ಬಾಕಿ ವೇತನ ಕೇಳಿದ್ದಕ್ಕೆ ‘ಸಿದ್ಧಗಂಗಾ ಟೂರ್ಸ್’ ಮಾಲೀಕರಿಂದ ಚಾಲಕನಿಗೆ ಹಲ್ಲೆ: ಪೊಲೀಸರಿಂದಲೇ ಸಾಕ್ಷ್ಯ ನಾಶದ ಪ್ರಯತ್ನ?

ಬೆಂಗಳೂರಿನ ಸಿದ್ಧಗಂಗಾ ಟೂರ್ಸ್ ಚಾಲಕ ರಾಮೇಗೌಡರಿಗೆ ಬಾಕಿ ವೇತನ ಕೇಳಿದ್ದಕ್ಕೆ ಮಾಲೀಕರಿಂದ ಹಲ್ಲೆ ನಡೆದಿದೆ. ಪತ್ನಿ ದೂರು ನೀಡಲು ಹೋದಾಗ ಪೊಲೀಸರು ಆರಂಭದಲ್ಲಿ ನಿರಾಕರಿಸಿದ್ದು, ನಂತರ ಎಫ್‌ಐಆರ್ ದಾಖಲಿಸಿದ್ದರೂ, ಪ್ರಮುಖ ಸಾಕ್ಷ್ಯವಾದ ರಕ್ತಸಿಕ್ತ ಅಂಗಿಯನ್ನು ಪೊಲೀಸರೇ ನಾಶಪಡಿಸಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ. ಪ್ರಕರಣದಲ್ಲಿ ಪೊಲೀಸರ ನಡೆ ಅನುಮಾನಕ್ಕೆ ಕಾರಣವಾಗಿದ್ದು, ತನಿಖೆ ನಡೆಯುತ್ತಿದೆ.

ಬಾಕಿ ವೇತನ ಕೇಳಿದ್ದಕ್ಕೆ ಸಿದ್ಧಗಂಗಾ ಟೂರ್ಸ್ ಮಾಲೀಕರಿಂದ ಚಾಲಕನಿಗೆ ಹಲ್ಲೆ: ಪೊಲೀಸರಿಂದಲೇ ಸಾಕ್ಷ್ಯ ನಾಶದ ಪ್ರಯತ್ನ?
ಸಾಂದರ್ಭಿಕ ಚಿತ್ರ

Updated on: Apr 07, 2026 | 5:06 PM

ಬೆಂಗಳೂರು, ಏ.7: ನಗರದ ಖಾಸಗಿ ಬಸ್ ಸಂಸ್ಥೆಯೊಂದರಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ರಾಮೇಗೌಡ ಎಂಬುವವರ ಮೇಲೆ ಮಾಲೀಕರು ಮತ್ತು ಮ್ಯಾನೇಜ್‌ಮೆಂಟ್ ಸಿಬ್ಬಂದಿ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕುಟುಂಬದ ಏಕೈಕ ಆಧಾರ ಸ್ತಂಭವಾಗಿದ್ದ ಚಾಲಕನಿಗೆ ಕಳೆದ ಹಲವು ತಿಂಗಳುಗಳಿಂದ ಸಂಬಳ ನೀಡದೆ ಸತಾಯಿಸುತ್ತಿದ್ದ ಸಂಸ್ಥೆ, ಈಗ ಅವರ ಮೇಲೆ ದೈಹಿಕ ದೌರ್ಜನ್ಯ ಎಸಗಿದೆ ಎಂದು ಆರೋಪಿಸಲಾಗಿದೆ.

