Independence Day 2026: ವಿಧಾನಸೌಧದ ಮುಂಭಾಗ ಇಂದು ಸಂಜೆ ಸಂಗೀತ ರಸಸಂಜೆ, ಫ್ರೀಡಂ ಪರೇಡ್!

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೆಂಗಳೂರಿನ ವಿಧಾನಸೌಧ ಮುಂಭಾಗ ಇಂದು ಮಧ್ಯಾಹ್ನ 12ರಿಂದ ರಾತ್ರಿ 10ರವರೆಗೆ 'ಫ್ರೀಡಂ ಹಬ್ಬ' ನಡೆಯಲಿದೆ. ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಅಂಬೇಡ್ಕರ್ ರಸ್ತೆಯಲ್ಲಿ ಫ್ರೀಡಂ ಪರೇಡ್ ಹಾಗೂ ಸಂಜೆ ಎಂ.ಡಿ.ಪಲ್ಲವಿ, ರಘು ದೀಕ್ಷಿತ್, ಸಂಜಿತ್ ಹೆಗ್ಡೆ ಅವರಿಂದ ಸಂಗೀತ ರಸಸಂಜೆ ಜರುಗಲಿದೆ. ನೋಂದಾಯಿತ 20,000ಕ್ಕೂ ಹೆಚ್ಚು ಜನರಿಗೆ ಪ್ರವೇಶವಿದ್ದು, 3,000 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

Independence Day 2026: ವಿಧಾನಸೌಧದ ಮುಂಭಾಗ ಇಂದು ಸಂಜೆ ಸಂಗೀತ ರಸಸಂಜೆ, ಫ್ರೀಡಂ ಪರೇಡ್!
ವಿಧಾನಸೌಧ

Updated on: Aug 15, 2026 | 11:54 AM

ಮುಖ್ಯಾಂಶಗಳು

  • ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿಧಾನಸೌಧದಲ್ಲಿ ಇಂದು 'ಫ್ರೀಡಂ ಹಬ್ಬ' ಆಯೋಜಿಸಲಾಗಿದೆ.
  • ಮಧ್ಯಾಹ್ನದಿಂದ ರಾತ್ರಿಯವರೆಗೆ ಫ್ರೀಡಂ ಪರೇಡ್ ಹಾಗೂ ಸಂಗೀತ ರಸಸಂಜೆ ನಡೆಯಲಿದೆ.
  • ನೋಂದಾಯಿಸಿದ 20 ಸಾವಿರ ಜನರಿಗೆ ಪ್ರವೇಶ, 3,000 ಪೊಲೀಸರ ಭದ್ರತೆ.

ಬೆಂಗಳೂರು, ಆಗಸ್ಟ್ 15: ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಅಂಗವಾಗಿ ರಾಜಧಾನಿ ಬೆಂಗಳೂರಿನ ವಿಧಾನಸೌಧದ ಮುಂಭಾಗ ಇಂದು ಅದ್ಧೂರಿ ‘ಫ್ರೀಡಂ ಹಬ್ಬ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸತತ 10 ಗಂಟೆಗಳ ಕಾಲ ನಡೆಯಲಿರುವ ಈ ಉತ್ಸವವು ಒಟ್ಟು 3 ಪ್ರಮುಖ ಭಾಗಗಳಲ್ಲಿ ಜರುಗಲಿದೆ.

ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಿಂದ ಚಾಲನೆ

ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಶಾಲಾ ಮಕ್ಕಳಿಗಾಗಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಕ್ಕಳು ತಮ್ಮ ಪ್ರತಿಭಾ ಪ್ರದರ್ಶನದ ಮೂಲಕ ಸ್ವಾತಂತ್ರ್ಯ ಉತ್ಸವಕ್ಕೆ ರಂಗು ತುಂಬಲಿದ್ದಾರೆ.

ಅಂಬೇಡ್ಕರ್ ರಸ್ತೆಯಲ್ಲಿ ಕಣ್ಣು ಕೋರೈಸುವ ಫ್ರೀಡಂ ಪರೇಡ್

ಮಧ್ಯಾಹ್ನ 3 ರಿಂದ 5.30 ರವರೆಗೆ ವಿಧಾನಸೌಧ ಮತ್ತು ಹೈಕೋರ್ಟ್ ಮಧ್ಯದ ಅಂಬೇಡ್ಕರ್ ರಸ್ತೆಯಲ್ಲಿ ‘ಫ್ರೀಡಂ ಪರೇಡ್’ ನಡೆಯಲಿದೆ. ವಿಧಾನಸೌಧದ ಮುಂಭಾಗದ ಐಪಿಒ ಸರ್ಕಲ್ (ಗೋಪಾಲಗೌಡ ಸರ್ಕಲ್) ನಿಂದ ಆರಂಭವಾಗುವ ಈ ಪರೇಡ್ ತಿಮ್ಮಯ್ಯ ವೃತ್ತದವರೆಗೆ ಸಾಗಲಿದೆ. ಈ ಪರೇಡ್‌ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ 15 ತಂಡಗಳು ಹಾಗೂ ವಿವಿಧ ರಾಜ್ಯಗಳ 10 ಪ್ರಮುಖ ಕಲಾತಂಡಗಳು ತಮ್ಮ ಸಾಂಪ್ರದಾಯಿಕ ಕಲೆಗಳನ್ನು ಪ್ರದರ್ಶಿಸಲಿವೆ.

ಎಂ.ಡಿ.ಪಲ್ಲವಿ, ರಘು ದೀಕ್ಷಿತ್ ತಂಡದಿಂದ ಸಂಗೀತ ರಸಸಂಜೆ

ಸಂಜೆ 5.30 ರಿಂದ ರಾತ್ರಿ 10 ಗಂಟೆಯವರೆಗೆ ವಿಧಾನಸೌಧದ ಮುಂದಿನ ಬೃಹತ್ ವೇದಿಕೆಯಲ್ಲಿ ಅದ್ಧೂರಿ ‘ಸಂಗೀತ ರಸಸಂಜೆ’ ಹಾಗೂ ನೃತ್ಯ ಕಾರ್ಯಕ್ರಮಗಳು ಜರುಗಲಿವೆ. ಖ್ಯಾತ ಗಾಯಕರಾದ ಎಂ.ಡಿ. ಪಲ್ಲವಿ, ಸಂಜಿತ್ ಹೆಗ್ಡೆ, ರಘು ದೀಕ್ಷಿತ್ ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಪ್ರಖ್ಯಾತ ಕಲಾವಿದರು ಗಾಯನದ ಮೂಲಕ ಜನರನ್ನು ರಂಜಿಸಲಿದ್ದಾರೆ.

ನೋಂದಾಯಿತರಿಗೆ ಮಾತ್ರ ಪ್ರವೇಶ – 3 ಸಾವಿರ ಪೊಲೀಸರ ಭದ್ರತೆ

ಈ ಬಾರಿಯ ‘ಫ್ರೀಡಂ ಹಬ್ಬ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಂಚಿತವಾಗಿ ನೋಂದಣಿ (Register) ಮಾಡಿಕೊಂಡವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ 20 ಸಾವಿರಕ್ಕೂ ಅಧಿಕ ಜನರು ಆನ್‌ಲೈನ್ ಮೂಲಕ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಕಾರ್ಯಕ್ರಮದ ಭದ್ರತೆಗಾಗಿ ಡಿಸಿಪಿ, ಎಸಿಪಿ ದರ್ಜೆಯ ಅಧಿಕಾರಿಗಳು ಸೇರಿದಂತೆ ಸುಮಾರು 3,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us