ಬೀದರ್​ನ ಬರಡು ಭೂಮಿಯಲ್ಲಿ ನೇರಳೆ ಹಣ್ಣು ಬೆಳೆದು ಯಶಸ್ಸು ಕಂಡ ಪಂಜಾಬ್​ ರೈತ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 11, 2024 | 3:33 PM

ಕೃಷಿ ಕಾಯಕವೆಂದರೆ ಆ ರೈತನಿಗೆ ಎಲ್ಲಿಲ್ಲದ ಪ್ರೀತಿ. ವೈಜ್ಞಾನಿಕ ರೀತಿಯಲ್ಲಿ ಕೃಷಿ ಮಾಡುವುದೆಂದರೆ ಆತ ಎತ್ತಿದ ಕೈ. ಹೀಗಾಗಿ ಪಂಜಾಬ್​ನಿಂದ ಗಡೀ ಜಿಲ್ಲೆ ಬೀದರ್​ಗೆ ಬಂದು ಕೃಷಿಯಲ್ಲಿ ತೊಡಗಿದ್ದಾರೆ. ಕಡಿಮೆ ನೀರು ಬರದ ನಾಡಿನಲ್ಲಿ ಪಲೋಡಿ ಜಾತಿಯ ನೇರಳೆ ಹಣ್ಣುಗಳನ್ನ ಬೆಳೆದು ಕೈ ತುಂಬಾ ಆದಾಯ ಘಳಿಸುತ್ತಿದ್ದಾರೆ.

ಬೀದರ್​ನ ಬರಡು ಭೂಮಿಯಲ್ಲಿ ನೇರಳೆ ಹಣ್ಣು ಬೆಳೆದು ಯಶಸ್ಸು ಕಂಡ ಪಂಜಾಬ್​ ರೈತ
ಬೀದರ್​ನಲ್ಲಿ ನೇರಳೆ ಹಣ್ಣು ಬೆಳೆದು ಯಶಸ್ಸು ಕಂಡ ಪಂಜಾಬ್​ ರೈತ
Follow us on

ಬೀದರ್​, ಜೂ.11: ಬೀದರ್ ಜಿಲ್ಲೆಯಲ್ಲಿ ಒಂದು ದಶಕದಿಂದಲೂ ಪದೇ ಪದೇ ಬರಗಾಲ,ಅತಿವೃಷ್ಟಿ-ಅನಾವೃಷ್ಟಿಯಿಂದ ರೈತರು ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟದ ಸ್ಥಿತಿಯನ್ನ ಎದುರಿಸುವಂತಾಗಿದೆ. ಜೋಳ, ಕಬ್ಬು, ಸೋಯಾ ಬೆಳೆದ ನಷ್ಟದ ಹಾದಿ ತುಳಿಯುತ್ತಿರುವ ರೈತರ ಸಂಖ್ಯೆ ಹೆಚ್ಚುತ್ತಿರುವ ಇಂದಿನ ದಿನಮಾನದಲ್ಲಿ ಜೋಳ, ಕಬ್ಬು ಬೆಳೆಗೆ ಬ್ರೇಕ್ ಹಾಕಿ ತೋಟಗಾರಿಗೆ ಬೆಳೆಗೆ ಮನಸ್ಸು ಮಾಡಿದ ಬೀದರ್​ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಧುಮ್ಮನಸೂರು ಗ್ರಾಮದ ರೈತ ಹರದೀಪ್ ಸಿಂಗ್, ನೇರಳೆ ಹಣ್ಣು(Java Plum) ಬೆಳೆದು ಯಶಸ್ಸು ಕಂಡಿದ್ದಾರೆ.

ಎಕರೆಗೆ ಒಂದು ಲಕ್ಷದಂತೆ ಆದಾಯ

ಮೂಲತಃ ಪಂಜಾಬ್ ಆದರೂ ಕೃಷಿ ಮಾಡುವ ಉದ್ದೇಶದಿಂದ ಇಲ್ಲಿ ಜಮೀನು ಖರೀಧಿಸಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ತನ್ನ 90 ಎಕರೆ ಜಮೀನಿನಲ್ಲಿ 5 ಎಕರೆ ಪ್ರದೇಶದಲ್ಲಿ ನೇರಳೆ ಗಿಡಗಳನ್ನ ನೆಟ್ಟು ಉತ್ತಮ ಫಸಲನ್ನ ಪಡೆಯುತ್ತಿದ್ದಾರೆ. ಇನ್ನು ಇವರು ತೋಟದಲ್ಲಿ ಬೆಳೆದ ನೇರಳೆ ಹಣ್ಣುಗಳು ನೋಡಲು ಆಕರ್ಷಕವಾಗಿದ್ದು, ತಿನ್ನಲು ಕೂಡ ರುಚಿಯಾಗಿವೆ. ಹೀಗಾಗಿ ರೈತನ ಹೊಲದಲ್ಲಿ ಬೆಳೆದ ನೇರಳೆ ಹಣ್ಣಿಗೆ ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದ ಬೇಡಿಕೆಯಿದೆ. ಐದು ವರ್ಷದ ಹಿಂದೆ ನಾಟಿ ಮಾಡಿದ ನೆರಳೆ ಗಿಡಗಳು ಮೂರು ವರ್ಷದಿದಾ ಹಣ್ಣು ಬಿಡುತ್ತಿದ್ದು, ಪ್ರತಿವರ್ಷವೂ ಎಕರೆಗೆ ಒಂದು ಲಕ್ಷದಂತೆ ಐದು ಎಕರೆಯಷ್ಟು ನೇರಳೆ ಹಣ್ಣಿನ ತೋಟವನ್ನ ಮಾರಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ:ಬಿತ್ತನ ಬಳಿಕ ಚಿಗುರೊಡೆದಿದ್ದ ಬೆಳೆ! ದಾಯಾದಿಗಳೇ ಟ್ರ್ಯಾಕ್ಟರ್ ಮೂಲಕ ನಾಶ ಮಾಡಿದರು

