ಮೋದಿ ಬೆಂಗಳೂರು ಭೇಟಿ ವೇಳೆ ಜಿಲೆಟಿನ್ ಪತ್ತೆ ಪ್ರಕರಣದ ಅಸಲಿ ಕಾರಣ ಕೊನೆಗೂ ಬಯಲು!

ಬೆಂಗಳೂರಿನ ಆರ್ಟ್ ಆಫ್ ಲೀವಿಂಗ್ ಆಶ್ರಮದ ಬಳಿ ಪ್ರಧಾನಿ ಮೋದಿ ಭೇಟಿ ನೀಡಿದ್ದ ಸಂದರ್ಭ ಜಿಲೆಟಿನ್ ಪತ್ತೆಯಾದ ಪ್ರಕರಣಕ್ಕೆ ದ್ವೇಷವೇ ಕಾರಣ ಎಂಬುದು ತಿಳಿದುಬಂದಿದೆ. ಆಶ್ರಮದ ಮೇಲಿನ ದ್ವೇಷದಿಂದ ಕೃತ್ಯ ಎಸಗಲಾಗಿದೆ. ಪ್ರಧಾನಿ ಮೋದಿ ಭೇಟಿ ತಡೆಯಲು ಆಶ್ರಮದ ವಿರೋಧಿಗಳು ಹೂಡಿದ್ದ ತಂತ್ರ ಅದಾಗಿತ್ತು ಎಂಬುದನ್ನು ದಕ್ಷಿಣ ವಲಯ ಪೊಲೀಸರು ಭೇದಿಸಿದ್ದಾರೆ.

ಮೋದಿ ಬೆಂಗಳೂರು ಭೇಟಿ ವೇಳೆ ಜಿಲೆಟಿನ್ ಪತ್ತೆ ಪ್ರಕರಣದ ಅಸಲಿ ಕಾರಣ ಕೊನೆಗೂ ಬಯಲು!
ಜಿಲೆಟಿನ್ ಪತ್ತೆ ಪ್ರಕರಣ
Image Credit source: tv9

Updated on: May 16, 2026 | 6:35 AM

ಬೆಂಗಳೂರು, ಮೇ 16: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಬೆಂಗಳೂರು (Bengaluru) ಭೇಟಿಯ ವೇಳೆ ಆರ್ಟ್ ಆಫ್ ಲೀವಿಂಗ್ (Art of Living) ಆಶ್ರಮದ ಸಮೀಪ ಜಿಲೆಟಿನ್ ಕಡ್ಡಿಗಳು ಪತ್ತೆಯಾದ ಪ್ರಕರಣದ ಅಸಲಿ ಕಾರಣ ಕೊನೆಗೂ ತನಿಖೆಯಲ್ಲಿ ಬಯಲಾಗಿದೆ. ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಈ ಪ್ರಕರಣವು ಯಾವುದೇ ಪ್ರಮುಖ ಉಗ್ರ ಸಂಘಟನೆಯ ಕೃತ್ಯವಲ್ಲ, ಬದಲಿಗೆ ಆಶ್ರಮದ ಮೇಲಿನ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದಿರುವ ಸಂಚು ಎಂಬ ಪ್ರಾಥಮಿಕ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಮುಖ್ಯಾಂಶಗಳು

  • ಪ್ರಧಾನಿ ಮೋದಿ ಅವರ ಭೇಟಿಯನ್ನು ರದ್ದುಗೊಳಿಸಿ, ಆಶ್ರಮಕ್ಕೆ ಭದ್ರತಾ ಭೀತಿ ಸೃಷ್ಟಿಸುವುದೇ ಜಿಲೆಟಿನ್ ಇಟ್ಟವರ ಮುಖ್ಯ ಉದ್ದೇಶವಾಗಿತ್ತು.
  • ಪತ್ತೆಯಾದ ಜಿಲೆಟಿನ್ ಬಾಕ್ಸ್‌ನಲ್ಲಿ ಡಿಟೋನೇಟರ್ ಇರಲಿಲ್ಲ
  • ಆಶ್ರಮದ ವಿರೋಧಿಗಳೇ ಸಿಸಿಟಿವಿ ಕ್ಯಾಮೆರಾಗಳಿಗೆ ಸಿಗದಂತೆ ಜಿಲೆಟಿನ್ ಇಟ್ಟು ಹೋಗಿರುವ ಶಂಕೆ.

ಘಟನೆಯ ವಿವರ

ಮೇ 10 ರಂದು ಆರ್ಟ್ ಆಫ್ ಲೀವಿಂಗ್ ಸಂಸ್ಥೆಯ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಜನ್ಮದಿನೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆಶ್ರಮಕ್ಕೆ ಆಗಮಿಸಿದ್ದರು. ಆದರೆ ಪ್ರಧಾನಿ ಭೇಟಿಯ ಕೆಲವೇ ಗಂಟೆಗಳ ಮುನ್ನ ಆಶ್ರಮದ ಸಮೀಪ ಜಿಲೆಟಿನ್ ಪತ್ತೆಯಾಗಿದ್ದು ಇಡೀ ಪೊಲೀಸ್ ಇಲಾಖೆಯ ಭದ್ರತೆಯನ್ನೇ ಪ್ರಶ್ನಿಸುವಂತೆ ಮಾಡಿತ್ತು. ವಿಧಿವಿಜ್ಞಾನ ಪ್ರಯೋಗಾಲಯದ ಪರಿಶೀಲನೆ ವೇಳೆ, ಒಂದು ವೇಳೆ ಈ ಜಿಲೆಟಿನ್‌ಗೆ ಬೆಂಕಿ ತಗುಲಿದ್ದರೂ ಇದು ಸ್ಫೋಟಗೊಳ್ಳುತ್ತಿರಲಿಲ್ಲ ಎಂದು ತಿಳಿದುಬಂದಿದೆ. ರವಿಶಂಕರ್ ಗುರೂಜಿ ಅವರ ಪ್ರಭಾವವನ್ನು ಕುಗ್ಗಿಸಲು ಮತ್ತು ಪ್ರಧಾನಿ ಆಶ್ರಮಕ್ಕೆ ಬರದಂತೆ ತಡೆಯಲು ಈ ಸಂಚು ರೂಪಿಸಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ಪೊಲೀಸರಿಗೆ ತಿಳಿದುಬಂದಿದೆ.

ಯಾವುದೇ ಸಿಸಿಟಿವಿ ಕ್ಯಾಮೆರಾಗಳಲ್ಲಿ ದೃಶ್ಯಾವಳಿಗಳು ದಾಖಲಾಗದ ಅತ್ಯಂತ ಸುರಕ್ಷಿತವಾದ ಜಾಗವನ್ನು ಆಯ್ದುಕೊಂಡು, ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 7 ಗಂಟೆಯ ಅವಧಿಯಲ್ಲಿ ಈ ಜಿಲೆಟಿನ್ ಇರಿಸಲಾಗಿತ್ತು. ಪ್ರಸ್ತುತ ಬೆಂಗಳೂರು ದಕ್ಷಿಣ ವಲಯ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಮೊಬೈಲ್ ಟವರ್ ಲೋಕೇಶನ್ (Tower Location) ಮತ್ತು ತಾಂತ್ರಿಕ ವಿಶ್ಲೇಷಣೆಯ ಮೂಲಕ ಆರೋಪಿಗಳ ಸುಳಿವು ಪತ್ತೆಹಚ್ಚಿದ್ದಾರೆ. ಪ್ರಧಾನಿ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us