ರಾಮೇಗೌಡ ಅವರು ‘ಸಿದ್ಧಗಂಗಾ ಟೂರ್ಸ್ ಅಂಡ್ ಟ್ರಾವೆಲ್ಸ್’ (Siddaganga Tours and Travels) ಸಂಸ್ಥೆಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಹಲವು ತಿಂಗಳಿಂದ ಸಂಬಳ ಬಾರದ ಕಾರಣ ಸಂಸಾರ ನಡೆಸುವುದು ಕಷ್ಟವಾಗಿತ್ತು. ಮಾರ್ಚ್ 26ರ ಸಂಜೆ 6.30ರ ಸುಮಾರಿಗೆ ಅವರು ತಮ್ಮ ಬಾಕಿ ಸಂಬಳ ಕೇಳಲು ಹೋದಾಗ, ಸಂಸ್ಥೆಯ ಆಡಳಿತ ಮಂಡಳಿಯವರು ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಹಲ್ಲೆಗೊಳಗಾದ ರಾಮೇಗೌಡ ಅವರು ಎರಡು ದಿನಗಳ ಕಾಲ ಮನೆಯಲ್ಲಿ ಮೌನವಾಗಿ ಮಲಗಿದ್ದರು. ಪತ್ನಿ ಜ್ಯೋತಿ ಅವರು ಅನಾರೋಗ್ಯವೆಂದು ಭಾವಿಸಿದ್ದರು. ಆದರೆ ಅವರ ಮೊಬೈಲ್ ಪರೀಕ್ಷಿಸಿದಾಗ ಹಲ್ಲೆಯ ಸತ್ಯಾಂಶ ಬಯಲಾಗಿದೆ. ತಕ್ಷಣವೇ ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಹಲ್ಲೆ ನಡೆದ ಒಂದು ಗಂಟೆಯೊಳಗೆ (ಸಂಜೆ 7.43ಕ್ಕೆ) ಸಂಸ್ಥೆಯು ಯುಪಿಐ (UPI) ಮೂಲಕ 15,000 ರೂಪಾಯಿಗಳನ್ನು ರಾಮೇಗೌಡ ಅವರ ಖಾತೆಗೆ ವರ್ಗಾಯಿಸಿದೆ. ಈ ಮೂಲಕ ತಮ್ಮ ಕೃತ್ಯವನ್ನು ಒಪ್ಪಿಕೊಂಡಂತೆ ಆಗಿದೆ.

ಇದನ್ನೂ ಓದಿ: ಬ್ರ್ಯಾಂಡ್ ಕರ್ನಾಟಕವೋ ಅಥವಾ ಬ್ರೇಕ್‌ಡೌನ್ ಕರ್ನಾಟಕವೋ?: ಕೆಎಸ್‌ಆರ್‌ಟಿಸಿ ಬಸ್‌ಗಳ ಭೀಕರ ದುಸ್ಥಿತಿ ಬಿಚ್ಚಿಟ್ಟ ಸವಾರರು!

ಇನ್ನು ಈ ಪ್ರಕರಣದಲ್ಲಿ ಪೊಲೀಸರ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪತ್ನಿ ಜ್ಯೋತಿ ದೂರು ನೀಡಲು ಹೋದಾಗ ಬಸವೇಶ್ವರನಗರ ಪೊಲೀಸರು ಮೊದಲು ನಿರಾಕರಿಸಿದ್ದರು. ನಂತರ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಹೊಯ್ಸಳ ಪೊಲೀಸ್ ಸಿಬ್ಬಂದಿಯೇ ತನ್ನ ಪತಿಯ ರಕ್ತಸಿಕ್ತ ಅಂಗಿಯನ್ನು (ಪ್ರಮುಖ ಸಾಕ್ಷ್ಯ) ಬಲವಂತವಾಗಿ ತೆಗೆಸಿದ್ದಾರೆ ಎಂದು ಜ್ಯೋತಿ ಗಂಭೀರ ಆರೋಪ ಮಾಡಿದ್ದಾರೆ. ಬಸವೇಶ್ವರನಗರ ಇನ್ಸ್‌ಪೆಕ್ಟರ್ ಅವರು ಈ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದು, ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಆರೋಪಿಗಳಿಗೆ ಸ್ಟೇಷನ್ ಜಾಮೀನು ನೀಡಲಾಗಿದ್ದು, ತನಿಖೆ ಮುಂದುವರಿದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us