ಮುಡಾ ಸೈಟ್​ ವಾಪಸ್​ ಕೊಟ್ಟಿರುವುದು ರಾಜಕೀಯ ಡ್ರಾಮಾ, ಭಂಡತನ ಬಿಟ್ಟು ರಾಜೀನಾಮೆ ಕೊಡಲಿ -ಬಿ.ವೈ.ವಿಜಯೇಂದ್ರ

| Updated By: ಆಯೇಷಾ ಬಾನು

Updated on: Oct 01, 2024 | 11:59 AM

ಕಾನೂನಿನ ಕುಣಿಕೆಯಿಂದ ಪಾರಾಗಲು, ಅನುಕಂಪ ಪಡೆಯಲು ಸಿದ್ದರಾಮಯ್ಯ ಸೈಟ್ ವಾಪಸ್ ಕೊಡುವ ನಿರ್ಧಾರ ಕೈಗೊಂಡಿದ್ದಾರೆ. ಸ್ವಪಕ್ಷದಲ್ಲೇ ತೊಡೆ ತಟ್ಟುವವರನ್ನು ಎದುರಿಸಬೇಕು ಅಂತಾ ಅಷ್ಟೇ ಈ ಲೆಕ್ಕಾಚಾರ ಎಂದು ಬೆಂಗಳೂರಿನಲ್ಲಿ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಮುಡಾ ಸೈಟ್​ ವಾಪಸ್​ ಕೊಟ್ಟಿರುವುದು ರಾಜಕೀಯ ಡ್ರಾಮಾ, ಭಂಡತನ ಬಿಟ್ಟು ರಾಜೀನಾಮೆ ಕೊಡಲಿ -ಬಿ.ವೈ.ವಿಜಯೇಂದ್ರ
ಬಿ.ವೈ.ವಿಜಯೇಂದ್ರ
Follow us on

ಬೆಂಗಳೂರು, ಅ.01: ಮುಡಾ ಹಗರಣ ಸಂಬಂಧ ರಾಜ್ಯ ರಾಜಕೀಯದಲ್ಲಿ ಸಂಚಲನಕಾರಿ ಬೆಳವಣಿಗೆಯಾಗಿದೆ. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು 14 ಸೈಟ್‌ಗಳನ್ನು ವಾಪಸ್ ಮಾಡೋದಾಗಿ ಮುಡಾಗೆ (MUDA) ಪತ್ರ ಬರೆದಿರೋದು ಬಿಜೆಪಿಗೆ ಮತ್ತೊಂದು ಬ್ರಹ್ಮಾಸ್ತ್ರವೇ ಸಿಕ್ಕಂತಾಗಿದೆ. ತಪ್ಪೇ ಮಾಡುತ್ತಿಲ್ಲ ಎನ್ನುತ್ತಿದ್ದವರು ಈಗ ತಮ್ಮ ತಪ್ಪು ಒಪ್ಪಿಕೊಂಡು ಸತ್ಯಕ್ಕೆ ಶರಣಾಗಿರುವುದು ನಮ್ಮ ಹೋರಾಟಕ್ಕೆ ಸಿಕ್ಕ ಮತ್ತೊಂದು ಜಯ. ಆದರೆ ಕದ್ದ ಮಾಲನ್ನು ಹಿಂತಿರುಗಿಸಿದ ಕೂಡಲೇ ಕಳ್ಳ ನಿರಪರಾಧಿ ಆಗಿಬಿಡುತ್ತಾನೆಯೇ? ಕದ್ದ ಮಾಲನ್ನು ವಾಪಸ್ಸು ಕೊಟ್ಟ ತಕ್ಷಣ ಕಳ್ಳತನ ಮಾಫಿ ಆಗಿಬಿಡುತ್ತದೆಯೇ? ಎಂದು ನಿನ್ನೆ ಆರ್.ಅಶೋಕ್ (R Ashok) ಪ್ರಶ್ನಿಸಿದ್ದರು. ಇಂದು ಮುಡಾ ಸೈಟ್​ ವಾಪಸ್​ ಕೊಟ್ಟಿರುವುದು ರಾಜಕೀಯ ಡ್ರಾಮಾ. ಸಿದ್ದರಾಮಯ್ಯನವರು (Siddaramaiah) ಇನ್ನು ಭಂಡತನ ಬಿಟ್ಟು ರಾಜೀನಾಮೆ ಕೊಡಬೇಕು ಎಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ವಾಗ್ದಾಳಿ ನಡೆಸಿದ್ದಾರೆ.

