ಸೋಮವಾರ ಮುಂಜಾನೆ 3 ಗಂಟೆಗೆ ಉಕ್ರೇನ್​ನಿಂದ ನವೀನ್ ದೇಹ ಆಗಮನ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾಯುತ್ತಿದೆ 2 ಆಂಬುಲೆನ್ಸ್

| Updated By: preethi shettigar

Updated on: Mar 20, 2022 | 10:23 PM

ಏರ್​​ಪೋರ್ಟ್​​ನಿಂದ ಪೊಲೀಸ್​ ಭದ್ರತೆಯಲ್ಲಿ ಸ್ವಗ್ರಾಮಕ್ಕೆ ತೆರಳಲಿದ್ದು, ಆ್ಯಂಬುಲೆನ್ಸ್​​ನಲ್ಲಿಯೇ ಹಾವೇರಿಗೆ ನವೀನ್​ ಮೃತದೇಹ ಸ್ಥಳಾಂತರ ಮಾಡಲಾಗುತ್ತದೆ. ಇತ್ತ ಕೆಐಎಬಿಯ ಕಾರ್ಗೋ ಟರ್ಮಿನಲ್​ನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದ್ದರೆ, ಅತ್ತ  ನವೀನ್​ ಶವ ಬರಮಾಡಿಕೊಳ್ಳಲು ಜಿಲ್ಲಾಡಳಿತ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ.

ಸೋಮವಾರ ಮುಂಜಾನೆ 3 ಗಂಟೆಗೆ ಉಕ್ರೇನ್​ನಿಂದ ನವೀನ್ ದೇಹ ಆಗಮನ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾಯುತ್ತಿದೆ 2 ಆಂಬುಲೆನ್ಸ್
ಉಕ್ರೇನ್‌ನಲ್ಲಿ ಮೃತಪಟ್ಟ ಕನ್ನಡಿಗ ವಿದ್ಯಾರ್ಥಿ ನವೀನ್‌
Follow us on

ಬೆಂಗಳೂರು: ಉಕ್ರೇನ್‌ನಲ್ಲಿ ಶೆಲ್ ದಾಳಿಯಲ್ಲಿ ಮೃತಪಟ್ಟ ನವೀನ್ ಮೃತದೇಹ ನಾಳೆ ಮುಂಜಾನೆ 3 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದೆ. ಮುಂಜಾನೆ 3 ಗಂಟೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIAB) ಇಕೆ 568 ವಿಮಾನದಲ್ಲಿ ಪಾರ್ಥಿವ ಶರೀರ ಆಗಮಿಸಲಿದೆ. ಬಳಿಕ ಕುಟುಂಬಸ್ಥರಿಗೆ ನವೀನ್(Naveen)​ ಮೃತದೇಹವನ್ನು ಸಿಎಂ ಬಸವರಾಜ ಬೊಮ್ಮಾಯಿ ಹಸ್ತಾಂತರಿಸಲಿದ್ದಾರೆ. ಏರ್​​ಪೋರ್ಟ್​​ನಿಂದ(Airport) ಪೊಲೀಸ್​ ಭದ್ರತೆಯಲ್ಲಿ ಸ್ವಗ್ರಾಮಕ್ಕೆ ತೆರಳಲಿದ್ದು, ಆ್ಯಂಬುಲೆನ್ಸ್​​ನಲ್ಲಿಯೇ ಹಾವೇರಿಗೆ ನವೀನ್​ ಮೃತದೇಹ ಸ್ಥಳಾಂತರ ಮಾಡಲಾಗುತ್ತದೆ. ಇತ್ತ ಕೆಐಎಬಿಯ ಕಾರ್ಗೋ ಟರ್ಮಿನಲ್​ನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದ್ದರೆ, ಅತ್ತ  ನವೀನ್​ ಶವ ಬರಮಾಡಿಕೊಳ್ಳಲು ಜಿಲ್ಲಾಡಳಿತ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ.

ನವೀನ್​ ಮೃತದೇಹ ರವಾನೆಗೆ ಎರಡು ಆ್ಯಂಬುಲೇನ್ಸ್, ಒಂದು ಇನ್ನೋವಾ ಕಾರು

ಏರ್ಪೋರ್ಟ್​ನಿಂದ ಹಾವೇರಿಗೆ ನವೀನ್​ ಮೃತದೇಹ ತೆಗೆದುಕೊಂಡು ಹೋಗಲು ಎರಡು ಆ್ಯಂಬುಲೇನ್ಸ್ ಸಂಬಂಧಿಕರು, ಅಧಿಕಾರಿಗಳು ತೆರಳಲು ಒಂದು ಇನ್ನೋವಾ ಕಾರು ಬುಕ್​ ಮಾಡಲಾಗಿದೆ. ಜಿಲ್ಲಾಡಳಿತದಿಂದ ನವೀನ್ ಸಂಬಂಧಿಕರು ಉಳಿದುಕೊಳ್ಳಲು ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ಊಟ ಮತ್ತು ಮಧ್ಯರಾತ್ರಿವರೆಗೂ ರೆಸ್ಟ್ ಮಾಡಲು ವ್ಯವಸ್ಥೆ ಮಾಡಲಾಗಿದೆ. 2 ಗಂಟೆ ಸುಮಾರಿಗೆ ವಿಮಾನ ನಿಲ್ದಾಣಕ್ಕೆ ಸಂಬಂಧಿಕರು ಬರಲಿದ್ದಾರೆ.

