
ಚಿಕ್ಕಬಳ್ಳಾಪುರ, (ಜೂನ್ 26): ಬಿಜೆಪಿ ಸಂಸದ ಡಾ ಕೆ ಸುಧಾಕರ್ (Dr K Sudhakar) ಹಾಗೂ ಯಲಹಂಕ ಬಿಜೆಪಿ ಶಾಸಕ ಎಸ್ಆರ್ ವಿಶ್ವನಾಥ್ (SR VIshwanath) ನಡುವಿನ ಗುದ್ದಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇಂದು(ಜೂನ್ 26) ಎಸ್ಆರ ವಿಶ್ವನಾಥ್ ಅವರು ಚಿಕ್ಕಬಳ್ಳಾಪುರಕ್ಕೆ ತೆರಳಿ ಸ್ವಪಕ್ಷದ ಸಂಸದ ಸುಧಾಕರ್ ವಿರುದ್ಧ ನೇರ ನೇರವಾಗಿ ಏಕವಚನದಲ್ಲಿ ವಾಗ್ದಾಳಿ ನಡೆಸಿ ಸವಾಲು ಹಾಕಿದ್ದಾರೆ. ಯಲಹಂಕ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದರೂ ಪದೇ ಪದೇ ನನ್ನ ಕ್ಷೇತ್ರದಲ್ಲಿ ರಾಜಕೀಯ ಮಾಡಲು ಬಂದರೆ ನಿನ್ನ ಬುಡಕ್ಕೆ ಕೈ ಹಾಕಿತ್ತೇನೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕರನ್ನು ಆಹ್ವಾನಿಸುವುದು ಹಾಗೂ ನನ್ನ ಬೆಂಬಲಿಗರನ್ನು ನನ್ನ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನಾನು ಬಿಜೆಪಿ ಪರ ಕೆಲಸ ಮಾಡಿಲ್ಲ, ಆದ್ರೂ ನಿನಗೆ ಅನುಮಾನ ಇದ್ರೆ ಆರೋಪ ಸತ್ಯವಾಗಿದ್ದರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿ ಗೆ ಬನ್ನಿ ಪ್ರಮಾಣ ಮಾಡಲು ಸಿದ್ಧ. ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಪಕ್ಷದ ಅಭ್ಯರ್ಥಿ ಯಾರೇ ಆಗಿದ್ದರೂ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಲಹಂಕ ಕ್ಷೇತ್ರದಲ್ಲಿ ಸ್ಪರ್ಧಿಸುವ ಧೈರ್ಯವಿದ್ದರೆ ಸುಧಾಕರ್ ನೇರವಾಗಿ ನನ್ನ ವಿರುದ್ಧವೇ ಕಣಕ್ಕಿಳಿಯಲಿ ಎಂದು ಸವಾಲು ಹಾಕಿದ್ದಾರೆ.
ಸುಧಾಕರ್ ಅವರು ಲೋಕಸಭೆ ಬಿಟ್ಟು ವಿಧಾನಸಭೆ ಚುನಾವಣೆಯತ್ತ ಗಮನ ಹರಿಸುತ್ತಿದ್ದಾರೆ. ಬಿಜೆಪಿಯಿಂದ ನಿನಗೆ ಟಿಕೆಟ್ ಕೊಡಲ್ಲ, ಬೇರೆ ಪಕ್ಷದಿಂದ ಸ್ಪರ್ಧೆ ಮಾಡು. ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಸಂದೀಪ್ ರೆಡ್ಡಿಗೆ ನೀಡಬೇಕು ಎಂದು ಹೈಕಮಾಂಡ್ಗೆ ಮನವಿ ಮಾಡುತ್ತೇವೆ ನೇರವಾಗಿ ಸುಧಾಕರ್ಗೆ ಹೇಳಿದರು.
ನಾನು ನೇರಾ ನೇರ ವ್ಯಕ್ತಿ, ಹೇಳಿದ್ದನ್ನು ಮಾಡುತ್ತೇನೆ. ಆದ್ರೆ ಚಿಕ್ಕಬಳ್ಳಾಪುರ BJP ಸಂಸದ ಡಾ.ಕೆ.ಸುಧಾಕರ್ ಡಿಫರೆಂಟ್ ವ್ಯಕ್ತಿ. ಅವರು ರಾಜಕೀಯ ಶೈಲಿ ಸಂಪೂರ್ಣ ವಿಭಿನ್ನ. ಸುಧಾಕರ್ ಪ್ರತಿಭೆ ಕಂಡು ಹಿಡಿಯಲು ಸತ್ಯಶೋಧನಾ ಸಮಿತಿ ಮಾಡಬೇಕಾಗುತ್ತೆ ಎಂದು ವ್ಯಂಗ್ಯವಾಡಿದರು.