
ಬೆಂಗಳೂರು, ಜುಲೈ 31: ರಾಜಧಾನಿಯ ಪ್ರಮುಖ ಸಾರಿಗೆ ಕೇಂದ್ರವಾದ ಮೆಜೆಸ್ಟಿಕ್ (ಕೆಂಪೇಗೌಡ) ಬಸ್ ನಿಲ್ದಾಣವನ್ನು 4,997 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಆಧುನೀಕರಣಗೊಳಿಸುವ ಬೃಹತ್ ಯೋಜನೆ ಜಾರಿಯತ್ತ ಪ್ರಮುಖ ಹೆಜ್ಜೆ ಇಟ್ಟಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯ ಯೋಜನೆಗಳಿಗಾಗಿ ಇರುವ ರಾಜ್ಯ ಮಟ್ಟದ ಏಕ ಗವಾಕ್ಷಿ ಸಂಸ್ಥೆಯು (SLSWA) ಈ ಪ್ರಸ್ತಾವನೆಯನ್ನು ಅಂತಿಮ ಅನುಮೋದನೆಗಾಗಿ ಮುಖ್ಯಮಂತ್ರಿ ನೇತೃತ್ವದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ಸಮಿತಿಗೆ (SHLCC) ಶಿಫಾರಸು ಮಾಡಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಒಟ್ಟು 12,936.86 ಕೋಟಿ ರೂ. ಮೌಲ್ಯದ ಏಳು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಪರಿಶೀಲಿಸಲಾಯಿತು. 500 ಕೋಟಿ ರೂ.ಗೂ ಹೆಚ್ಚು ವೆಚ್ಚದ ಬೃಹತ್ ಯೋಜನೆಗಳನ್ನು SHLCC ಪರಿಶೀಲನೆಗೆ ಕಳುಹಿಸಲಾಗಿದ್ದು, ಇದರಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣದ ಪುನರಾಭಿವೃದ್ಧಿ ಯೋಜನೆಯೂ ಸೇರಿದೆ.
ಇದೇ ಸಭೆಯಲ್ಲಿ ಮೈಸೂರಿನಲ್ಲಿ 729.43 ಕೋಟಿ ರೂ. ವೆಚ್ಚದ ‘ಫಿಲ್ಮ್ ಸಿಟಿ’ ಹಾಗೂ ಉತ್ತರ ಕನ್ನಡದ ಮಾಂಕಿ ಬಂದರಿನಲ್ಲಿ 6,925 ಕೋಟಿ ರೂ. ವೆಚ್ಚದ ‘ಬಹುಪಯೋಗಿ ಬಂದರು’ ನಿರ್ಮಾಣ ಯೋಜನೆಗಳನ್ನೂ SHLCC ಸಮಿತಿಗೆ ಶಿಫಾರಸು ಮಾಡಲಾಗಿದೆ. ಜೊತೆಗೆ ಮಂಗಳೂರಿನ ದೀಪಸ್ತಂಭ ಪ್ರವಾಸೋದ್ಯಮ ಮತ್ತು ಊಟಿಯ ಕರ್ನಾಟಕ ಸಿರಿ ತೋಟಗಾರಿಕೆ ತೋಟದ ಅಭಿವೃದ್ಧಿ ಸೇರಿದಂತೆ 285.43 ಕೋಟಿ ರೂ. ಮೌಲ್ಯದ ನಾಲ್ಕು ಸಣ್ಣ ಯೋಜನೆಗಳಿಗೆ ನೇರ ಅನುಮೋದನೆ ನೀಡಲಾಗಿದೆ. ಈ ಯೋಜನೆಗೆ ಶೀಘ್ರದಲ್ಲೇ ಉನ್ನತ ಮಟ್ಟದ ಸಮಿತಿಯಿಂದ ಆಡಳಿತಾತ್ಮಕ ಒಪ್ಪಿಗೆ ದೊರೆಯುವ ನಿರೀಕ್ಷೆಯಿದ್ದು, ಬೆಂಗಳೂರಿನ ಸಾರಿಗೆ ಕ್ಷೇತ್ರಕ್ಕೆ ಹೊಸ ಕಳೆ ಬರಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