ಬೆಂಗಳೂರು, (ಫೆಬ್ರವರಿ 13): ಬಿಎಂಆರ್ಸಿಎಲ್ ಟಿಕೆಟ್ ದರ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಪ್ರಯಾಣಿಕರು ನಮ್ಮ ಮೆಟ್ರೋಗೆ ಸೆಡ್ಡು ಹೊಡೆದಿದ್ದಾರೆ. ಹೌದು…ಟಿಕೆಟ್ ದರವನ್ನು ಏರಿಕೆ ಮಾಡಿದ್ದರಿಂದ ಆಕ್ರೋಶಗೊಂಡಿರುವ ಪ್ರಯಾಣಿಕರು, ಮೆಟ್ರೋದತ್ತ ಸುಳಿಯುತ್ತಿಲ್ಲ. ಮೆಟ್ರೋಗೆ ನೀಡುವ ಹಣಕ್ಕಿಂತ ಆಟೋ, ಬೈಕ್ ಬೆಸ್ಟ್ ಎನ್ನುತ್ತಿದ್ದಾರೆ. ಹೀಗಾಗಿ ಟಿಕೆಟ್ ದರ ಏರಿಕೆಯಾದ ಬೆನ್ನಲ್ಲೇ ಮೆಟ್ರೋನಲ್ಲಿ ಪ್ರಯಾಣಿಸುವವರ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತವಾಗಿದೆ. ಪ್ರತಿದಿನ ಮೆಟ್ರೋದಲ್ಲಿ 8 ರಿಂದ 9 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಆದ್ರೆ, ಇದೀಗ ದರ ಏರಿಕೆಯಾದ ಮೇಲೆ ಪ್ರಯಾಣಿಕರ ಸಂಖ್ಯೆ 35% ರಿಂದ 40% ರಷ್ಟು ಕಡಿಮೆಯಾಗಿದೆ.
ಸಮಯ ಉಳಿತಾಯದಿಂದ ಮಧ್ಯಮ ವರ್ಗದ ಜನರು ಕೆಲಸಕ್ಕೆ ಹೋಗಲು ಕಾರು, ಬೈಕ್ ಬಿಟ್ಟು ನಮ್ಮ ಮೆಟ್ರೋವನ್ನೇ ಅವಲಂಬಿಸಿದ್ದರು. ಆದ್ರೆ, ಟಿಕೆಟ್ ದರ ಏರಿಕೆಯಿಂದಾಗಿ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಪ್ರತಿದಿನ ಮೆಟ್ರೋದಲ್ಲಿ 8 ರಿಂದ 9 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಆದ್ರೆ ದರ ಏರಿಕೆ ಆದ ಮೇಲೆ ಪ್ರತಿದಿನ 6 ರಿಂದ 7 ಲಕ್ಷ ಪ್ರಯಾಣಿಕರು ಮಾತ್ರ ಸಂಚಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಯಾಣಿಕರ ಸಂಖ್ಯೆ ಕುಂಠಿತವಾಗುತ್ತಿದ್ದಂತೆಯೇ ಸಹಜವಾಗಿ ಕಲೆಕ್ಷನ್ ಸಹ ಕಡಿಮೆಯಾಗಿದೆ. ದರ ಏರಿಕೆ ಮಾಡುವ ಮೊದಲು ಒಂದು ದಿನಕ್ಕೆ 2 ಕೋಟಿ ರೂಪಾಯಿಂದ 2.50 ಕೋಟಿ ರುಪಾಯಿ ಕಲೆಕ್ಷನ್ ಆಗುತ್ತಿತ್ತು. ದರ ಏರಿಕೆ ಬಳಿಕ ದಿನಕ್ಕೆ ಒಂದೂವರೆಯಿಂದ 2 ಕೋಟಿ ರೂ.ವರೆಗೆ ಮಾತ್ರ ಕಲೆಕ್ಷನ್ ಆಗುತ್ತಿದ್ಯಂತೆ. ಈ ಸೋಮವಾರದಿಂದ ಮೆಟ್ರೋ ಪ್ರಯಾಣಿಕರು ಮೆಟ್ರೋ ಬಿಟ್ಟು ತಮ್ಮ ಸ್ವಂತ ಕಾರು, ಬೈಕ್ ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಹೀಗಾಗಿ ಕಳೆದ ನಾಲ್ಕು ದಿನದಿಂದ ಬೆಂಗಳೂರು ನಗರದಲ್ಲಿ ವಿಪರೀತವಾಗಿ ಟ್ರಾಫಿಕ್ ಸಮಸ್ಯೆ ಸಹ ಹೆಚ್ಚಾಗಿದೆ.
