ಪಾಕ್ ಅಧಿಕಾರಿಗಳ ಜೊತೆ ರಾಮ್ ಮಾಧವ್ ಗೌಪ್ಯಸಭೆ ಹೇಳಿಕೆ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್​ಗೆ ಲೀಗಲ್ ನೋಟಿಸ್​

ಪಾಕ್ ಅಧಿಕಾರಿಗಳ ಜೊತೆ ಬಿಜೆಪಿ ನಾಯಕ ರಾಮ್ ಮಾಧವ್ ಗೌಪ್ಯ ಸಭೆ ನಡೆಸಿದ್ದಾರೆ ಎಂದು ಆರೋಪಿಸಿದ್ದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರಿಗೆ ಬಿಎನ್‌ಎಸ್ ಸೆಕ್ಷನ್ 356ರ ಅಡಿಯಲ್ಲಿ ಲೀಗಲ್ ನೋಟಿಸ್ ಕಳುಹಿಸಲಾಗಿದೆ. ಕೊಲಂಬೋ ಹಾಗೂ ಲಂಡನ್​ನಲ್ಲಿ 4 ಸಭೆಗಳನ್ನು ಮಾಡಿದ್ದಾರೆ. ​​ಗೌಪ್ಯ ಸಭೆಯಲ್ಲಿ ಏನು ಮಾತಾಡಿದ್ದಾರೆಂಬ ಬಗ್ಗೆ ಅವರು ಸ್ಪಷ್ಟ ಪಡಿಸಬೇಕು ಎಂದು ಹರಿಪ್ರಸಾದ್​​ ಆಗ್ರಹಿಸಿದ್ದರು.

ಪಾಕ್ ಅಧಿಕಾರಿಗಳ ಜೊತೆ ರಾಮ್ ಮಾಧವ್ ಗೌಪ್ಯಸಭೆ ಹೇಳಿಕೆ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್​ಗೆ ಲೀಗಲ್ ನೋಟಿಸ್​
ಬಿ.ಕೆ.ಹರಿಪ್ರಸಾದ್​​
Image Credit source: Tv9 Kannada
Edited By:

Updated on: Jul 06, 2026 | 3:40 PM

ಮುಖ್ಯಾಂಶಗಳು

  • ರಾಮ್ ಮಾಧವ್ ಹೆಸರಿಗೆ ಕಳಂಕ ತರಲು ಯತ್ನ ಆರೋಪ
  • ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್​​ಗೆ ಲೀಗಲ್​​ ನೋಟಿಸ್​​
  • ರಾಮ್ ಮಾಧವ್​ಗೆ ಕ್ಷಮೆ ಕೇಳಬೇಕೆಂದು ನೋಟಿಸ್​ನಲ್ಲಿ ಉಲ್ಲೇಖ

ಬೆಂಗಳೂರು, ಜುಲೈ 06: ಪಾಕ್ ಅಧಿಕಾರಿಗಳ ಜೊತೆ ರಾಮ್ ಮಾಧವ್ ಗೌಪ್ಯಸಭೆ ನಡೆಸಿದ್ದಾರೆ ಎಂದು ಆರೋಪಿಸಿದ್ದ ಕೆಪಿಸಿಸಿ (KPCC) ಅಧ್ಯಕ್ಷ ಬಿ.ಕೆ.ಹರಿಪ್ರಸಾದ್​ಗೆ (B K Hariprasad) ಲೀಗಲ್ ನೋಟಿಸ್​ ನೀಡಲಾಗಿದೆ. ರಾಮ್ ಮಾಧವ್ (Ram Madhav) ಹೆಸರಿಗೆ ಕಳಂಕಗೊಳಿಸಲು ಪ್ರಯತ್ನಿಸಿರುವುದಲ್ಲದೆ ಅವರ ಇಮೇಜ್ ಮತ್ತು ಖ್ಯಾತಿಯನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಲಾಗಿದೆ ಎಂದು ಆರೋಪಿಸಿ ಬಿಎನ್​ಎಸ್​ ಸೆಕ್ಷನ್ 356ರ ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಅಲ್ಲದೆ, ಹರಿಪ್ರಸಾದ್​​ ರಾಮ್ ಮಾಧವ್​ಗೆ ಕ್ಷಮೆ ಕೇಳಬೇಕೆಂದು ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ.