ದುಬೈನಲ್ಲಿರುವ ಕನ್ನಡಿಗ ವಿದ್ಯಾರ್ಥಿ ನವೀನ್‌ ಮೃತದೇಹ

ಉಕ್ರೇನ್‌ನಲ್ಲಿ ಶೆಲ್ ದಾಳಿಯಲ್ಲಿ ನವೀನ್ ಸಾವನ್ನಪ್ಪಿದ್ದು, ಸದ್ಯ ದುಬೈನಲ್ಲಿರುವ ಕನ್ನಡಿಗ ವಿದ್ಯಾರ್ಥಿ ನವೀನ್‌ ಮೃತದೇಹ ಇದೆ. ನಿನ್ನೆಯೇ ಪೋಲೆಂಡ್‌ನ ವಾರ್ಸಾದಿಂದ ಮೃತದೇಹ ಸ್ಥಳಾಂತರಿಸಲಾಗಿದೆ. ದುಬೈನಿಂದ ನೇರವಾಗಿ ಬೆಂಗಳೂರಿಗೆ ಮೃತದೇಹ ಆಗಮಿಸಲಿದೆ.

ಉಕ್ರೇನ್​ನಲ್ಲಿ ಸಾವನ್ನಪ್ಪಿದ ನವೀನ್ ಮೃತದೇಹವನ್ನು ದಾವಣಗೆರೆಯ ಎಸ್​ಎಸ್ ಆಸ್ಪತ್ರೆಗೆ ದಾನ

ಉಕ್ರೇನ್​ನಲ್ಲಿ ಸಾವನ್ನಪ್ಪಿದ ನವೀನ್ ಮೃತದೇಹವನ್ನು ದಾವಣಗೆರೆಯ ಎಸ್​ಎಸ್ ಆಸ್ಪತ್ರೆಗೆ ದಾನವಾಗಿ ನೀಡುವ ಹಿನ್ನಲೆಯಲ್ಲಿ, ದಾವಣಗೆರೆಯಲ್ಲಿ ಮಾಜಿ ಸಚಿವ ಹಾಗೂ ಎಸ್​ಎಸ್ ಆಸ್ಪತ್ರೆಯ ಚೇರ್ಮನ್ ಎಸ್.ಎಸ್ ಮಲ್ಲಿಕಾರ್ಜುನ್ ಹೇಳಿಕೆ ನೀಡಿದ್ದಾರೆ. ನವೀನ್ ಮೃತದೇಹವನ್ನು ಎಸ್​ಎಸ್ ಆಸ್ಪತ್ರೆಗೆ ದಾನವಾಗಿ ನೀಡುತ್ತೇವೆ ಎಂದು ಪೋಷಕರು ತಿಳಿಸಿದ್ದಾರೆ. ಪೋಷಕರು ನವೀನ್ ಮೃತದೇಹ ಮೆಡಿಕಲ್ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಎಂದು ದಾನವಾಗಿ ನೀಡುತ್ತಿದ್ದಾರೆ. ಪೋಷಕರು ಅವರ ಮಗ ಡಾಕ್ಟರ್ ಆಗಬೇಕು ಎಂದು ಆಸೆ ಇಟ್ಟುಕೊಂಡಿದ್ದರು. ಆದರೆ ಈಗ ಸಾವನ್ನಪ್ಪಿದ್ದು ಆತನ ಮೃತದೇಹವಾದರೂ ಮೆಡಿಕಲ್‌ ವಿದ್ಯಾರ್ಥಿಗಳಿಗೆ ಉಪಯೋಗವಾಗಿ ಎಂದು ಆಸೆ ಪಡುತ್ತಿದ್ದಾರೆ ಎಂದು ಹೇಳಿದ್ದಾರೆ.

ನಮ್ಮ ಆಸ್ಪತ್ರೆಗೆ ದೇಹದಾನ ಮಾಡಿದವರ ಕುಟಂಬಕ್ಕೆ ಚಿಕಿತ್ಸೆಯಲ್ಲಿ ರಿಯಾಯಿತಿ ಇದೆ. ಮಗನ ಮೃತದೇಹವನ್ನು ದಾನವಾಗಿ ನೀಡಿದ ತಾಯಿ -ತಂದೆ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಮೇಲಾಗಿ ಶವ ಪರೀಕ್ಷೆಯಿಂದ ಸಾವಿಗೆ ನಿಖರ ಕಾರಣ ಕೂಡಾ ಗೊತ್ತಾಗುತ್ತದೆ. ವಿಶೇಷವಾಗಿ ಶವ ದೇಶಕ್ಕೆ ತರಲು ಸಿರಿಗೆರೆ ಮಠದ ತರಳುಬಾಳುಮಠ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ವಿಶೇಷ ಪ್ರಯತ್ನ ಮಾಡಿದ್ದರು ಎಂದು ಎಸ್.​ಎಸ್​ ಮಲ್ಲಿಕಾರ್ಜುನ್​ ಹೇಳಿದ್ದಾರೆ.

ಇದನ್ನೂ ಓದಿ:

ನವೀನ್‌ ದೇಹ ಸೋಮವಾರ ಆಗಮನ: ಮನೆಯಲ್ಲಿ ಪೂಜೆ ಸಲ್ಲಿಸಿ, ಮೆಡಿಕಲ್ ಕಾಲೇಜಿಗೆ ಶರೀರ ದಾನ -ನವೀನ್ ತಂದೆ ಶೇಖರಗೌಡ

ಉಕ್ರೇನ್​ನಲ್ಲಿ ವಿದ್ಯಾರ್ಥಿ ನವೀನ್​ ಸಾವು; ನಿವಾಸದಲ್ಲಿ 3ನೇ ದಿನದ ಕಾರ್ಯ ನೆರವೇರಿಸಿದ ಕುಟುಂಬಸ್ಥರು

Published On - 7:29 pm, Sun, 20 March 22