ಈಗಾಗಲೇ ಮೆಟ್ರೋ ದರ ಏರಿಕೆಯನ್ನು ಜನರು ಖಂಡಿಸುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಪ್ರಯಾಣಿಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಬಿಎಂಆರ್ಸಿಎಲ್ 45% ರಿಂದ 50% ರಷ್ಟು ದರ ಏರಿಕೆ ಮಾಡಿದ್ದೇವೆ ಎಂದು ಹೇಳುತ್ತಿದೆ. ಆದ್ರೆ, ಏರಿಕೆಯಾಗಿರುವುದು 100% ರಷ್ಟು. ಅಂದ್ರೆ ಒನ್ ಟು ಡಬಲ್.
ರೈತರು, ಕನ್ನಡಪರ ಹೋರಾಟಗಾರರು,ಪ್ರಗತಿಪರ ಸಂಘಟನೆಗಳು ಮತ್ತು ಪ್ರಯಾಣಿಕರು ಸೇರಿದಂತೆ ಪ್ರಯಾಣಿಕರು ಬಿಎಂಆರ್ಸಿಎಲ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಮತ್ತೊಂದೆಡೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ.
ಮೆಟ್ರೋ ದರ ಏರಿಕೆ ಮಾಡುವುದು ನಮ್ಮ ಕೈನಲ್ಲಿ ಇಲ್ಲ ಎಂದು ಕಾಂಗ್ರೆಸ್ ನಾಯಕರು ಎನ್ಡಿಎ ನೇತೃತ್ವದ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದ್ದಾರೆ. ಮತ್ತೊಂದೆಡೆ ಬಿಜೆಪಿ ನಾಯಕರು ಸಹ ಇಲ್ಲ ರಾಜ್ಯ ಸರ್ಕಾರ ಸಲಹೆ ನೀಡಿದ್ದಕ್ಕೆ ಏರಿಕೆಯಾಗಿದೆ ಎಂದು ತಿರುಗೇಟು ನೀಡುತ್ತಿದ್ದಾರೆ. ಹೀಗೆ ಎರಡೂ ಪಕ್ಷಗಳ ನಾಯಕರ ಕೆಸರೆರಚಾಟ ಮುಂದುವರೆದಿದೆ ಹೊರೆತು ಮೆಟ್ರೋವನ್ನೇ ನೆಚ್ಚಿಕೊಂಡಿರುವ ಜನರ ಸಮಸ್ಯೆ ಮಾತ್ರ ಕೇಳುತ್ತಿಲ್ಲ.
ಇನ್ನು ಈ ದರ ಏರಿಕೆ ಬಗ್ಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಸಂಸತ್ನಲ್ಲಿ ಪ್ರಸ್ತಾಪ ಮಾಡಿದ್ದಾರೆ. ಅಲ್ಲದೇ ಸಂಬಂಧಪಟ್ಟ ಕೇಂದ್ರ ಸಚಿವರನ್ನು ಸಹ ಭೇಟಿ ಮಾಡಿದ್ದು, ದರ ಏರಿಕೆಯಿಂದ ಮಾಧ್ಯಮ ವರ್ಗದ ಜನರಿಗೆ ಆಗುತ್ತಿರುವ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ತೇಜಸ್ವಿ ಸೂರ್ಯ, ರಾಜ್ಯ ಸರ್ಕಾರ ಈ ಬಗ್ಗೆ ಕೇಂದ್ರಕ್ಕೆ ಒಂದು ಪತ್ರ ಬರೆದರೆ ಮಾತ್ರ ಏರಿಕೆ ಮಾಡಲಾಗಿರುವ ದರವನ್ನು ಇಳಿಕೆ ಮಾಡಲು ಸಾಧ್ಯ ಎಂದಿದ್ದಾರೆ.
ಇನ್ನು ಮೆಟ್ರೋ ದರ ಏರಿಕೆ ಬಗ್ಗೆ ಆರೋಪ ಪ್ರತ್ಯಾರೋಪ ಮಾತ್ರವಲ್ಲದೇ ಇದೀಗ ಆಡಳಿತ ಪಕ್ಷ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗಿದೆ. ದರ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಇಂದು(ಫೆಬ್ರವರಿ 13) ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಿದೆ.
ಇನ್ನು ಇತ್ತ ವಿಪಕ್ಷ ಬಿಜೆಪಿ ಸಹ ರಾಜ್ಯ ಕಾಂಗ್ರೆಸ್ ಸಹ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. ಇಂದು ಕಾಂಗ್ರೆಸ್ ನಡೆಸುತ್ತಿರುವುದರಿಂದ ಬಿಜೆಪಿ ನಾಳೆ(ಫೆಬ್ರವರಿ 14) ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಮಾಡಲು ತೀರ್ಮಾನಿಸಿದೆ.
Published On - 9:25 am, Thu, 13 February 25