ಆದಾಯ ಮೀರಿ ಆಸ್ತಿ ಗಳಿಕೆ ಆರೋಪ; ಸಚಿವ ವಿ.ಸೋಮಣ್ಣ ವಿರುದ್ಧ ಸಮನ್ಸ್ ಜಾರಿ

| Updated By: ganapathi bhat

Updated on: Mar 22, 2022 | 10:14 AM

ಶಾಸಕನಾಗುವ ಮೊದಲಿನ ಆದಾಯ, ನಂತರದ ಆದಾಯ, ಗಳಿಸಿದ ಆಸ್ತಿಯ ಸೂಕ್ತ ವಿವರಣೆಯನ್ನು ಪೊಲೀಸರು ನೀಡಿಲ್ಲ. ಹೀಗಾಗಿ ಅಸಮರ್ಪಕ ತನಿಖೆ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಸಮನ್ಸ್ ಜಾರಿಗೆ ನ್ಯಾ. ಬಿ.ಜಯಂತ್ ಕುಮಾರ್ ಆದೇಶ ನೀಡಿದ್ದಾರೆ.

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ; ಸಚಿವ ವಿ.ಸೋಮಣ್ಣ ವಿರುದ್ಧ ಸಮನ್ಸ್ ಜಾರಿ
ವಸತಿ ಸಚಿವ ವಿ ಸೋಮಣ್ಣ
Follow us on

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಲ್ಲಿ ಸಚಿವ ವಿ. ಸೋಮಣ್ಣ ವಿರುದ್ಧ ಸಮನ್ಸ್ ಜಾರಿ ಮಾಡಲಾಗಿದೆ. ಏಪ್ರಿಲ್ 16ಕ್ಕೆ ಖುದ್ದು ಹಾಜರಾಗುವಂತೆ ಕೋರ್ಟ್ ಆದೇಶ ನೀಡಿದೆ. ಜನಪ್ರತಿನಿಧಿಗಳ ನ್ಯಾಯಾಲಯದಿಂದ ಆದೇಶ ನೀಡಲಾಗಿದೆ. 2013 ರಲ್ಲಿ ರಾಮಕೃಷ್ಣ ಎಂಬವರು ಖಾಸಗಿ ದೂರು ದಾಖಲಿಸಿದ್ದರು. ಈ ಬಗ್ಗೆ ಕೋರ್ಟ್ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿತ್ತು. ಲೋಕಾಯುಕ್ತ ಪೊಲೀಸರಿಗೆ ಕೋರ್ಟ್ ಸೂಚಿಸಿತ್ತು‌. ಆದರೆ, ಲೋಕಾಯುಕ್ತ ಪೊಲೀಸರು ಆದಾಯ ಮೀರಿ ಆಸ್ತಿ ಗಳಿಸಿಲ್ಲವೆಂದು ವರದಿ ನೀಡಿದ್ದರು. ಲೋಕಾಯುಕ್ತ ಪೊಲೀಸರ ಬಿ ರಿಪೋರ್ಟ್​ನ್ನು ಕೋರ್ಟ್ ತಿರಸ್ಕರಿಸಿದೆ.

ಶಾಸಕನಾಗುವ ಮೊದಲಿನ ಆದಾಯ, ನಂತರದ ಆದಾಯ, ಗಳಿಸಿದ ಆಸ್ತಿಯ ಸೂಕ್ತ ವಿವರಣೆಯನ್ನು ಪೊಲೀಸರು ನೀಡಿಲ್ಲ. ಹೀಗಾಗಿ ಅಸಮರ್ಪಕ ತನಿಖೆ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಸಮನ್ಸ್ ಜಾರಿಗೆ ನ್ಯಾ. ಬಿ.ಜಯಂತ್ ಕುಮಾರ್ ಆದೇಶ ನೀಡಿದ್ದಾರೆ.

