ಬೆಂಗಳೂರು: ರೌಡಿಶೀಟರ್ ಸಿದ್ದಾಪುರ ಮಹೇಶ್​ ಹತ್ಯೆ ಪ್ರಕರಣ: ಕೊನೆಗೂ ನ್ಯಾಯಾಧೀಶರ ಮುಂದೆ ಶರಣಾದ ವಿಲ್ಸನ್ ಗಾರ್ಡನ್ ನಾಗ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 18, 2023 | 1:07 PM

ಎರಡು ವರ್ಷದ ಕೊಲೆಯ ಹಳೆಯ ಧ್ವೇಷದ ಹಿನ್ನಲೆ ಅಗಸ್ಟ್​ 8 ರಂದು ರಾತ್ರಿ ನಡುರಸ್ತೆಯಲ್ಲಿ ರೌಡಿಶೀಟರ್ ಸಿದ್ದಾಪುರ ಮಹೇಶನನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ವಿಲ್ಸನ್ ಗಾರ್ಡನ್ ನಾಗ ಹಾಗೂ ಡಬಲ್ ಮೀಟರ್ ಮೋಹನ ತಲೆಮರೆಸಿಕೊಂಡಿದ್ದು, ಇದೀಗ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ಬೆಂಗಳೂರು: ರೌಡಿಶೀಟರ್ ಸಿದ್ದಾಪುರ ಮಹೇಶ್​ ಹತ್ಯೆ ಪ್ರಕರಣ: ಕೊನೆಗೂ ನ್ಯಾಯಾಧೀಶರ ಮುಂದೆ ಶರಣಾದ ವಿಲ್ಸನ್ ಗಾರ್ಡನ್ ನಾಗ
ರೌಡಿಶೀಟರ್​ ವಿಲ್ಸನ್ ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ
Follow us on

ಬೆಂಗಳೂರು, ಆ.18: ಬಹಳ ದಿನಗಳ ಬಳಿಕ ಬೆಂಗಳೂರಿನಲ್ಲಿ (Bengaluru) ಭೂಗತ ಪಾತಕಿಗಳು ನಡು ರಸ್ತೆಯಲ್ಲಿ ಮಚ್ಚು ಬೀಸಿದ್ದರು. ಹೌದು, ಎರಡು ವರ್ಷಗಳ ಹಿಂದೆ ಬನಶಂಕರಿ ದೇವಾಲಯದ ಮುಂದೆ ಮಚ್ಚು ಬೀಸಿ ಕೊಲೆ ಮಾಡಿದ್ದ ರೌಡಿಯೊಬ್ಬನನ್ನು 2023 ಅಗಸ್ಟ್​ 8 ರಂದು ರಾತ್ರಿ ನಡುರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿತ್ತು. ಬಳಿಕ ಈ ಹತ್ಯೆಯ ಆರೋಪಿಗಳಾದ ಕುಖ್ಯಾತ ರೌಡಿಶೀಟರ್​ ವಿಲ್ಸನ್ ಗಾರ್ಡನ್ ನಾಗ ಹಾಗೂ ಡಬಲ್ ಮೀಟರ್ ಮೋಹನ ಇಬ್ಬರು ತಲೆಮರೆಸಿಕೊಂಡಿದ್ದರು. ಇದೀಗ ಈ ಇಬ್ಬರು ಆರೋಪಿಗಳು 9ನೇ ಎಸಿಎಂಎಂ ಕೋರ್ಟ್​ಗೆ ಶರಣಾಗಿದ್ದಾರೆ. ಇನ್ನು ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರು, ಆಗಸ್ಟ್ 28 ರವರೆಗೆ ನಾಗ ಮತ್ತು ಮೋಹನನಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.

