ಪಿಸ್ತೂಲ್ ತೋರಿಸಿ ದರೋಡೆ ಮಾಡುತ್ತಿದ್ದ ಇಬ್ಬರ ಬಂಧನ: 2 ಕೆಜಿ ಚಿನ್ನ, 5 ಕೆಜಿ ಬೆಳ್ಳಿ ವಶಕ್ಕೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 21, 2021 | 5:37 PM

ಬಶೀರ್ ಅಲಿಯಸ್ ಸಮ್ಮೂ ಪೊಲೀಸರಿಂದ ತಪ್ಪಿಸಿಕೊಳ್ಳಲು ಮಾಧ್ಯಮ ಸಂಸ್ಥೆಯೊಂದರ ಗುರುತಿನ ಪತ್ರ ಬಳಸುತ್ತಿದ್ದ. ಅರೋಪಿಗಳ ಬಂಧನದಿಂದ ಒಟ್ಟು 18 ಪ್ರಕರಣಗಳು ಪತ್ತೆಯಾಗಿವೆ

ಪಿಸ್ತೂಲ್ ತೋರಿಸಿ ದರೋಡೆ ಮಾಡುತ್ತಿದ್ದ ಇಬ್ಬರ ಬಂಧನ: 2 ಕೆಜಿ ಚಿನ್ನ, 5 ಕೆಜಿ ಬೆಳ್ಳಿ ವಶಕ್ಕೆ
ಬಾಣಸವಾಡಿ ಪೊಲೀಸರು ಬಂಧಿಸಿರುವ ಬಷೀರ್ ಮತ್ತು ಆಸಿಫ್. ವಶಪಡಿಸಿಕೊಂಡಿರುವ ಕಾರು.
Follow us on

ಬೆಂಗಳೂರು: ಪಿಸ್ತೂಲ್ ತೋರಿಸಿ ದರೋಡೆ, ಮನೆಗಳವು ಮಾಡುತ್ತಿದ್ದ ಇಬ್ಬರನ್ನು ಬಾಣಸವಾಡಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಾಂಬೆ ಸಲೀಂ, ತಮ್ಮ ಬಶೀರ್ ಅಲಿಯಾಸ್ ಸಮ್ಮು ಬಂಧಿತರು. 2018ರಲ್ಲಿ ಕಳುವಾಗಿದ್ದ ಕಾರನ್ನೇ ಈ ಆರೋಪಿಗಳು ಕಳ್ಳತನಕ್ಕೆ ಬಳಸುತ್ತಿದ್ದರು. ಬಶೀರ್ ಅಲಿಯಸ್ ಸಮ್ಮೂ ಪೊಲೀಸರಿಂದ ತಪ್ಪಿಸಿಕೊಳ್ಳಲು ಮಾಧ್ಯಮ ಸಂಸ್ಥೆಯೊಂದರ ಗುರುತಿನ ಪತ್ರ ಬಳಸುತ್ತಿದ್ದ. ಅರೋಪಿಗಳ ಬಂಧನದಿಂದ ಒಟ್ಟು 18 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳ ಬಳಿ ಒಂದು ನಾಡ ಬಂದೂಕು ಹಾಗೂ ಜೀವಂತ ಗುಂಡುಗಳು ಪತ್ತೆಯಾಗಿವೆ. ಕೊಲ್ಕತ್ತಾದಿಂದ ಪಿಸ್ತೂಲ್ ಖರೀದಿಸಿದ್ದೆವು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಈ ಹಿಂದೆ ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ರಾಜಾನುಕುಂಟೆ ಬಳಿ ಬಂಧಿಸಲು ಪೊಲೀಸರು ಯತ್ನಿಸಿದ್ದರು. ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ, ಪೊಲೀಸರನ್ನು ಹೆದರಿಸಿ ಆರೋಪಿಗಳು ತಪ್ಪಿಸಿಕೊಂಡಿದ್ದರು.