ಬೆಂಗಳೂರಿನಲ್ಲಿಂದು ಬೆಳ್ಳಂಬೆಳಗ್ಗೆ 9 ಕಡೆ ಎಸಿಬಿ ದಾಳಿ

ಇತ್ತ ಬೆಂಗಳೂರು ನಗರದಲ್ಲಿಂದು ಬೆಳ್ಳಂಬೆಳಗ್ಗೆ ಬಿಡಿಎ ಮಧ್ಯವರ್ತಿಗಳು, ಏಜೆಂಟ್‌ಗಳ ಮನೆ ಮೇಲೆ ಎಸಿಬಿ ದಾಳಿ (ACB Raid) ಮಾಡಿದೆ. ಬಿಡಿಎ ಅಧಿಕಾರಿಗಳ ಜತೆ ಸೇರಿಕೊಂಡು ಭ್ರಷ್ಟಾಚಾರ, ಅವ್ಯವಹಾರದಲ್ಲಿ ತೊಡಗಿದ ಆರೋಪ ಕೇಳಿಬಂದ ಹಿನ್ನೆಲೆ ಬೆಂಗಳೂರಿನಲ್ಲಿ ಏಕಕಾಲದಲ್ಲಿ ಬೆಂಗಳೂರಿನಲ್ಲಿ ಎಸಿಬಿ SP ಉಮಾ ಪ್ರಶಾಂತ್ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳಿಂದ, 9 ಕಡೆ ದಾಳಿ ಮಾಡಲಾಗಿದೆ. ಚಾಮರಾಜಪೇಟೆಯ ಬಿ.ಎನ್.ರಘು, R.T.ನಗರ ಬಳಿಯ ಮನೋರಾಯನಪಾಳ್ಯದ ಮೋಹನ್, ದೊಮ್ಮಲೂರಿನ ಮನೋಜ್, ಆರ್.ಆರ್.ನಗರದ ತೇಜು, ಮಲ್ಲತ್ತಹಳ್ಳಿಯ ಮುನಿರತ್ನ ಅಲಿಯಾಸ್ ರತ್ನವೇಲು, ಮುದ್ದಿನಪಾಳ್ಯದ ಅಶ್ವತ್ಥ್ ಹಾಗೂ ಚಿಕ್ಕಹನುಮಯ್ಯ, ಚಾಮುಂಡೇಶ್ವರಿನಗರದ ರಾಮು ಮತ್ತು ಚಾಮುಂಡೇಶ್ವರಿ ನಗರ, ಬಿಡಿಎ ಲೇಔಟ್​ನ ಲಕ್ಷ್ಮಣ ಮೇಲೆ ಎಸಿಬಿ ಅಧಿಕಾರಿಗಳಿಂದ ದಾಳಿ ಮಾಡಲಾಗಿದೆ.

ಬಿಡಿಎನ 9 ಮಧ್ಯವರ್ತಿಗಳ ಮೇಲೆ ಎಸಿಬಿ ದಾಳಿ ಮಾಡಿದೆ. ಸತತವಾಗಿ ಬಿಡಿಎ ಅಧಿಕಾರಿಗಳ ಮೇಲೆ ದಾಳಿ ಮಾಡಿದ್ದ ಎಸಿಬಿ ಇದೀಗ ಮಧ್ಯವರ್ತಿಗಳ ಮೇಲೆ ದಾಳಿ ಮಾಡಿದೆ. ಅಧಿಕಾರಿಗಳ ಮನೆಯಲ್ಲಿ, ಕಚೇರಿಯಲ್ಲಿ ಸಿಕ್ಕ ದಾಖಲೆಗಳ ಆಧಾರದ ಮೇಲೆ ದಾಳಿ ಮಾಡಲಾಗಿದ್ದು, ದಾಳಿಗೆ ಮುಖ್ಯ ಕಾರಣ ಕೆಂಪೇಗೌಡ ಲೇಔಟ್​ನಲ್ಲಿ ಬದಲಿನಿವೇಶನ ಹಂಚಿಕೆ ಎಂದು ತಿಳಿದುಬಂದಿದೆ. ರೈತರ ಹೆಸರಲ್ಲಿ ಅಧಿಕಾರಿಗಳ ಜೊತೆಗೂಡಿ ಬದಲಿನಿವೇಶನ ಪಡೆದಿರುವ ಆರೋಪ ಕೇಳಿಬಂದಿದೆ. ರೈತರಿಗೆ ಬದಲಿ ನಿವೇಶನ ನೀಡುವ ಹೆಸರಲ್ಲಿ ಮಧ್ಯವರ್ತಿಗಳಿಂದ ಭ್ರಷ್ಟಾಚಾರ ಎಸಗಲಾಗಿದೆ. ಗೋಮಾಳ ಭೂಮಿಯನ್ನ ರೈತರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಮೋಸ ಮಾಡಿ, ಗೋಮಾಳ ಜಾಗಕ್ಕೆ ಮಧ್ಯವರ್ತಿಗಳು ಪರಿಹಾರ ಪಡೆದಿದ್ದಾರೆ.

ಇದನ್ನೂ ಓದಿ: ಎಸಿಬಿ ದಾಳಿಗೊಳಗಾಗಿದ್ದ ಅಧಿಕಾರಿಯನ್ನು ನಿವೃತ್ತಿ ನಂತರವೂ ಹುದ್ದೆಯಲ್ಲಿ ಮುಂದುವರಿಸಿದ ಸರ್ಕಾರ!

ಇದನ್ನೂ ಓದಿ: Hijab Verdict: ಹಿಜಾಬ್ ಪ್ರಕರಣದ ಹೈಕೋರ್ಟ್ ಆದೇಶ ಯಾವ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುತ್ತದೆ?

Published On - 10:06 am, Tue, 22 March 22