ಕಾನೂನಿನ ಕುಣಿಕೆಯಿಂದ ಪಾರಾಗಲು, ಅನುಕಂಪ ಪಡೆಯಲು ಸಿದ್ದರಾಮಯ್ಯ ಸೈಟ್ ವಾಪಸ್ ಕೊಡುವ ನಿರ್ಧಾರ ಕೈಗೊಂಡಿದ್ದಾರೆ. ಸ್ವಪಕ್ಷದಲ್ಲೇ ತೊಡೆ ತಟ್ಟುವವರನ್ನು ಎದುರಿಸಬೇಕು ಅಂತಾ ಅಷ್ಟೇ ಈ ಲೆಕ್ಕಾಚಾರ. ಸಿದ್ದರಾಮಯ್ಯನವರು ಇನ್ನು ಭಂಡತನ ಬಿಟ್ಟು ರಾಜೀನಾಮೆ ಕೊಡಬೇಕು. ರಾಜೀನಾಮೆ ನೀಡುವ ಮೊದಲು ಸಿಎಂ ರಾಜ್ಯಪಾಲರ ಕ್ಷಮೆ ಕೇಳಬೇಕು. ಡಿಜಿಪಿಯವರು ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ನಾವು ಅಹೋರಾತ್ರಿ ಧರಣಿ ಮಾಡಿದರೂ ಅಧಿವೇಶನ ಮೊಟಕುಗೊಳಿಸಿ ಸಿದ್ದರಾಮಯ್ಯ ಪಲಾಯನ ಮಾಡಿದರು. ಬಿಜೆಪಿ ಜೆಡಿಎಸ್ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೈಸೂರಿಗೆ ಪಾದಯಾತ್ರೆ ಮಾಡಿತು. ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿದೆ ಎಂದು ಸದನದಲ್ಲೇ ಸಿಎಂ ಒಪ್ಪಿಕೊಂಡಿದ್ದಾರೆ. ನಿನ್ನೆ ರಾತ್ರಿ ಮಹತ್ತರ ಬೆಳವಣಿಗೆಯಲ್ಲಿ ಸಿಎಂ ಧರ್ಮಪತ್ನಿಯವರು ಸಿಎಂ ಗಮನಕ್ಕೆ ಬರದೇ, ಸಿಎಂ ಪುತ್ರ ಗಮನಕ್ಕೂ ಬರದೇ ಸಿಎಂ ಅಧಿಕೃತ ನಿವಾಸದಿಂದಲೇ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ಮುಡಾ ಕೇಸ್​: ಕಾಂಗ್ರೆಸ್​-ಬಿಜೆಪಿಯಿಂದ ರಾಷ್ಟ್ರಮಟ್ಟದಲ್ಲಿ ತಂತ್ರ-ಪ್ರತಿತಂತ್ರ