ನಗರದ ಹಲವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇವರ ವಿರುದ್ಧ ಕಳ್ಳತನ ಮತ್ತು ದರೋಡೆ ಪ್ರಕರಣಗಳು ದಾಖಲಾಗಿದ್ದವು. ಹಣೆಗೆ ಪಿಸ್ತೂಲ್ ಇಟ್ಟು ದರೋಡೆ ಮಾಡುವುದು, ಯಾರು ಇಲ್ಲದ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುವುದು ಇವರ ಅಪರಾಧ ವೈಖರಿಯಾಗಿತ್ತು. ಬಂಧಿತರಿಂದ ಕೆಜಿಗಟ್ಟಲೆ ಚಿನ್ನ ಮತ್ತು ಬೆಳ್ಳಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಣೆಗೆ ಬಂದೂಕು ಇಟ್ಟು ದರೋಡೆ ಮಾಡುವುದನ್ನೂ ಇವರು ರೂಢಿಸಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಸಸ್ಪೆಂಡ್ ಆದವರಿಗೆ ಹಲವು ಸಮಸ್ಯೆ: ಕಮಲ್​ಪಂತ್ ಎಚ್ಚರಿಕೆ
ಬೆಂಗಳೂರಿನಲ್ಲಿ ಪೊಲೀಸ್ ಸಬ್​ ಇನ್​ಸ್ಪೆಕ್ಟರ್ ಒಬ್ಬರು ಹಣ ಪಡೆದು ಅಮಾನತಾದ ಕುರಿತು ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಹಣ ಪಡೆದ ಆರೋಪದ ಮೇಲೆ ಸಸ್ಪೆಂಡ್ ಆಗುವವರ ಕರಿಯರ್​ಗೆ ಸಮಸ್ಯೆ ಅಗುತ್ತೆ. ಮುಂದಿನ ಪೋಸ್ಟಿಂಗ್​ಗಳು ಸುಗಮವಾಗಿ ಆಗುವುದಿಲ್ಲ. ಕಠಿಣ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿದರು.

ಹಲವು ದರೋಡೆ ಹಾಗೂ ಕಳವು ಪ್ರಕರಣಗಳನ್ನು ಪತ್ತೆ ಮಾಡಿರುವ ಬಾಣಸವಾಡಿ ಪೊಲೀಸ್ ತಂಡಕ್ಕೆ ಐವತ್ತು ಸಾವಿರ ರೂಪಾಯಿ ಬಹುಮಾನ ಘೋಷಿಸಿದ ಕಮಲ್ ಪಂತ್, ಬಾಣಸವಾಡಿ ಉಪವಿಭಾಗದಲ್ಲಿ 2 ಕೋಟಿ ಮೌಲ್ಯದ ವಸ್ತು ವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಕಳವು ಪ್ರಕರಣಗಳ 2 ತಂಡಗಳನ್ನು ಪೊಲೀಸರು ಬಂಧಿಸಿದ್ದಾರೆ. 2.256 ಕೆಜಿ ಚಿನ್ನ, 5 ಕೆಜಿ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ವಶಪಡಿಸಿಕೊಂಡಿರುವ ವಸ್ತುಗಳ ಮೊತ್ತು ಸುಮಾರು ₹ 2 ಕೋಟಿ ಎಂದು ಹೇಳಿದರು.

ಇದನ್ನೂ ಓದಿ: ಭಾರತ್ ಬಂದ್ ವೇಳೆ ಪೊಲೀಸ್ ಇನ್ಸ್​ಪೆಕ್ಟರ್​ ವಾಕಿಟಾಕಿ ಕಳವು
ಇದನ್ನೂ ಓದಿ: ಯಾರಬ್ ನಗರದಲ್ಲಿ ಮಹಿಳೆ ಬರ್ಬರ ಹತ್ಯೆ; ಕೊಲೆ ಮಾಡಿ, ಮನೆಗೆ ಬೀಗ ಹಾಕಿ ಆರೋಪಿ ಪರಾರಿ