ಬಿಟ್ ಕಾಯಿನ್ ಹಗರಣ: ಪೊಲೀಸ್ ಅಧಿಕಾರಿ ಶ್ರೀಧರ್ ಪೂಜಾರಿ​ಗೆ ನಿರೀಕ್ಷಣಾ ಜಾಮೀನು

| Updated By: ಗಂಗಾಧರ​ ಬ. ಸಾಬೋಜಿ

Updated on: Jun 27, 2024 | 6:13 PM

ಬಿಟ್ ಕಾಯಿನ್ ಹಗರಣ ರಾಜ್ಯದ ರಾಜಕೀಯದಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅದೆಷ್ಟರ ಮಟ್ಟಿಗೆ ಅಂದರೆ ಇಡೀ ದೇಶದ ಚಿತ್ತ ಕರ್ನಾಟಕದತ್ತ ನೆಟ್ಟಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಶ್ರೀಧರ್ ಪೂಜಾರಿ​ಗೆ ನಿರೀಕ್ಷಣಾ ಜಾಮೀನು ನೀಡಿ ಹೈಕೋರ್ಟ್ ಏಕಸದಸ್ಯ ಪೀಠದಿಂದ ಗುರುವಾರ ಆದೇಶ ಹೊರಡಿಸಲಾಗಿದೆ.

ಬಿಟ್ ಕಾಯಿನ್ ಹಗರಣ: ಪೊಲೀಸ್ ಅಧಿಕಾರಿ ಶ್ರೀಧರ್ ಪೂಜಾರಿ​ಗೆ ನಿರೀಕ್ಷಣಾ ಜಾಮೀನು
ಬಿಟ್ ಕಾಯಿನ್ ಹಗರಣ: ಪೊಲೀಸ್ ಅಧಿಕಾರಿ ಶ್ರೀಧರ್ ಪೂಜಾರ್​ಗೆ ನಿರೀಕ್ಷಣಾ ಜಾಮೀನು
Follow us on

ಬೆಂಗಳೂರು, ಜೂನ್​ 27: ಬಹುಕೋಟಿ ಬಿಟ್ ಕಾಯಿನ್ (Bitcoin) ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಶ್ರೀಧರ್ ಪೂಜಾರಿಗೆ (Sridhar K Pujar) ಹೈಕೋರ್ಟ್ ಏಕಸದಸ್ಯ ಪೀಠದಿಂದ ಗುರುವಾರ ನಿರೀಕ್ಷಣಾ ಜಾಮೀನು ನೀಡಲಾಗಿದೆ. ಪೊಲೀಸರು ತಮ್ಮ ಪ್ರತಿಷ್ಠೆಗಾಗಿ ಕೇಸ್ ದಾಖಲಿಸಿದ್ದಾರೆ. ಒಂದೇ ಕೇಸ್​ಗೆ ಎರಡೆರಡು ಬಾರಿ ಎಫ್​ಐಆರ್​ ಮಾಡಿ ತನಿಖೆ ನಡೆಸಿದ್ದಾರೆ. ಪ್ರಕರಣ ನಡೆದ 4 ವರ್ಷಗಳ ನಂತರ ಬಂಧಿಸಲು ಯತ್ನಿಸಿದ್ದಾರೆ ಎಂದು ಶ್ರೀಧರ್ ಪೂಜಾರ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದಾರೆ.

ಪೊಲೀಸರ ಕ್ರಮಕ್ಕೆ ನ್ಯಾ.ಎಂ.ಜಿ.ಉಮಾ ಅಸಮಾಧಾನ ವ್ಯಕ್ತಪಡಿಸಿದ್ದು, ಜನರನ್ನು ಮೂರ್ಖರನ್ನಾಗಿಸಲು ಪೊಲೀಸರು ಯತ್ನಿಸಿದಂತಿದೆ. ಇಷ್ಟು ವರ್ಷವಾದರೂ ತನಿಖೆಯಲ್ಲಿ ಪ್ರಗತಿ ಏಕಿಲ್ಲ. ವಾಟ್ಸಾಪ್​ ಚಾಟ್ ಆಧಾರದಲ್ಲಿ ಕ್ರಮ ಹೇಗೆ ಸಾಧ್ಯ. ಹಾಗಿದ್ದರೆ ಆಗಿನ ಆಯುಕ್ತರು, ಜಂಟಿ ಆಯುಕ್ತರು ಮತ್ತಿತರರ ಮೇಲೇಕೆ ಕೇಸ್ ದಾಖಲಿಸಲಿಲ್ಲ ಎಂದು ಪೊಲೀಸರಿಗೆ ಹೈಕೋರ್ಟ್ ಏಕಸದಸ್ಯ ಪೀಠ ತರಾಟೆ ತೆಗೆದುಕೊಂಡಿದೆ.

