ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಸಿಟಿ ರವಿಗೆ ಬಂಪರ್ ಗಿಫ್ಟ್

ವಿಧಾನಪರಿಷತ್ ಚುನಾವಣೆಗೆ ದಿನಗಣನೆ ಶುರುವಾಗಿರುವಾಗ ಬಿಜೆಪಿ ಮೂರು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆಯೇ ಕೊನೆಯ ದಿನವಾಗಿದೆ. ಹೀಗಾಗಿ ಇಂದು ಬಿಜೆಪಿ ಹೈಕಮಾಂಡ್ ಅಂತಿಮವಾಗಿ ತನ್ನ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆದ್ದು, ಸಿಟಿ ರವಿಗೆ ಲಕ್​ ಖುಲಾಯಿಸಿದೆ.

ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಸಿಟಿ ರವಿಗೆ ಬಂಪರ್ ಗಿಫ್ಟ್
ಸಿಟಿ ರವಿ
Edited By:

Updated on: Jun 02, 2024 | 12:30 PM

ಬೆಂಗಳೂರು,(ಜೂನ್ 02): ಕರ್ನಾಟಕ ವಿಧಾನಸಭೆಯಿಂದ ವಿಧಾನಪರಿಷತ್​ ಗೆ ನಡೆಯಲಿರುವ ಚುನಾವಣೆಗೆ ನಾಪಮತ್ರ ಸಲ್ಲಿಸಲು ನಾಳೆಯೇ(ಜೂನ್ 03) ಕೊನೆ ದಿನವಾಗಿದೆ. ನಾಮಪತ್ರ ಸಲ್ಲಿಸಲು ಕೊನೆ ದಿನಕ್ಕೆ ಒಂದು ದಿನ ಬಾಕಿ ಇರುವಾಗಲೇ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ಹೈಕಮಾಂಡ್ ಕೊನೆಗೂ ಮಾಜಿ ಸಚಿವ ಸಿ.ಟಿ ರವಿ, ಎನ್. ರವಿಕುಮಾರ್ ಮತ್ತು ಎಂ.ಜಿ ಮೂಳೆ ಅವರಿಗೆ ಮಣೆ ಹಾಕಿದೆ. ಒಟ್ಟು 11 ಕ್ಷೇತ್ರಗಳ ಪೈಕಿ ಬಿಜೆಪಿ ಸಂಖ್ಯಾಬಲದ ಆಧಾರದ ಮೇಲೆ ಮೂರು ಸ್ಥಾನಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯವಿದೆ. ಹೀಗಾಗಿ ಮೂರು ಅಭ್ಯರ್ಥಿಗಳನ್ನು ಘೋಷಿಸಿದ್ದು, ಎನ್​ ರವಿ ಕುಮಾರ್ ಅವರಿಗೆ ಮತ್ತೊಮ್ಮೆ ಚಾನ್ಸ್ ಕೊಟ್ಟರೆ, ಸಿಟಿ ರವಿ ಅವರಿಗೆ ಬಂಪರ್ ಗಿಫ್ಟ್​ ಕೊಟ್ಟಿದೆ. ಆದ್ರೆ, ಮಂಡ್ಯ ತ್ಯಾಗ ಮಾಡಿದ್ದ ಸುಮಲತಾ ಅಂಬರೀಶ್​ಗೆ ನಿರಾಸೆಯಾಗಿದೆ.

ಎಂಎಲ್‌ಸಿ ಚುನಾವಣೆಗೆ ಸಾಕಷ್ಟು ಮಂದಿಯ ಹೆಸರು ಕೇಳಿ ಬಂದಿತ್ತು. ಅದರಲ್ಲೂ ಪ್ರಮುಖವಾಗಿ ಮಂಡ್ಯ ಲೋಕಸಭಾ ತ್ಯಾಗ ಮಾಡಿದ್ದ ಸುಮಲತಾ ಅಂಬರೀಶ್​ ಅವರ ಹೆಸರು ಮುಂಚೂಣಿಯಲ್ಲಿತ್ತು. ಆದ್ರೆ, ಅಂತಿಮವಾಗಿ ಬಿಜೆಪಿ ವರಿಷ್ಠರು, ಮಾಜಿ ಸಚಿವ ಸಿ.ಟಿ ರವಿ( ಒಕ್ಕಲಿಗ ಸಮುದಾಯ), ಎನ್. ರವಿಕುಮಾರ್(ಗಂಗಾಮತಸ್ಥ) ಮತ್ತು ಎಂ.ಜಿ ಮೂಳೆ (ಮರಾಠಾ) ಅವರಿಗೆ ಮಣೆ ಹಾಕಿದೆ. ಹೀಗಾಗಿ ಹಲವರಿಗೆ ಭಾರಿ ನಿರಾಸೆಯಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಪುತ್ರನಿಗೆ ಎಂಎಲ್​ಸಿ ಟಿಕೆಟ್​ ಪಕ್ಕಾ: ಖುದ್ದು ಸುಳಿವು ನೀಡಿದ ಯತೀಂದ್ರ