ಬೇಲ್​ ಮೇಲೆ ರಿಲೀಸ್ ಆಗ್ತಿದ್ದಂತೆ ರೌಡಿಶೀಟರ್​ ಹತ್ಯೆ​

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದ ರೌಡಿ ಶೀಟರ್ ಮಹೇಶ ಅಲಿಯಾಸ್ ಸಿದ್ದಾಪುರ ಮಹೇಶ್ ಅಂದು ರಾತ್ರಿ 9:20ರ ಸಮಯದಲ್ಲಿ ಬೇಲ್ ಮೇಲೆ ರಿಲೀಸ್ ಆಗಿ ಕೆಂಪು ಬಣ್ಣದ ಇಯಿಟೋಸ್ ಕಾರಿನಲ್ಲಿ ಜೈಲಿನಿಂದ ಮನೆ ಕಡೆ ಹೊರಟಿದ್ದ. ಸುಮಾರು 9:45ರ ಸಮಯಕ್ಕೆ ಹೊಸೂರ್ ರೋಡ್ ಸಿಗ್ನಲ್ ಬಳಿಗೆ ಬಂದಿದ್ದಾನೆ. ಈ ವೇಳೆ ಏಕಾಏಕಿ ಕಾರಿಗೆ ಅಡ್ಡಬಂದಿದ್ದ ಆರೇಳು ಜನರು ಮಚ್ಚು ಬೀಸಿದ್ದು, ಈ ವೇಳೆ ಮಹೇಶ ಕಾರಿನಿಂದ ಕೆಳಗೆ ಇಳಿದು ವಾಪಸ್ಸು ಹಿಂದಕ್ಕೆ ಓಡಲು ಪ್ರಯತ್ನಪಟ್ಟಿದ್ದ. ಆದರೂ ಬಿಡದ ದುಷ್ಕರ್ಮಿಗಳು ಸುಮಾರು ನೂರು ಮೀಟರ್ ದೂರ ಅಟ್ಟಾಡಿಸಿ ನಡು ರಸ್ತೆಯಲ್ಲಿ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದರು.

ಇದನ್ನೂ ಓದಿ:ಆನೇಕಲ್: ಅಕ್ರಮ ಸಂಬಂಧ ಆರೋಪ; ದೊಣ್ಣೆಯಿಂದ ಹೊಡೆದು ಗಾರೆ ಮೇಸ್ತ್ರಿ ಕೊಲೆ ಮಾಡಿದ ಕಾರ್ಮಿಕ

ವಿಲ್ಸನ್ ಗಾರ್ಡನ್ ನಾಗನ ಗೆಳೆಯನನ್ನ ಕೊಲೆ ಮಾಡಿದ್ದ ಮೃತ ರೌಡಿಶೀಟರ್​ ಮಹೇಶ

ಹೌದು, 2021 ರಲ್ಲಿ ವಿಲ್ಸನ್ ಗಾರ್ಡನ್ ನಾಗನ ಗೆಳೆಯನಾದ ಮದನ್ ಅಲಿಯಾಸ್ ಪಿಟೀಲ್ ಎಂಬಾತನನ್ನು ಇದೇ ಸಿದ್ದಾಪುರ ಮಹೇಶ ಮತ್ತು ತಂಡ ಬನಶಂಕರಿ ದೇವಾಲಯದ ಬಳಿಯ ರಸ್ತೆಯಲ್ಲಿ ಅಡ್ಡಹಾಕಿ ಕೊಚ್ಚಿ ಕೊಲೆ ಮಾಡಿದ್ದ. ಹೀಗಾಗಿ ಆರೋಪಿ ನಾಗನಿಗೆ ಗೆಳೆಯನನ್ನ ಹತ್ಯೆ ಮಾಡಿದವನಿಗೆ ಮುಗಿಸುವ ಪ್ಲಾನ್ ಇತ್ತಂತೆ. ಈ ವಿಚಾರ ತಿಳಿದ ಮಹೇಶ ಕೂಡ ನಾಗನನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದ.

ಜೀವ ಭಯಕ್ಕೆ ಹಳೆ ಕೇಸ್​ ಹಾಕಿಸಿಕೊಂಡು ಜೈಲು ಸೇರಿದ್ದ ಮಹೇಶ

ಇದಾದ ಬಳಿಕ ಮತ್ತೆ ತನಗೆ ನಾಗನಿಂದ ಜೀವ ಭಯ ಇದೆ ಎಂದು ತಿಳಿದು ಹಳೆ ಕೇಸ್​​ನಲ್ಲಿ ವಾಪಸ್ಸು ಜೈಲು ಸೇರಿದ್ದ. ಆ.8 ರಂದು ಬೇಲ್ ಪಡೆದಿದ್ದ ಮಹೇಶ ರಾತ್ರಿ ಒಂಬತ್ತು ಇಪತ್ತಕ್ಕೆ ಜೈಲಿನಿಂದ ಹೊರ ಬಂದಿದ್ದ. ಕಾರಿನಲ್ಲಿ ಮಹೇಶ ಹಾಗೂ ಹಿಂಬದಿ ಸ್ಕೂಟರ್​ನಲ್ಲಿ ಆತನ ಪತ್ನಿ ಬರುತ್ತಿದ್ದಾಗಲೇ ದುಷ್ಕರ್ಮಿಗಳು ಅಟ್ಯಾಕ್ ಮಾಡಿ ಕೊಲೆ ಮಾಡಿದ್ದಾರೆ. ಘಟನೆ ಸಂಭಂದ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸುತ್ತಿದ್ದರು. ಇದೀಗ ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:55 pm, Fri, 18 August 23