ಕೇಂದ್ರ ಸಚಿವರ ವಿರುದ್ಧ ಭರ್ಜರಿಯಾಗಿ ಗೆಲ್ಲುವ ಮೂಲಕ ಸಂಸತ್ತು ಪ್ರವೇಶಿಸಿದ ಖಂಡ್ರೆ ಕುಟುಂಬದ ಮೊದಲ ಕುಡಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 05, 2024 | 3:24 PM

ವೃತ್ತಿಯಲ್ಲಿ ವಕೀಲರಾಗಿರುವ ಸಚಿವ ಈಶ್ವರ್​ ಖಂಡ್ರೆ ಪುತ್ರ ಸಾಗರ್​ ಖಂಡ್ರೆ ತಂದೆಯ ನೆರಳಿನಲ್ಲೇ ರಾಜಕೀಯಕ್ಕೆ ದುಮುಕಿದ್ದಾರೆ.ಸ್ಪರ್ಧಿಸಿರುವ ಮೊದಲ ಲೋಕಸಭೆ ಚುನಾವಣೆಯಲ್ಲೇ ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು 1 ಲಕ್ಷ ಮತಗಳ ಅಂತರದಿಂದ ಸೋಲಿಸಿ ಸಂಸತ್ತು ಪ್ರವೇಶಿಸಿದ್ದಾರೆ.

ಕೇಂದ್ರ ಸಚಿವರ ವಿರುದ್ಧ ಭರ್ಜರಿಯಾಗಿ ಗೆಲ್ಲುವ ಮೂಲಕ ಸಂಸತ್ತು ಪ್ರವೇಶಿಸಿದ ಖಂಡ್ರೆ ಕುಟುಂಬದ ಮೊದಲ ಕುಡಿ
ಸಾಗರ ಖಂಡ್ರೆ
Follow us on

ಖಂಡ್ರೆ ಕುಟುಂಬದ ಕುಡಿಯೊಂದು ಸಂಸತ್ತು ಪ್ರವೇಶಿಸಿದೆ. ಹೌದು, ಬೀದರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಚಿವ ಈಶ್ವರ್​ ಖಂಡ್ರೆ ಪುತ್ರ, ಯುವ ನಾಯಕ ಸಾಗರ ಖಂಡ್ರೆ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಖಂಡ್ರೆ ಕುಟುಂಬದಿಂದ ಲೋಕಸಭೆಗೆ ಆಯ್ಕೆಯಾದ ಮೊದಲ ಕುಡಿಯಾಗಿದ್ದಾರೆ. ಸಂಸದ ಸಾಗರ ಖಂಡ್ರೆ ಬೀದರ್​ ಕ್ಷೇತ್ರದಲ್ಲಿ ಗೆಲ್ಲುವ ಮುಖಾಂತರ ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದಾರೆ. ಕ್ಷೇತ್ರವನ್ನು ಮರಳಿ “ಕೈ” ವಶವಾಗಿದೆ. ಸಾಗರ ಖಂಡ್ರೆ ಗೆಲವು ಸುಲಭವಾದದ್ದು ಅಲ್ಲ.

ಸಾಗರ ಖಂಡ್ರೆ ಅವರಿಗೆ ಕೇಂದ್ರ ಸಚಿವ ಭಗವಂತ ಖೂಬಾ ಪ್ರತಿಸ್ಪರ್ಧಿಯಾಗಿದ್ದರು. ಭಗವಂತ ಖೂಬಾ ಬೀದರ್​ ಲೋಕಸಭಾ ಕ್ಷೇತ್ರದಲ್ಲಿ ತಮ್ಮದೆ ಆದ ಪ್ರಭಾವ ಹೊಂದಿದ್ದಾರೆ. ಇವರ ವಿರುದ್ಧ ಸ್ವತಃ ಸಂಸದ ಸಾಗರ ಖಂಡ್ರೆ ತಂದೆ ಈಶ್ವರ ಖಂಡ್ರೆ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಇದೀಗ 26 ವರ್ಷದ ತರುಣ ಸಾಗರ ಖಂಡ್ರೆ ಬಿಜೆಪಿಯ ಘಟಾನುಘಟಿ ನಾಯಕ ಭಗವಂತ ಖೂಬಾ ಅವರನ್ನು 1.28 ಲಕ್ಷ ಮತಗಳ ಅಂತರದಿಂದ ಸೋಲಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಅಭೂತ ಪೂರ್ವ ಗೆಲುವಿನಿಂದ ಸ್ವತಃ ಸಚಿವ ಈಶ್ವರ ಖಂಡ್ರೆ ಅವರಿಗೆ ಆಶ್ಚರ್ಯವಾಗಿದೆ. 26 ವರ್ಷದ ಸಾಗರ ಖಂಡ್ರೆ ಕರ್ನಾಟಕದ ಅತ್ಯಂತ ಕಿರಿಯ ವಯಸ್ಸಿನ ಸಂಸದರಾಗಿದ್ದಾರೆ.

ಯಾರು ಈ ಸಾಗರ ಖಂಡ್ರೆ

ಸಾಗರ ಖಂಡ್ರೆ ವೀರಶೈವ ಲಿಂಗಾಯತ ಸಮುದಾಯದ ಸಾಗರ ಖಂಡ್ರೆ ಸಚಿವ ಈಶ್ವರ ಖಂಡ್ರೆ ಪುತ್ರ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಮೊಮ್ಮಗ. ಸಾಗರ ಖಂಡ್ರೆ ಬೆಂಗಳೂರು ಕ್ರೈಸ್ಟ್​ ಕಾಲೇಜಿನಿಂದ ಬಿಬಿಎ, ಎಲ್​ಎಲ್​ಬಿ ಪದವಿ ಪಡೆದುಕೊಂಡಿದ್ದಾರೆ. ಸಾಗರ ಖಂಡ್ರೆ ಕ್ಷೇತ್ರದ ಜನರಿಗೆ ಅಷ್ಟೇನೂ ಪರಿಚಯಸ್ಥರಲ್ಲ. ಆದರೆ ಕೊರೊನಾ ಸಮಯದಲ್ಲಿ ತಂದೆಯೊಂದಿಗೆ ಕ್ಷೇತ್ರದಲ್ಲಿ ಸಂಚರಿಸಿ ಜನರ ನಡುವೆ ಗುರುತಿಸಿಕೊಂಡಿದ್ದರು. ವೃತ್ತಿಯಲ್ಲಿ ವಕೀಲರಾಗಿರುವ ಸಾಗರ್​ ಖಂಡ್ರೆ ತಂದೆಯ ನೆರಳಿನಲ್ಲೇ ರಾಜಕೀಯಕ್ಕೆ ದುಮುಕಿದರು.

ಕಾಂಗ್ರೆಸ್​ನ ಸಾಗರ ಖಂಡ್ರೆ ಅವರು ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು 1,28,875 ಮತಗಳ ಅಂತರದಿಂದ ಸೋಲಿಸಿದ್ದಾರೆ. ಸಾಗರ ಖಂಡ್ರೆ ಈ ಗೆಲುವು ಕ್ಷೇತ್ರದ ಜನರ ಸಂತಸಕ್ಕೆ ಕಾರಣವಾಗಿದೆ. ವಿಶೇಷ ಎಂದರೆ ಖಂಡ್ರೆ ಕುಟುಂಬದಿಂದ ಸಂಸತ್ತಿಗೆ ಪ್ರವೇಶಿಸಿದ ಮೊದಲ ವ್ಯಕ್ತಿಯಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:41 pm, Wed, 5 June 24