25 ಸಾವಿರಕ್ಕೂ ಹೆಚ್ಚು ಮಾತ್ರೆಗಳನ್ನ ಸೇವಿಸಿದ್ದೇನೆ; ಡೆತ್​​ನೋಟ್ ಬರೆದು ಗುಂಡು ಹಾರಿಸಿಕೊಂಡು ಬಿಇಒ ಟಿಎನ್ ಕಮಲಾಕರ್ ಆತ್ಮಹತ್ಯೆ

ಅವರಿಗೆ ಕಾಯಿಲೆ ಇರುವ ಬಗ್ಗೆ ಈಗಲೇ ನನಗೆ ಗೊತ್ತಾಗಿದ್ದು‌. ಆದ್ರೆ ಈ ರೀತಿ ಮಾಡಿಕೊಳ್ತಾರೆ ಎಂದು ಅಂದುಕೊಂಡಿರಲಿಲ್ಲ. ಒಬ್ಬ ಒಳ್ಳೆ ಅಧಿಕಾರಿಯನ್ನ ನಮ್ಮ ಇಲಾಖೆ ಕಳೆದುಕೊಂಡಿದೆ ಎಂದು ಬೆಂಗಳೂರಿನ ಯಲಹಂಕ ಡಿಡಿಪಿಐ ನಾರಾಯಣ್ ಬೇಸರ ವ್ಯಕ್ತಪಡಿಸಿದ್ದಾರೆ.

25 ಸಾವಿರಕ್ಕೂ ಹೆಚ್ಚು ಮಾತ್ರೆಗಳನ್ನ ಸೇವಿಸಿದ್ದೇನೆ; ಡೆತ್​​ನೋಟ್ ಬರೆದು ಗುಂಡು ಹಾರಿಸಿಕೊಂಡು ಬಿಇಒ ಟಿಎನ್ ಕಮಲಾಕರ್ ಆತ್ಮಹತ್ಯೆ
ಬಿಇಒ ಟಿಎನ್ ಕಮಲಾಕರ್
Follow us
| Updated By: ganapathi bhat

