿದೆ ಎಂದು ಟಿವಿ9ಗೆ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಪ್ರಮೋದ್ ಮುತಾಲಿಕ್ ವಿರುದ್ಧ ಮುಸ್ಲಿಂ ಮುಖಂಡ ಮೊಹಮ್ಮದ್ ಖಾಲೀದ್ ಕಿಡಿ

ಇಂತಹ ಅಭಿಯಾಗಳನ್ನು ಕಳೆದ ಒಂದು ವರ್ಷದಿಂದ ಮಾಡುತ್ತಾ ಬಂದಿದ್ದಾರೆ. ಆದರೆ ಯಾವುದೇ ಅಭಿಯಾನ ಈವರೆಗೂ ಯಶಸ್ವಿಯಾಗಿಲ್ಲ. ಶೇ.10 ರಷ್ಟು ಕೂಡ ಮುಸ್ಲಿಂ ವ್ಯಾಪಾರಿಗಳಿಗೆ ತೊಂದರೆ ಆಗಿಲ್ಲ. ಹಿಂದೂ ಮುಸ್ಲಿಂ ಅಂತ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಹಲಾಲ್ ಮುಕ್ತ ಕ್ಯಾಂಪೇನ್ ಕುರಿತಾಗಿ ಮುಸ್ಲಿಂ ಮುಖಂಡ ಮೊಹಮ್ಮದ್ ಖಾಲೀದ್, ಪ್ರಮೋದ್ ಮುತಾಲಿಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಮೋದ್ ಮುತಾಲಿಕ್ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಅಂತ ಹೀಗೆಲ್ಲ ಮಾಡುತ್ತಿದ್ದಾರೆ. ಎಮ್​​ಎಲ್​ಎ ಟಿಕೆಟ್​​ಗೋಸ್ಕರ ಮುತಾಲಿಕ್ ಇಂತಹ ಅಭಿಯಾನ ಮಾಡುತ್ತಿದ್ದಾರೆ. ಟಿಕೆಟ್ ಕೊಟ್ಟ ಮೇಲೆ ಪ್ರಮೋದ್ ಮುತಾಲಿಕ್ ಸುಮ್ಮನಾಗುತ್ತಾರೆ. ಇಲ್ಲಾಂದರೆ ಇಂತಹ ಅಭಿಯಾನಗಳನ್ನು ಹಿಂಗೇ ಮುಂದುವರಿಸಿಕೊಂಡು ಹೋಗುತ್ತಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಹಲಾಲ್ ವಿರುದ್ಧ ಎಷ್ಟೇ ಅಭಿಯಾನ ಮಾಡಿದರೂ ಸಮಸ್ಯೆ ಆಗಲ್ಲ. ಮುತಾಲಿಕ್ ಅಭಿಯಾನ ಬಹಳ ಹಾಸ್ಯಾಸ್ಪದವಾಗಿದೆ. ಹಿಂದೂ ಮುಸ್ಲಿಂಮರ ನಡುವೆ ದ್ವೇಷ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಅಭಿಯಾನದಿಂದ ದೇಶ ಒಡೆಯುವ ಕೆಲಸ ಮಾಡಬೇಡಿ ಎಂದು ಹೇಳಿದ್ದಾರೆ.

ಹಲಾಲ್ ಉತ್ಪನ್ನಗಳ ಮಾರಾಟದಿಂದ ಬಂದ ಹಣ ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಕೆಯಾಗಿತ್ತಿದೆ ಎಂಬ ವಿಚಾರಕ್ಕೆ ಮಾತನಾಡಿದ ಅವರು ಹಲಾಲ್​ಗೆ ಸರ್ಕಾರ ಅನುಮತಿ ನೀಡುತ್ತದೆ. ಹೀಗಿರುವಾಗ ಸುಮ್ಮನೆ ಸರ್ಕಾರ ಸರ್ಟಿಫಿಕೇಟ್ ಕೊಡುತ್ತಾ ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:37 pm, Fri, 14 October 22

Web contact

TV9 Kannada

Read More
Follow Us