ಇನ್​ಸ್ಪೆಕ್ಟರ್ ಶಂಕರ್ ನಾಯಕ್ ವಿರುದ್ಧದ ಪ್ರಕರಣ ಸಿಸಿಬಿಗೆ ವರ್ಗಾವಣೆ, ದಾಖಲಾಯ್ತು ಮತ್ತೊಂದು ಪ್ರಕರಣ

| Updated By: Rakesh Nayak Manchi

Updated on: Nov 26, 2023 | 9:38 AM

ವಂಚನೆ ಪ್ರಕರಣದಲ್ಲಿ ಜಪ್ತಿ ಮಾಡಲಾಗಿದ್ದ ಹಣವನ್ನು ಸ್ವತಂಕ್ಕೆ ಬಳಿಕೆ ಮಾಡಿದ್ದ ಇನ್​ಸ್ಟಪೆಕ್ಟರ್​ ಶಂಕರ್ ನಾಯಕ್ ವಿರುದ್ಧ 2022 ಅಕ್ಟೋಬರ್ 12 ರಂದು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಈ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಈ ನಡುವೆ, ಶಂಕರ್ ವಿರುದ್ಧ ಮತ್ತೊಂದು ವಂಚನೆ ಪ್ರಕರಣ ದಾಖಲಾಗಿದೆ.

ಇನ್​ಸ್ಪೆಕ್ಟರ್ ಶಂಕರ್ ನಾಯಕ್ ವಿರುದ್ಧದ ಪ್ರಕರಣ ಸಿಸಿಬಿಗೆ ವರ್ಗಾವಣೆ, ದಾಖಲಾಯ್ತು ಮತ್ತೊಂದು ಪ್ರಕರಣ
ಇನ್​ಸ್ಪೆಕ್ಟರ್ ಶಂಕರ್ ನಾಯಕ್
Follow us on

ಬೆಂಗಳೂರು, ನ.26: ವಂಚನೆ (Cheating) ಪ್ರಕರಣದಲ್ಲಿ ಜಪ್ತಿ ಮಾಡಲಾಗಿದ್ದ ಹಣವನ್ನು ಸ್ವತಂಕ್ಕೆ ಬಳಿಕೆ ಮಾಡಿದ್ದ ಇನ್​ಸ್ಪೆಕ್ಟರ್​ ಶಂಕರ್ ನಾಯಕ್ ವಿರುದ್ಧ 2022 ಅಕ್ಟೋಬರ್ 12 ರಂದು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಆದೇಶ ಹೊರಡಿಸಿದ್ದಾರೆ.

ರಿಕವರಿ ಹಣ ದುರುಪಯೋಗ ಮಾಡಿಕೊಂಡ ಆರೋಪದಡಿ ಇನ್​ಸ್ಪೆಕ್ಟರ್ ವಿರುದ್ಧ ಎಸಿಪಿ ಭರತ್ ರೆಡ್ಡಿ ನೀಡಿದ ದೂರಿನ‌ ಆಧಾರದ ಮೇಲೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಏನಿದು ಪ್ರಕರಣ?

ಕಾರು ಚಾಲಕ ಸಂತೋಷ್ ಎಂಬುವರು ಮಾಲಿಕ ಹರೀಶ್​​ ಎಂಬವರಿಗೆ ವಂಚನೆ ಮಾಡಿ 75 ಲಕ್ಷ ಹಣ ಮತ್ತು ಕಾರು ಸಮೇತ ಪರಾರಿಯಾಗಿದ್ದನು. ಅಂದು ಠಾಣೆಯ ಇನ್​ಸ್ಪೆಕ್ಟರ್ ಆಗಿದ್ದ ಶಂಕರ್ ನಾಯಾಕ್​ ಅವರು ಪ್ರಕರಣದ ತನಿಖೆ ಕೈಗೊಂಡಿದ್ದರು. ನಂತರ ಅಕ್ಟೋಬರ್ 28 ರಂದು 75 ಲಕ್ಷ ಹಣವನ್ನು ವಶಕ್ಕೆ ಪಡೆಯಲಾಗಿದ್ದು, ಅರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದರು. ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸ್ಯಾಟ್ ಲೈಟ್ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ ಎಂದು ಎಫ್​​ಐಆರ್​ನಲ್ಲಿ ದಾಖಲಿಸಿದ್ದರು.

ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ 500 ಮುಖಬೆಲೆಯ 75 ಲಕ್ಷ ಹಣವನ್ನು ಪಿಎಫ್ ಹಾಕಿರುವುದಾಗಿ ನಮೂದು ಮಾಡಿ ಶಂಕರ್ ನಾಯಕ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಆದರೆ ಹಣವನ್ನು ನ್ಯಾಯಾಲಯಕ್ಕೆ ಅಥವಾ ಟ್ರಜರಿಗೆ ನೀಡಿರಲಿಲ್ಲ. ನಂತರ ದಿನಗಳಲ್ಲಿ ಪ್ರಕರಣ ಶಂಕರ್ ನಾಯಕ್​ರಿಂದ ಅಂದಿನ ಎಸಿಪಿ ಕೋದಂಡರಾಮ್​ಗೆ ವರ್ಗಾವಣೆ ಆಗಿತ್ತು.

ಎಸಿಪಿ ಕೋದಂಡರಾಮ್ ಅವರು ಪ್ರಕರಣದ ಫೈಲ್​ ಪಡೆದಿದ್ದರೂ ಸಹ ಹಣವನ್ನು ಸುಪರ್ದಿಗೆ ಪಡೆದಿರಲಿಲ್ಲ. ಏಕೆಂದರೇ ತನಿಖೆ ನಡೆಸುವ ಮೊದಲೇ ಕೆಂಗೇರಿ ಗೇಟ್​ನಿಂದ ವರ್ಗಾವಣೆ ಆಗಿದ್ದರು. ಹೀಗಾಗಿ ಪ್ರಕರಣವನ್ನು ಎಸಿಪಿ ಭರತ್ ರೆಡ್ಡಿ ಅವರಿಗೆ ನೀಡಲಾಗಿತ್ತು. ಭರತ್​ ರೆಡ್ಡಿ ಪ್ರಕರಣದ ತನಿಖೆ ನಡೆಸಿದಾಗ ಶಂಕರ್ ನಾಯಕ್ ಮಾಡಿದ್ದ ಕಳ್ಳ ಕೆಲಸ ಬಯಲಾಗಿತ್ತು.

ಇದನ್ನೂ ಓದಿ: ಉದ್ಯಮಿಗಳಿಗೆ ವಿವಿಧ ರೀತಿಯಲ್ಲಿ ವಂಚಿಸುವ ವಂಚಕ! ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೆಸರಲ್ಲೂ ವಂಚನೆ

ಶಂಕರ್ ನಾಯಕ್ 75 ಲಕ್ಷ ಹಣವನ್ನು ಠಾಣೆಯಲ್ಲಿ ಇಡದೆ ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದರು. ಅಲ್ಲದೆ 75 ರೂ. ನಗದು ಕಪ್ಪು ಹಣ ಎಂದು ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಐಟಿ ಇಲಾಖೆ ಅಧಿಕಾರಿಗಳು ತನಿಖೆಯಲ್ಲಿ ಪ್ರವೇಶಿಸುತ್ತಾರೆ.

ಹಣ ಬಿಡುಗಡೆ ಮಾಡುವಂತೆ ಐಟಿ ಇಲಾಖೆ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡುತ್ತಾರೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಿಂದ ಹಣವನ್ನು ವಶಕ್ಕೆ ಪಡೆಲು ಅನುಮತಿ ಪಡೆದುಕೊಳ್ಳುತ್ತಾರೆ. ಹೀಗಾಗಿ ಅಧಿಕಾರಿಗಳು 75 ಲಕ್ಷ ಹಣವನ್ನು ಪಡೆಯಲು ಠಾಣೆಗೆ ಬಂದಿದ್ದರು. ಐಟಿ ಅಧಿಕಾರಿಗಳು ಬರುವ ಮುನ್ನವೇ ಇನ್ಸಪೆಕ್ಟರ್ ಶಂಕರ್ ನಾಯಕ್ 75 ಲಕ್ಷ ಹಣವನ್ನು ಚೀಲದಲ್ಲಿ ತಂದು ಠಾಣೆಯ ಟ್ರೆಜರಿಯಲ್ಲಿ ಇಟ್ಟು ಪರಾರಿಯಾಗಿದ್ದರು.

