ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ಕಾಫಿ, ಏಲಕ್ಕಿ, ಮೆಣಸು ಬೆಳಗಾರರಿಗೆ ಗುತ್ತಿಗೆಗೆ ಜಮೀನು ನೀಡಲು ರಾಜ್ಯ ಸರ್ಕಾರ ನಿರ್ಧಾರ
ಸರ್ಕಾರಿ ಜಮೀನುಗಳಲ್ಲಿ ಕಾಫಿ, ಏಲಕ್ಕಿ, ಕಾಳುಮೆಣಸನ್ನು ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಬೆಳಗಾರರಿಗೇ ಸರ್ಕಾರಿ ಜಮೀನುಗಳನ್ನು ದೀರ್ಘಾವಧಿಗೆ ಗುತ್ತಿಗೆಗೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಬೆಂಗಳೂರು: ಸರ್ಕಾರಿ ಜಮೀನುಗಳಲ್ಲಿ (Government Land) ಕಾಫಿ, (Coffee) ಏಲಕ್ಕಿ (Cardamom) ಕಾಳುಮೆಣಸನ್ನು ಅನಧಿಕೃತವಾಗಿ ಸಾಗುವಳಿ (Cultivation) ಮಾಡುತ್ತಿರುವ ಬೆಳಗಾರರಿಗೆ ಸರ್ಕಾರಿ ಜಮೀನುಗಳನ್ನು ದೀರ್ಘಾವಧಿಗೆ ಗುತ್ತಿಗೆಗೆ (Lease) ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಕಂದಾಯ ಇಲಾಖೆ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರಲಿದೆ. ಮುಂಗಾರು ಅಧಿವೇಶನದಲ್ಲಿ ರಾಜ್ಯ ಸರ್ಕಾರ ತಿದ್ದುಪಡಿ ವಿಧೇಯಕ ಮಂಡಿಸಲಿದೆ.
ರಾಜ್ಯದಲ್ಲಿ ಸುಮಾರು ಒಂದು ಲಕ್ಷ ಎಕರೆಗೂ ಹೆಚ್ಚು ವಿಸ್ತೀರ್ಣದ ಸರ್ಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿದ್ದು, ಜಮೀನುಗಳ ಮೇಲಿನ ಸರ್ಕಾರದ ಹಕ್ಕನ್ನು ಖಾತರಿಪಡಿಸಲು ಗುತ್ತಿಗೆಗೆ ನೀಡಲು ಯೋಜನೆ ರೂಪಿಸಲಾಗಿದೆ. ಶೀಘ್ರದಲ್ಲೇ ಡೀಮ್ಡ್ ಅರಣ್ಯದ ವ್ಯಾಪ್ತಿಯಿಂದ ಹೊರಬರಲಿರುವ 6 ಲಕ್ಷ ಹೆಕ್ಟೇರ್ ಸರ್ಕಾರಿ ಜಮೀನನ್ನು ಶಾಲೆ, ಕಾಲೇಜು, ಆಸ್ಪತ್ರೆ ಮತ್ತಿತರ ಸಾರ್ವಜನಿಕ ಉದ್ದೇಶಕ್ಕೆ ಹಂಚಿಕೆ ಮಾಡಲು ಕಂದಾಯ ಇಲಾಖೆ ನಿರ್ಧರಿಸಿದೆ.