ಐದು ಎಕರೆಯಲ್ಲಿ 513 ನೇರಳೆ ಗಿಡಗಳು

ಇನ್ನು ಬೀದರ್ ಜಿಲ್ಲೆಯಲ್ಲಿ ನೇರಳೆ ಬೆಳೆಗೆ ಉತ್ತಮವಾದ ಮಣ್ಣು ಹಾಗೂ ಉತ್ತಮ ಹವಾಮಾನ ಇರುವುದರಿಂದ ಇಲ್ಲಿ ನೇರಳೆ ಬೆಳೆಯಲು ಉತ್ತಮವಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ದುಮ್ಮನದೂರು ಗ್ರಾಮದ ರೈತ ಹರದೀಪ್ ಸಿಂಗ್ 5 ಎಕರೆ ಪ್ರದೇಶದಲ್ಲಿ 513 ಗಿಡಗಳನ್ನ ನೆಟ್ಟಿದ್ದು, ಗಿಡ ನೆಟ್ಟು ಮೂರು ವರ್ಷದ ಬಳಿಕೆ ನೇರಳೆ ಹಣ್ಣು ಕೊಡಲು ಆರಂಭಿಸಿದೆ. ಈ ವರ್ಷ ನೇರಳೆ ಹಣ್ಣು ಪಂಪರ್ ಬೆಳೆ ಬಂದಿದ್ದು, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇರುವುದರಿಂದ ನೇರಳೆ ಹಣ್ಣು ಬೆಳೆದು ಉತ್ತಮ ಆದಾಯವನ್ನ ಘಳಿಸಬಹುದೆಂದು ರೈತರು ಹೇಳುತ್ತಿದ್ದಾರೆ.

ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಗೂ ರಫ್ತು

ಜಿಲ್ಲೆಯಲ್ಲಿ ನೇರಳೆ ಹಣ್ಣು ಬೆಳೆಯಲಿಕ್ಕೆ ಸೂಕ್ತವಾದ ವಾತಾವರಣ, ಮಾರುಕಟ್ಟೆಯಿದೆ. ಹಣ್ಣುಗಳನ್ನ ಸಂರಕ್ಷಣೆ ಮಾಡುವ ಕೋಲ್ಡ್ ಸ್ಟೋರೇಜ್​ಗಳು ಇಲ್ಲದಿರುವುದರಿಂದ ರೈತರು ನೇರಳೆ ಬೆಳೆಯಲು ಹೀಂದೇಟು ಹಾಕುತ್ತಿದ್ದಾರೆ. ಜೊತೆಗೆ ಇಲ್ಲಿ ಬೆಳೆದ ನೇರಳೆ ಹಣ್ಣುಗಳು ರಾಜ್ಯದ ಮೈಸೂರು, ಬೆಂಗಳೂರು, ಮಂಗಳೂರು, ಪೂಣಾ, ಮುಂಬೈ ಸೇರಿದಂತೆ ನೆರೆಯ ರಾಜ್ಯದ ಪ್ರಮುಖ ಪಟ್ಟಣಗಳಿಗೂ ಹೋಗುವುದು ವಿಶೇಷ. ರೈತರು ತಾವು ಬೆಳೆದಿರುವ ಹಣ್ಣನ್ನು ತಾವೇ ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಕೈತುಂಬ ಹಣಗಳಿಸಲು ಇದು ಸಹಕಾರಿಯಾಗಲಿದೆ. ಜೊತೆಗೆ ಫಸಲು ಹಾಳಾಗದಂತೆ ಎಚ್ಚರದಿಂದ ಜೋಪಾನ ಮಾಡುವುದೇ ಸವಾಲಾಗಿದ್ದು, ಪ್ರಕೃತಿ ಸಹಕರಿಸಿದರೆ ಉತ್ತಮ ಬೆಲೆ ಸಿಗುತ್ತದೆ ಎನ್ನುತ್ತಾರೆ ಇಲ್ಲಿನ ಅಧಿಕಾರಿಗಳು.

ವೈಜ್ಞಾನಿಕ ಪದ್ಧತಿಯಲ್ಲಿ ಬೆಳೆದ ಬೆಳೆ

ಇನ್ನು ಹರದೀಪ್ ಸಿಂಗ್ ತಮ್ಮ 90 ಎಕರೆಯಷ್ಟು ಜಮೀನಿನಲ್ಲಿ ವಿವಿಧ ರೀತಿಯ ಹಣ್ಣುಗಳನ್ನ ಬೆಳೆದಿದ್ದಾರೆ. ಇವರು ವೈಜ್ಞಾನಿಕ ರೀತಿಯಿಂದ ಹಣ್ಣುಗಳನ್ನ ಬೆಳೆಯುತ್ತಿರುವುದರಿಂದಾಗಿ ಹಣ್ಣುಗಳು ರುಚಿಯಾಗಿವೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ, ಈ ವರ್ಷ ನೇರಳೆ ಹಣ್ಣು ಗಾತ್ರದಲ್ಲಿ ದೊಡ್ಡದಾಗಿದೆ. ತಿನ್ನಲು ಕೂಡ ರುಚಿಯಾಗಿದ್ದು, ಈ ನೇರಳೆ ಹಣ್ಣಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಖರೀಧಿದಾರರು ಕೂಡ ಈ ರೈತ ಬೆಳೆದ ನೇರಳೆ ಹಣ್ಣನ್ನು ಕೊಂಡುಕೊಳ್ಳಲು ಮುಗಿಬಿದ್ದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:31 pm, Tue, 11 June 24