ಸಿದ್ದರಾಮಯ್ಯಗೆ ಸುಪ್ರೀಂ ಸಮನ್ಸ್‌: ಉಚಿತ ಗ್ಯಾರೆಂಟಿ ಕೊಟ್ಟ ಸರ್ಕಾರ ಪತನವಾಗುತ್ತೆ ಎಂದ ವಕೀಲ

ಸಿಎಂ ಕುರ್ಚಿಗಾಗಿ ಕರ್ನಾಟಕ ಕಾಂಗ್ರೆಸ್​​ನಲ್ಲಿ ಮುಸುಕಿನ ಗುದ್ದಾಟ ಶುರುವಾಗಿದೆ. ಇಂದಿನಿಂದ ಆರಂಭವಾಗಿರುವ ಚಳಿಗಾಲದ ಅಧಿವೇಶನದ ಬಳಿಕ ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ ಎನ್ನುವ ಚರ್ಚೆಗಳು ನಡೆದಿವೆ. ಇದರ ಮಧ್ಯೆ ವರುಣಾ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಸಂಬಂಧ ಸಿಎಂ ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದ್ದು, ಈ ಬಗ್ಗೆ ವಕೀಲ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯಗೆ ಸುಪ್ರೀಂ ಸಮನ್ಸ್‌:  ಉಚಿತ ಗ್ಯಾರೆಂಟಿ ಕೊಟ್ಟ ಸರ್ಕಾರ ಪತನವಾಗುತ್ತೆ ಎಂದ ವಕೀಲ
Siddaramaiah And Devarajegowda
Edited By:

Updated on: Dec 08, 2025 | 5:06 PM

ಹಾಸನ, (ಡಿಸೆಂಬರ್ 08): ಚುನಾವಣಾ ಅಕ್ರಮ ಆರೋಪ ಸಂಬಂಧ ಕರ್ನಾಟಕ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಸುಪ್ರೀಂಕೋರ್ಟ್​ ನೋಟಿಸ್​​ ನೀಡಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಅವರ ಗೆಲುವನ್ನು ಪ್ರಶ್ನಿಸಿ ಕೆ. ಶಂಕರ್ ಎನ್ನುವರು ಸಲ್ಲಿಸಿದ್ದ ಮೇಲ್ಮನವಿ ಸಂಬಂಧ ವಿಚಾರಣೆ ನಡೆಸಿದ ನ್ಯಾ. ವಿಕ್ರಮನಾಥ್ ನೇತೃತ್ವದ ದ್ವಿಸದಸ್ಯ ಪೀಠ​​, ಸಿದ್ದರಾಮಯ್ಯ ಮತ್ತು ಚುನಾವಣಾ ಆಯೋಗಕ್ಕೆ ನೊಟೀಸ್​​ ಜಾರಿ ಮಾಡಿದೆ. ಈ ಸಂಬಂಧ ಹಾಸನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ, ಮುಖ್ಯಮಂತ್ರಿಗಳ ಖುದ್ದು ಹಾಜರಾತಿಗೆ ಸುಪ್ರೀಂ ಕೋರ್ಟ್ (Supreme Court) ಸಮನ್ಸ್ ಜಾರಿ ಮಾಡಿದ್ದು, 224 ಜನ ಎಂಎಲ್‌ಎಗಳು ಅನರ್ಹವಾಗುವುದು ಖಚಿತವಾಗಿದೆ ಎಂದು ಹೊಸ ಬಾಂಬ್‌ ಸಿಡಿಸಿದ್ದಾರೆ.

2023ರ ಚುನಾವಣೆಯಲ್ಲಿ ಉಚಿತ ಗ್ಯಾರಂಟಿಗಳನ್ನ ಘೋಷಣೆ ಮಾಡಿ ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಆಗಿರುವ ಡಿ.ಕೆ ಶಿವಕುಮಾರ್ ಅವರು ಗ್ಯಾರಂಟಿ ಘೋಷಣೆಯ ಪ್ರಮುಖ ರೂವಾರಿಗಳಾಗಿದ್ರು. ಗ್ಯಾರಂಟಿಗಳನ್ನ ಘೋಷಣೆ ಮಾಡಿ ತೆರಿಗೆ ದುಡ್ಡಲ್ಲಿ ಜನರಿಗೆ ಭಾಗ್ಯಗಳನ್ನ ಕೊಡುತ್ತಿದ್ದಾರೆ ಎಂದು ಹೈಕೋರ್ಟ್‌ನಲ್ಲಿ ಎಲೆಕ್ಷನ್ ಪಿಟಿಷನ್ ಸಲ್ಲಿಕೆ ಮಾಡಿದ್ದೆವು. ಇದನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳು ಸರಿಯಾದ ಅಂಶಗಳ ಮೇಲೆ ಬೆಳಕು ಚೆಲ್ಲದೇ ನಮ್ಮ ಪಿಟಿಷನ್ ವಜಾ ಮಾಡಿದ್ರು, ಹೈಕೋರ್ಟ್ ತೀರ್ಪಿನ ವಿರುದ್ಧವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅಪಿಲ್ ಫೈಲ್ ಮಾಡಿದ್ದೆವು ಎಂದರು.

ಇದನ್ನೂ ಓದಿ: ಕುರ್ಚಿ ಕದನದ ನಡುವೆ ಸಿದ್ದರಾಮಯ್ಯಗೆ ಬಿಗ್​​ ಶಾಕ್​​: ಸುಪ್ರೀಂಕೋರ್ಟ್​ನಿಂದ​​ ನೋಟಿಸ್​​

ಅಪಿಲ್‌ ವಿಚಾರಣೆ ಮಾಡಿದಂತಹ ಸುಪ್ರೀಂ ಕೋರ್ಟ್ ಇದರಲ್ಲಿ ಹಲವಾರು ತಪ್ಪುಗಳು, ಲೋಪದೋಷಗಳಿವೆ. ಮುಖ್ಯಮಂತ್ರಿಗಳು ಈ ಪ್ರಕರಣದಲ್ಲಿ ಮಾಡಿರುವುದು ಅಪರಾಧ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಘನ ನ್ಯಾಯಾಲಯದ ನ್ಯಾಯದ ಮುಂದೆ ಯಾವುದೇ ಅಧಿಕಾರ, ಅಂತಸ್ತು ಉಳಿಯುವುದಿಲ್ಲ ಎಂಬುದಕ್ಕೆ ಪ್ರತ್ಯೆಕ್ಷ ಸಾಕ್ಷಿಯಾಗಿದೆ. ಅತೀ ಶೀಘ್ರದಲ್ಲೇ ಉಚಿತ ಗ್ಯಾರೆಂಟಿ ನೀಡಿರುವ ಕಾಂಗ್ರೆಸ್ ಸರ್ಕಾರ ಪತನವಾಗುತ್ತೆ ಎಂಬ ನಂಬಿಕೆಯಿದೆ ಎರಡು ವಾರದಲ್ಲಿ ಮುಖ್ಯಮಂತ್ರಿಗಳು ಸುಪ್ರೀಂ ಕೋರ್ಟ್‌ಗೆ ಹಾಜರಾಗಬೇಕಿದೆ ಎಂದು ತಿಳಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:00 pm, Mon, 8 December 25