ಪಾರ್ವತಿ ಅವರು ಅವರಾಗಿಯೇ ಪತ್ರ ಬರೆದಿದ್ದಾರೋ ಅಥವಾ ಬಲವಂತವಾಗಿ ಬರೆದಿದ್ದಾರೋ ಗೊತ್ತಿಲ್ಲ. ನಾನು ಜಗ್ಗಲ್ಲ, ಬಗ್ಗಲ್ಲ ಅಂತಾ ಸಿದ್ದರಾಮಯ್ಯ ಆರ್ಭಟ ಮಾಡುತ್ತಿದ್ದರು. ನಾನ್ಯಾಕೆ ಸೈಟ್ ವಾಪಸ್ ಕೊಡಬೇಕು, ನನಗೆ 62 ಕೋಟಿ ಕೊಡುತ್ತಾರಾ ಅಂತಾ ಸಿದ್ದರಾಮಯ್ಯ ಹೇಳಿದ್ದರು. ಸಾಮಾಜಿಕ ಕಾರ್ಯಕರ್ತರು ಕೊಟ್ಟ ದೂರು, ಅದರ ಆಧಾರದಲ್ಲಿ ರಾಜ್ಯಪಾಲರು ಕೊಟ್ಟ ಅನುಮತಿ, ಕೋರ್ಟ್ ಆದೇಶ ಎಲ್ಲವೂ ಆಗಿದೆ. ಸಿದ್ದರಾಮಯ್ಯ ಸೈಟ್ ವಾಪಸ್ ಕೊಡುವ ನಿರ್ಧಾರ ಕೈಗೊಂಡಿದ್ದಾರೆ ಎಂದರೆ ಕಾನೂನಿನ ಕುಣಿಕೆಯಿಂದ ಪಾರಾಗಬೇಕು, ರಾಜಕೀಯ ಅನುಕಂಪ ಪಡೆಯಬೇಕು, ಸ್ವಪಕ್ಷದಲ್ಲೇ ತಡೆ ತಟ್ಟುವವರನ್ನು ಎದುರಿಸಬೇಕು ಅಂತಾ ಅಷ್ಟೇ. ಸೈಟ್ ವಾಪಸ್ ಕೊಟ್ಟಿರೋದು ರಾಜಕೀಯ ಡ್ರಾಮಾ ಎಂದರು.

ಮುಡಾ ಪ್ರಕರಣದ ವಿಚಾರವಾಗಿ ನಾವು ಹೋರಾಟ ಮಾಡಿದ್ದೆವು. ಸಿಎಂ ನಮ್ಮ ಹೋರಾಟಕ್ಕೆ ಕಿಂಚಿತ್ತೂ ಬೆಲೆ ಕೊಡಲಿಲ್ಲ. ಹಿಂದೆ ಭ್ರಷ್ಟಾಚಾರ ಆರೋಪ ಬಂದಾಗ ಎಸಿಬಿ ರಚನೆ ಮಾಡಿದ್ದರು. ಲೋಕಾಯುಕ್ತ ಸಂಸ್ಥೆ ಮುಚ್ಚಿ ಹಾಕಿ ಎಸಿಬಿ ರಚನೆ ಮಾಡಿದ್ದರು. ಎಸಿಬಿ ರಚಿಸಿ ತಮಗೆ ಬೇಕಾದ ಅಧಿಕಾರಿಗಳನ್ನು ನೇಮಕ ಮಾಡಿದ್ದರು. ಮುಡಾ ಸೈಟ್​ ಹಂಚಿಕೆ ಕೇಸ್​ನಲ್ಲಿ ಎರಡು ವಿಚಾರ ಗಮನಿಸಬೇಕು. ಸಿಎಂ ಪತ್ನಿಗೆ 14 ನಿವೇಶನ ಹಂಚಿಕೆ ಮಾಡಿದ್ದು ಒಂದು ಕಡೆಯಾದರೆ. ಸಿಎಂ ಹಿಂಬಾಲಕರು, ರಿಯಲ್ ಎಸ್ಟೇಟ್ ದಲ್ಲಾಳಿಗಳಿಗೂ ಸೈಟ್ ಹಂಚಿಕೆ ಮಾಡಲಾಗಿದೆ ಎಂದು ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:55 am, Tue, 1 October 24