ವಿಧಾನಸಭೆ ಚುನಾವಣೆಯಲ್ಲಿ ಸೋಲುಕಂಡಿರುವ ಸಿಟಿ ರವಿ ಅವರನ್ನು ವಿಧಾನ ಪರಿಷತ್​ಗೆ ಕಳುಹಿಸುವ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ಈ ಬಗ್ಗೆ ಪರೋಕ್ಷವಾಗಿ ಇತ್ತೀಚೆಗೆ ಸ್ವತಃ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರೇ ಹೇಳಿದ್ದರು. ಅಲ್ಲದೇ ಕೋರ್​ ಕಮಿಟಿ ಸಭೆಯಲ್ಲೂ ಸಹ ಪಟ್ಟಿಯಲ್ಲಿ ಸಿಟಿ ರವಿ ಹಾಗೂ ಲೋಕಸಭಾ ಟಿಕೆಟ್​ ವಂಚಿತ ಸದಾನಂದಗೌಡ, ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವರ ಹೆಸರುಗಳನ್ನು ಸಹ ಹೈಕಮಾಂಡ್​ಗೆ ಕಳುಹಿಸಲಾಗಿತ್ತು. ಅಂತಿಮವಾಗಿ ಹೈಕಮಾಂಡ್​ ಸಿಟಿ ರವಿಗೆ ಅವರಿಗೆ ಅವಕಾಶ ನೀಡಿದೆ.

ಈ ಬಾರಿ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಹಾಗೂ ದಕ್ಷಿಣ ಕನ್ನಡದ ಸಂಸದರಾಗಿದ್ದ ನಳಿನ್‌ ಕುಮಾರ್‌ ಕಟೀಲ್, ಬೆಂಗಳೂರು ಉತ್ತರ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರಿಗೂ ಟಿಕೆಟ್‌ ಕೈತಪ್ಪಿತ್ತು. ಇವರಿಗೂ ವಿಧಾನ ಪರಿಷತ್‌ ಟಿಕೆಟ್‌ ದೊರೆಯಬಹುದು ಎನ್ನಲಾಗಿತ್ತು. ಆದರೆ ಹೈಕಮಾಂಡ್‌ ಇವರನ್ನು ಪರಿಗಣಿಸಿಲ್ಲ.

ಕಾಂಗ್ರೆಸ್​ನಲ್ಲಿ ಗೊಂದಲ

ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಸದಸ್ಯರ ಆಯ್ಕೆಗೊಳಿಸಲು ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆಯೇ( ಜೂನ್ 3) ಕಡೆಯ ದಿನವಾಗಿದೆ. ನಾಮಪತ್ರ ಸಲ್ಲಿಕೆಗೆ ಒಂದು ದಿನ ಬಾಕಿ ಇದೆ. ಆದರೂ ಕಾಂಗ್ರೆಸ್​ ಇನ್ನೂ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್​ ಪಾಲಿನ ಏಳು ಸ್ಥಾನಗಳಿಗೆ ಬಾರೀ ಪೈಪೋಟಿ ನಡೆದಿದೆ. ನೂರಾರೂ ಮುಖಂಡರುಗಳು ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿ ಶಾರ್ಟ್​ ಲಿಸ್ಟ್ ಮಾಡಿಕೊಟ್ಟುಬಂದಿದ್ದು, ಸಂಜೆ ವೇಳೆಗೆ ಹೈಕಮಾಂಡ್​ ಏಳು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:08 pm, Sun, 2 June 24

Loading...
Unable to load recommendations.
Follow Us