Updated on:Dec 26, 2021 | 6:20 PM

ಬೆಂಗಳೂರು: ಬೆಂಗಳೂರಿನ ಯಲಹಂಕ ಬಿಇಒ ಟಿ.ಎನ್. ಕಮಲಾಕರ್ ಎಂಬವರು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಕೊಡಿಗೇಹಳ್ಳಿಯ ಮನೆಯಲ್ಲಿ ನಡೆದಿದೆ. ಪಿಸ್ತೂಲ್​​ನಿಂದ ಗುಂಡು ಹಾರಿಸಿಕೊಂಡು ಕಮಲಾಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನಾರೋಗ್ಯ ಪೀಡಿತರಾಗಿದ್ದ ಬಿಇಒ ಟಿ.ಎನ್​.ಕಮಲಾಕರ್ ಮನನೊಂದು ಡೆತ್​​ನೋಟ್ ಬರೆದಿಟ್ಟು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಆತ್ಮಹತ್ಯೆ ಮುನ್ನ ಡೆತ್ ನೋಟ್ ಬರೆದಿಟ್ಟುಕೊಂಡಿದ್ದಾರೆ. ಅನಾರೋಗ್ಯದ ಸಮಸ್ಯೆ ಸಾಕಷ್ಟು ಕಾಡ್ತಿತ್ತು. ಇದುವರೆಗೆ 25 ಸಾವಿರಕ್ಕೂ ಹೆಚ್ಚು ಮಾತ್ರೆಗಳನ್ನ ಸೇವಿಸಿದ್ದೇನೆ. ಅನಾರೋಗ್ಯದಿಂದ ಜೀವನವೇ ಸಾಕು ಅನ್ನಿಸಿದೆ. ನನ್ನ ಕುಟುಂಬದವರು ಇಲ್ಲಿಯವರೆಗೆ ನೋಡಿಕೊಂಡಿರೋದು ನಿಜಕ್ಕೂ ನನ್ನ ಅದೃಷ್ಟ. ಆದ್ರೆ ಅವರಿಗೆ ಇನ್ನೂ ಹೆಚ್ಚು ನೋವು ಕೊಡೋಕೆ ನನಗೆ ಇಷ್ಟ ಇಲ್ಲ. ನಮ್ಮ ಮನೆಯವರು ಎಲ್ಲರೂ ತುಂಬಾ ಒಳ್ಳೆಯವರು. ಇನ್ಮುಂದೆ ಯಾರಿಗೂ ತೊಂದರೆ ಕೊಡಬಾರದು ಅಂತ ಈ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಕಮಲಾಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಯಲಹಂಕ ಬಿಇಒ ಕಮಲಾಕರ್ ಆತ್ಮಹತ್ಯೆಗೆ ಸಂಬಂಧಿಸಿ ಬೆಂಗಳೂರಿನ ಯಲಹಂಕ ಡಿಡಿಪಿಐ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಇಒ ಟಿ.ಎನ್​.ಕಮಲಾಕರ್ ಒಳ್ಳೆಯ ಅಧಿಕಾರಿಯಾಗಿದ್ದರು. ಕಳೆದ 3-4 ವರ್ಷಗಳಿಂದ ಬಿಇಒ ಆಗಿ ಕೆಲಸ ಮಾಡುತ್ತಿದ್ದರು. ಈ ರೀತಿಯಾಗಿರೋದು ನಮ್ಮ ಇಲಾಖೆಗೆ ಬಹಳ ದೊಡ್ಡ ನಷ್ಟ. ಅವರಿಗೆ ಕಾಯಿಲೆ ಇರುವ ಬಗ್ಗೆ ಈಗಲೇ ನನಗೆ ಗೊತ್ತಾಗಿದ್ದು‌. ಆದ್ರೆ ಈ ರೀತಿ ಮಾಡಿಕೊಳ್ತಾರೆ ಎಂದು ಅಂದುಕೊಂಡಿರಲಿಲ್ಲ. ಒಬ್ಬ ಒಳ್ಳೆ ಅಧಿಕಾರಿಯನ್ನ ನಮ್ಮ ಇಲಾಖೆ ಕಳೆದುಕೊಂಡಿದೆ ಎಂದು ಬೆಂಗಳೂರಿನ ಯಲಹಂಕ ಡಿಡಿಪಿಐ ನಾರಾಯಣ್ ಬೇಸರ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಇಡೀ ಕುಟುಂಬ ಕೊಂದು ಸಾಯಬೇಕು ಅನ್ಕೊಂಡಿದ್ದೆ, ಮಡದಿ ಮಕ್ಕಳ ಮುದ್ದು ಮುಖ ನೋಡಿ ಒಬ್ಬನೇ ಸಾಯುತ್ತಿದ್ದೇನೆ ಎಂದು ಸಾಯುವ ಮುನ್ನ ವ್ಯಕ್ತಿಯೊಬ್ಬ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಆನೇಕಲ್ ತಾಲೂಕಿನ ಹುಲಿಮಂಗಲ ಸಮೀಪದ ನಂಜಾವುರ್ ರಸ್ತೆಯಲ್ಲಿ ನಡೆದಿದೆ. ಸಾಲದ ಬಾಧೆ ತಾಳಲಾರದೆ ಕಾರಿನಲ್ಲೇ ಕುಳಿತು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾರಿನ ಎಲ್ಲಾ ಗ್ಲಾಸ್ ಕ್ಲೋಸ್ ಮಾಡಿ ವಿಷ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ಮೃತ ವ್ಯಕ್ತಿ ನಗರದ ಡೈರಿ ಸರ್ಕಲ್ ನಿವಾಸಿ ಎಂದು ತಿಳಿದುಬಂದಿದೆ. ಡ್ರೈವರ್ ಸೀಟ್ ಮೇಲೆ ಮಲಗಿದ ಸ್ಥಿತಿಯಲ್ಲಿ ಶವ ಪತ್ತೆ ಆಗಿದೆ. ಆರ್ಥಿಕ ನಷ್ಟ ಹಾಗೂ ತಂದೆ ಮಾಡಿದ ಸಾಲದ ಕುರಿತು ಹೇಳಿಕೆ ನೀಡಿದ್ದು, ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ವ್ಯಕ್ತಿ ಕಂಪನಿ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.

ಹಾಸನ: ಮೃತ ವ್ಯಕ್ತಿಯ ಪೋಷಕರಿಂದ ಕೊಲೆ ಆರೋಪ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹಳ್ಳಿ ಮೈಸೂರಿನಲ್ಲಿ ರವಿ (45) ಮೃತದೇಹ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಮೃತ ರವಿ ಪೋಷಕರಿಂದ ಕೊಲೆ ಆರೋಪ ಕೇಳಿಬಂದಿದೆ. ಮಹಿಳೆಗೆ ಕರೆ ಮಾಡಿ ಮದುವೆ ಪ್ರಸ್ತಾಪ ಮಾಡಿದ ಹಿನ್ನೆಲೆ ಮಹಿಳೆ ಕಡೆಯವರು ರವಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಹೊಯ್ಸಳ, ಬಳೆ ಮಂಜ, ಶ್ರೀಜಿತ್, ಸಾಗರ್ ವಿರುದ್ಧ ಆರೋಪ ಕೇಳಿಬಂದಿದ್ದು ಹಳ್ಳಿ ಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಅಪ್ರಾಪ್ತರಿಂದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಅಪ್ರಾಪ್ತರಿಂದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಆರೋಪ ಮಾಡಿದ ದುರ್ಘಟನೆ ಧಾರವಾಡ ನಗರದ ಬಡಾವಣೆಯೊಂದರಲ್ಲಿ ನಡೆದಿದೆ. 16 ವರ್ಷದ ಬಾಲಕಿ‌ ಮೇಲೆ ಐವರು ಅಪ್ರಾಪ್ತರಿಂದ ಕೃತ್ಯ ಎಸಗಲಾಗಿದೆ. ಧಾರವಾಡ ನಗರ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲು ಮಾಡಲಾಗಿದೆ.