ಐಟಿ ಅಧಿಕಾರಿಗಳು ಹಣ ಪರಿಶೀಲೀಸಿದಾಗ, ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ 75 ಲಕ್ಷದ ನೋಟುಗಳೇ ಬೇರೆಯಾಗಿದ್ದವು. ಅಧಿಕಾರಿಗಳು ವಶಕ್ಕೆ ಪಡೆದ ಹಣದ ನೋಟುಗಳೇ ಬೇರೆಯಾಗಿವೆ. ಶಕರ್ ನಾಯಕ್ 500 ಮುಖಬೆಲೆಯ ನೋಟುಗಳನ್ನು ವಶಕ್ಕೆ ಪಡೆದಿದ್ದರು. ಆದರೆ ಐಟಿ ಅಧಿಕಾರಿಗಳು ಠಾಣೆಯಲ್ಲಿ ವಶಕ್ಕೆ ಪಡೆದಿದ್ದು 100, 200, 500, 2000 ಮುಖ ಬೆಲೆಯ 75 ಲಕ್ಷ ರೂಪಾಯಿಗಳು.

ಇದರಿಂದ ಅನುಮಾನಗೊಂಡ ಅಧಿಕಾರಿಗಳು ಠಾಣೆಯ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳನ್ನು ನೋಡಿದಾಗ ಶಂಕರ್ ನಾಯಕ್ ಚೀಲದಲ್ಲಿ ಹಣ ತಂದು ಇಟ್ಟು ಹೋಗಿರುವುದು ಬಯಲಾಗಿದೆ. ನಂತರ ಐಟಿ ಅಧಿಕಾರಿಗಳು ಇದು ಪಿಎಫ್ ಹಾಕಿದ್ದ ಹಣ ಅಲ್ಲ ಎಂದು ವರದಿ ನೀಡಿದ್ದಾರೆ. ಪ್ರಕರಣದ ಸಂಪೂರ್ಣ ತನಿಖೆ ನಡೆಸಿದಾಗ ಅಸಲಿ ಸತ್ಯ ಬಯಲಾಗಿದೆ.

20 ಲಕ್ಷದ ಡೀಲ್ ಕುದುರಿಸಿದ್ದ ಇನ್​ಸ್ಪೆಕ್ಟರ್

ಕಾರು ಚಾಲಕ ಹಣ ಪಡೆದು ಪರಾರಿಯಾಗಿದ್ದು ಹೊಸಕೋಟೆ ಬಳಿ. ಆದರೆ ಇನ್ಸಪೆಕ್ಟರ್ ಶಂಕರ್ ನಾಯಕ್ ಬ್ಯಾಟರಾಯನಪುರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ದೂರು ದಾಖಲಿಸಿಕೊಂಡಿದ್ದರು. ಅಲ್ಲದೆ ಪ್ರಕರಣ ದಾಖಲು ಮಾಡದೇ ಹಣವನ್ನು ರಿಕವರಿ ಮಾಡಿಕೊಡುತ್ತೇನೆ. 75 ಲಕ್ಷ ವಸೂಲಿ ಮಾಡಿ ಕೊಟ್ಟರೇ 20 ಲಕ್ಷ ತನಗೆ ನೀಡಬೇಕೆಂದು ಮಾಲಿಕ ಹರೀಶ್​​ ಜೊತೆ ಇನ್ಸಪೆಕ್ಟರ್ ಶಂಕರ್ ನಾಯಕ್ ಒಪ್ಪಂದ ಮಾಡಿಕೊಂಡಿದ್ದರು.