ಇದನ್ನೂ ಓದಿ: ಬಿಟ್ ಕಾಯಿನ್ ಕೇಸ್​: ಡಿವೈಎಸ್​​​​ಪಿ ಶ್ರೀಧರ್ ಕೆ. ಪೂಜಾರಿ ರಿಲೀಫ್, ಘೋಷಿತ ಆರೋಪಿ ಆದೇಶ ರದ್ದು

ಬಹುಕೋಟಿ ಬಿಟ್ ಕಾಯಿನ್ ಹಗರಣ ಪ್ರಕರಣದಲ್ಲಿ ಆರೋಪಿ ಪೊಲೀಸ್ ಅಧಿಕಾರಿ ಶ್ರೀಧರ್ ಪೂಜಾರಿ ವಿರುದ್ಧ ಮೊದಲು ಆರೋಪ ಕೇಳಿಬಂದಿತ್ತು. ಹಾಗಾಗಿ ಕೇಸ್​ ದಾಖಲಿಸಿಕೊಂಡಿದ್ದ ಎಸ್​ಐಟಿ ಫೆಬ್ರುವರಿ 17ರಂದು ಬಂಧಿಸಲು ಮುಂದಾಗಿದ್ದರು. ಆದರೆ ಈ ವೇಳೆ ಅಧಿಕಾರಿಗಳ ಮೇಲೆ ಕಾರು ಹತ್ತಿಸಲು ಯತ್ನಿಸಿ ಪರಾರಿಯಾಗಿದ್ದರು. ಈ ವಿಚಾರವಾಗಿ ವಿಧಾನಸೌಧ ಪೊಲೀಸರು ಐಪಿಸಿ ಸೆಕ್ಷನ್ 307 ಅಡಿ (ಕೊಲೆ ಯತ್ನ) ಮತ್ತು 353 ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಿಕೊಂಡಿದ್ದರು.

ಇದನ್ನೂ ಓದಿ: ಬಿಟ್ ಕಾಯಿನ್ ಕೇಸ್​: ಡಿವೈಎಸ್​​​​ಪಿ ಶ್ರೀಧರ್ ಕೆ. ಪೂಜಾರಿ ರಿಲೀಫ್, ಘೋಷಿತ ಆರೋಪಿ ಆದೇಶ ರದ್ದು

ಕಾರು ಹತ್ತಿಸಲು ಯತ್ನಿಸಿ ಪರಾರಿಯಾಗಿದ್ದ ಶ್ರೀಧರ್ ಪೂಜಾರಿ ತೆರೆಮರೆಯಲ್ಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದಲ್ಲಿ ವಿಚಾರಣೆಗೆ ಸಹಕರಿಸದೇ ತಲೆಮರೆಸಿಕೊಂಡಿದ್ದರಿಂದ ವಿಚಾರಣಾ ನ್ಯಾಯಾಲಯದಿಂದ ಘೋಷಿತ ಆರೋಪಿ ಎಂದು ವಾರಂಟ್​ ಜಾರಿ ಮಾಡಲಾಗಿತ್ತು. ವಾರಂಟ್ ಪ್ರಶ್ನಿಸಿ ಶ್ರೀಧರ್ ಕೆ. ಪೂಜಾರ್ ಹೈಕೋರ್ಟ್​ಗೆ ಅರ್ಜಿ ಕೂಡ ಸಲ್ಲಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.