ಬಸ್​ ಚಕ್ರಕ್ಕೆ ಸಿಲುಕಿ ವ್ಯಕ್ತಿ ದುರ್ಮರಣ ಬೆಂಗಳೂರಿನಲ್ಲಿ ಬಸ್​ ಚಕ್ರಕ್ಕೆ ಸಿಲುಕಿ ವ್ಯಕ್ತಿ ದುರ್ಮರಣವನ್ನಪ್ಪಿದ ಘಟನೆ ಮೆಜೆಸ್ಟಿಕ್​ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಬಸ್​ ಚಕ್ರಕ್ಕೆ ಸಿಲುಕಿ ಕೃಷ್ಣಮೂರ್ತಿ (45) ದುರ್ಮರಣವನ್ನಪ್ಪಿದ್ದಾರೆ. ಉಪ್ಪಾರಪೇಟೆ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಹಾಡಹಗಲೇ ಮನೆಯಲ್ಲಿ ಕಳ್ಳತನ ವಿಜಯಪುರ ನಗರದಲ್ಲಿ ಹಾಡಹಗಲೇ ಮನೆಯಲ್ಲಿ ಕಳ್ಳತನ ಮಾಡಿದ ಘಟನೆ ನಡೆದಿದೆ. ಕನಕದಾಸ ಬಡಾವಣೆಯಲ್ಲಿ ಮನೆಯಲ್ಲಿದ್ದ ನಗನಾಣ್ಯ ಕಳವಾಗಿದೆ. ಬೀಗ ಒಡೆದು ಲಕ್ಷ್ಮಣ ಬಾವಿಕಟ್ಟಿ ಅವರ ಮನೆಯಲ್ಲಿ ಕಳವು ನಡೆದಿದೆ. ಮನೆಯಲ್ಲಿದ್ದ ಚಿನ್ನಾಭರಣ, 40 ಸಾವಿರ ನಗದು ಕಳ್ಳತನ ನಡೆದಿದೆ. ಜಲನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮಂಡ್ಯ: ಲಾರಿಗೆ ಕಾರು ಡಿಕ್ಕಿಯಾಗಿ ಓರ್ವ ಸಾವು ಹಿಂಬಂದಿಯಿಂದ ಲಾರಿಗೆ ಕಾರು ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ನಡೆದಿದೆ. ಘಟನೆಯಲ್ಲಿ ಮತ್ತೊಬ್ಬನಿಗೆ ಗಂಭೀರ ಗಾಯವಾಗಿದೆ. ಗೆಜ್ಜಲಗೆರೆ ಸಮೀಪದ ಮೈಸೂರು ಬೆಂಗಳೂರು‌ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಅತೀ ವೇಗವಾಗಿ ಚಲಿಸಿ ಹಿಂಬದಿಯಿಂದ ಲಾರಿಗೆ ಡಿಕ್ಕಿ ಆಗಿದ್ದು ಘಟನೆಯಲ್ಲಿ ಕಾರು ಚಾಲಕ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮತ್ತೋರ್ವನಿಗೆ ಗಂಭೀರ ಗಾಯವಾಗಿದೆ. ಗಾಯಾಳು ಮಂಡ್ಯ ಮಿಮ್ಸ್​ಗೆ ರವಾನೆ ಮಾಡಲಾಗಿದೆ. ಮದ್ದೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಚಾಮರಾಜನಗರ ಗಡಿ ಗ್ರಾಮಗಳಿಗೆ 14 ಕಾಡಾನೆಗಳು ಲಗ್ಗೆಯಿಟ್ಟಿವೆ. ಆನೆಗಳನ್ನು ಕಾಡಿಗಟ್ಟುವುದಕ್ಕೆ ಪ್ರತಿನಿತ್ಯ ರೈತರು ಹರಸಾಹಸ ಪಡುತ್ತಿದ್ದಾರೆ. ತಾಳವಾಡಿ ತಾಲೂಕಿನ ಮಲ್ಲನಗುಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆ ಗಡಿಯ ತಮಿಳುನಾಡಿನಲ್ಲಿ ಘಟನೆ ನಡೆದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಮಂಡ್ಯ: ಅಪ್ರಾಪ್ತ ಬಾಲಕಿಯ ಸಾವಿನ ಸುತ್ತ ಅನುಮಾನದ ಹುತ್ತ; ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಪೋಷಕರ ಆರೋಪ

ಇದನ್ನೂ ಓದಿ: ಅಂಪೈರ್‌ಗೆ ಕೊಲೆ ಬೆದರಿಕೆ ಹಾಕಿದ ಕ್ಲಬ್ ಕ್ರಿಕೆಟಿಗನಿಗೆ ಆಜೀವ ನಿಷೇಧ!

Published On - 6:20 pm, Sun, 26 December 21