ಆದರೆ, ಹರೀಶ್ ಅವರ ಕಾರು ಚಾಲಕ ಸಂತೋಷ್ ಇನ್​ಸ್ಟಪೆಕ್ಟರ್ ಜೊತೆ ಡೀಲ್ ಮಾಡಿಕೊಂಡು ಹಣದ ಸಹಿತ ಎಸ್ಕೇಪ್ ಆಗಿದ್ದನು. ಸಂತೋಷ್ ಬಳಿ 75 ಲಕ್ಷ ಬದಲಾಗಿ 40 ಲಕ್ಷ ಮಾತ್ರ ಸಿಕ್ಕಿದೆ. 40 ಲಕ್ಷದಲ್ಲಿ ತನಗೆ 20 ಲಕ್ಷ ಕೊಡುವಂತೆ ಹರೀಶ್​ಗೆ ಬೇಡಿಕೆ ಇಟ್ಟಿದ್ದಾರೆ. ಈ ವಿಚಾರ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಶಂಕರ್ ತರಾತುರಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಅದರಂತೆ ಹರೀಶ್​ ಕಡೆಯವ ಎಂದು ಜಾನ್​ ಎಂಬಾತನಿಂದ ದೂರು ಪಡೆಯಲಾಗಿತ್ತು. ಜಾನ್ ಕಡೆಯಿಂದ ಹರೀಶ್ ಸಹಿಯನ್ನು ನಕಲಿ ಮಾಡಿಸಿ ಕೇಸ್ ದಾಖಲು ಮಾಡಲಾಗಿತ್ತು. ಬೇರೆಡೆ ನಡೆದಿದ್ದ ಕೃತ್ಯಕ್ಕೆ ಇಲ್ಲೇ ನಡೆದಿದೆ ಎಂದು ನಮೂದು ಮಾಡಲಾಗಿತ್ತು.

ಶಂಕರ್ ನಾಯಕ್ ವಿರುದ್ಧ ಮತ್ತೊಂದು ಆರೋಪ

ಶಂಕರ್ ನಾಯ್ಕ್ ವಿರುದ್ಧ ಮತ್ತೊಂದು ವಂಚನೆ ಆರೋಪ ಕೇಳಿಬಂದಿದೆ. ಕೇಂದ್ರ ವಲಯದ ಐಜಿಪಿ ರವಿಕಾಂತೇಗೌಡ ಅವರಿಗೆ ಶಂಕರ್ ನಾಯಕ್ ವಿರುದ್ಧ ಯುವರಾಜಸ್ವಾಮಿ ಎಂಬವರ ಪತ್ನಿ ದೂರು ನೀಡಿದ್ದಾರೆ.

ಯುವರಾಜಸ್ವಾಮಿ ಈ ಹಿಂದೆ ಸಿಸಿಬಿ ಪೊಲೀಸರಿಂದ ವಂಚನೆ ಕೇಸ್​ನಲ್ಲಿ ಬಂಧನವಾಗಿದ್ದ ಆರೋಪಿಯಾಗಿದ್ದನು. ಲೋನ್ ಕೊಡಿಸುವುದಾಗಿ ಮನೆಯ ದಾಖಲೆ ಪಡೆದು ಇನ್​ಸ್ಪೆಕ್ಟರ್ ಮರಳಿ ಕೊಡದೆ ತೊಂದರೆ ಕೊಡುತ್ತಿದ್ದಾರೆಂದು ದೂರು ಯುವರಾಜಸ್ವಾಮಿ ಪತ್ನಿ ಪ್ರೇಮಾ ಅವರು ದೂರು ನೀಡಿದ್ದಾರೆ.

ಅಷ್ಟೇ ಅಲ್ಲದೇ 5 ಕೋಟಿ ಸಾಲದ ಮುಂಗಡ ಪತ್ರಕ್ಕೂ ಸಹಿ ಹಾಕಿಸಿಕೊಂಡಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ರಾಮನಗರ ಎಸ್​ಪಿ ಕಾರ್ತಿಕ್ ರೆಡ್ಡಿಗೆ ವರದಿ ನೀಡುವಂತೆ ಸೂಚನೆ ರವಿಕಾಂತೇಗೌಡ ಅವರು ಸೂಚನೆ ನೀಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