ಬಿ.ಕೆ. ಹರಿಪ್ರಸಾದ್​ ಏನು ಹೇಳಿದ್ದರು?

GBA ಚುನಾವಣಾ ಬಿಜೆಪಿ ಉಸ್ತುವಾರಿ ರಾಮ್ ಮಾಧವ್ ಪಾಕ್ ಅಧಿಕಾರಿಗಳ ಜೊತೆ ಗೌಪ್ಯಸಭೆ ನಡೆಸಿದ್ದಾರೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದರು. ಕೊಲಂಬೋ ಹಾಗೂ ಲಂಡನ್​ನಲ್ಲಿ 4 ಸಭೆಗಳನ್ನು ಮಾಡಿದ್ದಾರೆ. ​​ಹಿಲ್ಟನ್ ಹೋಟೆಲ್​ನಲ್ಲಿ ರಾಮ್ ಮಾಧವ್ ಸಭೆ ನಡೆಸಿದ್ದಾರೆ. ಪಾಕ್​​ ISI ಮಾಜಿ ಮೇಜರ್ ಜನರಲ್ ಜೊತೆ ರಹಸ್ಯ ಮೀಟಿಂಗ್​​ ನಡೆಸಿದ್ದು, ಗೌಪ್ಯ ಸಭೆಯಲ್ಲಿ ಏನು ಮಾತಾಡಿದ್ದಾರೆಂದು ಸ್ಪಷ್ಟ ಪಡಿಸಬೇಕು ಎಂದು ಹರಿಪ್ರಸಾದ್​​ ಆಗ್ರಹಿಸಿದ್ದರು. ಪಾಕ್ ಜೊತೆ ಚರ್ಚಿಸುವಂತೆ RSS​​ ಮುಖ್ಯಸ್ಥ ಮೋಹನ್​​ ಭಾಗವತ್ ಹೇಳಿದ್ದಾರೆ ಅಂತಲೂ ದೂರಿದ್ದರು.

ಇದನ್ನೂ ಓದಿ: ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್

ಆಪರೇಷನ್ ಸಿಂಧೂರ್ ಆಗಿ ಕೆಲ ತಿಂಗಳುಗಳು ಆಗಿಲ್ಲ. ಆಗಲೇ ಲಂಡನ್​​​ಗೆ ಹೋಗಿ ರಾಮ್ ಮಾಧವ್​ 4 ಸಭೆ ನಡೆಸಿದ್ದಾರೆ. ನಾನು ಬಿಜೆಪಿ ನಾಯಕ ರಾಮ್ ಮಾಧವ್​​​​​​ಗೆ ಕೇಳುತ್ತೇನೆ, ನೀವು ಬೆಂಗಳೂರಿಗೆ ಬರುವಾಗ ಇದಕ್ಕೆ ಉತ್ತರ ಕೊಡಬೇಕು. ರಹಸ್ಯ ಸಭೆ ನಡೆಸಲು ನಿಮಗೆ ಯಾರು ಅಧಿಕಾರ ಕೊಟ್ಟಿದ್ದಾರೆ? ವಿದೇಶಾಂಗ ಸಚಿವಾಲಯ ಸಭೆ ಮಾಡಬೇಕು. ಇವರು ವಿದೇಶಾಂಗ ಸಚಿವಾಲಯದಲ್ಲಿ ಮಂತ್ರಿ ಕೂಡ ಅಲ್ಲ.
ಎಂಎಲ್ಎ ಅಲ್ಲ, ಎಂಪಿ ಅಲ್ಲ, ಕೇವಲ ಆರ್‌ಎಸ್‌ಎಸ್ ಪ್ರಚಾರಕ. ಹೀಗಿರುವಾಗ ಇವರಿಗೆ ಸಭೆ ಮಾಡೋಕೆ ಅಧಿಕಾರ ಕೊಟ್ಟರು ಯಾರು ಎಂದು ಬಹಿರಂಗಪಡಿಸಲಿ ಎಂದು ಹರಿಪ್ರಸಾದ್​​ ಹೇಳಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:33 pm, Mon, 6 July 26

Follow Us